ಲಾಕ್ ಡೌನ್ ಅವಧಿಯಲ್ಲಿ ಈ ತನಕ ರೈತರಿಗೆ ಕನಿಷ್ಠ 20 ಸಾವಿರ ಕೋಟಿ ರುಪಾಯಿ ನಷ್ಟವಾಗಿರುವ ಅಂದಾಜಿದೆ. ಸಾಗಾಟದ ಸಮಸ್ಯೆ ಹಾಗೂ ಕಾರ್ಮಿಕರ ಕೊರತೆ ಕಾರಣಕ್ಕೆ ಹಣ್ಣು- ತರಕಾರಿಗಳು ಹಾಳಾಗಿವೆ. ಈ ಅಂಕಿ- ಅಂಶಗಳು ತಿಳಿದುಬಂದಿರುವುದು ವ್ಯಾಪಾರಿಗಳು ಮತ್ತು ರೈತ ಸಮುದಾಯದಿಂದ. ಒಂದು ವೇಳೆ ಈ ಲಾಕ್ ಡೌನ್ 3 ತಿಂಗಳ ಅವಧಿಗಾದರೆ ನಷ್ಟದ ಪ್ರಮಾಣ 50 ಸಾವಿರ ಕೋಟಿ ತಲುಪುತ್ತದೆ ಎಂಬ ಅಂದಾಜಿದೆ.
ಈಚೆಗೆ ಮಾರ್ಕೆಟ್ ಗೆ ಹಣ್ಣು- ತರಕಾರಿಗಳು ಬರುವುದಕ್ಕೆ ಸಾಧ್ಯವಾಗಿದ್ದರಿಂದ ನಷ್ಟದ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇಲ್ಲದಿದ್ದಲ್ಲಿ ಇನ್ನೂ ಹೆಚ್ಚಾಗುತ್ತಿತ್ತು. ಹಲವು ಮಾರ್ಕೆಟ್ ಗಳಲ್ಲಿ ಏಪ್ರಿಲ್ 15ರ ನಂತರ ಹಣ್ಣು ಮತ್ತು ತರಕಾರಿ ಬರಲು ಆರಂಭವಾಯಿತು. ಲಾರಿಗಳ ಸಂಚಾರ ಸಲೀಸಾಗುವಂತೆ ಸರ್ಕಾರ ಕೂಡ ಕೆಲವು ಕ್ರಮಗಳನ್ನು ಕೈಗೊಂಡಿತು.
ಕಳೆದ ವರ್ಷಕ್ಕಿಂತ ಅರ್ಧದಷ್ಟು ಕಡಿಮೆ
ಏಪ್ರಿಲ್ 10ನೇ ತಾರೀಕಿನ ತನಕದ ಲೆಕ್ಕ ಹೇಳುವುದಾದರೆ, ಕಳೆದ ವರ್ಷಕ್ಕಿಂತ ಮಾರುಕಟ್ಟೆಗೆ ಬರುವ ಹಣ್ಣು- ತರಕಾರಿಗಳ ಪ್ರಮಾಣ ಅರ್ಧಕ್ಕೆ ಇಳಿದಿದೆ. ಸರಾಸರಿ ಪ್ರಮಾಣ ಶೇಕಡಾ 33ರಷ್ಟು ಇಳಿಕೆಯಾಗಿದೆ. "ಸನ್ನಿವೇಶ ಸಹಜ ಸ್ಥಿತಿಗೆ ಮರಳುವ ತನಕ ರೈತರು ಉತ್ಪನ್ನಗಳನ್ನು ಯಾವುದೇ ತೊಂದರೆ ಇಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ. ಇನ್ನು ಹೋಟೆಲ್- ರೆಸ್ಟೋರೆಂಟ್ ಗಳನ್ನು ಸಹ ಮುಚ್ಚಿರುವುದರಿಂದ ಕೂಡ ಬೇಡಿಕೆ ಕುಸಿತವಾಗಿದೆ" ಎಂದು ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಸಮಿತಿ ಕನ್ವೀನರ್ ವಿ.ಎಂ.ಸಿಂಗ್ ಹೇಳಿದ್ದಾರೆ. ತುರ್ತು ಕ್ರಮವಾಗಿ ಸರ್ಕಾರವೇ ಹಣ್ಣು, ತರಕಾರಿಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದಿದ್ದಾರೆ.
ದುಬಾರಿ ಬೆಲೆಯದು ಮಾತ್ರ ಶೀತಲಗೃಹದಲ್ಲಿ
ತರಕಾರಿಗಳನ್ನು ಶೀತಲಗೃಹದಲ್ಲಿ ಇಡಬಹುದು. ಆದರೆ ಅದಕ್ಕೆ ಸಿಕ್ಕಾಪಟ್ಟೆ ಬಂಡವಾಳ ಬೇಕು. ದುಬಾರಿ ಬೆಲೆಯದ್ದನ್ನು ಅದರಲ್ಲಿ ಕಾಪಾಡಬಹುದು ಎಂದು ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೋರೇಷನ್ ನ ಮಾಜಿ ಅಧ್ಯಕ್ಷ ಬಿ.ಬಿ. ಪಟ್ನಾಯಕ್ ಹೇಳಿದ್ದಾರೆ. ಇನ್ನು ಹೂ ಕೋಸು, ನವಿಲುಕೋಸು, ಬದನೇಕಾಯಿಯಂಥದ್ದನ್ನು ಗಿಡದಿಂದ ಕಿತ್ತ ಕೆಲ ದಿನದಲ್ಲೇ ಬಳಸಬೇಕು. ಆದ್ದರಿಂದ ಅಂಥವಕ್ಕೆ ಶೀತಕಗೃಹದ (ಕೋಲ್ಡ್ ಸ್ಟೋರೇಜ್) ಅಗತ್ಯ ಇಲ್ಲ ಎಂದು ಕೆಲ ಸಮಯದ ಹಿಂದೆ ಅದೇ ಪಟ್ನಾಯಕ್ ಹೇಳಿದ್ದರು. ಮಾರುಕಟ್ಟೆಗೆ ಹಣ್ಣು- ತರಕಾರಿ ಕಡಿಮೆ ಬರುವುದಕ್ಕೆ ಸರಕು- ಸಾಗಾಟ ಸಮಸ್ಯೆ ಆಗಿರುವುದು ಸಹ ಮತ್ತೊಂದು ಕಾರಣ.
ಕೊರೊನಾ ಮುಂಚೆ ಹತ್ತು ಲಕ್ಷ ಲಾರಿಗಳು
ಅಂತರರಾಜ್ಯ ಲಾರಿ ಸಂಚಾರ ಈಗಲೂ ಸಲೀಸಾಗಿಲ್ಲ. ನ್ಯಾಷನಲ್ ಪರ್ಮಿಟ್ ಲೈಸೆನ್ಸ್ ಜತೆಗೆ ಸ್ಥಳೀಯ ಪಾಸ್ ಗಳನ್ನು ಕೂಡ ಕೇಳುತ್ತಾರೆ. ಕಳೆದ ವಾರಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಈ ಪದ್ಧತಿಯನ್ನು ನಿಲ್ಲಿಸಬೇಕು ಎಂದು ತಿಳಿಸಿದೆ. ಏಪ್ರಿಲ್ 12ನೇ ತಾರೀಕಿನಂದು 1.2 ಲಕ್ಷದಷ್ಟು ಲಾರಿಗಳು ರಸ್ತೆಗೆ ಇಳಿದಿದ್ದವು. ಆ ಪ್ರಮಾಣ ಏಪ್ರಿಲ್ 30ರ ಹೊತ್ತಿಗೆ 1.5 ಲಕ್ಷಕ್ಕೆ ಏರಿಕೆ ಆಗಿತ್ತು. ಆದರೆ 10 ಲಕ್ಷ ಲಾರಿಗಳು ಅಥವಾ 70 ಪರ್ಸೆಂಟ್ ನಷ್ಟು ನ್ಯಾಷನಲ್ ಪರ್ಮಿಟ್ ಹೊಂದಿದ ಲಾರಿಗಳು ರಸ್ತೆಗೆ ಇಳಿಯುವುದು ಬಹಳ ದೂರದ ಮಾತಾಗಿದೆ. ಕೊರೊನಾ ಆವರಿಸುವ ಮುಂಚೆ ರಸ್ತೆಗಳ ಮೇಲೆ ಸಂಚರಿಸುತ್ತಿದ್ದ ಲಾರಿಗಳ ಸಂಖ್ಯೆ ಇದು.
ರೈತರಿಗೆ 5 ಲಕ್ಷ ಕೋಟಿ ರುಪಾಯಿ ಆದಾಯ
ಇತ್ತ ಹಾಲು, ಮೊಟ್ಟೆ, ತರಕಾರಿ- ಹಣ್ಣುಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಲಾರಿಗಳು ಸಾಗಾಟಕ್ಕೆ ಸಿಗುತ್ತಿಲ್ಲ. ಮಳಿಗೆಗಳು ಮಾರಾಟಕ್ಕೆ ತೆರೆಯುತ್ತಿಲ್ಲ. ಮುಖ್ಯವಾದ ಸಮಸ್ಯೆ ಏನೆಂದರೆ, ರೈತರಿಗೆ ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇನ್ನು ಗ್ರಾಹಕರಿಗೇನೂ ಕಡಿಮೆ ಬೆಲೆಗೆ ಹಣ್ಣು- ತರಕಾರಿಗಳು ಸಿಗುತ್ತಿಲ್ಲ ಎಂದು ತಜ್ಞರು ಮಾಹಿತಿ ನೀಡುತ್ತಾರೆ. 2019- 20ರಲ್ಲಿ ಒಟ್ಟಾರೆಯಾಗಿ ಇಡೀ ದೇಶದಲ್ಲಿ ರೈತರಿಗೆ ಹಣ್ಣು- ತರಕಾರಿಯಿಂದ ಬಂದಿರುವ ಆದಾಯ 5 ಲಕ್ಷ ಕೋಟಿ ರುಪಾಯಿ. ಕಳೆದ ಆರ್ಥಿಕ ವರ್ಷದಲ್ಲಿ ಬೆಳೆದ ಹಣ್ಣಿನ ಪ್ರಮಾಣ 95.74 ಮಿಲಿಯನ್ ಟನ್. ಇನ್ನು ತರಕಾರಿ ಪ್ರಮಾಣ 188 ಮಿಲಿಯನ್ ಟನ್.


Click it and Unblock the Notifications