ಪಿಎಂಸಿ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 29ಕ್ಕೆ ಪ್ರಶ್ನೆ ಮಾಡುವ ಉದ್ದೇಶದಿಂದ ಶಿವಸೇನಾ ಸಂಸದ ಸಂಜಯ್ ರಾವತ್ ರ ಪತ್ನಿ ವರ್ಷಾ ಅವರಿಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ ಮಾಡಲಾಗಿದೆ. ವರ್ಷಾ ರಾವತ್ ಅವರನ್ನು ಮುಂಬೈನಲ್ಲಿ ಇ.ಡಿ. ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.
ಈ ಹಿಂದಿನ ಎರಡು ಸಮನ್ಸ್ ಗಳಿಗೆ ಆರೋಗ್ಯದ ಕಾರಣ ನೀಡಿ, ವರ್ಷಾ ವಿಚಾರಣೆಗೆ ಹಾಜರಾಗಿರಲಿಲ್ಲ. ಇದು ಮೂರನೇ ಸಮನ್ಸ್ ಆಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಶ್ನೆ ಮಾಡುವುದಕ್ಕಾಗಿ ಈ ಸಮನ್ಸ್ ನೀಡಲಾಗಿದೆ.
ಬ್ಯಾಂಕ್ ನಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಲಾದ ಹಣವನ್ನು "ಸ್ವೀಕರಿಸಿದ್ದಾರೆ" ಎಂಬ ಕುರಿತು ಜಾರಿ ನಿರ್ದೇಶನಾಲಯದಿಂದ ವರ್ಷಾ ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎಂದು ಅಧಿಕೃತ ಮಾಹಿತಿ ಮೂಲಗಳು ತಿಳಿಸಿವೆ.

ಹೌಸಿಂಗ್ ಡೆವಲಪ್ ಮೆಂಟ್ ಇನ್ ಫ್ರಾಸ್ಟ್ರಕ್ಚರ್ ಲಿ. (ಎಚ್ ಡಿಐಎಲ್) ಪ್ರವರ್ತಕರಿಗೆ, ಅವರ ಮಗ ಮತ್ತು ಮಾಜಿ ಅಧ್ಯಕ್ಷ ಹಾಗೂ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ (ಪಿಎಂಸಿ) ಬ್ಯಾಂಕ್ ನಿಂದ ಸಾಲ ನೀಡಿದ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಕಳೆದ ಅಕ್ಟೋಬರ್ ನಲ್ಲಿ ಪಿಎಂಎಲ್ ಎ ಅಡಿಯಲ್ಲಿ ಇ.ಡಿ. ದೂರು ದಾಖಲಿಸಿತ್ತು.
4335 ಕೋಟಿ ರುಪಾಯಿಯಷ್ಟು ಹಣವನ್ನು ತಪ್ಪಾಂದ ದಾರಿಯಲ್ಲಿ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಮುಂಬೈ ಪೊಲೀಸ್ ಆರ್ಥಿಕ ಅಪರಾಧ ವಿಭಾಗದಿಂದ ಇ.ಡಿ. ಪ್ರಕರಣ ಕೈಗೆತ್ತಿಕೊಂಡಿತ್ತು.
ಈಗ ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟದ ಸರ್ಕಾರ ಇದ್ದು, ಕೇಂದ್ರ ಸರ್ಕಾರವು ತಮ್ಮ ಪಕ್ಷವನ್ನು ಗುರಿ ಮಾಡಿಕೊಂಡಿದೆ ಎಂದು ಆರೋಪ ಮಾಡಲಾಗಿತ್ತು.


Click it and Unblock the Notifications