ವಾಸುದೇವ್ ಮಯ್ಯ ಆತ್ಮಹತ್ಯೆ ಪ್ರಕರಣ; ಮಗಳಿಂದ 11 ಜನರ ಮೇಲೆ ದೂರು
ಬೆಂಗಳೂರು, ಜುಲೈ 9: ಹಣಕಾಸು ಅವ್ಯವಹಾರ ಕೇಳಿ ಬಂದಿರುವ ಬೆಂಗಳೂರಿನ ಬಸವನಗುಡಿಯ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯ (73) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಾಸುದೇವ್ ಮಯ್ಯ ಅವರ ಪುತ್ರಿ ರಶ್ಮಿ ಎನ್ನುವರು ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಸಾಲ ಪಡೆದರುವ ನನ್ನ ತಂದೆಗೆ ವಿಪರೀತ ಕಿರುಕುಳ ನೀಡುತ್ತಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗುರು ರಾಘವೇಂದ್ರ ಬ್ಯಾಂಕ್: ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದ ವಾಸುದೇವ ಮಯ್ಯ
ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನ ಪ್ರಸ್ತುತ ಸಿಇಓ ಸಂತೋಷ್ ಕುಮಾರ್, ರವಿ ಐತಾಳ, ರಾಕೇಶ್, ಶ್ರೀಪಾದ್ ಹೆಗಡೆ, ಪ್ರಶಾಂತ್ ಹಾಗೂ ಬ್ಯಾಂಕಿನ ಇತರ ಆರು ಜನರ ವಿರುದ್ಧ ದೂರು ದಾಖಲಾಗಿದೆ.
ಡೆತ್ ನೋಟ್ ಪರಿಗಣಿಸಿ
'ನಮ್ಮ ತಂದೆಯವರಿಗೆ ಬ್ಯಾಂಕಿನ ವಹಿವಾಟಿನ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. ಅವರು ತಮ್ಮ ಕಂಪ್ಯೂಟರ್ ಪಾಸ್ವರ್ಡ್ ನ್ನು ತಮ್ಮ ಸಹೋದ್ಯೋಗಿಗಳಿಗೆ ನೀಡಿದ್ದರು. ನಮ್ಮ ತಂದೆ ಮಾಡದ ತಪ್ಪಿಗೆ ಅವರನ್ನು ಹೊಣೆ ಮಾಡಲಾಗಿದೆ. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಡೆತ್ ನೋಟ್ ಪರಿಗಣಿಸಿ ಹನ್ನೊಂದು ಜನ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ರಶ್ಮಿ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಜುಲೈ 6 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಹುಕೋಟಿ ಹಗರಣಕ್ಕೆ ಕಾರಣವಾಗಿದ್ದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯ ಜುಲೈ 6 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೂರ್ಣಪ್ರಜ್ಞಾ ಲೇಔಟ್ ನಲ್ಲಿ ಇರುವ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್ ನಲ್ಲಿ 1800 ಕೋಟಿ ರುಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಹಗರಣದಲ್ಲಿ ವಾಸುದೇವ ಮಯ್ಯ ಪ್ರಮುಖ ಆರೋಪಿ ಕೂಡ ಆಗಿದ್ದರು. ಕಳೆದ ತಿಂಗಳು ಮಯ್ಯ ಅವರ ಮನೆ ಮೇಲೆ ಎಸಿಬಿ ದಾಳಿ ಕೂಡ ನಡೆದಿತ್ತು. ಈಚೆಗೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್
ಆತ್ಮಹತ್ಯೆಗೂ ಮುನ್ನ ಮಯ್ಯ ಅವರು ಡೆತ್ ನೋಟ್ ಬರೆದಿಟ್ಟಿದ್ದರು ಎನ್ನಲಾಗಿದ್ದು, ಅದು ಬಹಿರಂಗಗೊಂಡಿದೆ. ಆರು ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಎಂಟು ಜನರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಬ್ಯಾಂಕಿನ ಅವ್ಯವಹಾರವನ್ನು ಪ್ರಸ್ತಾಪಿಸಿರುವ ಮಯ್ಯ ಅವರು ಬ್ಯಾಂಕಿನ ಅವ್ಯವಹಾರಕ್ಕೆ ನಾನೊಬ್ಬನೇ ಕಾರಣನಲ್ಲ, ಬೇರೆಯವರ ಪಾತ್ರವೂ ಇದೆ. ಅಪವಾದ ಮಾತ್ರ ನನ್ನ ಮೇಲೆ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಪೊಲೀಸರು ಆ ಜನರ ಹೆಸರನ್ನು ತನಿಖಾ ದೃಷ್ಠಿಯಿಂದ ಬಯಲು ಮಾಡಿಲ್ಲ ಎನ್ನಲಾಗಿದೆ.
'ನನ್ನ ಹೆಸರ ಮೇಲೆ ಯಾರೋ ಮಜಾ ಮಾಡಿದರು'
'ನಾನು ಯಾವುದೇ ಆಸ್ತಿ ಸಂಪಾದನೆ ಮಾಡಲಿಲ್ಲ, ಬದಲಿಗೆ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಅನೇಕರು ನನ್ನಿಂದ ಸಹಾಯ ಪಡೆದು ನನಗೆ ಮೋಸ ಮಾಡಿದರು. ನನ್ನ ಹೆಸರ ಮೇಲೆ ಯಾರೋ ಮಜಾ ಮಾಡಿದರು. ವ್ಯವಹಾರದಲ್ಲಿ ನಾನು ಮಾತ್ರ ಬಲಿಪಶುವಾಗಿರುವುದು' ಎಂದು ಮಯ್ಯ ಡೆತ್ ನೋಟ್ನಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.