ನಿಮ್ಮ ಆದಾಯ ಹೆಚ್ಚಾಗಬೇಕಾ? ಹಾಗಿದ್ರೆ ಈ 5 ಹಣದ ಸೂತ್ರಗಳನ್ನು ಪಾಲಿಸಿ
ಕೆಲವು ವರ್ಷಗಳ ಹಿಂದೆ ಮುಂದಿನ ಭವಿಷ್ಯಕ್ಕಾಗಿ ಏನಾದ್ರೂ ಯೋಜನೆಗಳನ್ನ ರೂಪಿಸಿಕೊಂಡಿದ್ದೀರಾ ಎಂದು ಕೇಳಿದರೆ ಬಹುತೇಕ ಜನರು ನಕ್ಕು ಬಿಡುತ್ತಿದ್ದರು. ಇಷ್ಟು ಬೇಗ ಯಾವ ಪ್ಲಾನ್ ಮಾಡೋದು ಬಿಡು, ಮುಂದೆ ಮಾಡಿದರೆ ಆಯ್ತು ಎಂಬ ಮಾತುಗಳನ್ನ ನೀವು ಯಾರ ಬಳಿಯಾದರೂ ಕೇಳಿರಬಹುದು.
ಈ ನಾಳೆ ಎಂಬ ಪದವು ಬಹಳ ಸುಲಭವಾಗಿ ಜನರ ನಡುವೆ ಬೆರತು ಹೋಗಿದೆ. ಇಂದು ಮಾಡುವ ಕೆಲಸವನ್ನು ನಾಳೆ ಮಾಡಿದರೆ ಆಯ್ತು ಬಿಡು ಎಂದು ಹೇಳುವವರೇ ಹೆಚ್ಚು. ಅದರಲ್ಲೂ ಹಣಕಾಸಿನ ವಿಚಾರವಂತೂ ಮುಗಿದೇ ಹೋಯ್ತು. ಈಗಲೇ ಏಕೆ ಚಿಂತೆ ಮುಂದೆ ಮಾಡಿದರಾಯ್ತು ಎಂದು ಯುವ ಜನತೆ ಹೇಳುವುದು ಸಾಮಾನ್ಯವಾಗಿ ಬಿಟ್ಟಿದೆ.
ಆದರೆ ಹಣದ ಸದ್ಬಳಕೆಯು ಒಂದು ಗಂಭೀರವಾದ ವಿಚಾರವಾಗಿದೆ. ಬಹುತೇಕ ಜನರು ಹಣವನ್ನು ಪರಿಣಾಮಕಾರಿ ಬಳಸಿಕೊಳ್ಳಲು, ಉತ್ತಮ ಬಜೆಟ್ ರೂಪಿಸಿಕೊಳ್ಳಲು ವಿಫಲರಾಗುತ್ತಾರೆ. ಅಂತವರಿಗೆ ಇಲ್ಲಿ ಐದು ಹಣಕಾಸಿನ ಸೂತ್ರಗಳನ್ನು ನೀಡಲಾಗಿದೆ. ಈ ಐದು ಕ್ರಮಗಳನ್ನು ಪಾಲಿಸಿದರೆ ನಿಮ್ಮ ನಿವ್ವಳ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು.
1. ಕಡಿಮೆ ಆಸೆಯನ್ನು ಹೊಂದುವುದು
ಆಸೆ ಹೆಚ್ಚಾಗುತ್ತಾ ಹೋದಂತೆ ನಿಮ್ಮ ಖರ್ಚುಗಳು ತಾನಾಗಿಯೇ ಹೆಚ್ಚುತ್ತಾ ಹೋಗುತ್ತದೆ. ಆಸೆ ಎಂಬುದಕ್ಕೆ ಮಿತಿಯೇ ಇಲ್ಲ. ಉದಾಹರಣೆಗೆ ನೀವು ಒಂದು ಹೊಸ ಮೊಬೈಲ್ ಖರೀದಿಸಿದರೆ, ಮುಂದಿನ ವಾರದಲ್ಲೇ ಮತ್ತೊಂದು ಕಂಪನಿಯ ಇನ್ನಷ್ಟು ಗುಣಮಟ್ಟದ ಅಥವಾ ಹೆಚ್ಚು ಫೀಚರ್ಗಳನ್ನು ಒಳಗೊಂಡ ಮೊಬೈಲ್ ಬಿಡುಗಡೆಯಾಗುತ್ತದೆ. ಆಗ ಛೇ ಅದನ್ನೇ ಖರೀದಿಸಿದರೆ ಆಗುತ್ತಿತ್ತು ಎಂದು ಅದಾಗಲೇ ಖರೀದಿಸಿದ್ದ ವಸ್ತುವಿನ ಸದ್ಬಳಕೆಗೂ ಮುನ್ನವೇ ಮತ್ತೊಂದು ಆಸೆ ಪಡುವುದು ತಪ್ಪು.
ಹಣವನ್ನು ಖರ್ಚು ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ. ಆದರೆ ಅದೇ ಹಣವನ್ನು ಸಂಪಾದಿಸಲು ನೀವು ವ್ಯಯಿಸುವ ಶ್ರಮ ದೊಡ್ಡದು. ನಿರ್ದಿಷ್ಟ ಪ್ರಮಾಣದ ಹಣವನ್ನು ಗಳಿಸಲು ನೀವು ಸಾವಿರಾರು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ. ತದನಂತರ, ನೀವು ಎಲ್ಲವನ್ನೂ ಹೊಸ ಕಾರು, ಐಷಾರಾಮಿ ಟೂರ್, ಅಥವಾ ಇನ್ಯಾವುದೇ ವಿಚಾರಕ್ಕೆ ಖರ್ಚು ಮಾಡಿಬಿಡಬಹುದು.
ಈ ಮೇಲಿನ ರೀತಿಯಾಗಿ ಬಹುತೇಕ ಜನರು ಕಷ್ಟ ಪಟ್ಟು ದುಡಿದ ಹಣವನ್ನು ವ್ಯಯ ಮಾಡುವುದು ಸಾಮಾನ್ಯ. ಆದರೆ ಆಸೆ ಮಿತಿಯಲ್ಲಿದ್ದರೆ ಖರ್ಚನ್ನು ತಗ್ಗಿಸಬಹುದು. ನಿಜವಾದ ಸ್ವಾತಂತ್ರ್ಯ ಎಂದರೆ ನೀವು ಕಡಿಮೆ ಬಯಸುತ್ತಿದ್ದೀರಿ ಎಂದರ್ಥ.
2. ಆರ್ಥಿಕತೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಯಿರಿ
ಹಣಕಾಸಿನ ವಿಚಾರಗಳನ್ನು ಓದುವುದು ಎಂದರೆ ಜನರು ಮುಖ ತಿರುಗಿಸುವುದು ಸಾಮಾನ್ಯ. ಕೆಲವರಿಗೆ ಅರ್ಥ ಆಗದೇ ತಿಳಿದುಕೊಳ್ಳಲು ಇಷ್ಟ ಪಡುವುದಿಲ್ಲ. ಮತ್ತೆ ಕೆಲವರು ಆಸಕ್ತಿ ತೋರದೆಯೇ ಅದರ ಕಡೆಗೆ ಗಮನ ಹರಿಸುವುದಿಲ್ಲ.
ಆದರೆ, ಬಡ್ಡಿದರ ಸಾಮಾನ್ಯವಾಗಿ ಯಾವಾಗ ಹೆಚ್ಚಾಗುತ್ತದೆ? ಅದು ಯಾವಾಗ ಇಳಿಯುತ್ತದೆ? ಬಾಂಡ್ಗಳು ಎಂದರೇನು? ಹಣದುಬ್ಬರ ಏನು? ಆರ್ಥಿಕತೆಗಳು ಸಾಮಾನ್ಯವಾಗಿ ಏಕೆ ಕುಸಿಯುತ್ತವೆ? ಸಾಲ ಏನು? ಹಣವನ್ನು ಮುದ್ರಿಸುವವರು ಯಾರು? ಅವರು ಹಣವನ್ನು ಏಕೆ ಮುದ್ರಿಸುತ್ತಾರೆ? ಇವೆಲ್ಲವನ್ನು ತಿಳಿದುಕೊಳ್ಳಲು ನೀವು ಅರ್ಥಶಾಸ್ತ್ರಜ್ಞರಾಗಿರಬೇಕಾಗಿಲ್ಲ. ಬರ್ಟನ್ ಮಾಲ್ಕಿಯೆಲ್ ಬರೆದ ಎ ರಾಂಡಮ್ ವಾಕ್ ಡೌನ್ ವಾಲ್ಸ್ಟ್ರೀಟ್ ನಂತಹ ಪುಸ್ತಕವನ್ನು ಓದಿ ಸಾಕು. ಪುಸ್ತಕಗಳು ನಿಮ್ಮನ್ನು ಆರ್ಥಿಕ ತಿಳುವಳಿಕೆಗಾರರನ್ನಾಗಿ ರೂಪಿಸುವ ಸಾಮರ್ಥ್ಯ ಹೊಂದಿವೆ.
ನಿಮಗೆ ಆರ್ಥಿಕತೆ ವಿಚಾರವಾಗಿ ಎಷ್ಟನ್ನು ತಿಳಿದುಕೊಳ್ಳುತ್ತೀರೋ ಅಷ್ಟು ಹೆಚ್ಚಾಗಿ ಸದ್ಯದ ಮಾರುಕಟ್ಟೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಯಾವುದರ ಮೇಲೆ ಹಣ ಹೂಡಿಕೆ ಮಾಡಬೇಕು, ಹಣ ಹೂಡಿಕೆಗೆ ಇದು ಸೂಕ್ತ ಸಮಯವೇ ಎಂದು ತಿಳಿಯಲು ಸಾಧ್ಯವಾಗುತ್ತದೆ. ಆ ಮೂಲಕ ಹಣದಿಂದ ಹಣವನ್ನು ಸಂಪಾದಿಸಿ ನಿಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದು.
3. ವೈಯಕ್ತಿಕ ಸಾಲವನ್ನು ತಗ್ಗಿಸಿ
ಹಣವನ್ನು ಸಾಲವಾಗಿ ಪಡೆಯುವುದು ತಪ್ಪು ಎಂದು ನಾವು ಹೇಳುವುದಿಲ್ಲ. ಆದರೆ ನೀವು ಪಡೆಯುವ ಸಾಲದ ಬಗ್ಗೆ ಬುದ್ದಿವಂತರಾಗಿರಬೇಕು. ನೀವು ಯಾವುದೇ ವ್ಯವಹಾರವನ್ನು ಆರಂಭಿಸಲು, ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಾಲವನ್ನು ತೆಗೆದುಕೊಳ್ಳುವುದು ಅಗತ್ಯ. ಆದರೆ ಅದೇ ನೀವು ಐಷಾರಾಮಿ ಜೀವನ ಸಾಗಿಸಲು, ಮನೆಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿಲು ಅಥವಾ ಸಮಾಜದ ದೃಷ್ಟಿಯಿಂದ ಶ್ರೀಮಂತರೆಂದು ತೋರಿಸಿಕೊಳ್ಳಲು ವಸ್ತುಗಳ ಖರೀದಿಗೆ ಸಾಲವನ್ನು ಪಡೆಯದಿರಿ.
ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ವಿಚಾರದಲ್ಲಿ ಸಾಲವನ್ನು ಪಡೆಯುವಾಗ ಎಚ್ಚರ ವಹಿಸಿ. ಏಕೆಂದರೆ ವ್ಯವಹಾರದಲ್ಲಿ ಲಾಭ-ನಷ್ಟ ಸಾಮಾನ್ಯ. ಹೀಗಾಗಿ ನೀವು ಪಡೆಯುವ ಸಾಲವನ್ನು ಹೂಡಿಕೆ ಮಾಡುವಾಗ ಅದರ ಸುರಕ್ಷತೆ ಮತ್ತು ಅದರಿಂದ ಬರುವ ಆದಾಯದ ಬಗ್ಗೆ ನಿಮಗೆ ಸ್ಪಷ್ಟ ಚಿತ್ರಣ ಇರಲಿ.
4. ನಿಮಗೆ ಸಾಧ್ಯವಾದಷ್ಟು ಉಳಿತಾಯ ಮಾಡಿ
ಈ ಲೇಖನದ ಮೊದಲ ಅಂಶದಲ್ಲೇ ಹೇಳಿದಂತೆ ಕಡಿಮೆ ಆಸೆಯು ನಿಮ್ಮ ಹಣಕಾಸಿನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಸೆ ಎಂಬುದು ನಿಮ್ಮ ಖರ್ಚು, ಸಾಲದ ಮೇಲೆ ಪರಿಣಾಮವನ್ನು ಬೀರುತ್ತದೆ. ಕಡಿಮೆ ಆಸೆಯು ನಿಮ್ಮ ಸಾಲಗಾರನಾಗಿ ಸಂಕಷ್ಟ ಪಡುವುದನ್ನು ತಪ್ಪಿಸುತ್ತದೆ.
ಉಳಿತಾಯ ಎಷ್ಟು ಮಾಡಬೇಕು ಎಂಬುದು ನಿಮಗೆ ಬಿಟ್ಟ ವಿಚಾರ. ಆದರೆ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಿದರೂ ಹೂಡಿಕೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಬಳಿ ಸಾಕಷ್ಟು ಹಣ ಉಳಿತಾಯವಾದರೆ ಅದನ್ನು ಉತ್ತಮ ರೀತಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಆದಾಯವನ್ನು ದುಪ್ಟಟ್ಟು ಮಾಡಿಕೊಳ್ಳಬಹುದು. ನಿಮ್ಮ ಬಳಿ ಉಳಿತಾಯದ ಹಣವೇ ಇಲ್ಲದಿದ್ದರೆ ಹೂಡಿಕೆಯು ಸಾಧ್ಯವಿಲ್ಲ, ಹೆಚ್ಚು ಆದಾಯವೂ ಬರುವುದಿಲ್ಲ.
5. ಅಲ್ಪಾವಧಿಯ ಕಾರ್ಯತಂತ್ರವನ್ನು ಹೊಂದಿರಿ
ಬಹುತೇಕ ಜನರು ದೀರ್ಘಕಾಲದವರೆಗೆ ಹೂಡಿಕೆ ಮಾಡಲು ಬಯಸುತ್ತಾರೆ. ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ದೀರ್ಘಕಾಲದಲ್ಲಿ ಒಟ್ಟಿಗೆ ಹಣ ಪಡುವ ಯೋಜನೆಯನ್ನು ಮಾಡುವುದು ಸಾಮಾನ್ಯ. ಹೀಗಾಗಿ ಬಹುಪಾಲು ಜನರ ಹೂಡಿಕೆ ತಂತ್ರವು ದೀರ್ಘಾವಧಿಯ ಮೇಲೆ ಹೆಚ್ಚು ಕೇಂದ್ರೀಕರಿಸಿದೆ.
ದೀರ್ಘಾವಧಿಯ ಹೂಡಿಕೆ ತಂತ್ರದ ಜೊತೆಗೆ ಅಲ್ಪಾವಧಿಯ ಕಾರ್ಯತಂತ್ರಗಳನ್ನು ರೂಪಿಸಿದರೆ ನೀವು ನಿಮ್ಮ ಆರ್ಥಿಕ ಹೊರೆ ತಗ್ಗಿಸಬಹುದು. ಅಂದರೆ ಕಡಿಮೆ ಸಮಯದಲ್ಲಿ ಆದಾಯ ಬರುವಂತಹ ಯೋಜನೆಗಳನ್ನು ರೂಪಿಸಿಕೊಂಡರೆ ಬಿಲ್ ಪಾವತಿ, ಬಾಡಿಗೆ ಕಟ್ಟುವುದು ಮುಂತಾದ ರೀತಿಯ ಖರ್ಚುಗಳು ಹೊರೆಯಾಗದಂತೆ ತಗ್ಗಿಸಬಹುದು.
ಜೊತೆಗೆ ಈಗಾಗಲೇ ಇರುವ ಹಣವನ್ನು ನಿಭಾಯಿಸುವಲ್ಲಿ ಕೌಶಲ್ಯಗಳನ್ನು ಸುಧಾರಿಸಿಕೊಂಡರೆ ನೀವು ಅದರ ಪ್ರತಿಫಲ ಪಡೆಯುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.
ತಡ ಏಕೆ ಈಗಿನಿಂದಲೇ ಶುರು ಮಾಡಿ
ನೀವು ಕೇವಲ ಒಂದು ಲೇಖನವನ್ನು ಓದುವುದರಿಂದ ಹಣಕಾಸಿನ ವಿಚಾರಗಳನ್ನು ಅರ್ಥಮಾಡಿಕೊಂಡಿರಿ ಎಂದರ್ಥವಲ್ಲ. ಹಣಕಾಸಿನ ನಿರ್ವಹಣೆ ಮತ್ತು ಯೋಜನೆಗಳ ಕುರಿತು ಹೆಚ್ಚು ಪುಸ್ತಕಗಳನ್ನು ಓದಿ ಮತ್ತು ಹೂಡಿಕೆದಾರರ ಕುರಿತು ಅಧ್ಯಯನ ಮಾಡಿ. ಲೇಖನದ ಪ್ರಾರಂಭದಲ್ಲೇ ಹೇಳಿದಂತೆ ನಾಳೆ ಮಾಡಿದರೆ ಆಯ್ತು ಎಂಬುದನ್ನು ನಿಮ್ಮ ಮನಸ್ಸಿನಿಂದ ಕಿತ್ತೊಗೆದು ಈಗಿನಿಂದಲೇ ಕಾರ್ಯ ಶುರು ಮಾಡಿ.