ಪಿಎಂ ಕಿಸಾನ್ ಯೋಜನೆ: ರೈತರಿಗೆ ಬಂಪರ್ ಕೊಡುಗೆ, 2ನೇ ಕಂತು ವಿತರಣೆ..
ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ನಲ್ಲಿ ರೈತರಿಗೆ ವಾರ್ಷಿಕ ರೂ. 6,000 ಸಹಾಯಧನ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಘೋಷಣೆ ಮಾಡಿತ್ತು.
ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ನಲ್ಲಿ ರೈತರಿಗೆ ವಾರ್ಷಿಕ ರೂ. 6,000 ಸಹಾಯಧನ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಘೋಷಣೆ ಮಾಡಿತ್ತು. ಮಧ್ಯಂತರ ಬಜೆಟ್ನಲ್ಲಿ 75 ಸಾವಿರ ಕೋಟಿ ಮೊತ್ತವನ್ನು ಪಿಎಂ ಕಿಸಾನ್ ಸಮ್ಮಾನ್ ಯೋಜನೆಗಾಗಿ ಪ್ರಕಟಿಸಲಾಗಿತ್ತು. ಲೋಕಸಭಾ ಚುನಾವಣೆಯ ಮುನ್ನವೇ ರೈತರ ಖಾತೆಗೆ ಹಣ ಸೇರಲಿದೆ!
4.74 ಕೋಟಿ ರೈತರಿಗೆ 2ನೇ ಕಂತಿನ ಫಲ
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯ 2ನೇ ಕಂತನ್ನು ಮುಂದಿನ ತಿಂಗಳು ವಿತರಿಸಲಿದ್ದು, ಏಪ್ರಿಲ್ ತಿಂಗಳಿನಲ್ಲಿ ಸುಮಾರು 4.74 ಕೋಟಿ ಸಣ್ಣ ಮತ್ತು ಮಧ್ಯಮ ರೈತರು ಎರಡನೇ ಕಂತಿನಲ್ಲಿ ತಲಾ ರೂ. 2,000 ಸಹಾಯಧನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?
ಮೊದಲ ಕಂತು ಸ್ವೀಕಾರ
ಪಿಎಂ ಕಿಸಾನ್ ಯೋಜನೆಯ 4.74 ಕೋಟಿ ಫಲಾನುಭವಿ ರೈತರ ಪೈಕಿ 2.74 ಕೋಟಿ ರೈತರು ಈಗಾಗಲೇ ಮೊದಲ ಕಂತನ್ನು ಸ್ವೀಕರಿಸಿದ್ದಾರೆ. ಉಳಿದವರು ಮಾರ್ಚ್ ಅಂತ್ಯದೊಳಗೆ ಸಹಾಯಧನ ಸ್ವೀಕರಿಸಲಿದ್ದು, 2ನೇ ಕಂತನ್ನು ಏಪ್ರಿಲ್ನಲ್ಲಿ ಪಡೆಯಲಿದ್ದಾರೆ.
ವಿತರಣಾ ಪ್ರಕ್ರಿಯೆ
ಮುಂದಿನ ಏಪ್ರಿಲ್ 1ರಿಂದಲೇ ಫಲಾನುಭವಿಗಳಿಗೆ ಕಂತು ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಮಾರ್ಚ್ 10ರಂದು ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದರೆ ಇದಕ್ಕೂ ಮುನ್ನ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿರುವ ಫಲಾನುಭವಿಗಳ ಬ್ಯಾಂಕು ಖಾತೆಗಳಿಗೆ ಎರಡನೇ ಕಂತು ಜಮೆಯಾಗಲಿದೆ.
ಚುನಾವಣಾ ಆಯೋಗ ಅವಕಾಶ
ನೀತಿ ಸಂಹಿತೆ ಜಾರಿಯಾಗಿದ್ದರೂ ಈ ರೈತರಿಗೆ ಮೊದಲ ಮತ್ತು ಎರಡನೇ ಕಂತನ್ನು ಪಾವತಿಸಲು ಕೇಂದ್ರ ಕೃಷಿ ಸಚಿವಾಲಯಕ್ಕೆ ಚುನಾವಣಾ ಆಯೋಗವು ಅವಕಾಶ ಮಾಡಿಕೊಟ್ಟಿದೆ. ಪಿಎಂ ಕಿಸಾನ್ ಯೋಜನೆಗೆ ಫೆಬ್ರವರಿ 24ರಂದು ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿ, 1.01 ಕೋಟಿ ರೈತರಿಗೆ ರೂ. 2,021 ಕೋಟಿ ಮೊತ್ತ ವಿತರಿಸಲಾಗಿತ್ತು.
ಪಿಎಂ ಕಿಸಾನ್ ಯೋಜನೆ ಗುರಿ/ಉದ್ದೇಶ
ದೇಶದ ಸಣ್ಣ ಮತ್ತು ಮಧ್ಯವರ್ಗದ (ಎರಡು ಹೆಕ್ಟೇರ್ವರೆಗೆ ಜಮೀನು ಹೊಂದಿರುವ)12 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಪ್ರಯೋಜನ ತಲುಪಿಸುವ ಗುರಿ ಕೇಂದ್ರ ಸರಕಾರ ಇಟ್ಟುಕೊಂಡಿದೆ. ರೈತರಿಗೆ ಈ ಮೊತ್ತವನ್ನು ಮೂರು ಕಂತುಗಳಲ್ಲಿ ವಾರ್ಷಿಕ ರೂ. 6,000 ಖಾತೆಗೆ ಜಮೆ ಮಾಡಲಾಗುತ್ತದೆ. ಸುಮಾರು 12 ಕೋಟಿ ರೈತರಿಗೆ ತಲಾ ವಾರ್ಷಿಕ ರೂ. 6,000 ನೀಡುವ ಗುರಿ ಇದೆ. ಪ್ರತಿ 4 ತಿಂಗಳಿಗೊಮ್ಮೆ ಮೂರು ಬಾರಿ ರೂ. 2000 ಸಹಾಯ ಧನ ನೀಡಲಾಗುವುದು.
ಕರ್ನಾಟಕದಲ್ಲಿ ನೋಂದಣಿ ಪ್ರಕ್ರಿಯೆ ನಿಧಾನ
ಈಗಾಗಲೇ ಪಂಜಾಬ್ ಮತ್ತು ಹರಿಯಾಣಾದಲ್ಲಿ ಶೇ. 80ರಷ್ಟು ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಮುಗಿದಿದೆ. ಪಶ್ಚಿಮ ಬಂಗಾಳ, ದಿಲ್ಲಿ, ಸಿಕ್ಕಿಂ ರಾಜ್ಯಗಳು ರೈತರ ಪಟ್ಟಿಯನ್ನು ನೀಡಿಲ್ಲ. ಕರ್ನಾಟಕದಲ್ಲೂ ಪಿಎಂ ಕಿಸಾನ್ ನೋಂದಣಿ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದೆ.
ಗುರುತಿನ ದಾಖಲಾತಿ/ಆಧಾರ್ ಕಡ್ಡಾಯ
ಪಿಎಂ ಕಿಸಾನ್ ಯೋಜನೆಯಡಿ ಸಹಾಯ ಧನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಇಲ್ಲದ ರೈತರು ತಾತ್ಕಾಲಿಕವಾಗಿ ಬೇರೆ ಗುರುತಿನ ದಾಖಲೆ ಒದಗಿಸಬೇಕಿದೆ. ಮೊದಲನೇ ಕಂತಿನ ಸಹಾಯ ಧನ ಪಡೆಯಲುವ ಆಧಾರ್ ಇಲ್ಲದ ರೈತರು ಮತದಾರರ ಗುರುತಿನ ಚೀಟಿ, ಡಿಎಲ್ ಇಲ್ಲವೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಿರುವ ಫೋಟೋ ಸಹಿತ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ.
ಆಧಾರ್ ಕಡ್ಡಾಯ:
ರೈತರು 2 ನೇ ಕಂತಿನಿಂದ ಸಹಾಯ ಧನ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಒದಗಿಸಬೇಕೆಂದು ತಿಳಿಸಲಾಗಿದೆ. ರೈತರಿಗೆ ನೀಡಲಾಗುವ ನೇರ ಆದಾಯ ಬೆಂಬಲ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..