ಕ್ರಿಪ್ಟೋಕರೆನ್ಸಿ ದೇಶದ ಆರ್ಥಿಕ ಸ್ಥಿರತೆಗೆ ಅಪಾಯ: ಆರ್ಬಿಐ ಗವರ್ನರ್ ಕಳವಳ
ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಕ್ರಿಪ್ಟೋಕರೆನ್ಸಿ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಳವಳ ವ್ಯಕ್ತಪಡಿಸಿದ್ದು, ಇದು ಆರ್ಥಿಕ ಸ್ಥಿರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
"ಕ್ರಿಪ್ಟೋಕರೆನ್ಸಿ ಆರ್ಥಿಕತೆ ಮೇಲೆ, ಸರಕಾರದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದೇವೆ. ಸರ್ಕಾರ ಕೂಡ ಈ ಕುರಿತು ಪರಿಗಣಿಸಲಿದೆ. ಅಗತ್ಯಬಿದ್ದರೆ ಸಂಸತ್ತಿನಲ್ಲಿ ಕೂಡ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ'' ಎಂದು ತಿಳಿಸಿದ್ದಾರೆ.
"ಬ್ಲಾಕ್ಚೈನ್ ತಂತ್ರಜ್ಞಾನವು ವಿಭಿನ್ನವಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಆರ್ಥಿಕ ಸ್ಥಿರತೆ ಮೇಲೆ ಕ್ರಿಪ್ಟೋಕರೆನ್ಸಿಯಿಂದಾಗುವ ಪರಿಣಾಮದ ಬಗ್ಗೆ ಕಾಳಜಿಗಳಿವೆ. ನಮ್ಮ ಸಂಪೂರ್ಣ ಗಮನವನ್ನು ಇದರ ಮೇಲೆ ಇಡುತ್ತಿರುವುದರಿಂದ ಸರಿಯಾದ ದಿನಾಂಕವನ್ನು ನೀಡಲು ಕಷ್ಟವಾಗುತ್ತಿದೆ'' ಎಂದಿದ್ದಾರೆ.
ಆರ್ಬಿಐ ಗವರ್ನರ್ ಹೇಳಿಕೆ ಬಳಿಕ ಬಿಟ್ಕಾಯಿನ್ ಆರಂಭಿಕ ವಹಿವಾಟಿನಲ್ಲಿ ಶೇಕಡಾ 5ರಷ್ಟು ಹೆಚ್ಚಿನ ವಹಿವಾಟು ನಡೆಸಿದ ಇದು 0715 ಜಿಎಂಟಿ ವೇಳೆಗೆ ಶೇಕಡಾ 1.5ರಷ್ಟು ಏರಿಕೆ ಕಂಡು $ 49,622 ಕ್ಕೆ ತಲುಪಿದೆ.
2019 ರಲ್ಲಿ ಭಾರತೀಯ ಸರ್ಕಾರಿ ಸಮಿತಿಯು ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಿದ್ದು , ಡಿಜಿಟಲ್ ಕರೆನ್ಸಿಗಳಲ್ಲಿ ವ್ಯವಹರಿಸುವ ಯಾರಿಗಾದರೂ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲು ಶಿಫಾರಸು ಮಾಡಿದೆ.