ಆ ವ್ಯಕ್ತಿಯ 10 ಲಕ್ಷದ ಸಾಲ, ಭಾರತದ ಬ್ಯಾಂಕಿಂಗ್ ಕ್ಷೇತ್ರಕ್ಕೆ 2 ಲಕ್ಷ ಕೋಟಿಗೆ ಸಮ!
"ನನ್ನೊಬ್ಬನಿಂದ ಅಥವಾ ನನ್ನೊಬ್ಬಳಿಂದ ಏನು ಮಾಡುವುದಕ್ಕೆ ಸಾಧ್ಯ?"ಎಂದುಕೊಳ್ಳುವವರು ಗಜೇಂದ್ರ ಶರ್ಮಾ ಬಗ್ಗೆ ತಿಳಿದುಕೊಳ್ಳಬೇಕು ಅವರೊಬ್ಬರು ಕಟ್ಟಬೇಕಾದ 10 ಲಕ್ಷದಷ್ಟು ಮೊತ್ತದ ಸಾಲವು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು 1.97 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಬೆಲೆಯನ್ನು ಕಟ್ಟುವಂತೆ ಮಾಡಿದರೂ ಅಚ್ಚರಿಯಿಲ್ಲ. ಅಂದ ಹಾಗೆ ಈ ಐವತ್ಮೂರು ವರ್ಷದ ಗಜೇಂದ್ರ ಶರ್ಮಾ ಅವರು ಉತ್ತರಪ್ರದೇಶದ ಆಗ್ರಾದಲ್ಲಿ ಕನ್ನಡಕದ ಅಂಗಡಿ ಇಟ್ಟುಕೊಂಡಿದ್ದಾರೆ.
ತಾಜ್ ಮಹಲ್ ಗೆ ಕೆಲವೇ ಮೈಲುಗಳ ದೂರದಲ್ಲಿ ಅವರ ಮಳಿಗೆ ಇದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಲಾಕ್ ಡೌನ್ ಹೇರಲಾಯಿತಲ್ಲಾ, ಆ ಅವಧಿಯಲ್ಲಿ ಸಾಲದ ಮೇಲಿನ ಇಎಂಐಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿನಾಯಿತಿ ಘೋಷಿಸಿತು. ಅದನ್ನು ಆಗಸ್ಟ್ 31, 2020ರ ತನಕ ವಿಸ್ತರಿಸಿತು ಕೂಡ. ಇದರಿಂದ ಶರ್ಮಾ ಒಂದಿಷ್ಟು ಸಮಾಧಾನವಾದರು. ಏಕೆಂದರೆ ಅವರಿಗೆ 10 ಲಕ್ಷ ರುಪಾಯಿಯಷ್ಟು ಸಾಲ ಇತ್ತು. ವ್ಯಾಪಾರ ಫುಲ್ ಡಲ್ ಇತ್ತು.
ಈಗ ಅದೇ ಗಜೇಂದ್ರ ಶರ್ಮಾ ಅವರ ಹತ್ತು ಲಕ್ಷ ರುಪಾಯಿಯ ಸಾಲ ಭಾರತದ ಬ್ಯಾಂಕ್ ಗಳನ್ನು ಅಸ್ಥಿರಗೊಳಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸಾಲ ಪರಿಹಾರ ಯೋಜನೆಗೆ ಸಂಬಂಧಿಸಿದಂತೆ ಶರ್ಮಾ ಅವರು ಸುಪ್ರೀಂ ಕೋರ್ಟ್ ಮುಂದೆ ದೂರು ತಂದಿದ್ದಾರೆ. ತನ್ನಂತೆಯೇ ಸಾಲ ಪಡೆದವರ ಗುಂಪು ಮಾಡಿಕೊಂಡಿದ್ದು, ಆ ಅರ್ಜಿ ವಿಚಾರಣೆ ಸರ್ವೋಚ್ಚ ನ್ಯಾಯಾಲಯದ ಮುಂದಿದೆ.
EMI ವಿನಾಯಿತಿ: ಬಡ್ಡಿ ಪಾವತಿಯಲ್ಲಿ ಸರ್ಕಾರದ ಜವಾಬ್ದಾರಿ ಪ್ರಶ್ನಿಸಿದ 'ಸುಪ್ರೀಂ'
ಇದರಿಂದ ಸಾಲ ನೀಡಿದ ಸಂಸ್ಥೆಗಳಿಗೆ 2700 ಕೋಟಿ ಅಮೆರಿಕನ್ ಡಾಲರ್ ಅಥವಾ 1.97 ಲಕ್ಷ ಕೋಟಿಗೂ ಹೆಚ್ಚು ಬೆಲೆ ಕಟ್ಟುವಂತಾಗಬಹುದು. ಅಂದರೆ ವಾರ್ಷಿಕ ಲಾಭದ ಅರ್ಧಕ್ಕಿಂತ ಹೆಚ್ಚು ಮೊತ್ತ. ಇದರಿಂದ ದೇಶದ ಹಣಕಾಸು ವ್ಯವಸ್ಥೆಯೇ ಅಲುಗಾಡಿ ಹೋಗಬಹುದು ಎಂದು ಆತಂಕ ಪಡುತ್ತಿದ್ದಾರೆ ವಿಶ್ಲೇಷಕರು.
ಆಗ್ರಾದ ಸಣ್ಣ ಅಂಗಡಿಯಿಂದ ಶುರುವಾದ ಹೋರಾಟ
ಈ ಹೋರಾಟ ಶುರುವಾಗಿದ್ದು ಆಗ್ರಾದ ಸಣ್ಣ ಅಂಗಡಿಯಿಂದ. ಆದರೆ ಇವತ್ತಿಗೆ ಇದರಲ್ಲಿ ನೂರಾ ಇಪ್ಪತ್ತಕ್ಕೂ ಹೆಚ್ಚು ವಕೀಲರು ಒಳಗೊಂಡಿದ್ದಾರೆ. ಯಾವುದನ್ನು ನಾವು ಸಹಾಯಕ್ಕೋಸ್ಕರ ಮಾಡುತ್ತಿದ್ದೇವೆ ಎಂದು ಆರ್ ಬಿಐ ಹಾಗೂ ಕೇಂದ್ರ ಸರ್ಕಾರ ಹೇಳಿತ್ತೋ, ಅದರ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಹೆಣಗಾಡುವಂತಾಗಿದೆ. ಇಲ್ಲಿ ಸಮಸ್ಯೆ ಏನೆಂದರೆ, ಇಎಂಐನಿಂದ ವಿನಾಯಿತಿ ನೀಡಲಾದ ಅವಧಿ ಇತ್ತಲ್ಲಾ, ಆಗ ಕಟ್ಟದಿರುವ ಮೊತ್ತದ ಮೇಲೂ ಬಡ್ಡಿ ಹಾಕಲಾಗಿದೆ. 'ಸಾಲ ಪಡೆದವರು ಹೆಚ್ಚುವರಿಯಾಗಿ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಇದನ್ನು 'ಬಡ್ಡಿಯ ಮೇಲೆ ಬಡ್ಡಿ' ಎನ್ನಲಾಗುತ್ತದೆ. ರಿಯಲ್ ಎಸ್ಟೇಟ್, ಶಾಪಿಂಗ್ ಮಾಲ್ ನವರು ಹಾಗೂ ಸಣ್ಣ- ಪುಟ್ಟ ವ್ಯಾಪಾರಸ್ಥರು ಈಗ ಹೇಳುತ್ತಿರುವುದೇನೆಂದರೆ, ಈ ಸಾಲ ವಿನಾಯಿತಿ ಯೋಜನೆ ದೊಡ್ಡ ಪೆಟ್ಟು ನೀಡುತ್ತಿದೆ.
15,84,000ದಷ್ಟು ಮೊತ್ತ ತಿಂಗಳ ಕಂತು
ಮತ್ತೂ ಹೆಚ್ಚಾಯಿತು. ಸಾಲ ಹಾಗೂ ಜತೆಗೆ ಹೆಚ್ಚಿನ ಬಡ್ಡಿ ಬಿತ್ತು. ವ್ಯಾಪಾರದ ಸಲುವಾಗಿ ಪಡೆದಿರುವ 15,84,000ದಷ್ಟು ಮೊತ್ತ ತಿಂಗಳ ಕಂತು ಕಟ್ಟುತ್ತಿದ್ದಾರೆ. ಅದಕ್ಕೆ ಅವರು ವಿನಾಯಿತಿ ಕೂಡ ಕೇಳಿರಲಿಲ್ಲ ಎನ್ನುತ್ತಾರೆ. ಈ ಸಾಲ ವಿನಾಯಿತಿ ಯೋಜನೆ ಅನ್ನೋದು ನಮಗೆ ಪರಿಹಾರ ಕೊಡಲು ಬಂದಿದ್ದಲ್ಲ, ಇನ್ನೂ ಹೆಚ್ಚು ದುಃಖ ನೀಡುವ ಸಲುವಾಗಿಯೇ ತಂದಿದ್ದು ಎಂದು ಈಗ ಗೊತ್ತಾಗುತ್ತಿದೆ ಎನ್ನುತ್ತಾರೆ ಶರ್ಮಾ. ಕಳೆದ ಮಾರ್ಚ್ ನಲ್ಲಿ ಪ್ರಧಾನಿ ಮೋದಿ ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ, ತಿಂಗಳುಗಳ ಕಾಲ ಶರ್ಮಾ ಅವರಿಗೆ ಗ್ರಾಹಕರೇ ಇರಲಿಲ್ಲ. ಆದರೂ ಪ್ರತಿ ತಿಂಗಳು 1,97,000 ರುಪಾಯಿ ವೆಚ್ಚವನ್ನು ಪಾವತಿಸಬೇಕಾಯಿತು.
4,50,000 ರುಪಾಯಿ ತನಕ ಹೆಚ್ಚು ಬಡ್ಡಿ
ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಭಾರತದಲ್ಲಿ ಲಾಕ್ ಡೌನ್ ನಿಂದಾಗಿ ಜನರು ಖರ್ಚು ಮಾಡುವುದೇ ನಿಲ್ಲುವಂತಾಯಿತು, ವ್ಯಾಪಾರ- ವ್ಯವಹಾರಕ್ಕೆ ಪೆಟ್ಟು ಬಿತ್ತು. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಆರ್ಥಿಕತೆಯು 23.9% ಕುಸಿತ ಕಂಡಿತು. ಈಗ, ಸಾಲದ ಕಂತಿನ ವಿನಾಯಿತಿ ಕೊಟ್ಟರೂ ಬಡ್ಡಿಯ ಮೇಲೆ ಬಡ್ಡಿ ಹಾಕುವುದರಿಂದರಿಂದ ಹಲವಾರು ರಿಯಲ್ ಎಸ್ಟೇಟ್ ಉದ್ಯಮವೂ ಸೇರಿ ಇತರ ಕಂಪೆನಿಗಳು ಬಾಗಿಲು ಮುಚ್ಚಬೇಕಾಗುತ್ತದೆ ಎನ್ನುತ್ತಾರೆ ಶರ್ಮಾ ಮತ್ತು ಅವರೊಂದಿಗೆ ದೂರುದಾರರ ಪರ ವಕೀಲರಾದ ಉತ್ಸವ್ ತ್ರಿವೇದಿ. ಎಷ್ಟು ಮೊತ್ತ ಹೆಚ್ಚು ಕಟ್ಟುವಂತಾಗುತ್ತದೆ ಎಂಬುದರ ಲೆಕ್ಕವನ್ನೂ ಮುಂದಿಟ್ಟಿರುವ ಎಸ್ ಬಿಐ, 15 ವರ್ಷಗಳ ಅವಧಿಗೆ 30 ಲಕ್ಷ ಸಾಲ ಪಡೆದಿದ್ದಲ್ಲಿ 4,50,000 ರುಪಾಯಿ ತನಕ ಹೆಚ್ಚು ಬಡ್ಡಿ ಕಟ್ಟಬೇಕಾಗುತ್ತದೆ. ಅದು 16 ತಿಂಗಳು ಹೆಚ್ಚಿನ ಅವಧಿ ಮರುಪಾವತಿ ಮಾಡಬೇಕಾಗುತ್ತದೆ.
ಬ್ಯಾಂಕಿಂಗ್ ವ್ಯವಸ್ಥೆಯೇ ಸಂಕಷ್ಟದಲ್ಲಿದೆ
ಶರ್ಮಾ ಅವರ ಪ್ರಕರಣವನ್ನು ಗಮನದಲ್ಲಿ ಇಟ್ಟುಕೊಂಡು, ಹಣಕಾಸು ಸಚಿವಾಲಯ ಕಳೆದ ವಾರ ಸಮಿತಿಯೊಂದನ್ನು ರಚಿಸಿದೆ. ಒಂದು ವೇಳೆ ಬಡ್ಡಿ ಹಾಗೂ ಅದರ ಮೇಲಿನ ಬಡ್ಡಿಯನ್ನು ವಾಪಸ್ ಪಡೆದಲ್ಲಿ ಪರಿಣಾಮ ಏನಾಗುತ್ತದೆ ಎಂಬ ವಿಶ್ಲೇಷಣೆ ಮಾಡುತ್ತದೆ ಆ ಸಮಿತಿ. ಸೆಪ್ಟೆಂಬರ್ 10ನೇ ತಾರೀಕಿನಂದು ನಡೆದ ವಿಚಾರಣೆ ವೇಳೆ ಹೆಚ್ಚಿನ ಬಡ್ಡಿ ಬಗ್ಗೆ ಸಾಲ ಪಡೆದವರ ಬಗ್ಗೆ ಸುಪ್ರೀಂ ಕೋರ್ಟ್ ಅನುಕಂಪ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ಮಾತನಾಡಿ, ಬ್ಯಾಂಕ್ ನವರು ಹೆಚ್ಚುವರಿ ಶುಲ್ಕವನ್ನು ಬಿಡಬೇಕು ಎಂದು ಆದೇಶ ಹೊರಡಿಸುವ ಬಗ್ಗೆ ಒಲವು ಇರುವುದಾಗಿ ಹೇಳಿದ್ದಾರೆ. ಬ್ಯಾಂಕ್ ಗಳು ಸಹ ಕೊರೊನಾ ಹೊಡೆತಕ್ಕೆ ಕಂಗಾಲಾಗಿವೆ. ಇದೀಗ ಕೋರ್ಟ್ ನಲ್ಲೂ ಹಿನ್ನಡೆಯಾಗಬಹುದು ಎಂಬ ಆತಂಕದಲ್ಲಿದೆ. ಈ ಹಿಂದೆ ಕಲ್ಲಿದ್ದಲು ಗಣಿ ಹಾಗೂ ಟೆಲಿ ಕಮ್ಯುನಿಕೇಷನ್ಸ್ ನಲ್ಲಿ ಸರ್ಕಾರದ ತೀರ್ಮಾನದ ವಿರುದ್ಧ ತೀರ್ಪು ನೀಡಿದೆ. ಇನ್ನು ಬ್ಯಾಂಕ್ ಗಳಿಗೆ ಈಗಾಗಲೇ 12 ಸಾವಿರ ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಬ್ಯಾಡ್ ಲೋನ್ ಇದೆ. ಭಾರತದ ರುಪಾಯಿ ಲೆಕ್ಕದಲ್ಲಿ 8.76 ಲಕ್ಷ ಕೋಟಿಗೂ ಹೆಚ್ಚು ಮೊತ್ತವಾಗುತ್ತದೆ.
ಬ್ಯಾಂಕ್ ಗಳ ಒಟ್ಟು ಲಾಭ ಒಟ್ಟು ವಾರ್ಷಿಕ ಲಾಭ 3.2 ಲಕ್ಷ ಕೋಟಿ
ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ಗಳ ಒಟ್ಟು ವಾರ್ಷಿಕ ಲಾಭ 3.2 ಲಕ್ಷ ಕೋಟಿ ರುಪಾಯಿ. ಒಂದು ವೇಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದಲ್ಲಿ ಒಟ್ಟಾರೆ ವ್ಯವಸ್ಥೆಯೇ ಅಸ್ಥಿರಗೊಳ್ಳುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಸುಪ್ರೀಂ ಕೋರ್ಟ್ ಗೆ ಹೇಳಿದೆ: ಒಂದು ವೇಳೆ ಬಡ್ಡಿ ಮನ್ನಾ ಮಾಡಿದಲ್ಲಿ ಬ್ಯಾಂಕಿಂಗ್ ವಲಯಕ್ಕೆ 2 ಲಕ್ಷ ಕೋಟಿ ಅಥವಾ ಜಿಡಿಪಿ 1% ನಷ್ಟವಾಗುತ್ತದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಿರತೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದಿದೆ. ಪ್ರತಿ ದಿನ ದೇವರ ಪ್ರಾರ್ಥನೆ ಮಾಡುವ ಆಗ್ರಾದ ಗಜೇಂದ್ರ ಶರ್ಮಾ, ತಮ್ಮ ಪ್ರಕರಣದಲ್ಲಿ ಗೆಲುವು ಸಿಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆ ದೇವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ಈ ಸಮಸ್ಯೆಯಿಂದ ಹೊರ ಬರುತ್ತೇವೆ ಎನ್ನುತ್ತಾರೆ. ಅಂದಹಾಗೆ ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 28, 2020ಕ್ಕೆ ಇದೆ.