ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರದ ಒಪ್ಪಿಗೆ
ನವದೆಹಲಿ, ಜೂನ್ 24: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ವ್ಯಾಪ್ತಿಗೆ ಸಹಕಾರಿ ಬ್ಯಾಂಕುಗಳನ್ನು ತರುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬುಧವಾರ ಸುಗ್ರಿವಾಜ್ಞೆ ಮೂಲಕ ಒಪ್ಪಿಗೆ ನೀಡಿದೆ.
ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ಮೇಲ್ವಿಚಾರಣೆಗೆ ಒಳಪಡಿಸುವ ಸರ್ಕಾರದ ಉದ್ದೇಶವನ್ನು ಘೋಷಿಸಿದ್ದರು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಇದನ್ನು ಮಾಡಲಾಗುವುದು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಬುಧವಾರ ಸುಗ್ರೀವಾಜ್ಞೆ ಹೊರಡಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
NIPFP ಅಧ್ಯಕ್ಷರಾಗಿ ನೇಮಕಗೊಂಡ ಆರ್ಬಿಐ ಮಾಜಿ ಗವರ್ನರ್ ಊರ್ಜಿತ್ ಪಟೇಲ್
ಈ ಬ್ಯಾಂಕುಗಳನ್ನು ಆರ್ಬಿಐ ನಿಗದಿತ ಬ್ಯಾಂಕುಗಳ ಮಾದರಿಯಲ್ಲಿಯೇ ಮೇಲ್ವಿಚಾರಣೆ ಮಾಡುತ್ತದೆ. ಠೇವಣಿದಾರರಿಗೆ ರಕ್ಷಣೆ ನೀಡುತ್ತದೆ ಮತ್ತು ದುರುಪಯೋಗಕ್ಕೆ ಜಾಗವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
1,540 ಸಹಕಾರಿ ಬ್ಯಾಂಕು
ಈ ಮೂಲಕ ಎಲ್ಲಾ ನಗರ ಸಹಕಾರಿ ಮತ್ತು ಮಲ್ಟಿಸ್ಟೇಟ್ ಸಹಕಾರಿ ಬ್ಯಾಂಕುಗಳನ್ನು ಭಾರತದ ರಿಸರ್ವ್ ಬ್ಯಾಂಕ್ ಮೇಲ್ವಿಚಾರಣೆಯಲ್ಲಿ ತರಲಾಗುತ್ತಿದೆ. ದೇಶಾದ್ಯಂತ 1,540 ಸಹಕಾರಿ ಬ್ಯಾಂಕುಗಳ 8 ಕೋಟಿಗೂ ಹೆಚ್ಚು ಖಾತೆದಾರರಿಂದ 5 ಲಕ್ಷ ಕೋಟಿ ರೂ ಇನ್ಮುಂದೆ ಆರ್ಬಿಐ ವ್ಯಾಪ್ತಿಗೆ ಬರುತ್ತದೆ. ಈ ಕ್ರಮವು ಠೇವಣಿದಾರರಿಗೆ ಈ ಬ್ಯಾಂಕುಗಳಲ್ಲಿ ತಮ್ಮ ಉಳಿತಾಯ ಸುರಕ್ಷಿತವಾಗಿದೆ ಎಂಬ ಭರವಸೆ ನೀಡುತ್ತದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಸಿಇಒಗಳ ನೇಮಕಕ್ಕೆ ಆರ್ಬಿಐನಿಂದ ಪೂರ್ವಾನುಮತಿ
ಹೊಸ ಕಾನೂನಿನ ಪ್ರಕಾರ ಇನ್ಮುಂದೆ ಸಹಕಾರಿ ಬ್ಯಾಂಕುಗಳಲ್ಲಿ ಸಿಇಒಗಳ ನೇಮಕಕ್ಕೆ ಬ್ಯಾಂಕಿಂಗ್ ನಿಯಂತ್ರಕ ಪ್ರಾಧಿಕಾರ ಹಾಗೂ ಆರ್ಬಿಐನಿಂದ ಪೂರ್ವಾನುಮತಿ ಬೇಕಾಗುತ್ತದೆ ಎಂದು ಸುಗ್ರಿವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ.
ಬ್ಯಾಂಕುಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ
ಸಾರ್ವಜನಿಕ ಹಣವನ್ನು ಹೊಂದಿರುವ ಈ ಬ್ಯಾಂಕುಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ. ದುರುಪಯೋಗ ಮತ್ತು ಭ್ರಷ್ಟಾಚಾರದ ಸುತ್ತಲಿನ ವಿವಾದಗಳಲ್ಲಿ ಹೆಚ್ಚಾಗಿ ಸಿಲುಕಿರುವ ಸಹಕಾರಿ ವಲಯದ ಬ್ಯಾಂಕುಗಳಿಗೆ ಕಾಯಕಲ್ಪ ನೀಡಲು ಆರ್ಬಿಐ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹಣಕಾಸು ವ್ಯವಸ್ಥೆಯ ಸ್ಥಿರತೆ
ವ್ಯಾಪಕ ಭ್ರಷ್ಟಾಚಾರ, ಸಾಲಗಳ ದುರುಪಯೋಗ ಇತ್ಯಾದಿಗಳ ಮೂಲಕ ಬ್ಯಾಂಕುಗಳಲ್ಲಿ ವಂಚನೆ ನಡೆಯುತ್ತಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಹೇಳಿದೆ. ಆರ್ಬಿಐ ವ್ಯಾಪ್ತಿಗೆ ತರುತ್ತಿರುವುದರ ಪರಿಣಾಮವಾಗಿ ಠೇವಣಿಗಳ ನಂಬಿಕೆ ಮತ್ತು ದೇಶದ ಹಣಕಾಸು ವ್ಯವಸ್ಥೆಯ ಸ್ಥಿರತೆ ಕಂಡುಬರುತ್ತದೆ ಎನ್ನಲಾಗಿದೆ.