ಟಾಟಾ ಗ್ರೂಪ್ ಅಧ್ಯಕ್ಷ ಸೈರಸ್ ಮಿಸ್ತ್ರಿ ವಜಾ, ರತನ್ ಟಾಟಾ ಹಂಗಾಮಿ ಅಧ್ಯಕ್ಷ!
ಭಾರತೀಯ ಕಾರ್ಪೊರೇಟ್ ರಂಗದಲ್ಲಿನ ನಾಟಕೀಯ ಬೆಳವಣಿಗೆಯೊಂದರಲ್ಲಿ ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಲಾಗಿದ್ದು, ಹಂಗಾಮಿ ಅಧ್ಯಕ್ಷರನ್ನಾಗಿ ರತನ್ ಟಾಟಾ ಮುಂದುವರೆಯಲಿದ್ದಾರೆ.
ಭಾರತೀಯ ಕಾರ್ಪೊರೇಟ್ ರಂಗದಲ್ಲಿನ ನಾಟಕೀಯ ಬೆಳವಣಿಗೆಯೊಂದರಲ್ಲಿ ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಲಾಗಿದ್ದು, ಹಂಗಾಮಿ ಅಧ್ಯಕ್ಷರನ್ನಾಗಿ ರತನ್ ಟಾಟಾ ಮುಂದುವರೆಯಲಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಸೈರಸ್ ಮಿಸ್ತ್ರಿ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ಹುದ್ದೆಯಿಂದ ಇಳಿಸಿರುವುದು ಕಾರ್ಪೊರೇಟ್ ವಲಯವನ್ನು ಚಕಿತಗೊಳಿಸಿದೆ.
1. 4 ತಿಂಗಳ ಅವಧಿಗೆ ರತನ್ ಟಾಟಾ
ಭಾರತದ ಪ್ರತಿಷ್ಟಿತ ಸಂಸ್ಥೆ ಟಾಟಾ ಗ್ರೂಪ್ ನಲ್ಲಿ ಈಗ ಮಹತ್ತರ ಬದಲಾವಣೆ ಮಾಡಲಾಗಿದ್ದು, 2012 ಡಿಸೆಂಬರ್ 29ರಂದು ಟಾಟಾ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಲಾಗಿದೆ. ಈಗ ಅವರ ಸ್ಥಾನಕ್ಕೆ ಮುಂದಿನ ನಾಲ್ಕು ತಿಂಗಳ ಅವಧಿಗೆ ರತನ್ ಟಾಟಾ ಅವರನ್ನು ಮುಂದುವರೆಸುವಂತೆ ತಿರ್ಮಾನಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಸೈರಸ್ ಮಿಸ್ತ್ರಿ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ಹುದ್ದೆಯಿಂದ ಇಳಿಸಿರುವುದು ಕಾರ್ಪೊರೇಟ್ ವಲಯವನ್ನು ಚಕಿತಗೊಳಿಸಿದೆ.
2. ವಜಾ ಮಾಡಲು ಕಾರಣಗಳೇನು?
ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿರುವುದಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಆದರೆ ಟಾಟಾ ಸಂಸ್ಥೆ ಲಾಭ ಕಾಣದೆ ನಷ್ಟದಲ್ಲಿದ್ದ ಉದ್ದಿಮೆಗಳನ್ನು ನಿಭಾಯಿಸುವಲ್ಲಿ ಮಿಸ್ತ್ರಿ ವಿಫಲರಾಗಿದ್ದರಿಂದ ಟಾಟಾ ಆಡಳಿತ ಮಂಡಳಿಯಲ್ಲಿ ಅಸಮಾಧಾನ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಟಾಟಾ ಗ್ರೂಪ್ ನ ದೇಶಿ ಮತ್ತು ವಿದೇಶಿ ವ್ಯವಹಾರದಲ್ಲಿ ತೀವ್ರತರ ಸವಾಲುಗಳು ಎದುರಾಗಿದ್ದವು. ಸೈರಸ್ ಯೂರೋಪ್ ನಲ್ಲಿ ಸಂಕಷ್ಟದಲ್ಲಿದ್ದ ಉದ್ದಿಮೆಯ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದ್ದರು ಎನ್ನಲಾಗಿದೆ.
3. ಟಾಟಾ ಡೊಕೊಮೊ
ಟಾಟಾ ಗ್ರೂಪ್ ಡೊಕೊಮೊ ಗೆ ಸಂಬಂಧಿಸಿದಂತೆ ಜಪಾನ್ ಮೂಲದ ಡೊಕೊಮೊ ಸಂಸ್ಥೆ ಜತೆ ಕಾನೂನು ಹೋರಾಟದಲ್ಲಿ ನಿರತವಾಗಿತ್ತು. ಇದನ್ನು ನಿಭಾಯಿಸುವಲ್ಲೂ ಮಿಸ್ತ್ರಿ ಅವರು ವಿಫಲರಾಗಿದ್ದರು. ಮಿಸ್ತ್ರಿ ಅವರ ಇಂತಹ ವಿಫಲ ಕಾರ್ಯವೈಖರಿಗಳು ಟಾಟಾ ಸಮೂಹದಲ್ಲಿ ಅಸಮಾಧಾನಕ್ಕೆ ಕಾರಣಗಳಾಗಿದ್ದವು.
4. ಸಂಘರ್ಷ ಸಾಧ್ಯತೆ
ಈ ಬೆಳವಣಿಗೆಗಳು ಟಾಟಾ ಗ್ರೂಪ್ ಹಾಗೂ ಟಾಟಾ ಗ್ರೂಪಿನ ಬಹುದೊಡ್ಡ ಪಾಲುದಾರರಾಗಿರುವ ಶಪೂರ್ಜಿ ಪಲ್ಲೊಂಜಿ ಸಂಸ್ಥೆಗಳ ನಡುವೆ ಸಮರಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಸೈರಸ್ ಮಿಸ್ತ್ರಿ ವಜಾ ಮಾಡಿರುವುದು ಕಾನೂನು ಬಾಹಿರವಾಘಿದ್ದು, ಇದರ ವಿರುದ್ದಾವಿ ನ್ಯಾಯಯುತ ಹೋರಾಟ ಮಾಡಲಾಗುವುದು ಎಂದು ಪಲ್ಲೊಂಜಿ ಸಂಸ್ಥೆ ಹೇಳಿದೆ.
5. ಅಧ್ಯಕ್ಷ ಸ್ಥಾನಕ್ಕೆ ಇಂದ್ರಾ ನೂಯಿ?
ಸೈರಸ್ ಅವರ ವಜಾ ಹಿನ್ನೆಯಲ್ಲಿ ಖಾಲಿಯಾದ ಅಧ್ಯಕ್ಷ ಭರ್ತಿಗೆ ಲೆಕ್ಕಾಚಾರ ನಡೆಯುತ್ತಿದ್ದು, ಆಕಾಂಕ್ಷಿಗಳ ಪಟ್ಟಿಯಲ್ಲಿ ಇಂದ್ರಾ ನೂಯಿ, ಟಿಸಿಎಸ್ ಸಿಇಒ ಎನ್. ಚಂದ್ರಶೇಖರನ್, ವೋಡಾಫೋನ್ ಮಾಜಿ ಸಿಇಒ ಅರುಣ್ ಸರಿನ್ ಒಳಗೊಂಡಂತೆ ಹಲವು ನಾಮಾಂಕಿತರ ಹೆಸರುಗಳು ಚಾಲ್ತಿಯಲ್ಲಿವೆ ಎಂದು ಕೇಳಿ ಬರುತ್ತಿವೆ.
6. ಉತ್ತರಾಧಿಕಾರಿ ಶೋಧನಾ ಸಮಿತಿ
ಸೈರಸ್ ಮಿಸ್ತ್ರಿ ವಜಾದಿಂದ ಖಾಲಿಯಾದ ಸ್ಥಾನಕ್ಕೆ ನಾಲ್ಕು ತಿಂಗಳ ಅವಧಿಯೊಳಗಾಗಿ ಉತ್ತರಾಧಿಕಾರಿಯನ್ನು ಗುರುತಿಸಲು 5 ಮಂದಿ ಸದಸ್ಯರ ಶೋಧನಾ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿಯಲ್ಲಿ ರತನ್ ಟಾಟಾ, ಬೈನ್ ಕ್ಯಾಪಿಟಲ್ನ ಅಮಿತ್ ಚಂದ್ರ, ಮಾಜಿ ರಾಜತಾಂತ್ರಿಕ ರೋನೆನ್ ಸೇನ್, ಟಿವಿಎಸ್ ಗ್ರೂಪ್ ಮುಖ್ಯಸ್ಥ ವೇಣು ಶ್ರೀನಿವಾಸನ್ ಮತ್ತು ಲಾರ್ಡ್ ಕುಮಾರ್ ಭಟ್ಟಾಚಾರ್ಯ ಒಳಗೊಂಡಿದ್ದಾರೆ.
ನಾಲ್ಕು ತಿಂಗಳ ಒಳಗಾಗಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಲು ಶೋಧನಾ ಸಮಿತಿಗೆ ಸೂಚಿಸಲಾಗಿದೆ.
7. ಅಂಕಿ-ಅಂಶ
ಸೈರಸ್ ಮಿಸ್ತ್ರಿ ಅಧಿಕಾರಕ್ಕೆ ಬಂದ ನಂತರ ಹಾಗೂ ಬರುವ ಮುನ್ನ ರತನ್ ಟಾಟಾ ಅವರ ಅವಧಿಯಲ್ಲಿದ್ದ ಸಂಸ್ಥೆಯ ವರಮಾನವನ್ನು ಗಮನಿಸಿದರೆ ಈಗ ತುಂಬಾ ಕಡಿಮೆ ಎನ್ನಲಾಗಿದೆ.
- 2015-16 ರಲ್ಲಿ ಟಾಟಾ ಗ್ರೂಪಿನ ಆದಾಯ ರೂ. 6.91 ಲಕ್ಷ ಕೋಟಿ
- ಮಿಸ್ತ್ರಿ ಅಧಿಕಾರಕ್ಕೆ ಬಂದಾಗ (೨೦೧೧-೧೨) ಟಾಟಾ ಗ್ರೂಪಿನ ಆದಾಯ 6.71 ಲಕ್ಷ ಕೋಟಿ
- ಟಾಟಾ ಗ್ರೂಪ್ ನ ವಾರ್ಷಿಕ ಆದಾಯ ರೂ. 6.70 ಲಕ್ಷ ಕೋಟಿ
- ಶಪೊರ್ಜಿ ಪಲ್ಲೊಂಜಿ ಗ್ಋಪಿನ ಪಾಲುದಾರಿಕರ ಶೇ. 18
- ಟಾಟಾ ಒಡೆತನದ ಟ್ರಸ್ಟ್ ಪಾಲುದಾರಿಕೆ ಶೇ. 66%