ಉದ್ಯೋಗದಲ್ಲಿ ಗೆಲುವಿಗಾಗಿ 6 ಸೂತ್ರಗಳು
ನಾವು ಯಾವುದೇ ಕೆಲಸ ಮಾಡುವಾಗ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಎಂದು ಬಯಸುತ್ತೇವೆ. ಯಶಸ್ಸು ಎಂಬುದು ಪ್ರತಿಯೊಬ್ಬರ ನಿರೀಕ್ಷೆಯಾಗಿದೆ. ಭೇಷ್ ಎಂದು ಕರೆಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಉದ್ಯೋಗಿಯ ನಿರೀಕ್ಷೆಯಾಗಿರುತ್ತದೆ. ಹಾಗಿದ್ದಾರೆ ಕೆಲಸದಲ್ಲಿ ಗೆಲುವಿಗಾಗಿ ಏನನ್ನು ಪಾಲಿಸಿದರೆ ಯಶಸ್ಸು ಸಿಗಲಿದೆ ಎಂಬುದರ ವಿವರಣೆ ಇಲ್ಲಿದೆ.
ಯಶಸ್ಸು ಎಂಬುದು ತಪಸ್ಸಿನ ರೀತಿಯಲ್ಲಿ. ಯಾವುದೇ ಕೈಗೊಂಡ ಕಾರ್ಯದಲ್ಲಿ ಸ್ಪಷ್ಟತೆ ಇರಬೇಕು. ಯಶಸ್ಸು ಗಳಿಸುವ ದಾರಿ ಮನದಲ್ಲೊಂದು ನಿಚ್ಛಳತೆಯೇ ಆಗಿದೆ. ಯಶಸ್ಸಿನ ಬಗ್ಗೆ ಮಾತನಾಡುವ ಮುನ್ನ ಈ ಸೂತ್ರಗಳನ್ನು ಒಮ್ಮೆ ನೋಡಿ.
ಕೆಲಸದಲ್ಲಿ ಆಸಕ್ತಿ ಮುಖ್ಯ
ನೀವು ಕೈಗೊಂಡ ಯಾವುದೇ ಕೆಲಸದಲ್ಲಿ ಆಸಕ್ತಿ ತುಂಬಾ ಮುಖ್ಯವಾಗಿರುತ್ತದೆ. ನಿಮ್ಮ ಆಸಕ್ತಿ ಬೇರೆ ಯಾವುದೋ ಕ್ಷೇತ್ರದಲ್ಲಿದ್ದರೂ, ಕೆಲವೊಮ್ಮೆ ಆಸಕ್ತಿ ಇಲ್ಲದ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಕೆಲಸ ಪೂರ್ಣವಾದರೂ ಆತ್ಮತೃಪ್ತಿ ಇರುವುದಿಲ್ಲ. ಹೀಗಾಗಿ ಆಸಕ್ತಿ ಇರುವ ಕೆಲಸವನ್ನು ಮಾಡುವುದು ಅಥವಾ ಕೊಟ್ಟ ಕೆಲಸವನ್ನು ಆಸಕ್ತಿಯಿಂದ ಮಾಡುವುದು ನಿಮ್ಮ ಮುಂದಿರುವ 2 ಆಯ್ಕೆಯಾಗಿದೆ. ಯಾವುದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಆಸಕ್ತಿ ಮುಖ್ಯವೇ ಹೊರತು ವೈಯಕ್ತಿಕವಾಗಬಾರದು. ನೀವು ಕೈಗೊಂಡ ಕಾರ್ಯ ಯಾವ ರೀತಿಯದ್ದು ಎಂದು ವಿಶ್ಲೇಷಿಸಬೇಕು. ಮಾಡುವ ಕೆಲಸದಲ್ಲಿ ಆಸಕ್ತಿ ಬೇಕೆ ಹೊರತು ಕ್ಷೇತ್ರದಲ್ಲಿ ಅಲ್ಲ.
ಗುರಿ ನಿಖರವಾಗಿರಬೇಕು
ಎಲ್ಲರಿಗೂ ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕು ಎಂಬ ಆಸೆ ಆಗಸದಲ್ಲಿ ತೇಲುತ್ತಿರುತ್ತದೆ. ಹಾಗಂತಾ ಬರೀ ಕನಸು ಕಾಣುತ್ತಾ ಕುಳಿತರೆ ಪ್ರಯೋಜನವಿಲ್ಲ. ನಿಮ್ಮ ಗುರಿ ನಿರ್ದಿಷ್ಟವಾಗಿರಬೇಕು. ಯಾವುದಾದರೂ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬೇಕು. ಹೀಗಾಗಿ ಕೆಲವರು ಗುರಿಯನ್ನು ಯಶಸ್ಸಿಗೆ ಹೋಲಿಸುತ್ತಾರೆ. ಗೆಲ್ಲಲೇಬೇಕೆಂಬ ನಿರೀಕ್ಷೆ ಆಸೆಗಿಂತ ದೊಡ್ಡದು. ತಾವು ಮಾಡುವ ಕಾರ್ಯದಲ್ಲಿ ಈ ರೀತಿಯಾಗಿ ಗೆಲ್ಲಲೇಬೇಕೆಂದು ನಿರೀಕ್ಷೆ ಇಡುತ್ತಾರೋ ಅವರಿಗೆ ಯಶಸ್ಸು ಶತಸಿದ್ಧ.
ಮಾನಸಿಕ ಸಾಮರ್ಥ್ಯ
ಯಾವುದೇ ಕೆಲಸವನ್ನು ಮುಗಿಸಲು, ಯಶಸ್ಸು ಸಾಧಿಸಲು ಸಾಮರ್ಥ್ಯ ಮುಖ್ಯವಾಗಿರುತ್ತದೆ. ಆದರೆ ಅದು ಕೇವಲ ದೈಹಿಕ ಸಾಮರ್ಥ್ಯವಲ್ಲ. ಮಾನಸಿಕ ಸಾಮರ್ಥ್ಯವೂ ಯಶಸ್ಸಿನ ಮೆಟ್ಟಿಲುಗಳಾಗಿ ಪಾತ್ರವಹಿಸುತ್ತದೆ. ಯಾರಲ್ಲಿ ಸ್ವ ಸಾಮರ್ಥ್ಯ ಇರುವುದಿಲ್ಲವೂ ಅವರಲ್ಲಿ ಪರಿಪೂರ್ಣತೆಯ ಲಕ್ಷಣವಿರುವುದಿಲ್ಲ. ಯಾವುದೇ ಕೆಲಸದಲ್ಲಿ ಪರಿಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕೆಲಸದಲ್ಲಿ ತೊಡಗಿಸಿಕೊಳ್ಳುವಾಗ ಸಮರ್ಪಣಾ ಮನೋಭಾವವಿದ್ದರೆ ಯಶಸ್ಸು ಸಾಧ್ಯ.
ಬುದ್ದಿವಂತಿಕೆ ಬಳಸಿಕೊಳ್ಳುವುದು
ಕೆಲಸದಲ್ಲಿ ಯಶಸ್ಸು ಗಳಿಸಲು ಪ್ರಮುಖ ಸಾಧನ ನೀವು ನಿಮ್ಮಲ್ಲಿನ ಬುದ್ದಿವಂತಿಕೆಯನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತೀರಾ ಎಂಬುದಾಗಿದೆ. ಕೆಲವರಲ್ಲಿ ಬುದ್ದಿವಂತಿಕೆ ಇದ್ದರೂ ಸರಿಯಾಗಿ ಬಳಸಿಕೊಳ್ಳುವ ಮನಸ್ಸಿರುವುದಿಲ್ಲ. ಮತ್ತೆ ಕೆಲವರು ಬುದ್ದಿವಂತರಲ್ಲದಿದ್ದರೂ ಮನಸ್ಸನ್ನು ಚೆನ್ನಾಗಿ ಬಳಸಿಕೊಳ್ಳುವುದನ್ನು ಅರಿತಿರುತ್ತಾರೆ. ಹೀಗಾಗಿ ನೀವು ಬುದ್ದಿವಂತಿಕೆಯನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತೀರಾ ಎಂಬುದು ಮುಖ್ಯ.
ಕೆಲಸದಲ್ಲಿ ಗಮನವಹಿಸಿ
ಕೆಲವೊಮ್ಮೆ ನಿಮಗೆ ನಿರೀಕ್ಷೆಗಿಂತ ಹೆಚ್ಚಿನದು ಸಿಗುತ್ತದೆ. ಮತ್ತೆ ಕೆಲವೊಮ್ಮೆ ನಿರೀಕ್ಷೆಗೂ ಕನಿಷ್ಟ ಮಟ್ಟದಲ್ಲಿ ದೊರೆಯದೆ ವಿಫಲವಾಗಬಹುದು. ಆದರೆ ನಿಮ್ಮ ಗಮನದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಬಾರದು. ನಿಮ್ಮ ಉದ್ದೇಶದಲ್ಲಿ ಯಾವಾಗಲೂ ಒಳ್ಳೆಯದೇ ಇರಲಿ. ಸೋಲಿನಿಂದ ಎಂದಿಗೂ ಧೃತಿಗೆಡಬೇಡಿ. ಆತ್ಮವಿಶ್ವಾಸ ಕಳೆದುಕೊಳ್ಳದೆ ನಿಮ್ಮ ಕೆಲಸದತ್ತ ಗಮನವಹಿಸಿ.
ಚಿತ್ತ ಚಾಂಚಲ್ಯರಹಿತವಾಗಿರಬೇಕು
ಯಾವುದೇ ಗುರಿಯನ್ನು ಸಾಧಿಸಲು ಏಕಾಗ್ರತೆ ಬಹಳ ಮುಖ್ಯ. ಮನಸ್ಸು ಚಾಂಚಲ್ಯತೆಯಿದ್ದರೆ ಏನನ್ನು ಸಾಧಿಸಲಾಗುವುದಿಲ್ಲ. ಗುರಿಯ ಹಿಂದೆ ಚಂಚಲತೆಯಿದ್ದರೆ ಕೆಲಸದಲ್ಲಿ ಗೆಲುವು ಸಾಧ್ಯವಿಲ್ಲ.ನಿಮ್ಮ ಚಿತ್ತ ಸಾಮರ್ಥ್ಯವು ಚಾಂಚಲ್ಯರಹಿತವಾಗಿರಬೇಕು. ಕೆಲಸದಲ್ಲಿ ಸಮರ್ಪಣಾ ಮನೋಭಾವವಿದ್ದರೆ ಯಶಸ್ಸು ಸಾಧ್ಯ.