ಆದಾಯ ತೆರಿಗೆ, ಜಿಎಸ್ಟಿ ಅಪರಾಧ ಕಾನೂನು ಬದಲಾವಣೆ: ಆರ್ಥಿಕ ಚೇತರಿಕೆಗೆ ಸಿಐಐ ನೀಡಿದ ಸಲಹೆಗಳೇನು?
ನವದೆಹಲಿ, ನ. 21: ಜಿಎಸ್ಟಿ ಕಾನೂನನ್ನು ಅಪರಾಧಮುಕ್ತಗೊಳಿಸುವುದು ಮತ್ತು ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಡಿಮೆಗೊಳಿಸುವುದು ಇವೇ ಮುಂತಾದ ಕೆಲ ಸಲಹೆಗಳನ್ನು ಭಾರತೀಯ ಕೈಗಾರಿಕೋದ್ಯಮ ಮಹಾ ಒಕ್ಕೂಟ (ಸಿಐಐ) ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.
ಮುಂದಿನ ವರ್ಷದ ಫೆಬ್ರವರಿಯಲ್ಲಿ ಕೇಂದ್ರೀಯ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಭಾರತೀಯ ಉದ್ಯಮಗಳ ಪ್ರತಿನಿಧಿಯಾಗಿ ಸಿಐಐ ತನ್ನ ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ. ಬಂಡವಾಳ ಲಾಭ ತೆರಿಗೆ ಅಥವಾ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ದರಗಳನ್ನು ಮರುಪರಿಶೀಲಿಸಬೇಕೆಂದೂ ಸಿಐಐ ಬೇಡಿಕೆ ಇಟ್ಟಿದೆ.
ಮರುಬಳಕೆ ವಿದ್ಯುತ್: ಎಲ್ಲಾ ರಾಜ್ಯಗಳಿಗಿಂತ ಕರ್ನಾಟಕ ಮುಂದೆ- ಆರ್ಬಿಐ ವರದಿ
ಐಟಿ ದರಗಳ ಇಳಿಕೆಗೆ ಮನವಿ
"ಸುಧಾರಣಾ ಕ್ರಮಗಳ ಭಾಗವಾಗಿ ಸರ್ಕಾರ ವೈಯಕ್ತಿಕ ಆದಾಯ ತೆರಿಗೆಯ ದರಗಳನ್ನು ಇಳಿಸಬೇಕು. ಇದರಿಂದ ಜನರಿಗೆ ವೆಚ್ಚ ಮಾಡಲು ಹೆಚ್ಚು ಆದಾಯ ಸಿಗುತ್ತದೆ. ಪರಿಣಾಮವಾಗಿ ಬೇಡಿಕೆ ಚಕ್ರಕ್ಕೆ ಜೀವ ಸಿಗುತ್ತದೆ" ಎಂದು ಸಿಐಐ ಅಧ್ಯಕ್ಷ ಸಂಜೀವ್ ಬಜಾಜ್ ನಿನ್ನೆ ಭಾನುವಾರ ಅಭಿಪ್ರಾಯಪಟ್ಟರು.
ಕೆಲ ಆಯ್ದ ಗ್ರಾಹಕ ವಸ್ತುಗಳ ಮೇಲಿನ ಶೇ. 28ರ ಜಿಎಸ್ಟಿ ತೆರಿಗೆ ದರವನ್ನು ಕಡಿಮೆಗೊಳಿಸಿದರೆ ಮತ್ತು ಗ್ರಾಮೀಣ ಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ಗ್ರಾಹಕೀಯ ವೆಚ್ಚಕ್ಕೆ ಪುಷ್ಟಿ ಸಿಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
'ಜಿಎಸ್ಟಿ ಕಾನೂನಿನಲ್ಲಿ ಮಾರ್ಪಾಡು'
ಜಿಎಸ್ಟಿ ಕಾನೂನಿನ ಡೀಕ್ರಿಮಿನಲೈಸ್ ಆಗಬೇಕು. ಅಲ್ಲದೇ, ನಾಗರಿಕ ವ್ಯಾಜ್ಯಗಳಲ್ಲಿ ವ್ಯವಹಾರಗಳಲ್ಲಿ ಕ್ರಿಮಿನಲ್ ಸಂಚು ಇದೆ ಎಂಬುದು ಸ್ಪಷ್ಟವಾಗಿ ನಿರೂಪಿತವಾಗುವವರೆಗೂ ಯಾವ ಬಂಧನ ಆಗಬಾರದು, ಆ ರೀತಿ ಕಾನೂನು ಮಾರ್ಪಡಿಸಬೇಕು ಎಂಬುದು ಸಂಜೀವ್ ಬಜಾಜ್ ಮನವಿ.
ತೆರಿಗೆ ವಂಚನೆ ಪ್ರಕರಣಗಳಲ್ಲಿ ಎಷ್ಟು ಮೊತ್ತದ ತೆರಿಗೆ ವಂಚನೆ ಆಗಿದೆ ಎಂಬುದಕ್ಕಿಂತ ತೆರಿಗೆ ವಂಚಿಸುವ ನೈಜ ಉದ್ದೇಶ ಇದೆಯಾ ಎಂಬುದು ಶಿಕ್ಷೆಯ ಪ್ರಮಾಣಕ್ಕೆ ಮಾನದಂಡವಾಗಬೇಕು ಎಂಬುದು ಅವರ ವಾದ. ಆದರೆ, ವ್ಯವಹಾರಗಳಿಗೆ ತೆರಿಗೆ ನಿಶ್ಚಿತವಾಗಿರಬೇಕು. ಕಾರ್ಪೊರೇಟ್ ತೆರಿಗೆಯ ಈಗಿನ ದರಗಳೇ ಮುಂದುವರಿಯಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
ಖಾಸಗೀಕರಣ ವೇಗವಾಗಿ ಆಗಬೇಕು
ಕೇಂದ್ರ ಸರ್ಕಾರ ನಿಗದಿ ಮಾಡಿಕೊಂಡಿರುವ ಬಂಡವಾಳ ಹಿಂತೆಗೆತದ ಗುರಿಯನ್ನು ಈಡೇರಿಸುವ ಪ್ರಯತ್ನವಾಗಬೇಕು. ಖಾಸಗೀಕರಣದಿಂದ ಹೆಚ್ಚಲು ಸಹಾಯವಾಗುತ್ತದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಕ್ಕೆಂದು ಗುರುತಿಸಿದ ಬಳಿಕ ಅದರ ಹೊಣೆ ಮತ್ತು ಅಧಿಕಾರವನ್ನು ದೀಪಂ (ಡಿಐಪಿಎಎಂ- ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣೆ) ಇಲಾಖೆಗೆ ರವಾನಿಸಬೇಕು. ಇದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆಗೆ ಚುರುಕು ಸಿಗುತ್ತದೆ ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಸಂಘಟನೆಯ ಅಧ್ಯಕ್ಷರು ಹೇಳಿದ್ದಾರೆ.
ಇದೇ ವೇಳೆ, ಕೇಂದ್ರ ಸರ್ಕಾರ ವಿತ್ತೀಯ ಕೊರತೆ ಕಡಿಮೆ ಮಾಡುವತ್ತಲೂ ನಿಗಾ ವಹಿಸಬೇಕು ಎಂಬುದು ಸಂಜೀವ್ ಬಜಾಜ್ ಸಲಹೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿಯ ವಿತ್ತೀಯ ಕೊರತೆ ಶೇ. 6ಕ್ಕೆ ಇಳಿಯುವ ಗುರಿ ಸಾಧಿಸಬೇಕು, ಮತ್ತು 2025-26ರ ವಿತ್ತೀಯ ಕೊರತೆ ಶೇ. 4.5ಕ್ಕೆ ಇಳಿಯುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದು ಯೋಜಿತ ಕ್ರಮಗಳನ್ನು ವ್ಯವಸ್ಥೆ ಮಾಡಿ ಬಜೆಟ್ನಲ್ಲಿ ಪ್ರಕಟಿಸಬೇಕು ಎಂದಿದ್ದಾರೆ.
ರಫ್ತಿಗೆ ಉತ್ತೇಜನ
ಆಮದು ಸುಂಕಗಳ ಮಿತಿಯ ಮಟ್ಟವನ್ನು ಹೆಚ್ಚಿಸಬೇಕು. ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಯನ್ನು ಕಡಿಮೆಗೊಳಿಸುವ ಸರ್ಕಾರದ ಯೋಜನೆಯ ವ್ಯಾಪ್ತಿಗೆ ಎಲ್ಲಾ ರಫ್ತು ಉತ್ಪನ್ನಗಳನ್ನು ತರಬೇಕಕು. ಇದರಿಂದ ರಫ್ತಿಗೆ ಉತ್ತೇಜನ ಸಿಕ್ಕಂತಾಗುತ್ತದೆ ಎಂಬ ಸಲಹೆಯನ್ನೂ ಸಿಐಐ ಕೇಂದ್ರಕ್ಕೆ ನೀಡಿದೆ.
"ಆರ್ಥಿಕತೆಗೆ ಬಲ ತುಂಬಲು ಸಾರ್ವಜನಿಕ ಹೂಡಿಕೆ ಮಾತ್ರದಿಂದಲೇ ಸಾಧ್ಯವಾಗದು, ಖಾಸಗಿ ವಲಯದ ಹೂಡಿಕೆಯೂ ಅಗತ್ಯ ಬೀಳುತ್ತದೆ. ಪಿಪಿಪಿ ಯೋಜನೆಗಳಲ್ಲಿ ಸರಿಯಾದ ಸಮಯಕ್ಕೆ ಪಾವತಿ ಮಾಡುವುದು, ತ್ವರಿತವಾಗಿ ವ್ಯಾಜ್ಯ ಬಗೆಹರಿಸುವುದು, ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವುದು ಇವೇ ಮುಂತಾದ ಕ್ರಮಗಳಿಂದ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಜೀವಂತವಾಗಿಡಬಹುದು" ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ನ ಅಧ್ಯಕ್ಷ ಸಂಜೀವ್ ಬಜಾಜ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಫೆಬ್ರವರಿ 1ರಂದು ಸೆಂಟ್ರಲ್ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಇದು ಮೋದಿ 2.0 ಸರ್ಕಾರದ ಕೊನೆಯ ಬಜೆಟ್ ಆಗಿರಲಿದೆ. 2024ರಲ್ಲಿ ಸಾರ್ವತ್ರಿಕ ಚುನಾವಣೆ ಇರುವುದರಿಂದ ಆ ವರ್ಷ ಸಂಸತ್ನಲ್ಲಿ ಬಜೆಟ್ ಬದಲು ವೋಟ್ ಆಫ್ ಅಕೌಂಟ್ನ ಮಂಡನೆ ಅಗಲಿದೆ. ಸದ್ಯ ಜಾಗತಿಕ ಆರ್ಥಿಕ ಹಿಂಜರಿತದ ಸ್ಥಿತಿ ಇರುವುದರಿಂದ ಮುಂದಿನ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಭಾರತದಲ್ಲಿ ಹಿಂಜರಿತದ ಸ್ಥಿತಿ ಧಾವಿಸದಂತೆ ಬಜೆಟ್ನಲ್ಲಿ ಕೆಲ ಬಿಗಿ ಆರ್ಥಿಕ ಕ್ರಮಗಳನ್ನು ಪ್ರಟಿಸುವ ಸಾರ್ಧಯತೆ ಇದೆ.