ನೀವು ಸಂಬಳ ಪಡೆಯುವವರೇ? ಹಾಗಿದ್ದರೆ ಇಲ್ಲಿ ನೋಡಿ..
ಜೀವನದಲ್ಲಿ ಪ್ರಥಮ ಬಾರಿಗೆ ಒಂದು ಒಳ್ಳೆಯ ಕೆಲಸಕ್ಕೆ ಸೇರಿಕೊಂಡ ನಂತರ ಸಂಪಾದನೆ ಮಾಡಿದ ಮೊಟ್ಟ ಮೊದಲ ಸಂಬಳ ಕೈಗೆ ಸಿಕ್ಕಾಗ ಆಗುವ ಖುಷಿಯನ್ನು ಶಬ್ದಗಳಲ್ಲಿ ವರ್ಣಿಸಲಾಗದು.
ಜೀವನದಲ್ಲಿ ಪ್ರಥಮ ಬಾರಿಗೆ ಒಂದು ಒಳ್ಳೆಯ ಕೆಲಸಕ್ಕೆ ಸೇರಿಕೊಂಡ ನಂತರ ಸಂಪಾದನೆ ಮಾಡಿದ ಮೊಟ್ಟ ಮೊದಲ ಸಂಬಳ ಕೈಗೆ ಸಿಕ್ಕಾಗ ಆಗುವ ಖುಷಿಯನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಈ ಒಂದು ಹಂತವು ಯೌವನದಿಂದ ಪ್ರೌಢಾವಸ್ಥೆಗೆ ಸಾಗುವ ಮಾನವ ಜೀವನದ ಅತಿ ಪ್ರಮುಖ ಘಟ್ಟವಾಗಿದೆ. ಪದವಿ ಶಿಕ್ಷಣ ಮುಗಿಸಿದ ನಂತರ ಕೈತುಂಬಾ ಸಂಬಳ ತರುವ, ತನ್ನಿಷ್ಟದ ಕೆಲಸ ಸಿಕ್ಕಾಗ ಭವಿಷ್ಯದ ಜೀವನ ಸೆಟಲ್ ಆಗುವ ಒಂದು ನೆಮ್ಮದಿಯ ಭಾವನೆ ಮೂಡುತ್ತದೆ. ಇದು ಜೀವನದಲ್ಲಿ ಉನ್ನತ ಸಾಧನೆ ಮಾಡಲು ಬೇಕಾದ ಪ್ರೇರಣೆಯನ್ನು ಸಹ ನೀಡುತ್ತದೆ.
ಹಣಕಾಸು ಸಾಕ್ಷರರಾಗುವುದು ಇಂದಿನ ಅಗತ್ಯ
ಕೆಲಸಕ್ಕೆ ಸೇರಿ ಕೈತುಂಬಾ ಸಂಬಳ ಬರಲಾರಂಭಿಸಿದಾಗ ಆ ಹಣವನ್ನು ಸೂಕ್ತವಾಗಿ ಬಳಸಿಕೊಳ್ಳುವ ಬಗ್ಗೆ ಬಹುತೇಕರಿಗೆ ಜ್ಞಾನವಿರುವುದಿಲ್ಲ. ಹೀಗಾಗಿಯೇ 'ಹಣಕಾಸು ಯೋಜನೆ ರೂಪಿಸುವುದು ಹಾಗೂ ಹಣಕಾಸು ಸಾಕ್ಷರತೆ' ಎಂಬುದು ವೃತ್ತಿಜೀವನದ ಆರಂಭದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅರಿತುಕೊಳ್ಳುವುದು ಅಗತ್ಯ. ಭವಿಷ್ಯದಲ್ಲಿ ಉತ್ತಮ ಹಾಗೂ ಸುರಕ್ಷಿತ ಜೀವನ ನಡೆಸಬೇಕಾದರೆ ಹಣಕಾಸು ಸಾಕ್ಷರತೆ ಬೇಕೇ ಬೇಕು. ಪ್ರತಿದಿನ 66 ಹೂಡಿಕೆ ಮಾಡಿ 1.11 ಕೋಟಿ ಗಳಿಸಿ, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..
ದುಡಿದ ಹಣದಲ್ಲಿ ಉಳಿತಾಯ ಮಾಡಲೇಬೇಕು
ಪ್ರತಿತಿಂಗಳ ಕೊನೆಯಲ್ಲಿ ಸಂಬಳ ಪಡೆಯುವ ಶೇ.59 ರಷ್ಟು ಉದ್ಯೋಗಿಗಳು ಒಂದು ಸಂಬಳದ ದಿನಾಂಕದಿಂದ ಇನ್ನೊಂದು ಸಂಬಳದ ದಿನಾಂಕದವರೆಗೆ ಗಳಿಸಿದ ಹಣವನ್ನು ಖರ್ಚು ಮಾಡುತ್ತ, ತುರ್ತು ಪರಿಸ್ಥಿತಿ ಅಥವಾ ಮುಂದಿನ ಜೀವನಕ್ಕಾಗಿ ಹಣ ಉಳಿಸಬೇಕೆಂಬ ಯಾವುದೇ ವಿಚಾರವಿಲ್ಲದೆ ಬದುಕುತ್ತಾರೆ ಎಂಬುದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದ ಸಂಗತಿಯಾಗಿದೆ. ಭವಿಷ್ಯದ ಬಗ್ಗೆ ಯಾವುದೇ ಹಣಕಾಸು ಯೋಜನೆ ಇಲ್ಲದೆ ಖರ್ಚು ಮಾಡುತ್ತ ಸಾಗುವುದು ಅತಂತ್ರ ಹಣಕಾಸು ಪರಿಸ್ಥಿತಿಗೆ ನಮ್ಮನ್ನು ದೂಡಬಹುದು. ಹೀಗಾಗಬಾರದು ಅಂತಾದರೆ ಕೆಲ ಹಣಕಾಸು ಶಿಸ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಪ್ರಥಮ ಬಾರಿ ಸಂಬಳ ಪಡೆಯುವವರು ಸುರಕ್ಷಿತ ಭವಿಷ್ಯಕ್ಕಾಗಿ ಯಾವೆಲ್ಲ ಅಂಶಗಳನ್ನು ಪಾಲಿಸಬೇಕು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಪ್ರತಿ ತಿಂಗಳು ಸಂಬಳ ಪಡೆಯುವವರು ಹಣಕಾಸು ಸುಭದ್ರತೆಗಾಗಿ ಈ ಅಂಶಗಳನ್ನು ಪಾಲಿಸಿ:
1. ಬಜೆಟ್ ತಯಾರಿಸುವುದು
ಸುಭದ್ರ ಹಣಕಾಸಿನ ಅಡಿಪಾಯ ಹಾಕಬೇಕಾದರೆ ಮೊದಲಿಗೆ ತಿಂಗಳ ಖರ್ಚು ವೆಚ್ಚದ ಬಜೆಟ್ ತಯಾರಿಸಿ ಅದಕ್ಕೆ ತಕ್ಕಂತೆ ಬದುಕಲಾರಂಭಿಸಬೇಕು. ಬಜೆಟ್ ತಯಾರಿಸುವುದರಿಂದ ಖರ್ಚು-ವೆಚ್ಚಗಳ ಲೆಕ್ಕ ಸಿಗುತ್ತದೆ. ಇದರಿಂದ ಹೆಚ್ಚುವರಿ ಹಾಗೂ ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣ ಉಳಿತಾಯ ಮಾಡಲು ಸಾಧ್ಯವಗುತ್ತದೆ.
2. ಮೂಲ ತೆರಿಗೆಗಳ ಬಗ್ಗೆ ತಿಳಿದುಕೊಳ್ಳಿ
ವಿವಿಧ ರೀತಿಯ ತೆರಿಗೆಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅದಕ್ಕೆ ತಕ್ಕಂತೆ ಯೋಜನೆ ರೂಪಿಸುವುದು ಸಾಮಾನ್ಯ ಜನರಿಗೆ ಕಷ್ಟವೇ ಹೌದು. ಆದರೆ ತಮಗೆ ಅನ್ವಯವಾಗುವ ತೆರಿಗೆಗಳು ಅಂದರೆ ಆದಾಯ ತೆರಿಗೆ ಹಾಗೂ ತೆರಿಗೆ ವಿನಾಯಿತಿಯ ಸರಕಾರದ ಸೌಲಭ್ಯಗಳ ಬಗ್ಗೆ ಕನಿಷ್ಠ ಜ್ಞಾನ ಇದ್ದರೆ ಆದಷ್ಟೂ ಹೆಚ್ಚು ತೆರಿಗೆ ಉಳಿಸುವ ರೀತಿಯಲ್ಲಿ ಯೋಜನೆ ಹಾಕಿಕೊಳ್ಳಬಹುದು.
ಉಳಿತಾಯದ ಶಿಸ್ತು ಬೆಳೆಸಿಕೊಳ್ಳಿ
ಖರ್ಚು ಮಾಡಿ ಉಳಿಯುವುದನ್ನು ಉಳಿತಾಯ ಮಾಡುವುದಲ್ಲ, ಉಳಿತಾಯದ ನಂತರ ಮಿಕ್ಕಿದ್ದನ್ನು ಖರ್ಚು ಮಾಡಬೇಕು ಎಂಬ ಗಾದೆ ಮಾತೊಂದಿದೆ. ಸಂಬಳದಲ್ಲಿ ಕನಿಷ್ಠ ಶೇ.20 ರಷ್ಟು ಮೊತ್ತವನ್ನಾದರೂ ಉಳಿತಾಯ ಮಾಡಿ ದೀರ್ಘಾವಧಿಯಲ್ಲಿ ಅದು ದುಪ್ಪಟ್ಟಾಗುವ ರೀತಿಯಲ್ಲಿ ಹೂಡಿಕೆ ಮಾಡಬೇಕು. ಉಳಿತಾಯ ಎಂಬುದು ಪ್ರತಿಯೊಬ್ಬ ಸಂಬಳ ಪಡೆಯುವ ಉದ್ಯೋಗಸ್ಥರ ಮೂಲಮಂತ್ರವಾಗಿರಬೇಕು ಹಾಗೂ ಉಳಿತಾಯದ ಶಿಸ್ತಿಗೆ ಸದಾಕಾಲ ಬದ್ಧರಾಗಿರಬೇಕು.
4. ಹೂಡಿಕೆಗಳು ಬೆಳೆಯುತ್ತಿರಲಿ
ವೃತ್ತಿಜೀವನದ ಆರಂಭದಿಂದಲೇ ಉಳಿತಾಯ ಮಾಡುವುದರಿಂದ ದೀರ್ಘಾವಧಿಯಲ್ಲಿ ಸಂಚಿತ ಲಾಭ ಪಡೆಯಬಹುದು. ಅಂದರೆ ಎಷ್ಟು ಬೇಗ ಉಳಿತಾಯ ಆರಂಭಿಸುವಿರೋ ಅಷ್ಟೇ ದೊಡ್ಡ ಮೊತ್ತದ ನಿಧಿಯನ್ನು ಸಂಗ್ರಹಿಸಲು ಸಾಧ್ಯ. ತಡ ಮಾಡಿದಷ್ಟೂ ನಷ್ಟ ಜಾಸ್ತಿ. ಉಳಿತಾಯ ಮಾಡಲು ತಡ ಮಾಡಿದರೆ ಹೇಗೆ ಹಾನಿಯಾಗುತ್ತದೆ ಎಂಬುದನ್ನು ಒಂದು ಸರಳ ಉದಾಹರಣೆಯ ಮೂಲಕ ಅರಿತುಕೊಳ್ಳೋಣ.
ಪ್ರತಿತಿಂಗಳು 10,000 ರೂ.ಗಳಂತೆ 20 ವರ್ಷ ಉಳಿತಾಯ ಮಾಡಿದಲ್ಲಿ ಬೆಳೆದು ಸುಮಾರು ೧ ಕೋಟಿ ರೂ.ಗಳಾಗುತ್ತದೆ (ಶೇ.12 ರಷ್ಟು ಸಿಎಜಿಆರ್ ಎಂದಿಟ್ಟುಕೊಳ್ಳೋಣ) (Compound Annual Growth Rate-CAGR). ಆದರೆ ಇದನ್ನೇ 30 ವರ್ಷಕ್ಕೆ ಪರಿಗಣಿಸಿದಲ್ಲಿ ಮೊತ್ತ 3.5 ಕೋಟಿ ರೂ.ಗಳಾಗುತ್ತದೆ. 10 ವರ್ಷಗಳಷ್ಟು ತಡ ಮಾಡಿದಲ್ಲಿ 2.5 ಕೋಟಿ ರೂ. ಕಡಿಮೆಯಾಗುತ್ತದೆ. ಬೇಗನೆ ಉಳಿತಾಯ ಆರಂಭಿಸುವುದರ ಮಹತ್ವ ಇದರಿಂದ ಅರ್ಥವಾಗುತ್ತದೆ.
5. ಸಿಪ್ ನಲ್ಲಿ ಹೂಡಿಕೆ ಆರಂಭಿಸಿ
ನಿಯಮಿತ ಅವಧಿಯಲ್ಲಿ ಸಣ್ಣ ಮೊತ್ತದ ಹೂಡಿಕೆ ಆರಂಭಿಸಲು ಮ್ಯೂಚುವಲ್ ಫಂಡ್ಗಳ ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್ (ಸಿಪ್) ಅತಿ ಸೂಕ್ತವಾಗಿವೆ. ಸಿಪ್ ಉಳಿತಾಯದಲ್ಲಿ ಶಿಸ್ತು ತರುವುದು ಮಾತ್ರವಲ್ಲದೆ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಉದ್ವೇಗ ಮಾಡಿಕೊಳ್ಳುವುದನ್ನು ತಪ್ಪಿಸುತ್ತದೆ. ಪ್ರತಿ ತಿಂಗಳು ಸಂಬಳದಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಯೋಜನೆಗಳಲ್ಲಿ ತೊಡಗಿಸಬಯಸುವ ಎಲ್ಲರಿಗೂ ಸಿಪ್ ಅತ್ಯಂತ ಉತ್ತಮವಾಗಿದೆ. ಕಂಪೌಂಡಿಂಗ್ ಅಂಶದ ಆಧಾರದಲ್ಲಿ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ನಿಧಿ ಸಂಗ್ರಹಿಸಲು ಸಿಪ್ ಗಿಂತ ಉತ್ತಮ ಆಯ್ಕೆ ಮತ್ತೊಂದಿರಲಾರದು.
6. ವಿಮೆ ಪಡೆದುಕೊಳ್ಳಿ
ಅಲ್ಪಾವಧಿಯಲ್ಲಿ ವಿಮೆ ಎಂಬುದು ಅಂಥ ಪ್ರಮುಖ ಅಂಶವಾಗಿ ನಿಮಗೆ ಕಾಣದಿರಬಹುದು. ಆದರೆ ದೀರ್ಘಾವಧಿಯಲ್ಲಿ ಯಾವುದೋ ಕೆಟ್ಟ ಘಳಿಗೆ ಎದುರಾದಾಗ ಆರೋಗ್ಯ ವಿಮೆ ಅಥವಾ ಮೆಡಿಕ್ಲೇಮ್ಗಳು ಬೇಕಾಗುತ್ತವೆ. ನಿಮ್ಮ ಆರೋಗ್ಯವನ್ನು ಆಧರಿಸಿ ದೀರ್ಘಾವಧಿಯಲ್ಲಿ ಉಪಯುಕ್ತವಾಗುವಂಥ ಆರೋಗ್ಯ ವಿಮೆ ಪಾಲಿಸಿ ಕೊಂಡುಕೊಳ್ಳಿ. ಹಾಗೆಯೇ ಜೀವವಿಮೆ ಪಾಲಿಸಿಯೂ ಅಗತ್ಯ ಎಂಬುದನ್ನು ತಿಳಿಯಿರಿ. ಇನ್ನು ವಿಮಾ ಪಾಲಿಸಿ ಕೊಳ್ಳುವ ಸಂದರ್ಭದಲ್ಲಿ ಏನಾದರೂ ಗೊಂದಲ ಮೂಡಿದಲ್ಲಿ ವಿಮಾ ತಜ್ಞರ ಸಲಹೆ ಪಡೆದು ಮುಂದುವರಿಯಿರಿ.
7. ಪ್ರಾವಿಡೆಂಟ್ ಫಂಡ್ ಸದಸ್ಯತ್ವ ಪಡೆದುಕೊಳ್ಳಿ
ಕೆಲಸ ಮಾಡುವ ಬಹುತೇಕ ಕಂಪನಿಗಳಲ್ಲಿ ಪ್ರಾವಿಡೆಂಟ್ ಫಂಡ್ ಕಡ್ಡಾಯವೇ ಆಗಿರುತ್ತದೆ. ಆದರೂ ಒಂದೊಮ್ಮೆ ನೀವು ಕೆಲಸ ಮಾಡುವ ಕಂಪನಿಯು ಕಡ್ಡಾಯ ಪಿಎಫ್ ನಿಯಮದಡಿ ಬರದೇ ಇದ್ದಲ್ಲಿ ಹಾಗೂ ಅಲ್ಲಿ ಪಿಎಫ್ ಸೌಲಭ್ಯ ಇರದಿದ್ದಲ್ಲಿ ನೀವಾಗಿಯೇ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನ ಸದಸ್ಯತ್ವ ಪಡೆದು ವಂತಿಗೆ ನೀಡಲಾರಂಭಿಸುವುದು ವಿವೇಚನೆಯ ಕ್ರಮವಾಗಿದೆ. ಕೆಲಸ ಬದಲಾಯಿಸುವ ಸಂದರ್ಭದಲ್ಲಿ ತುರ್ತು ನಿಧಿ ಸಂಗ್ರಹಿಸಲು ಪ್ರಾವಿಡೆಂಟ್ ಫಂಡ್ ಉತ್ತಮ ಮಾರ್ಗವಾಗಿದೆ. ಜೊತೆಗೆ ಹಲವಾರು ರೀತಿಯ ತೆರಿಗೆ ಉಳಿತಾಯಗಳು ಸಹ ಇದರಿಂದ ಸಿಗುತ್ತವೆ. ಈಗ ತಾನೆ ಆದಾಯ ಗಳಿಸಲಾರಂಭಿಸಿರುವವರು ನ್ಯಾಷನಲ್ ಪೆನ್ಷನ್ ಸ್ಕೀಂ ನಲ್ಲಿ (ಎನ್ಪಿಎಸ್) ಸಹ ಹಣ ತೊಡಗಿಸಬಹುದು. ಇಕ್ವಿಟಿ ಆಧರಿತ ಎನ್ಪಿಎಸ್ ನಲ್ಲಿ ವಿವಿಧ ರೀತಿಯ ಹೂಡಿಕೆ ಯೋಜನೆಗಳಿವೆ. ಕೆಲಸ ಮಾಡುವ ಕಂಪನಿಯೊಂದಿಗೆ ಮಾತನಾಡಿ ಎನ್ಪಿಎಸ್ ಸದಸ್ಯತ್ವ ಅಳವಡಿಸಿಕೊಳ್ಳುವಂತೆ ಮಾಡಿ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.
ಕೊನೆ ಮಾತು
ಹೂಡಿಕೆ ಹಾಗೂ ಖರ್ಚುಗಳು ಸಾಮಾನ್ಯವಾಗಿ ಪ್ರಯೋಗ ಹಾಗೂ ತಪ್ಪಿನ ಸರಣಿಯ (ಟ್ರಯಲ್ ಆಂಡ್ ಎರರ್) ಮೇಲೆ ಆಧರಿತವಾಗಿರುತ್ತವೆ. ಸಮಯ ಕಳೆದಂತೆ ತನಗೆ ಯಾವ ರೀತಿಯ ಹೂಡಿಕೆ ಯೋಜನೆ ಸೂಕ್ತ ಎಂಬುದನ್ನು ಅನುಭವದ ಆಧಾರದ ಮೇಲೆ ಆಯಾ ವ್ಯಕ್ತಿಯೇ ನಿರ್ಧರಿಸಬೇಕಾಗುತ್ತದೆ. ಆದರೂ ಜೀವನದ ಆರಂಭದಲ್ಲಿಯೇ ಹೂಡಿಕೆ ಆರಂಭಿಸಿದಲ್ಲಿ ಅಕಸ್ಮಾತ್ ಆಗಿ ಎದುರಾಗುವ ಹಣಕಾಸು ಒತ್ತಡಗಳಿಂದ ಪಾರಾಗಲು ಸಾಧ್ಯ. ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಇಂದೇ ಉಳಿತಾಯ ಆರಂಭಿಸಿ.