"ನಾವು ಮುಂಚೆ ಟೀಮ್ ನಲ್ಲಿ ಹದಿಮೂರು ಜನ ಇದ್ದೆವು. ಈಗ ಎಂಟೇ ಜನ ಇದ್ದೀವಿ. ಇನ್ನೂ ಇಬ್ಬರು ಬೇರೆ ಡೀಲ್ ಗೆ ಹೋಗ್ತಾರೆ ಅಂತಿದ್ದಾರೆ. "ಈಗಲೇ ಜನ ಕಡಿಮೆ. ಇನ್ನೂ ಇಬ್ಬರು ಹೋದರೆ ಮತ್ತೂ ಕಷ್ಟ ಆಗುತ್ತೆ" ಅಂತ ನಾವು ಹೇಳಿದರೆ, ನಿಮ್ಮಿಂದ ಆಗಲಿಲ್ಲ ಅಂದರೆ ಬೇರೆ ಕಡೆ ಕೆಲಸ ನೋಡಿಕೊಳ್ಳಿ ಅಂತಾರೆ..." ಹೀಗೆ ಮಾತು ಮುಂದುವರಿಸುತ್ತಾ ಹೋದರು ಬೆಂಗಳೂರಿನ ಪ್ರಮುಖ ಬಿಪಿಒ ಕಂಪೆನಿಯ ಟೀಮ್ ಲೀಡ್ ಕ್ರಿಶ್.
ಏಕೆ ಇಂಥ ಪರಿಸ್ಥಿತಿ ಬರುತ್ತದೆ ಗೊತ್ತಾ?
ಬಿಜಿನೆಸ್ ಪ್ರೊಸೆಸ್ ಔಟ್ ಸೋರ್ಸಿಂಗ್ (ಬಿಪಿಒ) ಬೆಂಗಳೂರು ಸೇರಿದಂತೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಿರುವ ಕ್ಷೇತ್ರ. ಅಮೆರಿಕಾ, ಯು.ಕೆ., ಜಪಾನ್ ಹೀಗೆ ನಾನಾ ದೇಶಗಳ ಕಂಪೆನಿಗಳ ವಿವಿಧ ವಿಭಾಗಗಳನ್ನು (ಅಕೌಂಟ್ಸ್ ರಿಸೀವಬಲ್- ಪೇಯಬಲ್, ಬ್ಯಾಂಕಿಂಗ್, ಪ್ರಕ್ಯೂರ್ ಮೆಂಟ್, ಆರ್ಡರ್ ಟು ಕ್ಯಾಶ್, ಪೇ ರೋಲ್) ಬೆಂಗಳೂರು ಮತ್ತು ದೇಶದ ಇತರ ಪ್ರಮುಖ ನಗರಗಳಲ್ಲಿ ಕೆಲಸ ಮಾಡುತ್ತಿರುವವರು ನಿರ್ವಹಿಸುತ್ತಾರೆ.
ವರ್ಷದಿಂದ ವರ್ಷಕ್ಕೆ ಕಡಿಮೆ ಖರ್ಚು ತೋರಿಸಬೇಕು
ಬಹುರಾಷ್ಟ್ರೀಯ ಕಂಪೆನಿಗಳಿಗೆ ತಾವೇ ಆ ವಿಭಾಗವನ್ನು ನಿರ್ವಹಿಸುವುದು ದುಬಾರಿ ಎನಿಸಿದಾಗ ಹೀಗೆ ಔಟ್ ಸೋರ್ಸ್ ಮಾಡುತ್ತಾರೆ. ತಮಗೆ ತಗುಲುತ್ತಿದ್ದ ವೆಚ್ಚಕ್ಕಿಂತ ಕಡಿಮೆಗೆ ಯಾವ ಕಂಪೆನಿ ಕೆಲಸ ಮಾಡಿಕೊಡುತ್ತದೋ ಅಂಥ ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಂಡು, ಬಿಜಿನೆಸ್ ಪ್ರೊಸೆಸ್ ಔಟ್ ಸೋರ್ಸ್ ಮಾಡುತ್ತವೆ. ಇಲ್ಲಿ ಇನ್ನೊಂದು ಮುಖ್ಯ ವಿಚಾರ ಇದೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಖರ್ಚು ಹೆಚ್ಚುತ್ತಾ ಹೋಗುತ್ತದೆ ಅಲ್ಲವಾ? ಆದರೆ ಬಿಪಿಒಗಳಲ್ಲಿ ಉಳಿತಾಯ ತೋರಿಸಬೇಕು. ಆರಂಭದಲ್ಲಿ ಐವತ್ತು ಉದ್ಯೋಗಿಗಳ ಜತೆಗೆ ಶುರುವಾದ ಪ್ರೊಸೆಸ್ ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಾ ಬಂದು, ಖರ್ಚು ಆರಂಭಿಕ ಹಂತದಲ್ಲಿ ಇದ್ದುದಕ್ಕಿಂತ ಎಪ್ಪತ್ತರಷ್ಟು, ಅರವತ್ತರಷ್ಟು ಹಾಗೂ ಕೆಲ ಬಾರಿ ಅರ್ಧಕ್ಕೆ ತಂದು ನಿಲ್ಲಿಸಬೇಕು.
ಇಪ್ಪತ್ತರ ಹರೆಯದವರಿಗೆ ಹೆಚ್ಚಿನ ಬೇಡಿಕೆ
ಅದಕ್ಕಾಗಿ ಆಟೋಮೆಷನ್ ಮಾಡಲಾಗುತ್ತದೆ. ಅಂದರೆ ಕೆಲಸ ಮಾಡುವ ಪ್ರಕ್ರಿಯೆಯಲ್ಲಿ ಮಶೀನ್ ನ ಬಳಕೆ ಹೆಚ್ಚಿಸಿಕೊಂಡು, ಮನುಷ್ಯರ ಅಗತ್ಯವನ್ನು ಕಡಿಮೆ ಮಾಡುವ ಪ್ರಕ್ರಿಯೆ ಇದು. ಈಗಂತೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಸವಾಲು ಮತ್ತೂ ಹೆಚ್ಚಾಗಿದೆ. ಕ್ರಿಶ್ ನಂಥವರ ಮತ್ತೊಂದು ಆತಂಕ ಏನು ಗೊತ್ತಾ? ಬಿಪಿಒದಂಥ ಕ್ಷೇತ್ರದಲ್ಲಿ ಶಿಫ್ಟ್, ಒತ್ತಡ ಮತ್ತಿತರ ಕಾರಣಗಳಿಗೆ ಹತ್ತಾರು ವರ್ಷ ಉಳಿದುಕೊಳ್ಳುವುದು ಕಷ್ಟ. ಇಲ್ಲದಿದ್ದಲ್ಲಿ ನಲವತ್ತು ವರ್ಷ ದಾಟಿದವರಿಗಿಂತ ಇಪ್ಪತ್ತರ ಹರೆಯದವರಿಗೆ ಇಲ್ಲಿ ಬೇಡಿಕೆ ಹೆಚ್ಚು. ಏಕೆಂದರೆ, ವೇತನ ಕಡಿಮೆ ಆಗುತ್ತದೆ. ಜತೆಗೆ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಇಪ್ಪತ್ತರ ಹರೆಯದಲ್ಲಿ ಇರುವವರಿಗೆ ಹೆಚ್ಚಿಗೆ ಇರುತ್ತದೆ.
ಆರ್ಥಿಕ ಹಿಂಜರಿತ ಸೇರಿ ಮತ್ತಿತರ ಸಮಸ್ಯೆಗಳು
ಇನ್ನು ಈ ಕ್ಷೇತ್ರ ಅವಲಂಬಿತವಾಗಿರುವುದು ಬಿಜಿನೆಸ್ ಔಟ್ ಸೋರ್ಸ್ ಮಾಡುವ ಕಂಪೆನಿಯ ಲಾಭ- ನಷ್ಟ ಹಾಗೂ ಆ ಕಂಪೆನಿ ಇರುವ ದೇಶದ ಸರ್ಕಾರ ರೂಪಿಸುವ ನಿಯಮಾವಳಿಗಳ ಮೇಲೆ. ಇವೆರಡರಲ್ಲಿ ಯಾವುದರಲ್ಲಿ ನಕಾರಾತ್ಮಕ ಬೆಳವಣಿಗೆಯಾದರೂ ಅದು ಪರಿಣಾಮ ಬೀರುತ್ತದೆ. ಅಂದರೆ, ಅಮೆರಿಕಾದಲ್ಲಿ ಬಿರುಗಾಳಿಯಾದರೆ ಬೆಂಗಳೂರು ಬೆಚ್ಚಿ ಬಿದ್ದಂತೆ. ಬಿಪಿಒ ಉದ್ಯೋಗಿಗಳು ಈಗ ಭಾರತದಲ್ಲಿ ಅನಿಶ್ಚಿತತೆ ಎದುರಿಸುತ್ತಿರುವ ಕಾರಣಗಳ ಪಟ್ಟಿ ಹೀಗಿದೆ: ಆರ್ಥಿಕ ಹಿಂಜರಿತ, ಆಟೋಮೆಷನ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಹೆಚ್ಚುತ್ತಿರುವ ಉದ್ಯೋಗ ಬೇಡಿಕೆ, ಇಂಗ್ಲಿಷ್ ಭಾಷೆ ಕಲಿಯುತ್ತಿರುವ ಇತರ ಮುಂದುವರಿಯುತ್ತಿರುವ ರಾಷ್ಟ್ರಗಳ ಜನರು.
ಉದ್ಯೋಗ ಕಳೆದುಕೊಂಡರೆ ಎಂಬ ಆತಂಕ
ಬಿಪಿಒ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮಾಣ ತುಂಬ ಹೆಚ್ಚಿದೆ. ಅದರಲ್ಲೂ ಕಾಮರ್ಸ್ ಮತ್ತು ಸೈನ್ಸ್ ಹಿನ್ನೆಲೆಯವರು ಪದವಿ ಮುಗಿಸಿ, ನೇರವಾಗಿ ಬಿಪಿಒ ಸೇರಿದವರು ಹೆಚ್ಚು. ಇಂಥವರಿಗೆ ಮೂಲ ಅಕೌಂಟ್ಸ್ ಹಾಗೂ ಸೈನ್ಸ್ ಎರಡೂ ಈಗ ನೆನಪೂ ಇಲ್ಲ, ಅದನ್ನು ಅವರು ತಮ್ಮ ಕೆಲಸಕ್ಕೂ ಬಳಸುತ್ತಿಲ್ಲ. ತಮಗೆ ಈಗ ಬರುತ್ತಿರುವ ವೇತನವನ್ನು ನೆಚ್ಚಿಕೊಂಡು ಕಾರು, ಮನೆ ಇತ್ಯಾದಿ ಕಾರಣಗಳಿಗೆ ಸಾಲ ಮಾಡಿಕೊಂಡಿದ್ದಾರೆ. ಹತ್ತು ವರ್ಷ, ಇಪ್ಪತ್ತು ವರ್ಷ ಕಾಲಕ್ಕೆ ತಿಂಗಳು- ತಿಂಗಳು ಇಎಂಐ ಕಟ್ಟಬೇಕಿದೆ. ಒಂದು ವೇಳೆ ಉದ್ಯೋಗ ಕಳೆದುಕೊಂಡರೆ ಅಥವಾ ಕೆಲಸ ಮಾಡುವುದು ಅಸಾಧ್ಯ ಅಂತಾದರೆ ಏನು ಮಾಡುವುದು ಎಂಬುದು ಕ್ರಿಶ್ ನಂಥ ಹಲವರ ಪ್ರಶ್ನೆ.
ಆರೋಗ್ಯ ಸಮಸ್ಯೆಗಳು ಜಾಸ್ತಿ
ಇನ್ನು ಕನಿಷ್ಠ ನಾಲ್ಕು ಗಂಟೆಗಳ ಕಾಲ ಕಂಪೆನಿಗಳಿಗೆ ಹೋಗಿಬರುವ ಸಮಯ, ಟ್ರಾಫಿಕ್ ನ ಅಡ್ಡಪರಿಣಾಮಗಳು, ಬೆನ್ನು ನೋವು, ಸ್ಥೂಲಕಾಯದಿಂದ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಬೊಕ್ಕ ತಲೆ, ಸಣ್ಣ ವಯಸ್ಸಿಗೆ ಬಿಳಿ ಕೂದಲು, ರಕ್ತದೊತ್ತಡ- ಮಧುಮೇಹ ಕೂಡ ಈ ಕೆಲಸದ ಕೊಡುಗೆಗಳೇ. ಆದರೆ ದುಡಿಮೆ ಅನಿವಾರ್ಯ. ಆ ಕಾರಣಕ್ಕೆ ಸಹಿಸಿಕೊಳ್ಳಬೇಕಿದೆ ಎನ್ನುತ್ತಾರೆ ಮತ್ತೊಬ್ಬ ಬಿಪಿಒ ಉದ್ಯೋಗಿ ಕಿಶೋರ್. ನಮ್ಮ ದೇಶದಲ್ಲಿ ಯುವ ಜನರ ಸಂಖ್ಯೆ ಹೆಚ್ಚಿದೆ. ಆ ಪೈಕಿ ಬಹುಪಾಲು ಮಂದಿ ಐ.ಟಿ.- ಬಿಪಿಒಗಳಲ್ಲಿ ಕೆಲಸ ಮಾಡುವುದನ್ನು ಗಮನಿಸಬಹುದು. ಆದರೆ ಅವರ ಆರೋಗ್ಯದ ಕಡೆಗೆ ಗಮನ ಹರಿಸುವುದೇ ಕಡಿಮೆ. ಕೆಲವು ಕಂಪೆನಿಗಳಲ್ಲಿ ಹನ್ನೆರಡು ತಾಸು ಕೆಲಸ ಮಾಡಿಸಿಕೊಳ್ಳುತ್ತಾರೆ. ಮನೆಯಿಂದ ಹೋಗಿಬರುವುದಕ್ಕೆ ನಾಲ್ಕು ಗಂಟೆ ಸಮಯ ಹಿಡಿಯುತ್ತದೆ. ವಾರಾನುಗಟ್ಟಲೆ ನಿದ್ದೆಯೇ ಮಾಡುವುದಕ್ಕೆ ಆಗಲ್ಲ. ಅದರಲ್ಲೂ ನೈಟ್ ಶಿಫ್ಟ್ ಇದ್ದಾಗ ಪರಿಸ್ಥಿತಿ ಇನ್ನೂ ಭಯಂಕರ. ಆದರೆ ಇದನ್ನೆಲ್ಲ ಯಾರ ಹತ್ತಿರ ಹೇಳಿಕೊಂಡರೆ ನಮಗೆ ಪರಿಹಾರ ಸಿಗಬಹುದು ಅಂತಲೂ ಗೊತ್ತಿಲ್ಲ ಎಂದು ನಿಟ್ಟುಸಿರು ಬಿಟ್ಟರು ಕಿಶೋರ್.
More From GoodReturns

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications