ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಆರ್ಬಿಐ ಆರು ತಿಂಗಳು ನಿರ್ಬಂಧ ವಿಧಿಸಿರುವುದು ಜನರಿಗೆ ಗೊತ್ತೇ ಇದೆ. ಆದರೆ ಏಕೆ ಈ ನಿರ್ಬಂಧ, ಬ್ಯಾಂಕ್ ಆಡಳಿತ ಮಂಡಳಿ ಏನು ಹೇಳುತ್ತದೆ ಹಾಗೂ ಗ್ರಾಹಕರ ಗೋಳು ಏನು? ಎಂಬುದರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಆಡಳಿತ ಮಂಡಳಿ ಸೋಮವಾರ (ಜನವರಿ 13) ರಂದು ಗ್ರಾಹಕರ ಜೊತೆಗೆ ಸಭೆ ಕರೆದಿದ್ದು, ಖಾಸಗಿ ಕಲ್ಯಾಣ ಮಂಟಪದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೂಡಿಕೆದಾರರು ಭಾಗವಹಿಸಿದ್ದರು. ಎಲ್ಲರಿಗೂ ಒಂದೇ ಗೊಂದಲ ನಾವು ಠೇವಣಿ ಹೂಡಿರುವ ಹಣದ ಗತಿ ಏನು? ಬ್ಯಾಂಕ್ ಏನಾದರೂ ದಿವಾಳಿಯಾಗಿದೆಯೇ? ಹಣ ವಾಪಸ್ ಕೊಡ್ತಾರ ಇಲ್ವಾ? ಕೇವಲ 35 ಸಾವಿರ ರುಪಾಯಿ ಮಾತ್ರ ಕೊಡೋದಂತೆ! ಹೀಗೆ ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಗ್ರಾಹಕರಲ್ಲಿ ಇದ್ದ ಗೊಂದಲ ಇದಾಗಿದೆ.
ಬ್ಯಾಂಕ್ನ ಈ ಪರಿಸ್ಥಿತಿಗೆ ಕಾರಣ ಏನು? ಆಡಳಿತ ಮಂಡಳಿ ಏನು ಹೇಳುತ್ತೆ? ಗ್ರಾಹಕರ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ಆರ್ಬಿಐ ನಿರ್ಬಂಧ ಏಕೆ?
ಬ್ಯಾಂಕ್ ಗ್ರಾಹಕರಿಗೆ ನೀಡಿರುವ ಸಾಲದ ಪ್ರಮಾಣವು ಆರ್ಬಿಐ ಮಿತಿಗಿಂತ ಹೆಚ್ಚಾಗಿದ್ದು, ವಸೂಲಾಗದ ಸಾಲ (ಎನ್ಪಿಎ) ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿದೆ. ಹೀಗಾಗಿ ಬ್ಯಾಂಕ್ ಆರು ತಿಂಗಳಿನಲ್ಲಿ ಗ್ರಾಹಕರಿಗೆ 35,000 ರುಪಾಯಿ ಮಾತ್ರ ವಿತ್ಡ್ರಾ ಅವಕಾಶ ನೀಡಬೇಕು, ಯಾವುದೇ ಸಾಲ ಕೊಡುವಂತಿಲ್ಲ, ಬ್ಯಾಂಕ್ ಆಸ್ತಿ ಮಾರಾಟ ಮಾಡುವಂತಿಲ್ಲ. ಬ್ಯಾಂಕ್ ನ ಆರ್ಥಿಕ ಸ್ಥಿತಿ ಉತ್ತಮ ಆಗುವ ತನಕ ಈ ನಿರ್ಬಂಧಗಳನ್ನು ಹೇರಿದ್ದೇವೆ ಎಂದು ಆರ್ಬಿಐ ಪ್ರಕಟಣೆ ಹೊರಡಿಸಿತ್ತು. ಅಲ್ಲದೆ ಆರು ತಿಂಗಳ ಬಳಿಕ ಪುನರ್ ಪರಿಶೀಲಿಸಿ ಅವಕಾಶ ನೀಡುತ್ತೇವೆ ಎಂದು ತಿಳಿಸಿತ್ತು.
ಬ್ಯಾಂಕ್ನ ಆಡಳಿತ ಮಂಡಳಿ ಏನು ಹೇಳುತ್ತೆ?
ನಮ್ಮ ಬ್ಯಾಂಕ್ ಈಗ ಅಗ್ನಿ ಪರೀಕ್ಷೆ ಎದುರಿಸುತ್ತಿದೆ. ಸಹಕಾರ ಬ್ಯಾಂಕ್ ಗಳ ವ್ಯವಹಾರ ಸುಧಾರಣೆ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮ ತೆಗೆದುಕೊಂಡಿದೆ. ಬ್ಯಾಂಕ್ ನಲ್ಲಿ ಜನರು ಹೂಡಿಕೆ ಮಾಡಿರುವ ಹಣದ ಪೈಕಿ ಶೇಕಡಾ ಐವತ್ತೆರಡು ಪರ್ಸೆಂಟ್ ನಷ್ಟು ಮೊತ್ತವನ್ನು ಸಾಲ ನೀಡಿದ್ದೇವೆ. ಉಳಿದ ನಲವತ್ತೆಂಟು ಪರ್ಸೆಂಟ್ ನಮ್ಮ ಬಳಿಯೇ ಇದೆ. ಬ್ಯಾಂಕಿನ ಒಟ್ಟಾರೆ ವ್ಯವಹಾರವು ಆರ್ಬಿಐ ಪರಿವೀಕ್ಷಣೆಯಲ್ಲಿದ್ದು, ಸಣ್ಣ ಪುಟ್ಟ ತಾಂತ್ರಿಕ ಕಾರಣಗಳಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ತಿಳಿಸಿದೆ.
ಈ ಸಮಯದಲ್ಲಿ ಠೇವಣಿದಾರರು ತಮ್ಮ ಖಾತೆಯಲ್ಲಿ ಒಟ್ಟಾರೆ 35,000 ರುಪಾಯಿವರೆಗೆ ಮಾತ್ರ ಯಾವಾಗಲಾದರೂ ಹಿಂಪಡೆಯಲು ಅವಕಾಶ ನೀಡಲಾಗಿದೆ. ತಮ್ಮ ಠೇವಣಿಗಳಿಗೆ ಮುಂದಿನ ದಿನಗಳ ಬಡ್ಡಿಯನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು. 48 ಪರ್ಸೆಂಟ್ ಬ್ಯಾಂಕ್ನಲ್ಲಿ ದ್ರವ್ಯಾಸ್ಥಿ ರೂಪದಲ್ಲಿ ಇಂದಿಗೂ ಇದೆ. ಠೇವಣಿದಾರರು ದಯಮಾಡಿ ಯಾವುದೇ ಆತಂಕ ಪಡಬೇಡಿ ಎಂದು ಬ್ಯಾಂಕ್ ಹೇಳಿದೆ.
ಬ್ಯಾಂಕ್ನ ಈ ಪರಿಸ್ಥಿತಿಗೆ ಕಾರಣ ಏನು?
ಬ್ಯಾಂಕ್ನ ಈ ಪರಿಸ್ಥಿತಿಗೆ ಪ್ರಮುಖ ಕಾರಣ ವಸೂಲಾಗದ ಸಾಲ. ಬ್ಯಾಂಕ್ ಠೇವಣಿದಾರರ ಒಟ್ಟು ಹಣದಲ್ಲಿ 52 ಪರ್ಸೆಂಟ್ ಸಾಲ ನೀಡಿದ್ದು, 48 ಪರ್ಸೆಂಟ್ ಇದೆ ಎಂದು ಬ್ಯಾಂಕ್ ತಿಳಿಸಿದೆ. ಅದರಲ್ಲೂ ಕೇವಲ 62 ಜನರಿಗೆ 300 ಕೋಟಿ ರುಪಾಯಿ ಸಾಲ ನೀಡಿದ್ದು, ವಸೂಲಾಗದೆ ಇರುವುದು ಉಳಿದ ಗ್ರಾಹಕರ ತೊಂದರೆಗೆ ಕಾರಣವಾಗಿದೆ.
ಗ್ರಾಹಕರ ಪ್ರಶ್ನೆಗೆ ಬ್ಯಾಂಕ್ ಮ್ಯಾನೇಜರ್ ಉತ್ತರ ಏನು?
* ಈಗಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ಹೂಡಿಕೆದಾರರ ಹಣವನ್ನು ಹಿಂತಿರುಗಿಸುವುದು ನಮ್ಮ ಉದ್ದೇಶ. ಯಾವುದೇ ಹಣಕ್ಕೆ ತೊಂದರೆಯಾಗುವುದಿಲ್ಲ.
* ಬ್ಯಾಂಕ್ ನಲ್ಲಿ ಜನರು ಹೂಡಿಕೆ ಮಾಡಿರುವ ಹಣದ ಪೈಕಿ ಶೇಕಡಾ 52 ಪರ್ಸೆಂಟ್ ನಷ್ಟು ಮೊತ್ತವನ್ನು ಸಾಲ ನೀಡಿದ್ದೇವೆ. ಉಳಿದ 48 ಪರ್ಸೆಂಟ್ ನಮ್ಮ ಬಳಿಯೇ ಇದೆ.
* ಮಂದಗತಿಯ ಮಾರುಕಟ್ಟೆಯಿಂದಾಗಿ (ಮಾರ್ಕೆಟ್ ಸ್ಲೋಡೌನ್) ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದ್ದೇವೆ. ಕೆಲವು ಗ್ರಾಹಕರಿಗೆ ಇಪ್ಪತ್ತು ವರ್ಷದ ಅವಧಿಗೆ ಸಾಲ ನೀಡಿದ್ದೇವೆ. ಅವರು ಸರಿಯಾದ ಸಮಯಕ್ಕೆ ಬಡ್ಡಿ ಕಟ್ಟುತ್ತಿದ್ದಾರೆ.
* ಸಾವಿರದ ಇನ್ನೂರಾ ಎಂಬತ್ತು ಕೋಟಿಯಷ್ಟು ಬ್ಯಾಂಕ್ ಸೆಕ್ಯೂರಿಟಿ ಇದೆ. ಸಾವಿರದ ಆರುನೂರಾ ಎಂಬತ್ತು ಕೋಟಿ ಸಾಲ ಇದೆ.
* ಯಾವುದೇ ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೊಟ್ಟ ಸಾಲಕ್ಕೆ ಪೂರ್ಣ ಭದ್ರತೆ ಇದೆ. ಯಾರೂ ಹೆದರಬೇಡಿ.
* ಆರ್ ಬಿಐ ನೋಟಿಸ್ ನೀಡಿದ್ದು ಶುಕ್ರವಾರ. ಆ ನಂತರ ಶನಿವಾರ- ಭಾನುವಾರ ರಜಾ ಇದ್ದುದರಿಂದ ಈ ಗೊಂದಲ ಆಗಿದೆ. ಒಂದೇ ದಿನದಲ್ಲಿ ಆರು ಕೋಟಿ ಕ್ಯಾಶ್ ವಿಥ್ ಡ್ರಾ ಮಾಡಿಕೊಟ್ಟಿದ್ದೇವೆ.
* ಕೊಟ್ಟ ಸಾಲಕ್ಕೆ ಸಂಪೂರ್ಣ ಭದ್ರತೆ ಇದೆ. ಯಾವುದೇ ಅವ್ಯವಹಾರ ಆಗಿಲ್ಲ. ಹೆದರುವ ಅಗತ್ಯ ಇಲ್ಲ. * ಹಣವನ್ನು ಯಾರೂ ಹಿಂಪಡೆಯಲು ಹೋಗಬೇಡಿ, ನವೀಕರಿಸಿ.
ಬ್ಯಾಂಕ್ ಅಧ್ಯಕ್ಷ ಕೆ. ರಾಮಕೃಷ್ಣ ಏನು ಹೇಳಿದರು?
'' ನಿಮ್ಮ ಹಣವು ನೂರಕ್ಕೆ ನೂರರಷ್ಟು ಸುರಕ್ಷಿತವಾಗಿದೆ. ನಿಮ್ಮ ಹಣ ಸುರಕ್ಷತೆಯು ನನ್ನ ಜವಾಬ್ದಾರಿಯಾಗಿದೆ. 62 ಜನರಿಗೆ ನೀಡಿರುವ ಸಾಲದ ಪರಿಣಾಮವಾಗಿ ಈ ಸ್ಥಿತಿ ತಲುಪಿದ್ದು, ಆರ್ಬಿಐ ಸಾಲ ನೀಡದಂತೆ ವ್ಯವಹಾರ ನಡೆಸದಂತೆ ನಿರ್ಬಂಧ ವಿಧಿಸಿದೆ'' ಎಂದು ಠೇವಣಿದಾರರಿಗೆ ಗುರು ರಾಘವೇಂದ್ರ್ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ. ರಾಮಕೃಷ್ಣ ತಿಳಿಸಿದ್ದಾರೆ. ಗ್ರಾಹಕರ ಸಭೆಗೆ ಅಧ್ಯಕ್ಷರು ತಡವಾಗಿ ಆಗಮಿಸಿದ ಹಿನ್ನೆಲೆ ಜನರು ಹೆಚ್ಚು ಕುಪಿತಗೊಂಡಿದ್ದರು. ಅಧ್ಯಕ್ಷರು ಬರಲೇಬೇಕೆಂದು ಪಟ್ಟು ಹಿಡಿದಾಗ ಅಧ್ಯಕ್ಷರು ವೇದಿಕೆ ಆಗಮಿಸಿ ಬಂದು ಮಾತನಾಡಿದರು.
ಬ್ಯಾಂಕ್ನಲ್ಲಿ ಹಣ ಹೂಡಿಕೆ ಮಾಡಿರುವ ಗ್ರಾಹಕರ ಗೋಳು!
ಈಗಾಗಲೇ ಹಲವಾರು ವರ್ಷಗಳಿಂದ ಹಣವನ್ನು ಠೇವಣಿ ಮಾಡುತ್ತಾ ಬಂದಿರು ಗ್ರಾಹಕರು, ಬ್ಯಾಂಕ್ ಮೇಲೆ ಆರ್ಬಿಐ ದಿಢೀರ್ ನಿರ್ಬಂಧ ವಿಧಿಸಿರುವ ಕಾರಣ ಗೊಂದಲಕ್ಕೆ ಒಳಗಾಗಿದ್ದು, ಭಯ ಭೀತರಾಗಿದ್ದಾರೆ. ಅದರಲ್ಲೂ ಮುಂದಿನ ಆರು ತಿಂಗಳು ನಮ್ಮ ಖಾತೆಯಲ್ಲಿ ಎಷ್ಟೇ ಹಣವಿದ್ರೂ 35,000 ರುಪಾಯಿ ಮಾತ್ರ ವಿತ್ ಡ್ರಾ ಮಾಡಲು ಸಾಧ್ಯವಿದೆ ಎಂದು ಗೊತ್ತಾದ ಮೇಲಂತೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಶಾಲೆ ಶುಲ್ಕ, ಇತರೆ ಲೋನ್ ಪಾವತಿ, ಅಲ್ಲದೆ ಮುಂದಿನ ದಿನಗಳ ಹಣಕಾಸು ವ್ಯವಹಾರಗಳಿಗೆ ನಾವು ಏನು ಮಾಡಬೇಕು? ಎಂಬುದು ಗ್ರಾಹಕರ ಗೋಳಾಗಿದೆ.
ಬ್ಯಾಂಕ್ ಗ್ರಾಹಕರಿಗೆ ಧೈರ್ಯ ತುಂಬಿದ ಸಂಸದ ತೇಜಸ್ವಿ ಸೂರ್ಯ
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಸಾವಿರಾರು ಠೇವಣಿದಾರರಿಗೆ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಧೈರ್ಯ ತುಂಬಿದ್ದಾರೆ. '' ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಎಲ್ಲಾ ಠೇವಣಿದಾರರು ಭಯಭೀತರಾಗದಂತೆ ನಾನು ಭರವಸೆ ನೀಡುತ್ತೇನೆ. ಮಾನ್ಯ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಈ ವಿಷಯದ ಬಗ್ಗೆ ಮೌಲ್ಯಮಾಪನ ಮಾಡುತ್ತಿದ್ದಾರೆ. ಮತ್ತು ವೈಯಕ್ತಿಕವಾಗಿ ಸಮಸ್ಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಠೇವಣಿದಾರರ ಹಿತಾಸಕ್ತಿಯನ್ನು ಸರ್ಕಾರ ಕಾಪಾಡುತ್ತದೆ ಎಂದು ಭರವಸೆ ನೀಡಿದ್ದಾರೆ. ಅವರ ಕಾಳಜಿಗೆ ಕೃತಜ್ಞತೆ'' ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications