ದುಡ್ಡು ಮಾಡೋದು ಹೇಗೆ ಅಲ್ಲ, ಇದು ದುಡ್ಡಿನೊಂದಿಗೆ ಬದುಕೋದು ಹೇಗೆ?
ಮೂವತ್ತೈದು ವರ್ಷದ ವ್ಯಕ್ತಿಯೊಬ್ಬರು ತಮ್ಮ ಬದುಕಿನ ಶೈಲಿ, ಖರ್ಚಿನ ಬಗ್ಗೆ ಹೇಳಿಕೊಂಡ ಲೇಖನ ಇದು. ಅವರು ಹೇಳಿರುವ ವಿಚಾರದ ಆಳಕ್ಕೆ ಇಳಿದು ನೋಡಿದರೆ ಕೆಲವು ಸರಳ ಸಂಗತಿಗಳು ತಿಳಿದು ಬರುತ್ತವೆ. ಅವರ ಜೀವನಶೈಲಿಯು ಕೆಲವರಿಗೆ ಪಾಠವಾಗುವ ಸಾಧ್ಯತೆಯೂ ಇದೆ. ಆದ್ದರಿಂದಲೇ ಈ ಲೇಖನವನ್ನು ನೀವು ಓದುತ್ತಿದ್ದೀರಿ.
ಹೇಳಿಕೊಳ್ಳುವ ವ್ಯಕ್ತಿಯ ಧಾಟಿಯಲ್ಲೇ ಬರವಣಿಗೆ ಸಾಗುವುದರಿಂದ ಇದು ಸ್ವಗತ ಶೈಲಿಯಲ್ಲೇ ಇರುತ್ತದೆ. ಆ ರೀತಿ ಬದುಕುವುದಕ್ಕೆ ಕಾರಣ ಏನು ಎಂಬ ವಿವರಣೆ ಕೆಲವು ಕಡೆ ಇದ್ದರೆ, ಯಾವ ವಿವರಣೆಯನ್ನೂ ನೀಡದೆ ಮುಖ್ಯ ವಿಚಾರವನ್ನು ದಾಟಿಸಲಾಗುತ್ತದೆ. ಇನ್ನು ಹೆಚ್ಚಿನ ಪೀಠಿಕೆ ಬೇಡ. ಮುಂದೆ ಓದಿ.
ನನ್ನ ಖರ್ಚು- ನನ್ನ ಆಯ್ಕೆ
ಉಳಿತಾಯ ಮಾಡಬೇಕು ಎಂಬ ಮಾತು ನಿಜ. ಹಾಗಂತ ಗುಣಮಟ್ಟದ ಜೀವನ ಸಾಗಿಸದೆ, ಆರೋಗ್ಯವನ್ನು ಕಾಪಾಡಿಕೊಳ್ಳದೆ, ಉತ್ತಮ ಕ್ಷಣಗಳನ್ನು ಎಂಜಾಯ್ ಮಾಡದೆ ಹಣ ಕೂಡಿಡುವುದು ಏನು ಪ್ರಯೋಜನ? ನನ್ನ ಕುಟುಂಬ ಇರುವುದು ಪುಟ್ಟ ಅಪಾರ್ಟ್ ಮೆಂಟ್ ನಲ್ಲಿ. ನೀರು- ಅಡುಗೆ ಅನಿಲ ಅನಗತ್ಯವಾಗಿ ಬಳಸುವುದಿಲ್ಲ. ಸೆಕೆಂಡ್ ಹ್ಯಾಂಡ್ ಕಾರಿದೆ. ಅದು ಕೂಡ ಒಳ್ಳೆ ಮೈಲೇಜ್ ಹಾಗೂ ಕಡಿಮೆ ನಿರ್ವಹಣೆಯದು. ವರ್ಷ- ವರ್ಷ ಕಡಿಮೆ ಇನ್ಷೂರೆನ್ಸ್ ಬರುತ್ತದೆ. ಇನ್ನು ನನ್ನ ಆಫೀಸ್ ಗೆ ಬಹಳ ಹತ್ತಿರದಲ್ಲೇ ನನ್ನ ಅಪಾರ್ಟ್ ಮೆಂಟ್ ಇರುವುದರಿಂದ ಕಾರಿನ ಪೆಟ್ರೋಲ್ ಗೂ ಹೆಚ್ಚಿನ ಖರ್ಚಿಲ್ಲ. ದುಬಾರಿ ಗ್ಯಾಜೆಟ್ ಗಳನ್ನು ಮೊದಲಿಂದಲೂ ನಾನು ಖರೀದಿ ಮಾಡಲ್ಲ. ಬ್ರ್ಯಾಂಡೆಡ್ ಬಟ್ಟೆಗಳ ಮೇಲೆ ಹಣ ಹಾಕಲ್ಲ.
ಆದರೆ, ಪ್ರತಿ ತಿಂಗಳು ಪುಸ್ತಕಗಳನ್ನು ಖರೀದಿ ಮಾಡ್ತೀನಿ. ಊಟ- ತಿಂಡಿ ವಿಚಾರದಲ್ಲಿ ಪೌಷ್ಟಿಕಾಂಶ ಚೆನ್ನಾಗಿರುವುದನ್ನೇ ಆಯ್ಕೆ ಮಾಡಿಕೊಳ್ತೀನಿ. ತಪ್ಪದೆ ಜಿಮ್ ಗೆ ಹೋಗ್ತೀನಿ. ನನ್ನ ಕಚೇರಿಯಲ್ಲೂ ಪುಟ್ಟದೊಂದು ಜಿಮ್ ಮಾಡಿಕೊಂಡು ಇದ್ದೀನಿ. ನನ್ನಿಂದ ದುಬಾರಿ ಬದುಕು ಸಾಧ್ಯವಿಲ್ಲ. ಅದೇ ರೀತಿ ಮಿನಿಮಲಿಸ್ಟ್ ಗಳ ಥರ ಇರುವುದಕ್ಕೂ ಆಗಲ್ಲ.
ನನ್ನ ಸಿದ್ಧಾಂತ ಇಷ್ಟೇ: ದೀರ್ಘಾವಧಿಯ ಅನುಕೂಲ ಕೊಡದ ಯಾವುದಕ್ಕೂ ಹಣ ಖರ್ಚು ಮಾಡಬಾರದು. ಉದಾಹರಣೆಗೆ ಆರೋಗ್ಯಪೂರ್ಣವಾದ ಆಹಾರ ಸೇವನೆಯಿಂದ ದೈಹಿಕವಾಗಿ ಸದೃಢವಾಗಿರಬಹುದು. ಇನ್ನು ಪುಸ್ತಕಗಳು ನನ್ನ ಜ್ಞಾನ ಮತ್ತು ಆಲೋಚನೆಗೆ ಸಹಾಯ ಮಾಡುತ್ತವೆ. ಜಿಮ್ ಗೆ ಹೋಗುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಇನ್ನು ಆಗಾಗ ಪ್ರವಾಸಕ್ಕೆ ಹೋಗುತ್ತೇನೆ. ಅದರಿಂದ ಉತ್ಸಾಹ ಹೆಚ್ಚಾಗುತ್ತದೆ.
ದುಡ್ಡೇ ಖರ್ಚು ಮಾಡದಿದ್ದರೆ ಯಾರಿಗೆ ಇಷ್ಟೆಲ್ಲ ಮಾಡಬೇಕು ಎಂಬ ಭಾವ ಇರುತ್ತದೆ. ನಮ್ಮ ಸಂಪಾದನೆಗಿಂತ ಹೆಚ್ಚು ಖರ್ಚು ಮಾಡಬಾರದು. ಊಟ- ತಿಂಡಿಗೂ ಇಲ್ಲದಂತೆ ಮಾಡಿಕೊಂಡು ಹಣ ಉಳಿಸಬಾರದು ಎಂಬುದು ನನ್ನ ಆಲೋಚನೆ.
ಕಷ್ಟ ಕಾಲಕ್ಕೆ ಆಪದ್ಧನ ಇರಲಿ
ದುಡ್ಡು ಹೇಗೆ ಬೆಳೆಯುತ್ತದೆ ಎಂಬ ಬಗ್ಗೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಅಲೋಚನೆಗಳು ಇರುತ್ತವೆ. ಆದರೆ ಮೊದಲಿಗೆ ಹಣ ಉಳಿತಾಯ ಮಾಡಬೇಕು. ಆ ನಂತರವೇ ಹೂಡಿಕೆ ಮಾಡಬೇಕು. ಆದರೆ ಹಣ ಹೂಡಿಕೆ ಮಾಡುವುದಕ್ಕೂ ಮುಂಚೆಯೇ ಕನಿಷ್ಠ ಎಷ್ಟು ಹಣವನ್ನು ಆಪದ್ಧನ ಎಂದು ಎತ್ತಿಡಬೇಕು ಎಂಬುದು ಗೊತ್ತಿರಲೇಬೇಕು. ನಮ್ಮಂಥ ಎಷ್ಟೋ ಮಂದಿಯ ಸ್ವಾತಂತ್ರ್ಯ ನಿರ್ಧಾರ ಆಗುವುದು ಹಣದಿಂದ. ಅದಕ್ಕಾಗಿ ಖಾತೆಯಲ್ಲಿ ಕೋಟ್ಯಂತರ ರುಪಾಯಿ ಅಗತ್ಯ ಇಲ್ಲ. ಆದರೆ ಆರು ತಿಂಗಳ ಕಾಲ ಮನೆ ನಡೆಸಲು ಅಗತ್ಯ ಇರುವಷ್ಟು ಮೊತ್ತವನ್ನು ತಕ್ಷಣಕ್ಕೆ ಸಿಗುವಂತೆ ಇಟ್ಟುಕೊಂಡಿದ್ದೇನೆ. ಅದೆಂಥ ಸಂದರ್ಭಕ್ಕೂ ಆ ಹಣವನ್ನು ತೆಗೆಯುವುದಿಲ್ಲ. ಆ ಹಣವನ್ನು ಎಲ್ಲೂ ಹೂಡಿಕೆ ಕೂಡ ಮಾಡಲ್ಲ. ಹಾಗೆ ಆ ಹಣ ನನಗೆ ತಕ್ಷಣಕ್ಕೆ ಸಿಗುವಂತೆ ಇರುವ ತನಕ ನೆಮ್ಮದಿ ಇರುತ್ತದೆ. ನನ್ನ ಪಾಲಿಗೆ ಶ್ರೀಮಂತ ಜೀವನ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲ್ಲ
ಷೇರು ವ್ಯವಹಾರದಿಂದ ನಾನೆಂದಿಗೂ ಹಣ ಮಾಡಿಲ್ಲ. ಷೇರು ಮಾರುಕಟ್ಟೆ ಅರ್ಥ ಮಾಡಿಕೊಳ್ಳುವುದು ಅಸಾಧ್ಯದ ಮಾತು. ಅದೃಷ್ಟ ಇದ್ದರಷ್ಟೇ ಅಲ್ಲಿ ಶ್ರೀಮಂತರಾಗ ಬಹುದಂತೆ. ಆದ್ದರಿಂದ ಯಾವುದೋ ಒಂದು ಷೇರಿನ ಮೇಲೆ ಹಣ ಹಾಕುವುದನ್ನು ವರ್ಷಗಳ ಹಿಂದೆಯೇ ನಿಲ್ಲಿಸಿಬಿಟ್ಟೆ. ಪ್ರತಿ ನಿತ್ಯ ಆ ಷೇರುಗಳ ಬೆಲೆಯನ್ನು ಗಮನಿಸುತ್ತಾ ಕೂರುವುದು ನನ್ನಿಂದ ಆಗದು. ಆದ್ದರಿಂದ ನಾನು ಇಂಡೆಕ್ಸ ಫಂಡ್ ನಲ್ಲಿ ಹಣ ಹಾಕಿದ್ದೀನಿ. ಅದರಲ್ಲಿ ಆ ಸೂಚ್ಯಂಕದ ಎಲ್ಲ ಕಂಪೆನಿಗಳೂ ಇರುತ್ತವೆ. ಆದರೆ ಅದರಲ್ಲೂ ಅಪಾಯ ಇದೆ. ಕಡೇ ಪಕ್ಷ ಯಾವ ಷೇರು ಖರೀದಿ ಮಾಡಲಿ, ನಿತ್ಯ ಅದರ ಬೆಲೆ ಏನಾಯಿತು ಎಂದು ನೋಡುವ ಗೋಜಿಲ್ಲ.
ಆದ್ದರಿಂದ ಕಡಿಮೆ ರಿಸ್ಕ್ ಒಳಗೊಂಡ ಫಂಡ್ ಆರಿಸಿಕೊಳ್ಳುತ್ತೇನೆ. ಇಟಿಎಫ್ ಗಳಲ್ಲೂ ವ್ಯವಹಾರ ಮಾಡುವುದಿಲ್ಲ. ಇಂಡೆಕ್ಸ್ ಫಂಡ್ ನಲ್ಲಿ ಹಣ ಹೂಡಿದ್ದರೆ ಒಂದೋ ಮೇಲೇರಬೇಕು ಅಥವಾ ಕೆಳಗೆ ಇಳಿಯಬೇಕು. ಅದೃಷ್ಟದ ಮಾತೇನಿಲ್ಲ.
ಹೂಡಿಕೆ ಲಾಭಕ್ಕಲ್ಲ
ಇಂಡೆಕ್ಸ್ ಫಂಡ್ ನಲ್ಲಿ ನಾನು ಹಣ ತೊಡಗಿಸುವುದು ಲಾಭಕ್ಕಲ್ಲ. ಅದರ ಬದಲಿಗೆ ಸಂಪತ್ತು ಬೆಳೆಸುವುದು ನನ್ನ ಉದ್ದೇಶ. ನಾನು ಹೂಡಿಕೆ ಮಾಡುವುದು ನಿವೃತ್ತಿ ಸಮಯಕ್ಕೆ ಬೇಕಾದ ಹಣಕ್ಕಾಗಿ. ಇವತ್ತಿಗಾಗಿ ನಾನು ದುಡಿಯುತ್ತೇನೆ. ಅದನ್ನೇ ನಾನಾ ರೂಪದಲ್ಲಿ ಮಡುತ್ತೇನೆ. ಆನ್ ಲೈನ್ ಕೋರ್ಸ್ ಮಾಡುವವರಿಗೆ ಪಾಠ ಮಾಡುತ್ತೇನೆ. ಜತೆಗೆ ಎರಡು ಕಡೆ ನನಗೆ ಆಸ್ತಿ ಇದೆ. ಆದ್ದರಿಂದ ಹೂಡಿಕೆಯನ್ನು ಎಲ್ಲೆಲ್ಲಿ ಮಾಡಲಿ ಎಂದು ವಿಪರೀತ ತಲೆ ಕೆಡಿಸಿಕೊಳ್ಳುವ ಬದಲು ನಾನಾ ಆದಾಯ ಮೂಲಗಳನ್ನು ಹೇಗೆ ಮಾಡಿಕೊಳ್ಳಲಿ ಎಂದು ಆಲೋಚಿಸುತ್ತೇನೆ. ಆದ್ದರಿಂದ ಒಂದೇ ಕೆಲಸ- ಒಂದೇ ಆದಾಯವನ್ನು ನೆಚ್ಚಿಕೊಳ್ಳುವುದು ಸರಿಯಲ್ಲ ಅನ್ನೋದು ನನ್ನ ಭಾವನೆ. ಎಲ್ಲೆಲ್ಲಿ ಹಣ ಹೂಡಿಕೆ ಮಾಡಬೇಕು ಎಂಬ ನಿರ್ಧಾರವನ್ನು ಹಣಕಾಸಿನ ತಜ್ಞರಿಗೆ ಬಿಟ್ಟು, ಅವರು ಹೇಳುವ ಆಯ್ಕೆಯ ಪೈಕಿ ಕಡಿಮೆ ರಿಸ್ಕ್ ಇರುವುದನ್ನು ನಾನು ಆರಿಸಿಕೊಳ್ಳುತ್ತೇನೆ. ನನ್ನ ಶ್ರಮ, ನನಗೆ ಗೊತ್ತಿರುವ ವಿದ್ಯೆ ಮೂಲಕ ಹೇಗೆ ಆದಾಯ ಹೆಚ್ಚಿಸಿಕೊಳ್ಳಬೇಕು ಅನ್ನೋದನ್ನು ಮಾತ್ರ್ ಯೋಚನೆ ಮಾಡುತ್ತೇನೆ.
ಇದು ನನ್ನ ಬದುಕಿನ ವಿಧಾನ. ಅಂದ ಹಾಗೆ ನನ್ನ ಹೆಸರು ಸಂತೋಷ ಕುಮಾರ ನೆಮ್ಮದಿ.