ಬಡ್ಡಿ ಹೆಚ್ಚಾಗಿ, ಬೇಡಿಕೆ ನೆಲ ಕಚ್ಚಿ ಸರ್ಕಾರದ ಸಾಲ ಯೋಜನೆ MSMEಗಳಿಗೆ ಅಗತ್ಯವಿಲ್ಲ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ತಿಂಗಳು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಂಸ್ಥೆಗಳಿಗೆ (ಎಂಎಸ್ ಎಂಇ) ಸಾಲ ಯೋಜನೆ ಘೋಷಿಸಿದ್ದರು. ಅದು 100% ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಆಗಿತ್ತು. ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಎಂಎಸ್ ಎಂಇಗಳಿಗೆ ನೆರವು ನೀಡುವ ಉದ್ದೇಶ ಇತ್ತು.
ಯಾವ ಕಂಪೆನಿಗಳಿಗೆ ಸಾಲ ಮರುಪಾವತಿ ಸರಿಯಾಗಿ ಮಾಡಿದ ಇತಿಹಾಸ ಇದೆಯೋ, ಸಾಲ ನೀಡಬಹುದೋ ಅಂಥವಕ್ಕೆ ಮಾತ್ರ ಹಣಕಾಸು ನೆರವು ದೊರೆಯುತ್ತಿದೆ. ಆದರೆ ನಿಜವಾಗಲೂ ಅಗತ್ಯ ಇರುವ ಎಂಎಸ್ ಎಂಇಗಳಿಗೆ ಬೇಡಿಕೆಯು ಬರುತ್ತಿಲ್ಲ, ಜತೆಗೆ ಹಣಕಾಸಿನ ನೆರವೂ ಸಿಗುತ್ತಿಲ್ಲ.
ಅಧಿಕೃತ ಮಾಹಿತಿ ಪ್ರಕಾರ, ಜೂನ್ 18ನೇ ತಾರೀಕಿನ ತನಕ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು 40,416 ಕೋಟಿ ರುಪಾಯಿ ಸಾಲವನ್ನು ಈ ಯೋಜನೆ ಅಡಿಯಲ್ಲಿ ಮಂಜೂರು ಮಾಡಿವೆ. ಆ ಪೈಕಿ ವಿತರಣೆ ಆಗಿರುವುದು 21,028.55 ಕೋಟಿ. ಈ ವಿಭಾಗದಲ್ಲಿ ಮೊದಲ ಸಲ ಸಾಲ ಪಡೆಯುವವರಿಗೆ ಅವಕಾಶ ಇಲ್ಲ. ಇನ್ನು ಯಾರ ಖಾತೆ ಬ್ಯಾಡ್ ಎಂದೆನಿಸಿರುತ್ತದೋ ಅಂಥದ್ದಕ್ಕೂ ಸಿಗಲ್ಲ. ಒತ್ತಡದಲ್ಲಿ ಇರುವ ಎಂಎಸ್ ಎಂಇಗಳಿಗೆ ಪ್ರತ್ಯೇಕ ಯೋಜನೆ ಇನ್ನೂ ಕಾರ್ಯಾರಂಭ ಮಾಡಬೇಕಿದೆ.
'ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ MSMEಗಳಿಗೆ ಖಾಸಗಿ ಬ್ಯಾಂಕ್ ಗಳು ಸಾಲ ಕೊಡ್ತಿಲ್ಲ'
ಆರ್ ಬಿಐನಿಂದ ರೆಪೋ ದರವನ್ನೇನೋ 4%ಗೆ ಕಡಿತ ಮಾಡಲಾಗಿದೆ. ಆದರೆ ಎಂಎಸ್ ಎಂಇಗಳಿಗೆ ಈಗಲೂ 8ರಿಂದ 14 ಪರ್ಸೆಂಟ್ ಗೆ ಸಾಲ ನೀಡಲಾಗುತ್ತಿದೆ. ಮೊದಲ ಬಾರಿಗೆ ಸಾಲ ಪಡೆಯುವವರಿಗೆ ದೊರೆಯಲ್ಲ. ಜತೆಗೆ ಒತ್ತಡದಲ್ಲಿನ ಸಂಸ್ಥೆಗಳದೂ ಇದೇ ಕಥೆ. ಒಟ್ಟಾರೆ ಈ ಲೆಕ್ಕಾಚಾರದಲ್ಲಿ ಬೇಡಿಕೆ ಕುಸಿದಿದೆ.
ಬಡ್ಡಿ ಜಾಸ್ತಿ ಇದೆ
ಬ್ಯಾಂಕ್ ಗಳು ಸಾಲಕ್ಕೆ ಅಡಮಾನ ಏನೂ ಕೇಳುತ್ತಿಲ್ಲ. ಆದರೆ ಸಾಲ ನೀಡುತ್ತಿರುವುದೇ ಈಗಾಗಲೇ ಬ್ಯಾಂಕ್ ಗಳಿಂದ ಸಾಲ ಪಡೆದವರಿಗೆ. ಅಂಥವರ ಕಾರ್ಖಾನೆಯ ಭೂಮಿ, ಘಟಕ ಹಾಗೂ ಯಂತ್ರಗಳನ್ನು ಈಗಾಗಲೇ ನೀಡಿರುವ ಸಾಲಕ್ಕೆ ಅಡಮಾನ ಮಾಡಿಟ್ಟುಕೊಂಡಿವೆ ಬ್ಯಾಂಕ್ ಗಳು. ಮೂಲಗಳ ಪ್ರಕಾರ, ಸಾಲದ ಮೇಲೆ ಬಡ್ಡಿ ದರ ಏನೂ ಕಡಿಮೆ ಮಾಡಿಲ್ಲ. ಮಾರ್ಕೆಟ್ ನಲ್ಲಿ ಎಷ್ಟಿದೆಯೋ ಅಷ್ಟಕ್ಕೇ ನೀಡಲಾಗುತ್ತಿದೆ. ಕಳೆದ ತಿಂಗಳು ರೆಪೋ ದರ 40 ಬೇಸಿಸ್ ಪಾಯಿಂಟ್ ಇಳಿಸಿ, ದಾಖಲೆಯ 4 ಪರ್ಸೆಂಟ್ ಗೆ ಇಳಿಸಿದೆ. ಆದರೂ ಇದು ಸಾಲಗಾರರಿಗೆ ಲಾಭ ಆಗುತ್ತಿಲ್ಲ. ಸರ್ಕಾರದ ಸಾಲ ಯೋಜನೆ ಅಡಿಯಲ್ಲಿ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ನೀಡುವ ಸಾಲಕ್ಕೆ ಗರಿಷ್ಠ ಬಡ್ಡಿ ದರವನ್ನು ವಾರ್ಷಿಕವಾಗಿ 9.25 ಪರ್ಸೆಂಟ್ ಮಿತಿಗೊಳಿಸಲಾಗಿದೆ. ಎನ್ ಬಿಎಫ್ ಸಿಗಳಿಗೆ 14% ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ 8 ಪರ್ಸೆಂಟ್ ನಿಗದಿ ಮಾಡಲಾಗಿದೆ.
ಬ್ಯಾಂಕ್ ಗಳಿಂದಲೇ ನೇರವಾಗಿ ಪಾವತಿ ಮಾಡಲಾಗುತ್ತದೆ
ಮೂಲಗಳು ಹೇಳುವಂತೆ, ಅಗ್ಗದ ದರದ ಸಾಲ ಅಷ್ಟೇ ಅಲ್ಲ, ವಿದ್ಯುತ್ ಬಿಲ್ ಮನ್ನಾ ಸೇರಿದಂತೆ ಇತರ ಅನುಕೂಲ ಒದಗಿಸಬೇಕು. ಇಲ್ಲದಿದ್ದಲ್ಲಿ ಈಗಿನ ಪರಿಸ್ಥಿತಿಗೆ ಬಹಳ ಮಂದಿ ಉಳಿದುಕೊಳ್ಳಲು ಸಾಧ್ಯವಿಲ್ಲ, ಬಾಗಿಲು ಮುಚ್ಚಬೇಕಾಗುತ್ತದೆ. ಈ ಎಲ್ಲದರ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಲಾಗುತ್ತಿದೆ. ಇನ್ನು ಈಗ ಸಾಲ ಸಿಗುತ್ತಿರುವುದು ಒಮ್ಮೆ ಬ್ಯಾಂಕ್ ಗಳಿಂದ ಸಾಲ ಪಡೆದವರಿಗೇ. ಜತೆಗೆ ಕಾಗದ- ಪತ್ರಗಳ ವ್ಯವಹಾರವೂ ಜಾಸ್ತಿ. ಇಷ್ಟು ಕಾಗದದ ವ್ಯವಹಾರ ಪೂರ್ಣಗೊಳಿಸಲು ಹಲವು ಎಂಎಸ್ ಎಂಇಗಳಿಗೆ ಆಗುತ್ತಲೇ ಇಲ್ಲ. ಸಿಕ್ಕಾಪಟ್ಟೆ ಹೆಚ್ಚಿನ ಬಡ್ಡಿ ದರ, ಹೆಚ್ಚುವ ಸಾಲದಿಂದಾಗಿ ಎನ್ ಪಿಎ ಇಲ್ಲದ ಕಂಪೆನಿಗಳಿಗೆ ಸಹ ಈ ಯೋಜನೆಯಿಂದ ಅಂಥ ಲಾಭವಿಲ್ಲ. ಇನ್ನು ಬ್ಯಾಂಕ್ ಗಳು ಸಾಲ ಪಡೆಯುವವರಿಂದ ಪಿಎಫ್, ಟಿಡಿಎಸ್, ವೇತನ ಪಾವತಿ, ಪೂರೈಕೆದಾರರಿಗೆ ನೀಡಬೇಕಾದ ಮಾಹಿತಿ ಕೇಳಲಾಗುತ್ತದೆ. ಮೊತ್ತವನ್ನು ನೇರವಾಗಿ ಅವುಗಳಿಗೇ ಪಾವತಿ ಮಾಡಲಾಗುತ್ತದೆ. ಸಾಲ ಪಡೆದವರ ಕೈಗೆ ಹಣವೇ ಬರಲ್ಲ ಎಂಬುದು ಮತ್ತೊಂದು ಆಕ್ಷೇಪ.
ಬೇಡಿಕೆ ಬಾರದೆ ಸಾಲ ಪಡೆದು ಏನು ಮಾಡೋದು?
ಆಸ್ತಿ, ಯಂತ್ರೋಪಕರಣ ಅಥವಾ ಇನ್ನೇನಾದರೂ ಇದೆಯಾ ಎಂದು ಬ್ಯಾಂಕ್ ಗಳು ಎಂಎಸ್ ಎಂಇಗಳ ಬಳಿ ಕೇಳುತ್ತವೆ. ಅವೆಲ್ಲ ಇದ್ದಿದ್ದರೆ ಅಡಮಾನ ಮಾಡಿ ಸಾಲ ಅಥವಾ ಓವರ್ ಡ್ರಾಫ್ಟ್ ತೆಗೆದುಕೊಳ್ಳಬಹುದಿತ್ತಲ್ಲಾ ಎಂದು ಇದೇ ಕ್ಷೇತ್ರದಲ್ಲಿ ಇರುವವರು ಪ್ರಶ್ನೆ ಮಾಡುತ್ತಾರೆ. ಎಂಎಸ್ ಎಂಇಗಳ ಒಟ್ಟು ಸಾಲದಲ್ಲಿ ಕಿರು ಸಂಸ್ಥೆಗಳ ಒಟ್ಟು ಸಾಲದ ಪ್ರಮಾಣ 32 ಪರ್ಸೆಂಟ್. ನಿರ್ಮಾಣ, ರಫ್ತು ಆಧಾರಿತ ಎಂಎಸ್ ಎಂಇಗಳು, ಟೆಕ್ಸ್ ಟೈಲ್ಸ್ ಹಾಗೂ ಸೆರಾಮಿಕ್ ವ್ಯವಹಾರ ನಡೆಸುತ್ತಿದ್ದ ಸಂಸ್ಥೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಮಧ್ಯಮ ಹಾಗೂ ಸಣ್ಣ ಸಂಸ್ಥೆಗಳಿಗೆ ಹೊಸದಾಗಿ ಸಾಲ ಬೇಕಾಗಿರುವುದು ಕೂಡ ಕಡಿಮೆ ಆಗಿದೆ. ಏಕೆಂದರೆ ಈಗಲೂ ಬೇಡಿಕೆ ಕುದುರಿಕೊಂಡಿಲ್ಲ. "ನಮಗೆ ಹೆಚ್ಚುವರಿ ವರ್ಕಿಂಗ್ ಕ್ಯಾಪಿಟಲ್ ಬೇಡ. ಏಕೆಂದರೆ ಇನ್ನೂ ಮಾರ್ಕೆಟ್ ನಲ್ಲಿ ಬೇಡಿಕೆ ಕಂಡುಬಂದಿಲ್ಲ. ಹೆಚ್ಚುವರಿ ಸಾಲ ಪಡೆದರೆ ಬಡ್ಡಿ ಬೆಳೆಯುತ್ತದೆ" ಎಂದು ಉದ್ಯಮಿಯೊಬ್ಬರು ಹೇಳುತ್ತಾರೆ.