
ಬಲ್ಲ ಮೂಲಗಳ ಪ್ರಕಾರ, ದೇಶದ ಆರ್ಥಿಕ ಮಟ್ಟವನ್ನು ಏರಿಸುವ ಗುರಿಯನ್ನು ಹೊಂದಿರುವ ನರೇಂದ್ರ ಮೋದಿ ಸರಕಾರ ಇಂಥ ಯಾವುದೇ ಬದಲಾವಣೆಗೆ ಕೈಹಾಕಲಾರದು. ಈ ಬಜೆಟ್ಟಿನಲ್ಲಿ ಅರುಣ್ ಜೇಟ್ಲಿ ಅವರು, ಆದಾಯ ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಅನುಮಾನ ಎಂದು ಸಿಎನ್ಬಿಸಿ ಟಿವಿ 18 ವರದಿ ಮಾಡಿದೆ.
ಆದಾಯ ತೆರಿಗೆ ಕಾಯ್ದೆಯ 80ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿಯನ್ನು 1 ಲಕ್ಷದಿಂದ ಕನಿಷ್ಠ 2 ಲಕ್ಷಕ್ಕೆ ಏರಿಸುತ್ತಾರೆ ಎಂಬ ಸುದ್ದಿ ಕೇಳಿ ವೃತ್ತಿಪರ ನೌಕರರು, ಅದರಲ್ಲೂ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗದವರು ಪುಳಕಿತರಾಗಿದ್ದರು. ಈ ಕಷ್ಟದ ಸಮಯದಲ್ಲಿ ಸ್ವಲ್ಪವಾದರೂ ಹಣ ಉಳಿತಾಯ ಮಾಡಬಹುದಲ್ಲಾ ಎಂದು ಕಾದಿದ್ದ ಜನತೆಗೆ ನಿರಾಶರಾಗುವುದು ಗ್ಯಾರಂಟಿ.
ಒಂದು ಆಶಾದಾಯಕ ಸಂಗತಿಯೆಂದರೆ, ಮನೆ ಸಾಲ ಬಡ್ಡಿ ರಿಯಾಯಿತಿಯ ಮಿತಿಯನ್ನು 1.5 ಲಕ್ಷ ರು.ನಿಂದ 3 ಲಕ್ಷ ರು.ಗೆ ಏರಿಸಬಹುದೆಂಬ ಮಾತು ಕೇಳಿಬಂದಿದೆ. ಮನೆ ಸಾಲದ ಬಡ್ಡಿ ರಿಯಾಯಿತಿ ಏರಿಕೆಯಾಗುತ್ತದೆಂದು ಇನ್ನೂ ಹೆಚ್ಚು ಸಾಲ ಮಾಡಲು ಸಾಧ್ಯವೆ ಎಂದು ಶ್ರೀಸಾಮಾನ್ಯರು ಕೇಳಿದರೂ ಅಚ್ಚರಿಯಿಲ್ಲ. [ಅರುಣ್ ಜೇಟ್ಲಿ ಕೇಂದ್ರ ಬಜೆಟ್ ನಿರೀಕ್ಷೆಗಳೇನು?]
ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆದ ಶ್ರೀಸಾಮಾನ್ಯ ಮೋದಿ ಸರಕಾರದ ಮೇಲೆ ಅಪಾರವಾದ ನಂಬಿಕೆಯಿಟ್ಟಿದ್ದಾನೆ. ಹಣದುಬ್ಬರದಿಂದ ತತ್ತರಿಸಿರುವ ಕೈಗಳಿಗೆ ನರೇಂದ್ರ ಮೋದಿ ಸರಕಾರ ತೆರಿಗೆ ಉಳಿತಾಯದ ಬಳುವಳಿ ನೀಡಬಹುದು ಎಂದು ಕಾದಿದ್ದಾನೆ. ಆದರೆ, ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸರಕಾರ ಸಂಬಳದಾರನಿಗೆ ಈಬಾರಿ ಉಂಬಳಿ (ರಿಯಾಯಿತಿ) ನೀಡುವುದು ಬಲು ಕಷ್ಟ.


Click it and Unblock the Notifications