ವಿಶ್ವದಲ್ಲಿ ಈಗೇನಿದ್ದರೂ ಒಂದೇ ಮಾತು, ಒಂದೇ ಚಿಂತೆ ಅದು ಕೊರೊನಾವೈರಸ್ ಮಹಾಮಾರಿ. ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದ್ದರ ಜೊತೆಗೆ ವಿಶ್ವದ ಅರ್ಥ ವ್ಯವಸ್ಥೆಯನ್ನೇ ಅಲುಗಾಡಿಸಿಬಿಟ್ಟಿದೆ. ಭಾರತವೂ ಕೂಡ ಈ ಜಾಗತಿಕ ಸೋಂಕಿನ ವಿರುದ್ಧ ಹೋರಾಡುತ್ತಿದ್ದು, ಅರ್ಥ ವ್ಯವಸ್ಥೆಯ ಚೇತರಿಕೆಗೆ ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ.
ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಲಾಕ್ಡೌನ್ನಿಂದ ದೇಶದಲ್ಲಿ ಸಂಕಷ್ಟಗೊಳಗಾಗಿರುವ ಸಮುದಾಯಕ್ಕೆ ಸಹಾಯ ಹಸ್ತ ಚಾಚಿದೆ. ಈ ವೇಳೆಯಲ್ಲಿ ಕಳೆದ ಹಲವು ದಿನಗಳಲ್ಲಿ 'ಹೆಲಿಕಾಪ್ಟರ್ ಮನಿ' ಎಂಬುದು ನಮ್ಮ ನಡುವೆ ಚರ್ಚೆ ಹುಟ್ಟುಹಾಕಿರುವ ವಿಷಯವಾಗಿದೆ. ಈ ವಿಚಾರವನ್ನು ತಿಳಿಯುವುದಕ್ಕೂ ಮೊದಲು ಇದರ ಅರ್ಥ ನಿಜಕ್ಕೂ ಹೆಲಿಕಾಪ್ಟರ್ನಿಂದ ದುಡ್ಡನ್ನು ಕೆಳಕ್ಕೆ ಎಸೆಯುವುದು' ಎಂದಲ್ಲ.
'ಹೆಲಿಕಾಪ್ಟರ್ ಮನಿ' ಎಂದರೇನು?
ಇದೊಂದು ಅರ್ಥಶಾಸ್ತ್ರದ ಪರಿಕಲ್ಪನೆಯಾಗಿದ್ದು, ಜನರ ಕೈಯಲ್ಲಿ ಹೆಚ್ಚು ದುಡ್ಡು ಓಡಾಡುವಂತೆ ಮಾಡಬಹುದಾದ ವಿಧಾನವಾಗಿದೆ. ನೆರೆಪೀಡಿತ ಪ್ರದೇಶಗಳಲ್ಲಿ, ಯುದ್ಧಪೀಡಿತ ಪ್ರದೇಶಗಳಲ್ಲಿ ಆಹಾರ ಮತ್ತು ಅಗತ್ಯ ಸಾಮಗ್ರಿಯನ್ನು ಸೇನೆಯ ಹೆಲಿಕಾಪ್ಟರ್ನಿಂದ ಕೆಳಕ್ಕೆ ಎಸೆಯುವುದನ್ನು ನೀವು ಟಿವಿಗಳಲ್ಲಿ, ಯೂಟ್ಯೂಬ್ಗಳಲ್ಲಿ ನೋಡಿರಬಹುದು. ಅದೇ ರೀತಿ ಆರ್ಥಿಕತೆಗೆ ಪೆಟ್ಟು ಬಿದ್ದಾಗ, ಅರ್ಥ ವ್ಯವಸ್ಥೆ ಮಹಾ ಕುಸಿತದ ಹಾದಿಯಲ್ಲಿದ್ದಾಗ ಅದನ್ನು ಸರಿದಾರಿಗೆ ತರಲು ಉಳಿದ ಕಟ್ಟ ಕಡೆಯ ಅಸ್ತ್ರವೇ ಹೆಲಿಕಾಪ್ಟರ್ ಮನಿ.
ಇದನ್ನು ‘ಹೆಲಿಕಾಪ್ಟರ್ ಡ್ರಾಪ್' ಎಂದೂ ಕರೆಯುವರು. ಹೆಲಿಕಾಪ್ಟರ್ ಎನ್ನುವುದು ಇಲ್ಲಿ ರೂಪಕ. ವಾಸ್ತವದಲ್ಲಿ "ಹೆಲಿಕಾಪ್ಟರ್ ಮನಿ'ಯ ನಿಜವಾದ ಅರ್ಥವೆಂದರೆ ಜನರ ಕೈಗೆ ನೇರವಾಗಿ ಹಣವನ್ನು ತಲುಪಿಸುವುದು ಎಂದು. ಅಂದರೆ, ಹೆಚ್ಚಿನ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುವುದು.
'ಹೆಲಿಕಾಪ್ಟರ್ ಮನಿ' ಪದ ಮೊದಲು ಪ್ರಯೋಗ ಮಾಡಿದ್ದು ಯಾರು?
'ಹೆಲಿಕಾಪ್ಟರ್ ಮನಿ' ಅಥವಾ ಹೆಲಿಕಾಪ್ಟರ್ ಡ್ರಾಪ್ ಪದಪ್ರಯೋಗವನ್ನು ಮೊದಲು ಹುಟ್ಟು ಹಾಕಿದವರು ಅಮೆರಿಕದ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ ಮನ್. 1960ರಲ್ಲಿ ಅವರು ‘ದಿ ಆಪ್ಟಿಮಮ್ ಕ್ವಾಂಟಿಟಿ ಆಫ್ ಮನಿ' ಎಂಬ ಪ್ರಬಂಧವೊಂದನ್ನು ಮಂಡಿಸಿದ್ದರು. ಅದರಲ್ಲಿ ಅವರು ಮೊದಲ ಬಾರಿಗೆ ‘ಹೆಲಿಕಾಪ್ಟರ್ ಮನಿ'ಯ ವಿಚಾರವನ್ನು ಹೊರಜಗತ್ತಿಗೆ ಪರಿಚಯಿಸಿದ್ದರು.
ಇಲ್ಲಿಯವರೆಗೂ ಅದನ್ನು ಅಸಾಂಪ್ರದಾಯಿಕ ವಿಧಾನ ಎಂದೇ ಕರೆಯಲಾಗಿದೆ. ಯಾವುದೇ ಉದ್ಯಮ ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಿಸಿದಾಗ ಸರಕಾರ ಅದರ ಪುನಶ್ಚೇತನಕ್ಕಾಗಿ ಉತ್ತೇಜನ ಫಂಡ್ ಅನ್ನು ಪ್ಯಾಕೇಜ್ ರೂಪದಲ್ಲಿ ಬಿಡುಗಡೆಗೊಳಿಸುತ್ತದೆ. ಹೆಲಿಕಾಪ್ಟರ್ ಮನಿ ಕೂಡಾ ಅದೇ ರೀತಿ ಆರ್ಥಿಕ ಪುನಶ್ಚೇತನಕ್ಕಾಗಿ ನಾಗರಿಕರಿಗೆ ಹಣ ಬಿಡುಗಡೆಗೊಳಿಸುವ ಪ್ರಕ್ರಿಯೆ.
ಮಿಲ್ಟನ್ ಥಿಯರಿ ಏನು ಹೇಳುತ್ತೆ?
ದೇಶವೊಂದಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾದಾಗ ಜನರ ಕೈಯಲ್ಲಿ ಹಣವೂ ಇರುವುದಿಲ್ಲ. ಆಗ ಅವರು ಖರೀದಿಸುವುದನ್ನು ಕಡಿಮೆ ಮಾಡುತ್ತಾರೆ. ಆಗ ಬೇಡಿಕೆ ತಾನಾಗಿಯೇ ಕುಗ್ಗುತ್ತದೆ. ಆಗ ಕಾರ್ಖಾನೆಗಳು ತಮ್ಮ ಉತ್ಪಾದನೆಯ ಸಾಮರ್ಥ್ಯವನ್ನು ಇಳಿಸುತ್ತವೆ. ಇದರಿಂದ ಇನ್ನಷ್ಟು ಉದ್ಯೋಗ ನಷ್ಟ ಸಂಭವಿಸುತ್ತದೆ. ಇದರಿಂದಾಗಿ ಜಿಡಿಪಿಯು ನೆಗೆಟಿವ್ ಆಗಬಹುದು.
ಈ ಅರ್ಥಶಾಸ್ತ್ರದ ಪರಿಕಲ್ಪನೆಯ ಪ್ರಕಾರ, ದೇಶದ ಅರ್ಥ ವ್ಯವಸ್ಥೆಯು ಭಾರೀ ತೊಂದರೆಗೆ ಒಳಗಾದ ಸಂದರ್ಭದಲ್ಲಿ ದೇಶವೊಂದರ ಸೆಂಟ್ರಲ್ ಬ್ಯಾಂಕ್ ದೊಡ್ಡ ಮೊತ್ತದ ಹಣವನ್ನು ಪ್ರಿಂಟ್ ಮಾಡಬೇಕು. ಮುದ್ರಿತವಾದ ಹಣವನ್ನು ಸೆಂಟ್ರಲ್ ಬ್ಯಾಂಕ್ ಉಚಿತವಾಗಿ ಸರಕಾರಕ್ಕೆ ನೀಡಬೇಕು. ಸರಕಾರ ಅದನ್ನು ಜನರಿಗೆ ತಲುಪಿಸುವ ವ್ಯವಸ್ಥೆ ರೂಪಿಸುತ್ತದೆ. ಜನರು ಈ ಹಣವನ್ನು ವಾಪಸ್ ಕೊಡಬೇಕೆಂದಿಲ್ಲ. ಒಂದೇ ಷರತ್ತು ಎಂದರೆ ಜನರು ಈ ಹಣವನ್ನು ಉಳಿಸಿಕೊಳ್ಳದೆ ಖರ್ಚು ಮಾಡಬೇಕು.
ಅರ್ಥಶಾಸ್ತ್ರಜ್ಞರಲ್ಲಿ ಈ ಥಿಯರಿ ಬಗ್ಗೆ ಸಹಮತವಿಲ್ಲ
ಹೆಲಿಕಾಪ್ಟರ್ ಮನಿ ವಿಷಯದಲ್ಲಿ ಅರ್ಥಶಾಸ್ತ್ರಜ್ಞರಲ್ಲಿ ಸಹಮತವಿಲ್ಲ. ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ಜಾನ್ ಡಿನೋ ಪ್ರಕಾರ ಆಪತ್ಕಾಲದಲ್ಲಿ ಜನಕ್ಕೆ ಹೆಚ್ಚು ಹಣ ಕೊಟ್ಟರೆ ಅವರು ಹೆಚ್ಚು ಖರ್ಚು ಮಾಡುತ್ತಾರೆ ಎನ್ನುವುದೇ ತಪ್ಪು ಯೋಚನೆ ಎನ್ನುತ್ತಾರೆ.
‘'ಸಾಮಾನ್ಯವಾಗಿ, ಯುದ್ಧ ಅಥವಾ ಆರ್ಥಿಕ ಬಿಕ್ಕಟ್ಟು ಎದುರಾದಾಗ ಜನರಲ್ಲಿ ಹಣವನ್ನು ಖರ್ಚು ಮಾಡುವುದಕ್ಕಿಂತ ಉಳಿಸುವುದಕ್ಕೆ, ಭವಿಷ್ಯದ ಭದ್ರತೆಗಾಗಿ ಕೂಡಿಡುವ ಮನೋಭಾವ ಅಧಿಕವಿರುತ್ತದೆ. ಸರಕಾರಗಳು ಏಕಾಏಕಿ ಅಧಿಕ ಪ್ರಮಾಣದ ಹಣವನ್ನು ಹಂಚುವುದರಿಂದಾಗಿ, ಲಾಭಕ್ಕಿಂತ ನಷ್ಟವಾದ ಉದಾಹರಣೆಗಳೇ ಅಧಿಕವಿವೆ. ಹಣದ ಮೌಲ್ಯವೇ ಕುಸಿಯುವ ಹಾಗೂ ಹಣದುಬ್ಬರ ಅಧಿಕವಾಗುವ ಅಪಾಯವಿರುತ್ತದೆ '' ಎಂದು ಎಚ್ಚರಿಸುತ್ತಾರೆ.
'ಹೆಲಿಕಾಪ್ಟರ್ ಮನಿ' ಒಳಗಿನ ಗುಟ್ಟೇನು?
ಜನರಿಗೆ ಕಡಿಮೆ ಬಡ್ಡಿ ದರದಲ್ಲೇ ಸಾಲ ಸಿಗಬಹುದು. ಆದರೆ ಇವತ್ತಲ್ಲ, ನಾಳೆ ಸಾಲವನ್ನು ಹಿಂದಿರುಗಿಸಲೇಬೇಕು. ಹೀಗಾಗಿ ಆ ಸಾಲವನ್ನು ಅವರು ಸಲೀಸಾಗಿ ಖರ್ಚು ಮಾಡುವುದಿಲ್ಲ. ಸ್ವಂತ ಹಣವನ್ನು ಬಹಳ ಲೆಕ್ಕಾಚಾರದಲ್ಲಿ ಖರ್ಚು ಮಾಡುವಂತೆ , ಪಡೆದ ಸಾಲವನ್ನು ನೋಡಿಕೊಂಡು ಬಳಕೆ ಮಾಡುತ್ತಾರೆ.
ಆದರೆ ಅದೇ ಉಚಿತವಾಗಿ ಹಣವನ್ನು ಜನರ ಕೈಗೆ ಕೊಟ್ಟರೆ ಖರ್ಚು ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ ಎನ್ನುವುದು ಹೆಲಿಕಾಪ್ಟರ್ ಮನಿ ಕಾನ್ಸೆಪ್ಟ್ ಹಿಂದಿರುವ ವಿಚಾರ. ಅಂದರೆ ಹೆಲಿಕಾಪ್ಟರ್ ಮನಿ ಎನ್ನುವುದು ಮಾರುಕಟ್ಟೆಯಲ್ಲಿ ಹಣ ಓಡಾಡುತ್ತಿರುವಂತೆ ಮಾಡುವ ಒಂದು ವಿಧಾನವಾಗಿದೆ.
ಈ ಥಿಯರಿಯಿಂದ ಆಗಬಹುದಾದ ದುಷ್ಪರಿಣಾಮಗಳೇನು?
ಹೆಲಿಕಾಪ್ಟರ್ ಮನಿ ಎಂಬುದು ಅಸಾಂಪ್ರದಾಯಿಕ ವಿಧಾನವಾಗಿದೆ. ಇದನ್ನು ಅಳವಡಿಸಿಕೊಂಡರೆ ರಿವರ್ಸ್ ಪರಿಣಾಮಗಳು ಆಗಬಹುದು. ಅಧಿಕ ಹಣದುಬ್ಬರ, ರುಪಾಯಿ ಮೌಲ್ಯ ಕುಸಿತ, ವಸ್ತುಗಳ ಬೆಲೆ ಏರಿಕೆ ಹೀಗೆ ಅನೇಕ ರೀತಿಯ ಅಡ್ಡ ಪರಿಣಾಮಗಳ ಸಾಧ್ಯತೆಯು ಇದೆ.


Click it and Unblock the Notifications