ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟ ಜುಲೈ 31ರ ತನಕ ಇಲ್ಲ
ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ಅಮಾನತನ್ನು ಜುಲೈ 31ನೇ ತಾರೀಕಿನ ತನಕ ವಿಸ್ತರಿಸಲಾಗಿದೆ ಎಂದು ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಶುಕ್ರವಾರ ತಿಳಿಸಿದೆ. ಆದರೆ ಆಯ್ದ ಹಾಗೂ ಈಗಾಗಲೇ ನಿಗದಿ ಆದ ಕೆಲವು ಮಾರ್ಗಗಳಲ್ಲಿ ಮಾತ್ರ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು. ಅದು ಆಯಾ ಸನ್ನಿವೇಶ ಹಾಗೂ ಪ್ರಕರಣದ ಆಧಾರದಲ್ಲಿ ಭಿನ್ನವಾಗುತ್ತದೆ ಎಂದು ತಿಳಿಸಲಾಗಿದೆ.
ದೇಶದ 11 ನಗರದಲ್ಲಿ ವೀಸಾ ಅರ್ಜಿ ಸೇವಾ ಕೇಂದ್ರಗಳು ಜುಲೈ 6ರಿಂದ ಶುರು
ನಿಗದಿಯಾದ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟವನ್ನು ಕೊರೊನಾದ ಕಾರಣಕ್ಕೆ ಮಾರ್ಚ್ 23ನೇ ತಾರೀಕಿನಂದು ಅಮಾನತು ಮಾಡಲಾಗಿತ್ತು. ಆ ನಂತರ ಜೂನ್ 26ನೇ ತಾರೀಕಿನಂದು ಸುತ್ತೋಲೆ ಹೊರಡಿಸಿ, ಜುಲೈ 15ನೇ ತಾರೀಕಿನ ತನಕ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟ ಅಮಾನತು ಮಾಡುವುದಾಗಿ ತಿಳಿಸಲಾಗಿತ್ತು.
ಇದೀಗ ಶುಕ್ರವಾರ (ಜುಲೈ 3, 2020) ಆದೇಶ ಹೊರಡಿಸಿ, ಅಮಾನತು ಅವಧಿ ವಿಸ್ತರಣೆ ಮಾಡಿರುವುದಾಗಿ ತಿಳಿಸಿದೆ. ಏರ್ ಇಂಡಿಯಾ ಹಾಗೂ ಇತರ ಖಾಸಗಿ ವಿಮಾನ ಯಾನ ಸಂಸ್ಥೆಗಳು ವಂದೇಭಾರತ್ ಅಭಿಯಾನದ ಅಡಿಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಅದು ನಿಗದಿತ ವೇಳಾಪಟ್ಟಿಯಲ್ಲಿ ಅಲ್ಲ. ವಿದೇಶದಲ್ಲಿ ಸಿಲುಕಿಕೊಂಡವರನ್ನು ಭಾರತಕ್ಕೆ ಕರೆತರುವ ಕಾರ್ಯಾಚರಣೆ ಇದು. ಕಳೆದ ಮೇ 6ನೇ ತಾರೀಕಿನಿಂದ ಕೇಂದ್ರ ಸರ್ಕಾರ ಇದನ್ನು ಆರಂಭಿಸಿದೆ.