ತಿರುಪತಿಯಿಂದ ಪುರಿ ತನಕ ಭಾರತದ ಟಾಪ್ 5 ಶ್ರೀಮಂತ ದೇವಾಲಯಗಳು
ಭಾರತದಲ್ಲಿನ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಆಚರಣೆಗಳ ಬಗ್ಗೆ ವಿಶ್ವದಾದ್ಯಂತ ಕುತೂಹಲ ಇದೆ. ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ದೇವಾಲಯಗಳಿವೆ. ಇಲ್ಲಿನ ದೇವಾಲಯಗಳಿಗೆ ಜಗತ್ತಿನಾದ್ಯಂತ ಭಕ್ತರು ಇದ್ದಾರೆ. ಅಷ್ಟೇ ಅಲ್ಲ, ದೇವಾಲಯಗಳಲ್ಲಿ ನಡೆದ, ನಡೆಯುತ್ತಿರುವ ಪವಾಡಗಳ ಬಗ್ಗೆ ತಮ್ಮ ಅನುಭವಗಳನ್ನು ಸಹ ಹೇಳಿಕೊಳ್ಳುತ್ತಾರೆ.
ಈ ದೇವಾಲಯಗಳಿಗೆ ದೇಣಿಗೆ ರೂಪದಲ್ಲಿ ನಗದು, ಬೆಳ್ಳಿ ಮತ್ತು ಬಂಗಾರವನ್ನು ಭಕ್ತರು ನೀಡುತ್ತಾರೆ. ಆ ಕಾರಣಕ್ಕೆ ದೇವಾಲಯಗಳು ಆದಾಯದ ದೃಷ್ಟಿಯಿಂದಲೂ ಶ್ರೀಮಂತ ಎನಿಸಿಕೊಂಡಿವೆ. ಅಂಥ ಶ್ರೀಮಂತ ದೇವಾಲಯಗಳ ಬಗ್ಗೆ ಪಟ್ಟಿಯೊಂದು ಇಲ್ಲಿದೆ. ಟಾಪ್ ಪಟ್ಟಿಯಲ್ಲಿ ಇರುವುದರ ಬಗ್ಗೆ ಮಾತ್ರ ಇಲ್ಲಿ ವಿವರಗಳನ್ನು ನೀಡಲಾಗುತ್ತಿದೆ.
ತಿರುಪತಿ ಬಾಲಾಜಿ, ಆಂಧ್ರಪ್ರದೇಶ
ಆಂಧ್ರಪ್ರದೇಶದ ತಿರುಪತಿಯಲ್ಲಿ ಇರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ನಿರ್ಮಾಣ ಆಗಿರುವುದು ಹತ್ತನೇ ಶತಮಾನದಲ್ಲಿ. ಜಗತ್ತಿನ ಆತಿದೊಡ್ಡ ತೀರ್ಥ ಕ್ಷೇತ್ರದಲ್ಲಿ ಇದೂ ಒಂದು. ಸರ್ಕಾರದ ವೆಬ್ ಸೈಟ್ ನಲ್ಲಿ ಇರುವ ಮಾಹಿತಿ ಪ್ರಕಾರ ಪ್ರತಿ ದಿನ ಈ ದೇವಾಲಯಕ್ಕೆ ಮೂವತ್ತು ಸಾವಿರ ಮಂದಿ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಒಂಬೈನೂರು ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹವಾಗುತ್ತದೆ. ಇದರಿಂದಾಗಿ ಶ್ರೀಮಂತ ದೇಗುಲಗಳಲ್ಲಿ ಒಂದಾಗಿದೆ.
ಶ್ರೀ ವೈಷ್ಣೋದೇವಿ ದೇಗುಲ, ಜಮ್ಮು
ಈ ದೇವಾಲಯವು ವೈಷ್ಣವಿ ದೇವಿಗೆ ಮೀಸಲಾದದ್ದು. ಸಮುದ್ರ ಮಟ್ಟಕ್ಕಿಂತ ಐದು ಸಾವಿರದ ಇನ್ನೂರು ಅಡಿ ಎತ್ತರದಲ್ಲಿ, ಲಕ್ಷಾಂತರ ವರ್ಷದ ಹಳೆ ಗುಹೆಯಲ್ಲಿ ಈ ದೇಗುಲ ಇದೆ. ಪ್ರತಿ ವರ್ಷ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ. ಭಾರತದಲ್ಲಿ ಎರಡನೇ ಅತಿ ಶ್ರೀಮಂತ ಹಾಗೂ ಎರಡನೇ ಸ್ಥಾನದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯ ಇದು. ಪ್ರತಿ ವರ್ಷ ಇಲ್ಲಿ ನಗದು ರೂಪದಲ್ಲೇ ಐನೂರು ಕೋಟಿಯಷ್ಟು ಸಂಗ್ರಹವಾಗುತ್ತದೆ. ಇನ್ನು ಚಿನ್ನ- ಬೆಳ್ಳಿ ರೂಪದಲ್ಲಿ ನೂರು ಕೇಜಿಗೂ ಹೆಚ್ಚು ಸಂಗ್ರಹವಾಗುತ್ತದೆ.
ಸಿದ್ಧಿವಿನಾಯಕ್, ಮುಂಬೈ
ಮುಂಬೈನ ಪ್ರಮುಖ ಧಾರ್ಮಿಕ ಆಕರ್ಷಣೆ ಸಿದ್ಧಿವಿನಾಯಕ್ ದೇವಸ್ಥಾನ. ದಕ್ಷಿಣ ಮುಂಬೈನಲ್ಲಿ ಇರುವ ಈ ದೇವಾಲಯಕ್ಕೆ ನಿತ್ಯ ಎರಡು ಲಕ್ಷ ಮಂದಿ ಭೇಟಿ ನೀಡುತ್ತಾರೆ. ಇಲ್ಲಿ ಗಣೇಶನ ಮೂರ್ತಿ ಇದೆ. ಚಿನ್ನದಿಂದ ಮಾಡಿದ ಛಾವಣಿ ಕೆಳಗೆ ಗಣಪತಿ ಮೂರ್ತಿ ಇದೆ. ಈ ದೇವಾಲಯದಲ್ಲಿ ಪ್ರತಿ ವರ್ಷ 125 ಕೋಟಿ ರುಪಾಯಿ ಸಂಗ್ರಹ ಆಗುತ್ತದೆ. ಭಾರತ ಸೇರಿದಂತೆ ಜಗತ್ತಿನ ನಾನಾ ದೇಶಗಳ ಸೆಲೆಬ್ರಿಟಿಗಳು ಈ ದೇವಾಲಯಕ್ಕೆ ಬರುತ್ತಾರೆ.
ಶಿರಡಿ ಸಾಯಿ ಬಾಬಾ ದೇವಸ್ಥಾನ, ನಾಸಿಕ್
ಅಧ್ಯಾತ್ಮ ಗುರು ಸಾಯಿ ಬಾಬಾಗೆ ಮೀಸಲಾದ ದೇವಸ್ಥಾನ ನಾಸಿಕ್ ನಲ್ಲಿದೆ. ಜಗತ್ತಿನಾದ್ಯಂತ ಹತ್ತಾರು ಲಕ್ಷ ಭಕ್ತರು ಈ ದೇವಾಲಯಕ್ಕೆ ಇದ್ದಾರೆ. ವರ್ಷವಿಡೀ ಇಲ್ಲಿಗೆ ಭೇಟಿ ನೀಡುವವರು ಇದ್ದೇ ಇರುವುದರಿಂದ ದೇವಾಲಯ ಕಿಕ್ಕಿರಿದು ತುಂಬಿರುತ್ತದೆ. ವಾರ್ಷಿಕವಾಗಿ ಈ ದೇವಾಲಯದಲ್ಲಿ ಎರಡು ಸಾವಿರ ಕೋಟಿ ರುಪಾಯಿ ಸಂಗ್ರಹ ಆಗುತ್ತದೆ. ಇದರ ಜತೆಗೆ ಚಿನ್ನ, ಬೆಳ್ಳಿಯನ್ನು ಸಹ ದೇಣಿಗೆ ನೀಡಲಾಗುತ್ತದೆ.
ಪುರಿ ಜಗನ್ನಾಥ ದೇವಾಲಯ
ಒಡಿಶಾದ ಪುರಿ ಜಗನ್ನಾಥ ದೇವಾಲಯದ ಮುಖ್ಯ ದೇವರು ಜಗನ್ನಾಥನ ಹೆಸರಲ್ಲಿ ಮೂವತ್ತು ಸಾವಿರ ಎಕರೆ ಭೂಮಿ ನೋಂದಣಿಯಾಗಿದೆ. ಇದರಿಂದ ಅತ್ಯಂತ ಶ್ರೀಮಂತ ದೇವರು ಎಂಬ ಶ್ರೇಯ ಜಗನ್ನಾಥನದು. ಪ್ರತಿ ವರ್ಷ ಇಲ್ಲಿ ಸಂಗ್ರಹ ಆಗುವ ಹಣದ ಮೌಲ್ಯದ ಬಗ್ಗೆ ವರದಿ ಇಲ್ಲ. ಆದರೆ ವಾರ್ಷಿಕವಾಗಿ ನಡೆಯುವ ಕಾರ್ಯಕ್ರಮದಲ್ಲೇ ಭಕ್ತರು ಇನ್ನೂರಾ ಒಂಬತ್ತು ಕೇಜಿ ಚಿನ್ನವನ್ನು ನೀಡಿದ್ದಾರೆ.