ಲೋನ್ ಸರಿಸಮಯಕ್ಕೆ ಕಟ್ಟದಿದ್ದರೆ ಏನಾಗುತ್ತೆ? ಆರ್ಬಿಐ ಗೈಡ್ಲೈನ್ಸ್ ತಿಳಿದಿರಿ
ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅಂತ ಹೇಳೋದನ್ನು ಕೇಳಿದ್ದೇವೆ. ಸಾಲ ಮಾಡದೋರು ಯಾರವ್ರೆ..? ಎಷ್ಟೇ ಸಂಪಾದನೆ ಮಾಡಿದರೂ ಇಂದಿನ ಕಾಲದಲ್ಲಿ ಸಾಲ ಮಾಡುವುದು ಅನಿವಾರ್ಯ. ಆದರೆ ಹಾಸಿಗೆ ಇದ್ದಷ್ಟು ಕಾಲ ಚಾಚುವ ಬದಲು ಅತಿಯಾಗಿ ಸಾಲ ಮಾಡಿ ವಾಪಸ್ ಕಟ್ಟಲಾಗದ ಸ್ಥಿತಿಗೆ ಹೋಗುವವರು ಬಹಳ ಮಂದಿ.
ಬ್ಯಾಂಕ್ನಿಂದ ಸಾಲ ಪಡೆದು ಕಂತಿನ ಹಣ ಸರಿಯಾಗಿ ಕಟ್ಟದಿದ್ದರೆ, ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ವೆಚ್ಚದ ಹಣವನ್ನು ಸರಿಯಾದ ಸಮಯಕ್ಕೆ ಕಟ್ಟದಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ಭವಿಷ್ಯದಲ್ಲಿ ಬ್ಯಾಂಕ್ಗಳಿಂದ ಸಾಲ ಸಿಗುವುದು ಕಷ್ಟ ಎಂಬುದು ನಿಮಗೆ ಗೊತ್ತಿರಬಹುದು.
FASTag Balance : ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಆದರೆ, ಬ್ಯಾಂಕ್ ಸಾಲ ಪಡೆದು ಸರಿಯಾದ ಸಮಯಕ್ಕೆ ಮರುಪಾವತಿ ಮಾಡದೇ ಹೋದರೆ ನೋಟೀಸ್ ಬರುತ್ತದೆ. ಹಲವು ಸಂದರ್ಭಗಳಲ್ಲಿ ರಿಕವರಿ ಏಜೆಂಟ್ಗಳು ಬಂದು ಹಣ ವಸೂಲಿಗೆ ಪ್ರಯತ್ನ ಪಡುವುದುಂಟು. ಹಿಂದೆಲ್ಲಾ ರಿಕವರಿ ಏಜೆಂಟ್ಗಳೆಂದರೆ ರೌಡಿಗಳಂತಿರುತ್ತಿದ್ದರು. ಈಗ ಟೈ ಬೂಟು ಹಾಕಿಕೊಂಡು ಟಿಪ್ಟಾಪ್ ಆಗಿ ವಸೂಲಿಗೆ ಬರುವುದುಂಟು.
ಅಷ್ಟಕ್ಕೂ ಸಾಲ ಕಟ್ಟದವರಿಂದ ಹಣ ವಸೂಲಿ ಹೇಗೆ ಮಾಡಬೇಕೆಂದು ಆರ್ಬಿಐ ಹೊಸ ಮಾರ್ಗಸೂಚಿ ನೀಡಿದೆ. ಬ್ಯಾಂಕ್ನವರು ಸಾಲ ಗ್ರಾಹಕರಿಂದ ಬಲಾತ್ಕಾರವಾಗಿ ಹಣ ವಸೂಲಿ ಮಾಡುವಂತಿಲ್ಲ, ಜನರನ್ನು ಬೆದರಿಸುವಂತಿಲ್ಲ ಎನ್ನುತ್ತದೆ ಈ ಗೈಡ್ಲೈನ್ಸ್.
ದೀಪಾವಳಿ ಧಮಾಕ: 53 ಲೀಟರ್ ಪೆಟ್ರೋಲ್ ಉಚಿತ, ಹೇಗಪ್ಪ..!?
ಬ್ಯಾಂಕ್ನವರು ಸಾಲ ವಸೂಲಾತಿಗೆ ಥರ್ಡ್ ಪಾರ್ಟಿ ರಿಕವರಿ ಏಜೆಂಟ್ಗಳನ್ನು ಬಳಸಲು ಅಡ್ಡಿ ಇಲ್ಲ. ಆದರೆ, ಈ ರಿಕವರಿ ಏಜೆಂಟ್ಗಳು ಕೂಡ ಸಭ್ಯತೆಯ ಎಲ್ಲೆ ದಾಟುವಂತಿಲ್ಲ. ಜನರನ್ನು ಬೆದರಿಸಿ ಸಾಲ ವಸೂಲಿ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ.
ನೋಟೀಸ್ ಕೊಡಬೇಕು
ಸಾಲ ಕಟ್ಟದ ಗ್ರಾಹಕರೊಂದಿಗೆ ಬ್ಯಾಂಕ್ನ ನಡಾವಳಿ ಹೇಗಿರಬೇಕೆಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಡಮಾನ ಇಟ್ಟು ತೆಗೆದುಕೊಳ್ಳಲಾದ ಸಾಲವಾದರೆ ಬ್ಯಾಂಕ್ನವರು ಅಡಮಾನದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಇದ್ದೇ ಇದೆ. ಆದರೆ, ನೇರಾನೇರ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ. ಮುಂಚಿತವಾಗಿ ನೋಟೀಸ್ ನೀಡಲೇಬೇಕು.
ಯಾವಾಗ್ಯಾವಾಗಂದಾಗ ಹೋಗಲು ಆಗಲ್ಲ
ಸಾಲ ಪಡೆದ ಗ್ರಾಹಕರಿಂದ ಹಣ ವಸೂಲಿ ಮಾಡುವ ಜವಾಬ್ದಾರಿ ಹೊತ್ತ ರಿಕವರಿ ಏಜೆಂಟ್ನ ನಡಾವಳಿಯನ್ನು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಗ್ರಾಹಕರ ಮನೆಗೆ ಯಾವ್ಯಾವುದೋ ಸಮಯದಲ್ಲಿ ಹೋಗುವಂತಿಲ್ಲ. ಸಂಜೆಯ ನಂತರ ಹೋಗಬಾರದು ಎನ್ನುತ್ತದೆ ನಿಯಮ.
ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆಯ ಅವಧಿಯಲ್ಲಿ ಮಾತ್ರ ಗ್ರಾಹಕರ ಮನೆಗೆ ಹೋಗಬಹುದು. ಗ್ರಾಹಕರ ಮನೆಗೆ ಹೋಗಿ ಅಲ್ಲಿ ಅಸಭ್ಯವಾಗಿ ನಡೆದುಕೊಳ್ಳುವಂತಿಲ್ಲ. ಅವಾಚ್ಯವಾಗಿ ನಿಂದಿಸುವುದು, ಬೆದರಿಕೆ ಹಾಕುವುದು ಇತ್ಯಾದಿ ಅನುಚಿತವಾಗಿ ವರ್ತಿಸಿದರೆ ಗ್ರಾಹಕರು ಬ್ಯಾಂಕಿಗೆ ನೇರವಾಗಿ ದೂರು ನೀಡಬಹುದು.
ಒಂದು ವೇಳೆ, ಬ್ಯಾಂಕ್ನವರು ದೂರು ಕೇಳಲು ನಿರಾಸಕ್ತಿ ತೋರಿದರೆ ಬ್ಯಾಂಕಿಂಗ್ ತನಿಖಾಧಿಕಾರಿಯನ್ನು ಸಂಪರ್ಕಿಸಿ ದೂರು ನೀಡಬಹುದು.
ಕಾನೂನು ಹಕ್ಕು
* ನಿಗದಿತ ಅವಧಿ ಮೀರಿ 90 ದಿನಗಳಾದರೂ ಪಾವತಿ ಮಾಡದಿದ್ದರೆ ಸಾಲವನ್ನು ಎನ್ಪಿಎ ವರ್ಗೀಕರಿಸಲಾಗುತ್ತದೆ. ಎನ್ಪಿಎ ಎಂದರೆ ವಸೂಲಾಗದ ಸಾಲ. ಇಂಥ ಸಂದರ್ಭದಲ್ಲಿ ಸಾಲ ಪಡೆದವರಿಗೆ ನೋಟೀಸ್ ನೀಡಬೇಕು.
* ಒಂದು ವೇಳೆ ಸಾಲ ಕಟ್ಟದ ಗ್ರಾಹಕರನ್ನು ಡೀಫಾಲ್ಟರ್ ಎಂದು ಬ್ಯಾಂಕ್ ಘೋಷಿಸಿದರೆ ಎಲ್ಲವೂ ಮುಗಿದೇ ಹೋಯಿತು, ದೊಡ್ಡ ಅಪರಾಧವಾಗಿ ಶಿಕ್ಷೆಯೇ ಆಗಿ ಹೋಗುತ್ತದೆ ಎಂದಲ್ಲ. ಅಂಥ ಸಂದರ್ಭದಲ್ಲಿ ಗ್ರಾಹಕ ಅಡವಿಟ್ಟಿದ್ದ ವಸ್ತುವನ್ನು ಬ್ಯಾಂಕ್ ಏಕಾಏಕಿ ವಶಕ್ಕೆ ತೆಗೆದುಕೊಳ್ಳುವಂತಿಲ್ಲ. ನೋಟೀಸ್ ಕೊಟ್ಟು, ಸಾಲ ಮರುಪಾವತಿಗೆ ಇನ್ನಷ್ಟು ಸಮಯಾವಕಾಶ ಕೊಡಬೇಕು. ಆಗಲೂ ಮರುಪಾವತಿ ಆಗದಿದ್ದಾಗ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯಲ್ಲಿ ತಡಗಿಸಿಕೊಕೊಳ್ಳಬಹುದು.
* ಅಡಮಾನ ಇಟ್ಟ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರೂ ಅದನ್ನು ಹರಾಜಿಗೆ ಹಾಕುವ ಮುನ್ನ ನೋಟೀಸ್ ನೀಡಬೇಕು. ಆ ಆಸ್ತಿಯ ನ್ಯಾಯಯುತ ಬೆಲೆ ಎಷ್ಟಿದೆ ಎಂಬುದನ್ನು ತಿಳಿಸಬೇಕು. ಹರಾಜಿನ ಮೂಲ ಬೆಲೆ, ದಿನಾಂಕ ಮತ್ತು ಸಮಯವನ್ನು ಮೊದಲೇ ಹೇಳಿರಬೇಕು.
* ಹರಾಜು ಆದ ನಂತರ ಬಂದ ಹಣದಲ್ಲಿ ಸಾಲದ ಮೊತ್ತವನ್ನು ಮುರಿದುಕೊಂಡು ಹೆಚ್ಚುವರಿ ಹಣವೇನಾದರೂ ಇದ್ದರೆ ಅದರ ಮೇಲೆ ಗ್ರಾಹಕರಿಗೆ ಹಕ್ಕು ಇರುತ್ತದೆ. ಅವರೇನಾದರೂ ಆ ಹೆಚ್ಚುವರಿ ಹಣಕ್ಕೆ ಮನವಿ ಮಾಡಿದರೆ ಅದನ್ನು ಪುರಸ್ಕರಿಸಿ, ಆ ಹಣವನ್ನು ವಾಪಸ್ ಮಾಡಬೇಕು ಎನ್ನುತ್ತದೆ ಗೈಡ್ಲೈನ್ಸ್.