Breaking: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ
ಏರುತ್ತಿರುವ ಇಂಧನ ಬೆಲೆಗಳ ಮಧ್ಯೆ, ಕೇಂದ್ರ ಸರ್ಕಾರ ಶನಿವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ ರೂ 8 ಮತ್ತು ಡೀಸೆಲ್ಗೆ ರೂ 6 ಇಳಿಕೆ ಮಾಡಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 9.5 ರೂಪಾಯಿ ಮತ್ತು ಡೀಸೆಲ್ ದರದಲ್ಲಿ 7 ರೂಪಾಯಿ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸುವುದರಿಂದ ಕೇಂದ್ರ ಸರ್ಕಾರಕ್ಕೆ 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ. ಆದರೆ ಜನರಿಗೆ ಪ್ರಯೋಜನ ನೀಡುವ ನಿಟ್ಟಿನಲ್ಲಿ ಈ ಸುಂಕವನ್ನು ಕಡಿತ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಕೂಡಾ ಇದೇ ಕ್ರಮವನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
"ಎಲ್ಲಾ ರಾಜ್ಯ ಸರ್ಕಾರಗಳಿಗೆ, ವಿಶೇಷವಾಗಿ ಕೊನೆಯ ಸುತ್ತಿನಲ್ಲಿ (ನವೆಂಬರ್ 2021) ಕಡಿತವನ್ನು ಮಾಡದ ರಾಜ್ಯಗಳು ಸುಂಕ ಇಳಿಕೆ ಮಾಡಬೇಕು. ಈ ಮೂಲಕ ಜನರಿಗೆ ಸಹಾಯ ಮಾಡಬೇಕು," ಎಂದು ಕೂಡಾ ಹೇಳಿದ್ದಾರೆ.

ಸಿಲಿಂಡರ್ಗಳಿಗೆ ಸಬ್ಸಿಡಿ
ಅಡುಗೆ ಅನಿಲ ದರಗಳು ದಾಖಲೆಯ ಮಟ್ಟಕ್ಕೆ ಏರುವುದರಿಂದ ಉಂಟಾಗುವ ಹೊರೆಯನ್ನು ಕಡಿಮೆ ಮಾಡಲು ಕೇಂದ್ರವು ಒಂದು ವರ್ಷದಲ್ಲಿ 12 ಸಿಲಿಂಡರ್ಗಳಿಗೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ಗೆ 200 ರೂಪಾಯಿಗಳನ್ನು ನೀಡುತ್ತದೆ ಎಂದು ಸೀತಾರಾಮನ್ ಹೇಳಿದರು.
ಇಂಧನ, ಅಡುಗೆ ಅನಿಲ ಅಲ್ಲದೇ ಸಿಮೆಂಟ್ ಹಾಗೂ ಲಾಜಿಸ್ಟಿಕ್ಸ್ ಆವಕ, ಪೂರೈಕೆ, ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಉಕ್ಕು ಆಮದು, ರಫ್ತು ಮೇಲಿನ ಕೆಲವು ಸುಂಕ ಕಡಿತ ಮಾಡಿ, ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ.
ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ಸ್ಥಗಿತ ಮಾಡಲಾಗಿದ್ದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಯು ಚುನಾವಣೆಯ ಬಳಿಕ ಸರ್ಕಾರಿ ತೈಲ ಕಂಪನಿಗಳು ಮತ್ತೆ ಆರಂಭ ಮಾಡಿದ್ದವು. ದೇಶದಲ್ಲಿ ಪ್ರತಿದಿನ ತೈಲ ದರ ಏರಿಕೆ ಮಾಡಲಾಗಿತ್ತು. ಆದರೆ ಕಳೆದ ಹಲವಾರು ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ಏಪ್ರಿಲ್ನಲ್ಲಿ ಶೇಕಡ 14ರಷ್ಟು ಪೆಟ್ರೋಲ್ ಬಳಕೆ ಹೆಚ್ಚಾಗಿದೆ.
ಮಾರ್ಚ್ 22ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ
ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಆದಾದ ಬಳಿಕ ಎರಡು ದಿನ ಹೊರತು ಪಡಿಸಿ ಮತ್ತೆಲ್ಲಾ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವು ಹೆಚ್ಚಳವಾಗಿತ್ತು. ಆದರೆ ಸತತ ಹಲವಾರು ದಿನಗಳಿಂದ ಬೆಲೆ ಸ್ಥಿರವಾಗಿದೆ.
ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈಗಾಗಲೇ ಎಲ್ಪಿಜಿ ದರವನ್ನು ಏರಿಕೆ ಮಾಡಲಾಗಿದೆ. ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡುವ ನಿರೀಕ್ಷೆಯನ್ನು ಜನರು ಹೊಂದಿದ್ದರು. ಸುಮಾರು 40 ದಿನಗಳ ಬಳಿಕ ನಿರೀಕ್ಷೆಯಂತೆ ಸುಂಕ ಇಳಿಕೆ ಮಾಡಲಾಗಿದೆ.