ಅಸ್ಸಾಂ ತೈಲ ಬಾವಿಗೆ ಬೆಂಕಿ: ನಷ್ಟ ಆಗಿರುವ ತೈಲ ಹಾಗೂ ಅನಿಲದ ಪ್ರಮಾಣ ಎಷ್ಟು ಗೊತ್ತಾ?
ಗುವಾಹಟಿ: ಅಸ್ಸಾಂನ ಟೆನ್ಸುಕಿಯಾ ಜಿಲ್ಲೆಯ ಬಾಗ್ಬನ್ ತೈಲ ಕ್ಷೇತ್ರದ ಅನಿಲ ಬಾವಿಯಲ್ಲಿ ಸಂಭವಿಸಿರುವ ಬೆಂಕಿ ಅವಘಡದಿಂದ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಬೆಂಕಿ ಅವಘಡದಿಂದ ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ತೈಲ ಮತ್ತು ಅನಿಲ ಉತ್ಪಾದನೆಯನ್ನು ಕಳೆದುಕೊಳ್ಳುತ್ತಲೇ ಸಾಗಿದೆ ಎಂದು ಒಐಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದಲ್ಲಿರುವ ತೈಲ ಕಂಪೆನಿಗಳಿಗೆ ಭಾರತದ ಗಾಳ: ಬಿಪಿಸಿಎಲ್ ಸೇರಿ ಇತರ ಕಂಪೆನಿ ಸೇಲ್
ಇಲ್ಲಿಯವರೆಗೆ, 8,291 ಮೆಟ್ರಿಕ್ ಟನ್ ಕಚ್ಚಾ ತೈಲ ಮತ್ತು ಸುಮಾರು 11 MMSCMD ನೈಸರ್ಗಿಕ ಅನಿಲ ವ್ಯರ್ಥವಾಗಿ ಹೋಗಿದೆ. ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ ಉತ್ಪಾದನೆ ದೃಷ್ಠಿಯಿಂದ ಇದು ಮಹಾ ದುರಂತ ಎಂದು ವರದಿ ಬಣ್ಣಿಸಿದೆ.
ಲಕ್ಷಾಂತರ ಹೆಕ್ಟೆರ್ ಚಹ ತೋಟ ಹಾನಿ
ಅಸ್ಸಾಂನಲ್ಲಿ ತೈಲ ಬಾವಿ ಸ್ಫೋಟದ ನಂತರ ಆ ಪ್ರದೇಶದ ಜನರು ತೈಲ ಕೊರೆಯುವ ಕಾರ್ಚಾಚರಣೆಯನ್ನು ಆ ಪ್ರದೇಶಗಳಲ್ಲಿ ನಿಲ್ಲಿಸುವಂತೆ ನಡೆಸಿದ ಪ್ರತಿಭಟನೆಗಳನ್ನು ಭಾಗಶಃ ಹಿಂತೆಗೆದುಕೊಂಡಿದ್ದರೂ, ಕೆಲ ಕಡೆಗೆ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಎಂದು ಒಐಎಲ್ ಅಧಿಕಾರಿ ತಿಳಿಸಿದ್ದಾರೆ. ಪ್ರತಿಭಟನಾಕಾರರು ದುರಂತಕ್ಕೆ OIL ಅನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಒಐಎಲ್ ಇದುವರೆಗೆ ತಲಾ 30,000 ರೂ ಪರಿಹಾರ ನೀಡಿದೆ. ಲಕ್ಷಾಂತರ ಹೆಕ್ಟೆರ್ ಚಹ ತೋಟ ಹಾನಿಗೊಳಗಾಗಿದೆ.
ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ
ಸಿಂಗಾಪುರ ಮೂಲದ ಎಂ ಎಸ್ ಅಲರ್ಟ್, OIL ಅಗ್ನಿಶಾಮಕ ದಳ, ಎನ್ಡಿಆರ್ಎಫ್, ಯುಎಸ್ಎ ಮತ್ತು ಕೆನಡಾದ ತಜ್ಞರು ಟಿನ್ಸುಕಿಯಾ ಜಿಲ್ಲೆಯಲ್ಲಿ ತೈಲ ಬಾವಿ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ.
ಜುಲೈ 7 ರೊಳಗೆ ಬಾವಿಯನ್ನು ಮುಚ್ಚಲಾಗುವುದು
ಭಾರತೀಯ ಮತ್ತು ವಿದೇಶಿ ತಜ್ಞರ ಸಹಾಯದಿಂದ ರಚಿಸಲಾದ ಯೋಜನೆಯ ಪ್ರಕಾರ ಜುಲೈ 7 ರೊಳಗೆ ಬಾವಿಯನ್ನು ಮುಚ್ಚಲಾಗುವುದು ಎಂದು ಒಐಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನದ ಜೊತೆಗೆ, ಬೆಂಕಿ ಮತ್ತು ಕ್ಯಾಪ್ ಗ್ಯಾಸ್ ಸೋರಿಕೆಯನ್ನು ಹೊರಹಾಕಲು ಒಐಎಲ್ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. COVID-19 ಲಾಕ್ಡೌನ್ ಪರಿಣಾಮವಾಗಿ ರಾಜಮಂಡ್ರಿ ವಡೋದರಾ ಮತ್ತು ಇತರ ಸ್ಥಳಗಳಿಂದ ಬರಬೇಕಾಗಿದ್ದ ವಿವಿಧ ಭಾರೀ ಯಂತ್ರೋಪಕರಣಗಳು ಬಾರದೇ ವಿಳಂಬವಾಗಿದೆ ಎಂದು ಒಐಎಲ್ ಅಧಿಕಾರಿ ತಿಳಿಸಿದ್ದಾರೆ.
ಭಾರಿ ಬೆಂಕಿ ಕಾಣಿಸಿಕೊಂಡಿದೆ
ಮೇ 29 ರಿಂದ ಅಸ್ಸಾಂನ ದಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನವನದ ಬಳಿ ಒಐಎಲ್ನ ಬಾಗ್ಜನ್ ತೈಲ ಬಾವಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ವ್ಯಾಪಿಸುತ್ತಿದ್ದು, ಇದುವರೆಗೆ ಇಬ್ಬರು ಅಗ್ನಿಶಾಮಕ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ.