ಚಿಟ್ ಫಂಡ್ ನಲ್ಲಿ ಹಣ ಹೂಡಿ ಮೋಸ ಹೋಗುವವರೇ ಹೆಚ್ಚು. ಬಡವರು, ಮಧ್ಯಮ ವರ್ಗದ ಜನರೇ ಬ್ಯಾಂಕಿಗಿಂತ ಹೆಚ್ಚಾಗಿ ಬಡ್ಡಿ ಪ್ರತಿಫಲ ಸಿಗುತ್ತದೆ ಎಂದು ಆಕರ್ಷಿತರಾಗಿ ಮೋಸ ಹೋಗುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಹಣ ಸಂಗ್ರಹವಾದ ಬಳಿಕ ಏಜೆಂಟರು ಪರಾರಿಯಾದ ಹಲವು ನಿದರ್ಶನಗಳಿವೆ. ಇದಕ್ಕೆಲ್ಲಾ ತಡೆಯೊಡ್ಡಲು ಕೇಂದ್ರ ಸರ್ಕಾರ ಚಿಟ್ ಫಂಡ್ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ನೀಡಿದೆ.
ಚಿಟ್ ಫಂಡ್ ಕ್ಷೇತ್ರದಲ್ಲಿ ವ್ಯವಸ್ಥಿತವಾದ ಪ್ರಗತಿಗಾಗಿ ನಿಯಮಗಳಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಉದ್ದೇಶವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿಟ್ ಫಂಡ್ ಕ್ಷೇತ್ರವು ಭಾರೀ ಕುಖ್ಯಾತಿಗೆ ಒಳಗಾಗಿದೆ. ಇದನ್ನು ಹೋಗಲಾಡಿಸುವ ಉದ್ದೇಶವೂ ಮಸೂದೆಯ ತಿದ್ದುಪಡಿಯ ಅಂಶವಾಗಿದೆ ಎಂದು ಹಣಕಾಸು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಬಡವರಿಗೆ ಹೆಚ್ಚಿನ ವಂಚನೆ
ಇತ್ತೀಚಿನ ವರ್ಷಗಳಲ್ಲಿ ಚಿಟ್ ಫಂಡ್ ಮೋಸ ಹೋಗುವವರ ದೂರುಗಳು ಹೆಚ್ಚಾಗಿವೆ. ಚಿಟ್ ಫಂಡ್ ಹಗರಣಗಳಿಗೆ ಸಂಬಂಧಿಸಿದಂತೆ ಆರ್ಬಿಐಗೆ 2016ರ ಬಳಿಕ 5,200 ದೂರುಗಳು ಬಂದಿವೆ. ಆದರೆ ಆರ್ಬಿಐಗೆ ಚಿಟ್ ಫಂಡ್ಗಳ ಮೇಲೆ ನಿಯಂತ್ರಣವಿಲ್ಲ.
ಹೀಗಾಗಿ ಮುಂಬರುವ ವರ್ಷಗಳಲ್ಲಿ 1500ಕ್ಕೂ ಹೆಚ್ಚು ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಜನರು ಮೋಸ ಹೋಗದಂತೆ ತಡೆಯುವ ಉದ್ದೇಶ ಸಹ ಇದರಲ್ಲಿ ಅಡಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ದೇಶದಲ್ಲಿವೆ 30 ಸಾವಿರ ಚಿಟ್ ಫಂಡ್ ಗಳು
ಚಿಟ್ ಫಂಡ್ ಹೆಸರಿನಲ್ಲಿ ಗರಿಷ್ಟ ಲಾಭದ ಆಮಿಷ ಒಡ್ಡಿ ಜನರನ್ನು ಮರುಳು ಮಾಡುವ ದಂಧೆ ಇಂದು ನಿನ್ನೆಯದಲ್ಲ. ದೇಶದಲ್ಲಿ 30 ಸಾವಿರದಷ್ಟು ನೋಂದಾಯಿತ ಚಿಟ್ ಫಂಡ್ಗಳು ಇವೆ. ಇನ್ನು ನೋಂದಣಿಯಾಗದ ಚಿಟ್ ಫಂಡ್ಗಳ ಸಂಖ್ಯೆ ಸಾವಿರಾರು. ಕಾಯ್ದೆಗೆ ನಿಯಂತ್ರಣಕ್ಕೆ ಸಿಗದ ಈ ಚಿಟ್ ಫಂಡ್ಗಳಿಂದಲೇ ಜನರು ಹೆಚ್ಚಾಗಿ ಮೋಸ ಹೋಗುತ್ತಿದ್ದಾರೆ.
2018ರಲ್ಲಿ ಚಿಟ್ ಫಂಡ್ ನಿಯಂತ್ರಣ ಮಸೂದೆ ಮಂಡನೆ
ಕೇಂದ್ರದ ಪ್ರಸಾವನೆಯಂತೆ ರಚಿಸಲಾಗಿದ್ದ ಸ್ಥಾಯಿ ಸಮಿತಿಯ ವರದಿ ಸಲಹೆ ಮೇರೆಗೆ 2018ರಲ್ಲಿಯೂ ಚಿಟ್ ಫಂಡ್ ನಿಯಂತ್ರಣ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಆದರೆ ಲೋಕಸಭೆಯ ಅವಧಿ ಮುಗಿದ ಕಾರಣ ಇದು ಅಸಿಂಧುವಾಗಿತ್ತು.
ಲೋಕಸಭೆಯಲ್ಲಿ ಚಿಟ್ ಫಂಡ್ (ತಿದ್ದುಪಡಿ) ಮಸೂದೆ ಅಂಗೀಕಾರ
ಈಗಾಗಲೇ ಚಿಟ್ ಫಂಡ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಧ್ವನಿಮತದ ಮೂಲಕ ಲೋಕಸಭೆಯಲ್ಲಿ ಮತದಾನ ಅಂಗೀಕಾರವಾಗಿದೆ. ಚಿಟ್ ಫಂಡ್ (1982)ರ ಮಸೂದೆಗೆ ತಿದ್ದು ಪಡಿ ತರುವುದೇ ಈ ಮಸೂದೆಯ ಉದ್ದೇಶವಾಗಿದೆ. ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಬೇಕಿದೆ.
ಚಿಟ್ ಫಂಡ್ ನಲ್ಲಿ ಬದಲಾವಣೆ ನಿಯಮಗಳು
* ಒಬ್ಬ ವ್ಯಕ್ತಿಯು ಅಥವಾ ನಾಲ್ವರಿಗಿಂತ ಕಡಿಮೆ ಪಾಲುದಾರರು ನಡೆಸುವ ಚಿಟ್ ಫಂಡ್ನ ಗರಿಷ್ಟ ಸಂಗ್ರಹ ಮಿತಿ 1 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
* ನಾಲ್ವರಿಂದ ಹೆಚ್ಚು ಪಾಲುದಾರರು ನಡೆಸುವ ಚಿಟ್ ಫಂಡ್ನ ಗರಿಷ್ಟ ಮಿತಿ 6 ಲಕ್ಷದಿಂದ 18 ಲಕ್ಷ ರುಪಾಯಿಗೆ ಏರಿಕೆ
* ಫಂಡ್ ನಿರ್ವಹಿಸುವ ವ್ಯಕ್ತಿಯ ಗರಿಷ್ಟ ಕಮಿಷನ್ ಮಿತಿ ಶೇಕಡಾ 5ರಿಂದ ಶೇಕಡಾ 7ಕ್ಕೆ ಏರಿಕೆ
* ಚಿಟ್ ಫಂಡ್ ಡ್ರಾ ಪ್ರಕ್ರಿಯೆಯಲ್ಲಿ ಚಂದಾದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಅವಕಾಶ
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶಾರದಾ ಚಿಟ್ ಫಂಡ್ ಹಗರಣ
ಪಶ್ಚಿಮ ಬಂಗಾಳದ ಬಹುದೊಡ್ಡ ಆರ್ಥಿಕ ಹಗರಣ ಇದಾಗಿದೆ. ಅನೇಕ ದೊಡ್ಡ ನಾಯಕರ ಹೆಸರು ಈ ಹಗರಣದಲ್ಲಿ ಕೇಳಿ ಬಂದಿದೆ. ಅತಿ ಹೆಚ್ಚಿನ ಬಡ್ಡಿ ಆಮಿಷ ನೀಡಿ ಶಾರದಾ ಗ್ರೂಪ್ ಪೋಂಜಿ ಸ್ಕೀಮ್ ನಡೆಸಲು ಮುಂದಾಯಿತು.
200ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಇದರಲ್ಲಿ ಶಾಮೀಲಾಗುವ ಮೂಲಕ ನಿಮ್ಮ ಹಣವನ್ನು 34 ರಷ್ಟು ದುಪ್ಪಟ್ಟು ಮಾಡುವುದಾಗಿ ಜನರನ್ನು ನಂಬಿಸಿದರು. ಇದನ್ನು ನಂಬಿ ಜನರು ಕೂಡ ಹಣ ಹೂಡಲಾರಂಭಿಸಿದರು.
ಹಗರಣ ಬಯಲಾಗುವ ಮುಂಚೆ 2013ರಲ್ಲಿ 17 ಲಕ್ಷ ಠೇವಣಿದಾರರರಿಂದ ಸಂಸ್ತೆಯು 200ರಿಂದ 300 ಶತಕೋಟಿ ರುಪಾಯಿ ಸಂಗ್ರಹಿಸಿತು. ಇದರಲ್ಲಿ ಉದ್ಯಮಿಗಳು , ರಾಜಕಾರಣಿಗಳು ಶಾಮೀಲಾಗಿದ್ದಾರೆ.
ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ, ರಾಜಕಾರಣಿಗಳ ನಂಟು, ನಿಯಂತ್ರಣಾ ಪ್ರಾಧಿಕಾರಿಗಳ ನಂಟು ಕಂಡು ಬಂದಾಗ, ಸುಪ್ರೀಂ ಕೋರ್ಟ್ 2014ರಲ್ಲಿ ಎಲ್ಲ ತನಿಖೆಯನ್ನು ಸಿಬಿಐಗೆ ವಹಿಸಿತು. ತನಿಖೆ ಚುರುಕಾಗುತ್ತಿದ್ದಂತೆ ಅನೇಕ ಪ್ರಭಾವಿ ರಾಜಕಾರಣಿಗಳು ಬಂಧನಕ್ಕೊಳಗಾದರು.
ಚಿಟ್ ಫಂಡ್ ಹಗರಣಗಳಿಗೆ ಬ್ರೇಕ್ ಹಾಕುವುದು ಹೇಗೆ?
ಚಿಟ್ ಫಂಡ್ ಮಾಡುವವರಿಗೆ ನಿಯಂತ್ರಣ ಕ್ರಮಗಳು ಬಿಗಿಯಾದರೆ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆ. ಸಾಕ್ಷರತೆ ಹೆಚ್ಚಿದರೆ ಜೊತೆಗೆ ಬ್ಯಾಂಕಿಂಗ್ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಣೆಯಾಗಿ, ಜನರಿಗೆ ಸುಲಭವಾಗಿ ಹಣಕಾಸು ನೆರವು ಸಿಗುವಂತಾದರೆ ಮಾತ್ರ ಇಂತಹ ಚಿಂಟ್ ಫಂಡ್ ಹಗರಣಗಳಿಗೆ ಬ್ರೇಕ್ ಹಾಕಲು ಸಾಧ್ಯ.


Click it and Unblock the Notifications