ನವದೆಹಲಿ, ಜೂನ್ 6: ಕೋವಿಡ್ 19 ನಂತರ ದೇಶದಲ್ಲಿ ಸಂಭವಿಸಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ 2.0 ಅಲ್ಲ, ರಾಕ್ಷಸ ವರ್ಷನ್ 2.0 ಎಂದು ಕಟುವಾಗಿ ಟೀಕಿಸಿದ್ದಾರೆ.
ಬಡವರಿಗೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್ಎಂಇ) ನಗದು ಬೆಂಬಲ ನೀಡಲು ನಿರಾಕರಿಸುವ ಮೂಲಕ ಮೋದಿ ಅವರು ಆರ್ಥಿಕತೆಯನ್ನು ನಾಶಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
11 ಕೋಟಿ ಭಾರತೀಯರು ನಿರುದ್ಯೋಗದಲ್ಲಿದ್ದಾರೆ
ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿ ಪ್ರಸ್ತುತ ಪರಿಸ್ಥಿತಿಯ ಕುರಿತು ಸುದ್ದಿ ಲೇಖನವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಸುಮಾರು 11 ಕೋಟಿ ಭಾರತೀಯರು ಎಂಎಸ್ಎಂಇಗಳ ಉದ್ಯೋಗದಲ್ಲಿದ್ದಾರೆ. ಅವರಲ್ಲಿ 1/3 ಮಂದಿ ಶಾಶ್ವತವಾಗಿ ನಿರುದ್ಯೋಗದ ಸನ್ನಿವೇಶಕ್ಕೆ ಸಿಲುಕಿದ್ದಾರೆ. ಅವರಿಗೆ ನಗದು ಹಣದ ಬೆಂಬಲ ನೀಡದಿರುವುದು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಎಂದು ಹರಿಹಾಯ್ದಿದ್ದಾರೆ.
ಮೋದಿ ಸೋತಿದ್ದಾರೆ
ಈ ತಿಂಗಳ ಆರಂಭದಲ್ಲಿ, ರಾಹುಲ್ ಗಾಂಧಿ, ದೇಶದ ಎಂಎಸ್ಎಂಇಗಳ ಅನಿಶ್ಚಿತ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರ., ಕೋವಿಡ್ ನಿಂದ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಲ್ಲಿ ಮೋದಿ ಸೋತಿದ್ದಾರೆ ಎಂದು ಆರೋಪಿಸಿದ್ದಾರೆ.
ಲಾಕ್ಡೌನ್ ಉದ್ದೇಶ ಸಂಪೂರ್ಣ ವಿಫಲವಾಗಿದೆ
ರಾಷ್ಟ್ರವ್ಯಾಪಿ ಲಾಕ್ಡೌನ್ ಉದ್ದೇಶ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿರುವ ರಾಹುಲ್ ಗಾಂಧಿ, ದೇಶದ ಜನತೆಗೆ ಮೋದಿ ಸರ್ಕಾರದ ಎರಡನೇ ಅವಧಿ ರಾಕ್ಷಸ ಸ್ವರೂಪಿಯಾಗಿ ಮಾರ್ಪಟ್ಟಿದೆ ಎಂದು ತೀಕ್ಷ್ಣವಾಗಿ ಆರೋಪಿಸಿದ್ದಾರೆ.
ಸೀಮಿತ ತಿಳಿವಳಿಕೆ ಇದೆ
ರಾಹುಲ್ ಗಾಂಧಿ ಡಿಮೊನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಆರ್ಥಿಕತೆ ಬಗ್ಗೆ ಕಾಂಗ್ರೆಸ್ ನಾಯಕನಿಗೆ ಸೀಮಿತ ತಿಳಿವಳಿಕೆ ಇದೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ಬೇಕಾದರೆ ಒಂದಿಷ್ಟು ದಿನ ಕುಳಿತು ಅಭ್ಯಾಸ ಮಾಡಲಿ ಎಂದು ಎದಿರೇಟು ಕೊಟ್ಟಿದ್ದಾರೆ.


Click it and Unblock the Notifications