ಎಲ್ಲದಕ್ಕೂ ಬದಲಾವಣೆಯನ್ನು ಅನ್ವಯಿಸುತ್ತೇವೆ. ಉದಾಹರಣೆಗೆ: ಕಾಲ ಬದಲಾಯಿತು ಕಣ್ರೀ, ಈಗಿನ ಮಕ್ಕಳು ನಮ್ಮ ಹಾಗಲ್ಲ... ಈ ರೀತಿ ವ್ಯವಹಾರ ಕೂಡ ಬದಲಾಗುತ್ತಿದೆ. ವ್ಯವಹಾರದ ಶೈಲಿಯೂ ಬದಲಾಗುತ್ತಿದೆ. ಇನ್ನು ಬದಲಾವಣೆಯೂ ಭಾರೀ ವೇಗವಾಗಿದ್ದು, ಚುರುಕು ಮನಸ್ಸು ಇಂದಿನ ಅಗತ್ಯವಾಗಿದೆ.
ಷೇರು ಪೇಟೆಯಲ್ಲಿ ಅತಿ ಮುಖ್ಯವಾದದ್ದು ಖರೀದಿ ಅಥವಾ ಮಾರಾಟ ಮಾಡುವ 'ಟೈಮಿಂಗ್'. ನಿಮಗೆ ಹೂಡಿಕೆದಾರರ ಮನಸ್ಥಿತಿ ಹೇಳ್ತೀನಿ: ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಿವಿಧ ಸೂಚ್ಯಂಕಗಳು ಇರುವಾಗ, ಅತಿ ಹೆಚ್ಚಿನ ಏರಿಳಿತ ಪ್ರದರ್ಶಿಸುವಾಗಲೇ ವಹಿವಾಟು ಮಾಡುವವರೂ ಲಾಭ ಗಳಿಸಲು ಮುಂದಾಗಿರುವುದು ಅಚ್ಚರಿಯಲ್ಲದೆ ಮತ್ತೇನು?
ಜೆಟ್ ಏರ್ ವೇಸ್ ಕಂಪೆನಿಯ ಷೇರಿನ ಬೆಲೆ ಗುರುವಾರ ದಿನದ ಆರಂಭಿಕ ಸಮಯದಲ್ಲಿ ರು.27ರ ಸಮೀಪಕ್ಕೆ ಕುಸಿದು, ಆ ನಂತರ ರಭಸದ ವೇಗದಲ್ಲಿ ಏರಿಕೆ ಕಂಡು, ದಿನದ ಅಂತಿಮ ಕ್ಷಣಗಳಲ್ಲಿ ರು.77ರಲ್ಲಿ ಇತ್ತು. ಕಂಪೆನಿಯ ಚಟುವಟಿಕೆಯಂತೆ ಷೇರಿನ ಬೆಲೆಯೂ landingನಿಂದ ಆರಂಭವಾಗಿ ಅಂತ್ಯದಲ್ಲಿ ಟೇಕ್ ಆಫ್ ಆಗಿದೆ.
ಇದೇ ರೀತಿ ಶುಕ್ರವಾರವೂ ಆರಂಭದಿಂದ ರು.57ರ ಸಮೀಪದಲ್ಲಿದ್ದು ನಂತರ ರು.39ರ ಸಮೀಪಕ್ಕೆ landing ಮಾಡಿತು. ಅಲ್ಪ ಸಮಯದಲ್ಲೇ ರು.75ರ ಸಮೀಪಕ್ಕೆ ಜಿಗಿದು, ರು.81ರ ಗರಿಷ್ಠಕ್ಕೆ ತಲುಪಿ, ಹಾವು ಏಣಿ ಆಟದಿಂದ ರು.32ರ ಸಮೀಪಕ್ಕೆ ಕೊನೆಗೊಂಡಿತು. ಒಂದೇ ದಿನ ಒಂದು ಅಲ್ಪ ಮೌಲ್ಯದ ಷೇರು ಕನಿಷ್ಠ ಮಟ್ಟದಿಂದ ಮೂರು ಪಟ್ಟು ಹೆಚ್ಚಿರುವುದು ವಿಸ್ಮಯಕಾರಿ ಅಂಶವೇ.
ಸ್ಪೆಕ್ಯುಲೇಷನ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?
ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಕಂಪೆನಿ, ರಿಲಯನ್ಸ್ ಕ್ಯಾಪಿಟಲ್ ಗಳು ಡೆರಿವೇಟಿವ್ ಪೇಟೆಯಲ್ಲಿ ಮಂಗಳವಾರ ಬ್ಯಾನ್ ಆಗಿದ್ದು, ಬುಧವಾರ, ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಬ್ಯಾನ್ ನಿಂದ ಹೊರಬಂದು, ಹೆಚ್ಚಿನ ಸಂಖ್ಯಾ ಗಾತ್ರದ ವಹಿವಾಟು ಪ್ರದರ್ಶಿಸಿತು. ಭಾರೀ ಕುಸಿತದಿಂದ ಚೇತರಿಕೆಯೂ ಕಂಡಿತು. ಅಂದು ಒಂದೇ ದಿನ ರು.48ರ ಸಮೀಪದಿಂದ ರು.37.25ರ ವರೆಗೂ ಕುಸಿದು, ನಂತರ ರು.43ರ ಸಮೀಪಕ್ಕೆ ಚೇತರಿಕೆ ಕಂಡಿದೆ. ನಂತರದ ದಿನದಲ್ಲಿ ಷೇರಿನ ಬೆಲೆ ತೂಗುಯ್ಯಾಲೆಯಲ್ಲಿ ಜೀಕುತ್ತಿದೆ. ಗುರುವಾರದ ದಿನ ಭಾರೀ ಗಾತ್ರದ ವಹಿವಾಟು ಪ್ರದರ್ಶಿಸಿದ್ದಲ್ಲದೆ ಶುಕ್ರವಾರವೂ ಭಾರಿ ಏರಿಳಿತ ಪ್ರದರ್ಶಿಸಿ, ಮತ್ತೊಮ್ಮೆ ಡೆರಿವೇಟಿವ್ ಪೇಟೆಯಲ್ಲಿ ಬ್ಯಾನ್ ಆಗಿತ್ತು. ಇದು ಪೇಟೆಯಲ್ಲಿ ಯಾವ ಮಟ್ಟದ ಸ್ಪೆಕ್ಯುಲೇಷನ್ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ.
'ಬುಲ್' ಕಂಪೆನಿ ಷೇರು 'ಬೇರ್' ಗ್ರಿಪ್ ನಲ್ಲಿ ಬೆತ್ತಲು
ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಸಹ 'ಬೇರ್ ಗ್ರಿಪ್' ಗೆ ಸಿಲುಕಿ, ಬುಧವಾರದಂದು ರು.635ರ ಸಮೀಪದಿಂದ ರು.488ರವರೆಗೂ ಕುಸಿದು ನಂತರ ಅದೇ ದಿನ ರು.575ಕ್ಕೆ ಚೇತರಿಕೆ ಕಂಡಿದೆ. ಒಂದು ತಿಂಗಳಲ್ಲಿ ರು.835ರ ಸಮೀಪದಿಂದ ರು.488ಕ್ಕೆ ಕುಸಿದು, ನಂತರ ರು.612ರಲ್ಲಿ ವಾರಾಂತ್ಯ ಕಂಡಿದೆ. ಇಂತಹ 'ಬುಲ್' ಕಂಪೆನಿ ಷೇರು 'ಬೇರ್' ಗ್ರಿಪ್ ನಲ್ಲಿ ಬೆತ್ತಲಾದಂತಾಯಿತು. ಇನ್ನು ಈ ಕಂಪೆನಿ ಮತ್ತು ಲಕ್ಷ್ಮಿ ವಿಲಾಸ್ ಬ್ಯಾಂಕ್ ಗಳು ವಿಲೀನಗೊಳ್ಳುವ ಯೋಜನೆಗೆ ಕಾಪಿಟಿಶನ್ ಕಮಿಷನ್ ಸಮ್ಮತಿಸಿದೆ ಎಂಬ ಕಾರಣಕ್ಕಾಗಿ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರಿನ ಬೆಲೆ ರು.63.50ರ ಗರಿಷ್ಠ್ ಅವರಣ ಮಿತಿಯನ್ನು ಶುಕ್ರವಾರ ತಲುಪಿತ್ತು. ಸೋಜಿಗವೆಂದರೆ ಗುರುವಾರದಂದು ಈ ಷೇರು ರು.53.90ರ ಕನಿಷ್ಠ ಅವರಣ ಮಿತಿಯಲ್ಲಿತ್ತು.
ಸಾಧನೆ ಆಧಾರಿತ ಕಂಪೆನಿಗಳು ಆಯ್ಕೆ ಮಾಡಿಕೊಳ್ಳಬೇಕು
ಡೆರಿವೇಟಿವ್ ಪೇಟೆಯಲ್ಲಿ ಹೊರಬರುತ್ತಿರುವ ಜೈನ್ ಇರಿಗೇಷನ್ ಸಹ ಹೆಚ್ಚಿನ ಏರಿಳಿತ ಪ್ರದರ್ಶಿಸಿದೆ. ಗುರುವಾರದಂದು ರು.16.30ರ ವಾರ್ಷಿಕ ಕನಿಷ್ಠಕ್ಕೆ ಕುಸಿದು, ನಂತರ ಚೇತರಿಕೆ ಕಂಡಿತು. ಶುಕ್ರವಾರ ರು.26.45ರ ವರೆಗೂ ಏರಿಕೆ ಕಂಡು, ರು.24.85ರಲ್ಲಿ ವಾರಾಂತ್ಯ ಕಂಡಿದೆ. ಅದೇ ರೀತಿ ಸುಜುಲಾನ್ ಎನರ್ಜಿ, ವಿ ಗಾರ್ಡ್, ಪಿ ಸಿ ಜ್ಯೂವೆಲ್ಲರ್ಸ್ ಮುಂತಾದವುಗಳು ಸಹ ಶುಕ್ರವಾರದಂದು ಆಕರ್ಷಕ ಏರಿಕೆ ಕಂಡವು. ಹೀಗೆ ವಿಭಿನ್ನ ಕಾರಣಗಳಿಗೆ ಅಗ್ರಮಾನ್ಯ ಕಂಪೆನಿಗಳಲ್ಲದೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಕಂಪೆನಿಗಳು ಸಹ ಅಲ್ಪ ಕಾಲೀನದಲ್ಲಿ ಲಾಭ ಗಳಿಕೆಗೆ ಅವಕಾಶ ಒದಗಿಸುತ್ತಿವೆ. ಷೇರಿನ ಬೆಲೆಗಳ ಇಳಿಕೆ ಅಥವಾ ಏರಿಕೆಗೆ ಮುಂಚಿತವಾಗಿ ನಿರ್ಧರಿಸುವುದು ಅಸಾಧ್ಯವಾದ್ದರಿಂದ ಸಾಧನೆಯಾಧಾರಿತ ಕಂಪೆನಿಗಳ ಬೆಲೆ ಕುಸಿತದಲ್ಲಿದ್ದಾಗ ಹೂಡಿಕೆಗೆ ಆಯ್ಕೆ ಮಾಡಿಕೊಂಡು, ಮುಂದೆ ಅವಕಾಶಗಳು ಒದಗಿಬಂದಾಗ ಲಾಭದ ನಗದೀಕರಣಗೊಳಿಸಿಕೊಳ್ಳುವುದು ಸೂಕ್ತ.
ಹೂಡಿಕೆದಾರರ ದೃಷ್ಟಿ ಗುರಿ ಇಟ್ಟ ಅರ್ಜುನನ ಬಾಣದಂತಿರಲಿ
ಹೂಡಿಕೆದಾರರ ದೃಷ್ಟಿ ಗುರಿ ಇಟ್ಟ ಅರ್ಜುನನ ಬಾಣದಂತೆ ಕೇವಲ ಲಾಭ ಗಳಿಕೆಯತ್ತ ಮಾತ್ರ ಕೇಂದ್ರೀಕೃತವಾಗಿರಬೇಕು. ಉತ್ತಮ ಕಂಪೆನಿಗಳ ಷೇರಿನ ಬೆಲೆಗಳು ಇಳಿಕೆ ಕಂಡರೂ ಮತ್ತೊಮ್ಮೆ ಪುಟಿದೇಳುವ ಸಾಧ್ಯತೆ ಇರುತ್ತದೆ. ಇದು ಷೇರುಪೇಟೆಯ ಗುಣ. ಹಾಗಾಗಿ ಹೂಡಿಕೆಗೆ ಮುಂಚೆ ಸ್ವಲ್ಪ ಅಧ್ಯಯನದಿಂದ ಅರಿವು ಮೂಡಿಸಿಕೊಂಡಲ್ಲಿ ಚಟುವಟಿಕೆ ಸುಸೂತ್ರ. ತಾಂತ್ರಿಕತೆಯ ಈ ದಿನಗಳಲ್ಲಿ ಅನ್ ಲೈನ್ ಟ್ರೇಡಿಂಗ್ ನಲ್ಲಿ ತೊಡಗಿಸಿಕೊಂಡವರು, ಕೇವಲ ಗಾಳಿಸುದ್ದಿ, ಟಿಪ್ಸ್ ಗಳನ್ನು ಅವಲಂಬಿಸಿ ಚಟುವಟಿಕೆ ನಡೆಸುವುದರಿಂದ ತಮ್ಮ ಬಂಡವಾಳವನ್ನು ಅಪಾಯಕ್ಕೆ ಸಿಲುಕಿಸಿ, ಆ ನಂತರ ಪೇಟೆಯೇ ಸರಿಯಿಲ್ಲ ಎಂದು ದೂರುತ್ತಾರೆ. ಹೂಡಿಕೆ, ಅರಿವಿನಿಂದ ಮಾಡಬೇಕೆ ಹೊರತು, ಅನುಸರಿಸುವುದರಿಂದಲ್ಲ. ಈ ರೀತಿಯ ಸೌಲಭ್ಯಗಳಿರುವ, ಹಣ ಬೇಕೆಂದಾಗ ದಿಢೀರ್ ನಗದೀಕರಿಸಿಕೊಳ್ಳಬಹುದಾದ ಸವಲತ್ತು ಇರುವ ಪೇಟೆಯ ಚಟುವಟಿಕೆ ಬಿಟ್ಟು, ನಮ್ಮ ಹಣವನ್ನು ಹೆಚ್ಚಿನ ಆದಾಯ ಗಳಿಸಬಹುದೆಂಬ ಆಸೆಯಿಂದ ಪೊಂಜಿ ಯೋಜನೆಗಳತ್ತ ಗಮನಹರಿಸುವುದು ಸರಿಯಲ್ಲ.
ವಂಚಕ ಪೊಂಜಿ ಯೋಜನೆಗಳಿಗೆ ಪಿಗ್ಗಿ ಬೀಳದಿರಿ
1982ರಲ್ಲಿ ಎಸ್ ಆರ್ ಅಂಡ್ ಕಂಪನಿ, 2005ರಲ್ಲಿ ವಿನಿವಿಂಕ್, 2015ರಲ್ಲಿ ಅಗ್ರಿಗೋಲ್ಡ್, 2017ರಲ್ಲಿ ವಿಕ್ರಂ ಇನ್ವೆಸ್ಟ್ ಮೆಂಟ್, 2018ರಲ್ಲಿ ಅಂಬಿಡೆಂಟ್, 2019ರಲ್ಲಿ ಐಎಂಎ ಹೀಗೆ ವಿವಿಧ ಕಂಪೆನಿಗಳು ಒಡ್ಡಿದ ಆಮಿಷಕ್ಕೆ ಬಲಿಯಾಗಿ ಹಣವನ್ನು ಕಳೆದುಕೊಂಡವರು ಸಹಸ್ರಾರು ಜನರು. ಸದ್ಯದ ಐಎಂಎ ಹಗರಣದಲ್ಲಿ 40 ಸಾವಿರಕ್ಕೂ ಹೆಚ್ಚಿನ ದೂರುಗಳು ಬಂದಿವೆ ಎಂದರೆ ನಮ್ಮ ಆರ್ಥಿಕ ಸಾಕ್ಷರತಾ ಮಟ್ಟವು ಯಾವ ಹಂತ ತಲುಪಿದೆ ಎಂಬುದರ ಅರಿವಾಗುತ್ತದೆ. ಯಾರೋ ಖ್ಯಾತನಾಮರು ಹೂಡಿಕೆ ಮಾಡಿದ್ದಾರೆ ಎಂಬ ಪ್ರಚಾರದಿಂದ ಮತ್ತಷ್ಟು ಜನರನ್ನು ಹೂಡಿಕೆ ಮಾಡಲು ಪುಸಲಾಯಿಸುವ ಕೃತ್ಯಗಳಿಂದ ದೂರವಿದ್ದರೆ ಒಳಿತು. ಕೆಲವೊಮ್ಮೆ ಹೂಡಿಕೆ ಹಣವನ್ನು ಪಡೆದುಕೊಂಡವರು ಆ ಕಂಪೆನಿಯ ಲಿಮಿಟೆಡ್ ಲಯಬಲಿಟಿ ಪಾರ್ಟ್ ನರ್ ಆಗಿ ಸೇರಿಸಿಕೊಂಡಿರುತ್ತಾರೆ. ಆ ಕಂಪೆನಿ ಹಾನಿಗೊಳಗಾದಾಗ ಹಣ ಹೂಡಿಕೆ ಮಾಡಿದವರಿಗೆ ಕ್ಲೇಮ್ ಮಾಡಲು ಸಾಧ್ಯವಿರುವುದಿಲ್ಲ. ಹೆಚ್ಚಿನವರು ಯಾರೋ ಆಪ್ತರು, ಪರಿಚಿತರು ಹೂಡಿಕೆ ಮಾಡಿದ್ದಾರೆಂದು, ಅವರನ್ನು ಅನುಸರಿಸಿ ಆಪತ್ತಿಗೊಳಗಾಗುವರು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications