ಅಲ್ಪಾವಧಿಯಲ್ಲಿ ಜಾಗತಿಕ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದಿದ್ದೇಕೆ ರಘುರಾಮ್ ರಾಜನ್?
ಅಮೆರಿಕ ಮತ್ತು ಚೀನಾ ಮಧ್ಯದ ವ್ಯಾಪಾರ ಒಪ್ಪಂದ ಮತ್ತು ಫೆಡರಲ್ ರಿಸರ್ವ್ ನಿಂದ ಸಾಲು ಸಾಲಾಗಿ ಬಡ್ಡಿ ದರ ಕಡಿತ ಇವೆಲ್ಲದರಿಂದಾಗಿ ಅಲ್ಪಾವಧಿಯಲ್ಲಿ ಜಗತ್ತಿನ ಆರ್ಥಿಕ ಸ್ಥಿತಿ ಉತ್ತಮಗೊಂಡಿವೆ ಎಂದು ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
"ಬೆಳವಣಿಗೆ ವಿಚಾರದಲ್ಲಿ ಫೆಡ್ ಬಹಳ ಸೂಕ್ಷ್ಮ ಸಂವೇದನೆ ಹೊಂದಿದೆ" ಎಂದು ಬ್ಲೂಮ್ ಬರ್ಗ್ ಟೀವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. "ಅದು ಸಾಲಾಗಿ ಇನ್ಷೂರೆನ್ಸ್ ಕಡಿತ ಮಾಡಿದೆ. ಇದರಿಂದ ಮಾರುಕಟ್ಟೆಗೆ ಭರವಸೆ ಸಿಕ್ಕಂತಾಗಿದ್ದು, ವ್ಯಾಪಾರ ಬಿಕ್ಕಟ್ಟಿನ ಮಧ್ಯೆಯೂ ಪರಿಹಾರ ಸಿಗಬಹುದಾ ಎಂದು ಅವರು ಕಾಯುತ್ತಿದ್ದರು" ಎಂದಿದ್ದಾರೆ ರಾಜನ್.
ಮೋದಿ ಸರ್ಕಾರದ ವೈಫಲ್ಯಗಳ ಬಗ್ಗೆ ರಘುರಾಮ್ ರಾಜನ್ ಹೇಳಿದ್ದೇನು?
ಕಳೆದ ತಿಂಗಳು ಫೆಡ್ ನಿಂದ ಈ ವರ್ಷದಲ್ಲಿ ಮೂರನೇ ಬಾರಿಗೆ ಬಡ್ಡಿ ದರ ಕಡಿತ ಮಾಡಿದೆ. ವ್ಯಾಪಾರ- ನೀತಿ ನಿರೂಪಣೆಯಲ್ಲಿನ ಅನಿಶ್ಚಿತತೆ, ಜಾಗತಿಕ ಪ್ರಗತಿಯ ಹಿಂಜರಿತ, ಗುರಿಗಿಂತ ಕಡಿಮೆ ಹಣದುಬ್ಬರ ಈ ಎಲ್ಲವನ್ನೂ ಪರಿಗಣಿಸಿ ಬಡ್ಡಿ ದರ ಇಳಿಸಿದೆ. ನಿಯಮಿತ ವ್ಯಾಪಾರ ಒಪ್ಪಂದವನ್ನು ಅಮೆರಿಕ ಹಾಗೂ ಚೀನಾ ಚೌಕಾಶಿ ಮಾಡುತ್ತಿವೆ. ಇದು ಡಿಸೆಂಬರ್ ತನಕ ಅಂತಿಮವಾಗಲ್ಲ. ಏಕೆಂದರೆ, ಈ ವ್ಯವಹಾರಕ್ಕೆ ಸಹಿ ಮಾಡುವುದು ಎಲ್ಲಿ ಎಂಬುದು ನಿರ್ಧಾರ ಆಗಬೇಕಿದೆ.
ವ್ಯಾಪಾರ ಒಪ್ಪಂದದಲ್ಲಿ ಸ್ವಲ್ಪ ಮಟ್ಟಿಗೆ ಪ್ರಗತಿಯಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಜತೆಗೆ ಹಲವರಿಗೆ ಹೀಗಾಗುವುದು ಬೇಕಾಗಿಲ್ಲ ಎಂದು ರಾಜನ್ ಹೇಳಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ನಾವು ಉತ್ತಮ ಸ್ಥಿತಿಯಲ್ಲಿ ಇದ್ದೀವಿ. ಕಳೆದ ವರ್ಷದ ಕೊನೆಗೆ ಇದ್ದ ಪರಿಸ್ಥಿತಿಗಿಂತ ಪರವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಂದರ್ಶನದಲ್ಲಿ ರಾಜನ್ ಹೇಳಿದ ಪ್ರಮುಖ ವಿಚಾರಗಳು ಹೀಗಿವೆ:
* ಯುರೋಪಿಯನ್ ಕೇಂದ್ರ ಬ್ಯಾಂಕ್ ನಿಂದ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡಲು ಬಹಳ ಕಡಿಮೆ ಅವಕಾಶ ಇದೆ. ಇದೀಗ ಪ್ರಗತಿಗೆ ಮತ್ತೆ ಜೀವ ನೀಡಿ, ಉದ್ಯೋಗ ಸೃಷ್ಟಿ ಮಾಡುವುದು ರಾಜಕಾರಣಿಗಳ ಕೈಲಿದೆ.
* ಸರ್ಕಾರವೇ ಹಣ ಖರ್ಚು ಮಾಡಿ, ಪ್ರಗತಿಗೆ ಅಥವಾ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದು ಅದರದೇ ರೀತಿಯಲ್ಲಿ ಅಪಾಯಕಾರಿ ಆದದ್ದು. ಕೆಲವು ದೇಶಗಳಿಗೆ ಇದರಿಂದ ಭಾರಿ ಪ್ರಮಾಣದ ಸಾಲವಾಗಿದೆ.
* ಬ್ರೆಕ್ಸಿಟ್ ಗೆ ಯು. ಕೆ. ಸಿದ್ಧವೇ ಆಗಿಲ್ಲ. ಯುರೋಪಿಯನ್ ಒಕ್ಕೂಟದಿಂದ ಹೊರಬರುವುದು ಅದಕ್ಕೆ ಒಳ್ಳೆಯದಲ್ಲ.
* ಬ್ಯಾಂಕ್ ಆಫ್ ಇಂಗ್ಲೆಂಡ್ ನ ಗವರ್ನರ್ ಆಗಿ ಕಾರ್ಯ ನಿರ್ವಹಿಸುವುದಕ್ಕೆ ನನ್ನ ಹೆಸರು ಕೇಳಿಬಂದಿದೆ. ಆದರೆ ಅದು ಬಹಳ ಕಷ್ಟದ ಕೆಲಸ. ಕೇಂದ್ರ ಬ್ಯಾಂಕ್ ನ ಜವಾಬ್ದಾರಿಯಲ್ಲಿ ಈಗ ರಾಜಕೀಯದ ಪಾತ್ರ ಹೆಚ್ಚಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಆಗುವವರಿಗೆ ಸ್ಥಳೀಯ ರಾಜಕಾರಣದ ಸನ್ನಿವೇಶದ ಗೊತ್ತಿರಬೇಕು.