ಕಾರ್ಪೊರೇಟ್ ಗಳಿಗೆ ಕಾನೂನು ಬಲ; ಸಂಸ್ಥೆ ಮುಚ್ಚಲು, ಕಾರ್ಮಿಕರನ್ನು ತೆಗೆಯಲು ಅನುಮತಿ ಬೇಡ
ಯಾವುದೇ ಕೈಗಾರಿಕೆ ಸಂಸ್ಥೆ ಮುಚ್ಚುವ ಮುನ್ನ ಅಥವಾ ಕಾರ್ಮಿಕರನ್ನು ಉದ್ಯೋಗದಿಂದ ತೆಗೆಯುವ ಮುಂಚೆ ಸರ್ಕಾರದ ಅನುಮತಿ ಪಡೆಯಬೇಕು ಎಂಬ ಇದ್ದ ನಿಯಮದಲ್ಲಿ ಕಾರ್ಮಿಕ ಸಚಿವಾಲಯದಿಂದ ವಿಸ್ತರಣೆ ಮಾಡಲಾಗಿದೆ. ಈವರೆಗೆ ನೂರು ಸಿಬ್ಬಂದಿ ಇರುವಂಥ ಘಟಕ ಮುಚ್ಚುವಂತಿದ್ದರೆ ಅಥವಾ ಅಷ್ಟು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಕು ಎಂದಿದ್ದರೆ ಸರ್ಕಾರದ ಅನುಮತಿ ಪಡೆಯಬೇಕಿತ್ತು. ಆ ಮಿತಿಯನ್ನು ಈಗ ಮುನ್ನೂರಕ್ಕೆ ಏರಿಸಲಾಗಿದೆ.
ಈ ನಡೆಯಿಂದಾಗಿ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಕ್ಕೆ ಹಾಗೂ ಸಂಸ್ಥೆಯನ್ನು ಮುಚ್ಚುವುದಕ್ಕೆ ಸುಲಭವಾಗಲಿದೆ. ಇನ್ನು ಮುಂದೆ ಕಾರ್ಪೊರೇಟ್ ಗಳು ಸರ್ಕಾರಕ್ಕೆ ಅಧಿಕಾರ ಕೊಟ್ಟು, ತಮ್ಮ ಅಗತ್ಯವನ್ನು ಪೂರೈಸಿಕೊಳ್ಳುವ ಅಗತ್ಯ ಇರುವುದಿಲ್ಲ.
ಕಾರ್ಮಿಕ ಕಾನೂನು ಸುಧಾರಣೆ ಹೆಸರಲ್ಲಿ ಏನೇನಾಗಬಹುದೋ?
ಈ ಮಧ್ಯೆ ಕೇಂದ್ರ ಸರ್ಕಾರವು ವಲಸಿಗ ಕಾರ್ಮಿಕರಿಗೆ ಯೂನಿವರ್ಸಲ್ ಸೋಷಿಯಲ್ ಸೆಕ್ಯೂರಿಟಿ ಒದಗಿಸುವ ಉದ್ದೇಶ ಹೊಂದಿದೆ. ಅಂತರರಾಜ್ಯ ವಲಸೆ ಕಾರ್ಮಿಕರ ಬಗ್ಗೆ ಅಧ್ಯಯನ ಮಾಡಿದ್ದು, ಶನಿವಾರದಂದು ಸಂಸತ್ ನಲ್ಲಿ ಕಾರ್ಮಿಕರ ಕಾನೂನು ಮಸೂದೆ ಪರಿಚಯಿಸಲಾಯಿತು.
233 ಶಿಫಾರಸುಗಳಲ್ಲಿ 174 ಅಳವಡಿಸಲಾಗುವುದು
ಕಾರ್ಮಿಕರಿಗೆ ಸಂಬಂಧಿಸಿದಂತೆ ಸ್ಥಾಯಿ ಸಮಿತಿಯಿಂದ ಮಾಡಿದ 233 ಶಿಫಾರಸುಗಳಲ್ಲಿ 174 ಅಥವಾ 74%ನಷ್ಟನ್ನು ಅಳವಡಿಸಲಾಗುವುದು. ಕಾರ್ಮಿಕರಿಗೆ ಸಂಬಂಧಿಸಿದ ಮೂರು ಮಸೂದೆಯಲ್ಲಿ ಮತ್ತೆ ಕೆಲವು ಬದಲಾವಣೆಗಳು ಆಗಲಿವೆ ಎಂದು ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್ ಗಂಗ್ವರ್ ಲೋಕಸಭೆಯ ಕೆಳ ಮನೆಯಲ್ಲಿ ಮಸೂದೆಯನ್ನು ಮಂಡಿಸುವ ವೇಳೆ ತಿಳಿಸಿದ್ದಾರೆ. ಸಚಿವ ಗಂಗ್ವರ್ ಹೇಳುವಂತೆ, ಈ ಮೂರು ಮಸೂದೆಯ ಕರಡನ್ನು ಸಿದ್ಧಪಡಿಸುವ ಮುನ್ನ ಒಂಬತ್ತು ಸುತ್ತಿನ ತ್ರಿಪಕ್ಷೀಯ ಮಾತುಕತೆಯನ್ನು ಸರ್ಕಾರ ನಡೆಸಿದೆ. ಈಗಿನ ಬದಲಾವಣೆಯ ಒಂದು ಭಾಗವು ಮುನ್ನೂರಕ್ಕಿಂತ ಕಡಿಮೆ ಸಂಖ್ಯೆಯ ಸಿಬ್ಬಂದಿ ಇರುವ ಕಡೆಗೆ ಅನ್ವಯ ಆಗುತ್ತದೆ. ಅದಕ್ಕೆ ಆಯಾ ಸರ್ಕಾರ ಅಧಿಸೂಚನೆ ಹೊರಡಿಸುತ್ತದೆ. ಅದರ ಪ್ರಕಾರ ಕಳೆದ ಹನ್ನೆರಡು ತಿಂಗಳಲ್ಲಿನ ಸರಾಸರಿ ಕಾರ್ಯ ನಿರ್ವಹಿಸುವ ಅವಧಿಯನ್ನು ಲೆಕ್ಕ ಹಾಕಿಕೊಂಡು ಸಂಸ್ಥೆಗಳಿಂದ ನೇಮಕ ಮಾಡಿಕೊಳ್ಳಲಾಗುತ್ತದೆ.
ಕಾರ್ಮಿಕರ ಒಕ್ಕೂಟ ರಚಿಸುವ ಅಧಿಕಾರ ಮೊಟಕು
ಕಾರ್ಮಿಕರಿಗೆ ಒಕ್ಕೂಟವನ್ನು ರಚಿಸಿಕೊಳ್ಳುವ ಅಧಿಕಾರ ಮೊಟಕುಗೊಂಡಿದ್ದು, ನೇಮಕಾತಿ, ಉದ್ಯೋಗದಿಂದ ತೆಗೆಯುವುದು ಹಾಗೂ ಕೆಲಸದ ಅವಧಿ ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಬರುತ್ತದೆ. ಇನ್ನು ಹಂತಹಂತವಾಗಿ ಎಲ್ಲ ಕಾರ್ಮಿಕರಿಗೂ ಅಂದರೆ ಅಸಂಘಟಿತ ಮತ್ತು ವಲಸಿಗರೂ ಸೇರಿದಂತೆ ಸಕಲರಿಗೂ ಸಾಮಾಜಿಕ ಭದ್ರತೆ ನೀಡುವುದನ್ನು ಸರ್ಕಾರ ವಿಸ್ತರಣೆ ಮಾಡುತ್ತದೆ. ಕೇಂದ್ರ ಕಾರ್ಮಿಕ ಸಚಿವಾಲಯವು 29 ಕಾರ್ಮಿಕ ಕಾನೂನು ಒಗ್ಗೂಡಿಸಿ, 4 ಕಾನೂನು ರೂಪುಗೊಳಿಸಿದೆ. ಕಾರ್ಮಿಕರ ಹಿತವನ್ನೂ ಗಮನಿಸಿ, ನೇಮಕಾತಿ ಹಾಗೂ ಉದ್ಯೋಗದಿಂದ ತೆಗೆಯುವುದನ್ನು ಸುಲಭ ಮಾಡಲಾಗಿದೆ.
ಅಧ್ಯಯನ ನಡೆಸುವುದಕ್ಕೆ ಎರಡು ದಿನದ ಸಮಯ
ಈ ಹಿಂದೆ ಸರ್ಕಾರದಿಂದ ರಾಷ್ಟ್ರೀಯ ಮಟ್ಟದಲ್ಲಿ ಕನಿಷ್ಠ ವೇತನವನ್ನು ನಿಗದಿ ಮಾಡಿ, ಅಧಿಸೂಚನೆ ಹೊರಡಿಸಲಾಗಿತ್ತು. ಅದಿನ್ನೂ ಅನುಷ್ಠಾನಕ್ಕೆ ಬರಬೇಕಾಗಿದೆ. ಈ ಹೊಸ ತಿದ್ದುಪಡಿಗೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಮೂರೂ ಕಾರ್ಮಿಕ ಕಾನೂನುಗಳನ್ನು ಪರಿಚಯಿಸುವ ಮುನ್ನ ಸಂಬಂಧಿಸಿದವರನ್ನು ಸಂಪರ್ಕಿಸಿ, ಮತ್ತೊಮ್ಮೆ ಚರ್ಚೆ ನಡೆಸಬೇಕಿತ್ತು. ಏಕೆಂದರೆ ಈ ಹಿಂದಿನದರಲ್ಲಿ ಸಾಕಷ್ಟು ಬದಲಾವಣೆಗಳಿವೆ ಎಂದಿದ್ದಾರೆ. ಇನ್ನು ಬದಲಾವಣೆ ಮಾಡಲಾದ ಹೊಸ ಮಸೂದೆ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಸಂಸತ್ ಗೆ ಎರಡು ದಿನಗಳ ಕಾಲಾವಕಾಶ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕೇಳಿದ್ದಾರೆ.
ಕಾರ್ಮಿಕ ಕಾನೂನು ಬದಲಿಸಲು ರಾಜ್ಯಗಳಿಗೆ ಅಧಿಕಾರ
ಈ ಮೂರು ಮಸೂದೆ ಚರ್ಚೆ ವೇಳೆ ಪ್ರಸ್ತಾವ ಆದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಕಾರ್ಮಿಕ ಸಚಿವ ಗಂಗ್ವರ್ ತಿಳಿಸಿದ್ದಾರೆ. ಇದೇ ವೇಳೆ ಆಯಾ ರಾಜ್ಯಗಳು ಹೂಡಿಕೆಯನ್ನು ಆಕರ್ಷಿಸಲು ಹಾಗೂ ಅನುಕೂಲ ಆಗುವಂತೆ ಕೈಗಾರಿಕೆ ಕಾನೂನು ತಿದ್ದುಪಡಿ, ಸುಧಾರಣೆ ಮಾಡಲು ಸ್ವತಂತ್ರವಾಗಿವೆ. ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ. ಭಾರತದಲ್ಲಿ ಕಾರ್ಮಿಕ ಕಾನೂನು ಬಹಳ ಕಠಿಣವಾಗಿದೆ. ಆದ್ದರಿಂದಲೇ ದೇಶದಲ್ಲಿ ಹೊಸ ಕಂಪೆನಿಗಳು ಆರಂಭಿಸುವುದಕ್ಕೆ ಆಲೋಚನೆ ಮಾಡುತ್ತಾರೆ ಎಂಬ ವಾದ ಒಂದು ಕಡೆ ಇದೆ. ಇದೇ ವೇಳೆ ಬಂಡವಾಳ ಆಕರ್ಷಿಸಬೇಕು ಎಂಬ ಕಾರಣಕ್ಕೆ ಕಾರ್ಮಿಕರ ಹಿತಾಸಕ್ತಿ ಕಡೆಗಣಿಸಲಾಗುತ್ತಿದೆ ಎಂಬ ಆಕ್ಷೇಪ ಮತ್ತೊಂದು ಕಡೆ ಇದೆ.