18 ವರ್ಷದ ಮುಂಬೈ ಹುಡುಗನ ಬಿಜಿನೆಸ್ಗೆ ಕೈ ಜೋಡಿಸಿದ ರತನ್ ಟಾಟಾ
ಹೊಸ ಹೊಸ ಸ್ಟಾರ್ಟ್ ಅಪ್ಗಳಿಗೆ ಹಣ ಹೂಡಿಕೆ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿರುವ ರತನ್ ಟಾಟಾ, ಇದೀಗ ಮುಂಬೈ ಮೂಲದ 18 ವರ್ಷದ ವಿದ್ಯಾರ್ಥಿಯ ಸ್ಟಾರ್ಟ್ ಅಪ್ ಬಿಜಿನೆಸ್ಗೆ ಹಣ ಹೂಡಿಕೆ ಮಾಡಿದ್ದಾರೆ.
ಜೆನೆರಿಕ್ ಆಧಾರ್ ಸಂಸ್ಥೆಗೆ ಟಾಟಾ ಹೂಡಿಕೆ
ಟಾಟಾ ಸಂಸ್ಥೆಯಿಂದ ನಿವೃತ್ತಿ ಬಳಿಕ ರತನ್ ಟಾಟಾರವರು ಈಗಾಗಲೇ ಅನೇಕ ಸ್ಟಾರ್ಟ್ ಅಪ್ಗಳಲ್ಲಿ ಹಣ ಹೂಡಿಕೆಯನ್ನು ಮಾಡಿದ್ದಾರೆ. ತಾವು ತಾವು ಬೆಳೆಯುವುದರೊಂದಿಗೆ ತಮ್ಮವರನ್ನು ಜೊತೆಗೆ ಬೆಳೆಸಬೇಕು ಎಂಬ ಉದ್ಯಮ ತಂತ್ರಗಾರಿಕೆಯಿಂದಲೇ ದೇಶದೆಲ್ಲೆಡೆ ರತನ್ ಟಾಟಾ ಗೌರವ ಸಂಪಾದಿಸಿದ್ದಾರೆ.
ಇದೇ ಸಾಲಿಗೀಗ ಮುಂಬೈ್ ಮೂಲದ ವಿದ್ಯಾರ್ಥಿಯ ಸ್ಟಾರ್ಟ್-ಅಪ್ ಜೆನೆರಿಕ್ ಆಧಾರ್ ಸಂಸ್ಥೆಗೆ ಹಣ ಹೂಡಿಕೆ ಮಾಡಿದ್ದಾರೆ.
ಯಾರು ಈ 18 ವರ್ಷದ ಬಾಲಕ?
ಥಾಣೆ ಮೂಲದ ಅರ್ಜುನ್ ದೇಶಪಾಂಡೆ ಎಂಬ ಬಾಲಕನೇ ಈ ಜೆನೆರಿಕ್ ಆಧಾರ್ ಸಂಸ್ಥೆಯ ಸಂಸ್ಥಾಪಕ. 2019 ಏಪ್ರಿಲ್ ತಿಂಗಳಲ್ಲಿ ಈ ಸಂಸ್ಥೆಯನ್ನು ಆರಂಭಿಸಿದ್ದಾನೆ. ಇದೀಗ ಟಾಟಾಗೆ ತನ್ನ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವುದಾಗಿ ಮನವಿ ಮಾಡಿಕೊಂಡ ಬಳಿಕ, ಕಂಪನಿಯ ಬಗ್ಗೆ ಹಾಗೂ ಅದರ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಂಡು ಹಣ ಹೂಡಿಕೆ ಮಾಡಿದ್ದಾರೆ. ಆದರೆ ಎಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿಲ್ಲ.
ಏನಿದು ಜೆನೆರಿಕ್ ಆಧಾರ್ ಸಂಸ್ಥೆ?
ಇದು ಗುಣಮಟ್ಟದ ಔಷಧಿಗಳನ್ನು ಪ್ರತಿಷ್ಠಿತ ಉತ್ಪಾದಕರಿಂದ 80 ಪರ್ಸೆಂಟ್ರಷ್ಟು ಕಡಿಮೆ ವೆಚ್ಚದಲ್ಲಿ ಮತ್ತು ಇತರೆ ಔಷಧಿಗಳನ್ನು 20ರಿಂದ 30 ಪರ್ಸೆಂಟ್ರಷ್ಟು ಅಗ್ಗಕ್ಕೆ ಒದಗಿಸುತ್ತಿದೆ. ಥಾಣೆ ಡಿಎವಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೂಡಾ ಆಗಿರುವ ಅರ್ಜುನ್ ದೇಶಪಾಂಡೆ, ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧಿ ಪೂರೈಸುವ ಕನಸನ್ನು ಹೊಂದಿದ್ದಾರೆ.
ಪ್ರಸ್ತುತ ಈ ಸಂಸ್ಥೆಯು ವಾರ್ಷಿಕವಾಗಿ 150ರಿಂದ 200 ಕೋಟಿ ರೂಪಾಯಿಗಳ ಆದಾಯವನ್ನು ಗುರಿಯಾಗಿರಿಸಿದೆ. ಹಾಗೆಯೇ 55 ಮಂದಿ ಉದ್ಯೋಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಗುಜರಾತ್, ತಮಿಳುನಾಡು, ಆಂಧ್ರ ಪ್ರದೇಶ, ದಿಲ್ಲಿ, ಗೋವಾ ಹಾಗೂ ರಾಜಸ್ಥಾನಗಳಿಗೂ ವ್ಯಾಪಾರ ಬೆಳೆಸುವ ಗುರಿ ಹೊಂದಿದೆ.
ಎಲ್ಲೆಲ್ಲಿ ಟಾಟಾ ಹಣ ಹೂಡಿಕೆ ಮಾಡಿದ್ದಾರೆ?
ಪುಣೆ ಮೂಲದ ಭಾರತ್ ಫೋರ್ಜ್ ಮತ್ತು ಭವಿಷ್ ಅಗರವಾಲ್ ಸಹ-ಸಂಸ್ಥಾಪಕತ್ವದ ಓಲಾ ಕ್ಯಾಬ್ನಲ್ಲಿ ರತನ್ ಟಾಟಾ ಹೂಡಿಕೆ ಇದೆ. ಓಲಾಗೆ ಬಹಳ ಹಿಂದೆಯೇ ರತನ್ ಟಾಟಾ ಆಸರೆ ನೀಡಿದ್ದು, ತಮ್ಮ ಹೂಡಿಕೆಯ ಮೊತ್ತವನ್ನು ಅವರು ಸ್ಪಷ್ಟಪಡಿಸಿಲ್ಲ. ಓಲಾ ಎಲೆಕ್ಟ್ರಿಕ್ನಲ್ಲೂ ರತನ್ ಹೂಡಿಕೆ ಮಾಡಿದ್ದಾರೆ. ಯೂನಿಕೋರ್ನ್, ಅರ್ಬನ್ ಲ್ಯಾಡರ್, ಕ್ಸಿಯೊಮಿ, ಅರ್ಬನ್ ಕ್ಲಾಪ್, ಲೆನ್ಸ್ ಕಾರ್ಟ್, ಫಿಟ್ನೆಸ್ ಸ್ಟಾರ್ಟ್ಅಪ್ ಕ್ಯೂರ್ಫಿಟ್, ಹೋಮ್ ರೆಂಟಲ್ ಸ್ಟಾರ್ಟ್ಅಪ್ ನೆಸ್ಟ್ಅವೇ ಟೆಕ್ನಾಲಜೀಸ್, ನಾಯಿಗಳ ರಕ್ಷೆಗೆ ಸಂಬಂಧಿಸಿದ ಡಾಕ್ಸ್ಟಾಪ್ ಮೊದಲಾದ ಕಂಪನಿಗಳಲ್ಲಿ ಟಾಟಾ ಹೂಡಿಕೆ ಮಾಡಿದೆ.
ನಿಮ್ಮ ಐಡಿಯಾ ಚೆನ್ನಾಗಿದ್ದರೆ ಟಾಟಾ ಕೈ ಜೋಡಿಸುತ್ತಾರೆ!
ಉತ್ತಮ ಸ್ಟಾರ್ಟ್ಅಪ್ ಆರಂಭಿಸುವ ಆಲೋಚನೆಯಿದ್ದು, ನಿಮ್ಮಲ್ಲಿ ಬಂಡವಾಳ ಕೊರತೆಯಿದ್ದರೆ, ರತನ್ ಟಾಟಾ ಅವರು ನಿಮ್ಮ ಸಹಾಯಕ್ಕೆ ಬರಬಹುದು. ಸ್ಟಾರ್ಟ್ಅಪ್ನಲ್ಲಿ ಹೊಸತನವಿದ್ದರೆ, ತಮ್ಮ ಷರತ್ತುಗಳು ಈಡೇರಿದರೆ ಹೂಡಿಕೆ ಮಾಡುವುದಾಗಿ ರತನ್ ಟಾಟಾ ಈ ಹಿಂದೆಯೇ ಹೇಳಿದ್ದಾರೆ. ಈ ತನಕ ಯಾರು ಅನ್ವೇಷಿಸದ ಹೊಸ ಕ್ಷೇತ್ರ ಅಥವಾ ಉದ್ಯಮವನ್ನು ಟಾಟಾ ಆರಿಸಿಕೊಳ್ಳುತ್ತಾರೆ.