ದಿನದಿಂದ ದಿನಕ್ಕೆ ಸೈಬರ್ ವಂಚಕರು ತಾವು ಹಣ ಎಗರಿಸುವ ತಂತ್ರವನ್ನು ಬದಲಾವಣೆ ಮಾಡುತ್ತಾ ಸಾಗುತ್ತಿದ್ದಾರೆ. ಹೊಸ ಹೊಸ ಮಾರ್ಗದ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಈಗ ಬಿಎಂಟಿಸಿ ಅಧಿಕಾರಿಗಳನ್ನೇ ಮಂಗಮಾಡಿ ಹಣ ಪಡೆಯಲು ಮುಂದಾಗಿದ್ದಾರೆ.
ಹೌದು, ಸೈಬರ್ ವಂಚಕರು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಹೆಸರಿನಲ್ಲಿ ಬಿಎಂಟಿಸಿ ಮುಖ್ಯ ಲೆಕ್ಕಪತ್ರ ಅಧಿಕಾರಿಯ ಅಧಿಕೃತ ಇಮೇಲ್ ಐಡಿಗೆ ಇಮೇಲ್ ಕಳುಹಿಸಿದ್ದಾರೆ. ಆರ್ಟಿಜಿಎಸ್ ಮೂಲಕ 9.7 ಲಕ್ಷ ರೂಪಾಯಿಗಳನ್ನು ತುರ್ತು ಪಾವತಿ ಮಾಡುವಂತೆ ಇಮೇಲ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಖಾತೆ ಅಧಿಕಾರಿ-ಆರ್ಥಿಕ ಸಲಹೆಗಾರ (ಸಿಎಒ-ಎಫ್ಎ) 47 ವರ್ಷದ ಅಬ್ದುಲ್ ಖುದ್ದೂಸ್ ಬಿ ಗೆ ಈ ಇಮೇಲ್ ಬಂದಿದೆ. ಸೆಂಟ್ರಲ್ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಅಬ್ದುಲ್ ಖುದ್ದೂಸ್ ಬಿ ದೂರು ದಾಖಲಿಸಿದ್ದಾರೆ.
ಅವರ ದೂರಿನ ಪ್ರಕಾರ, ಶನಿವಾರ ಸಂಜೆ 4.13 ಕ್ಕೆ, ಅವರ ಅಧಿಕೃತ ಇಮೇಲ್ ಐಡಿ - [email protected] ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಹೆಸರಿನಲ್ಲಿ ಇಮೇಲ್ ಐಡಿ [email protected] ನಿಂದ ಇಮೇಲ್ ಕಳುಹಿಸಲಾಗಿದೆ. ಇಮೇಲ್ ಒಂದು ಸಾಲನ್ನು ಮಾತ್ರ ಹೊಂದಿದೆ. "ತುರ್ತು ಆರ್ಟಿಜಿಎಸ್ ಪಾವತಿ ಮೂಲಕ 9.7 ಲಕ್ಷ ರೂಪಾಯಿ ಕಳುಹಿಸಿ" ಎಂದು ಉಲ್ಲೇಖಿಸಲಾಗಿದೆ.
ಇಮೇಲ್ ನಕಲಿ ಎಂದು ತಿಳಿದಾಗ, ಅದರ ಬಗ್ಗೆ ತನ್ನ ವರಿಷ್ಠರಿಗೆ ತಿಳಿಸಿದ್ದೇನೆ ಎಂದು ಅಬ್ದುಲ್ ಪೊಲೀಸರಿಗೆ ತಿಳಿಸಿದ್ದಾರೆ. ಈ ವಿಷಯವನ್ನು ರೆಡ್ಡಿ ಅವರ ಗಮನಕ್ಕೆ ತಂದು ಸಂಜೆ ನಂತರ ದೂರು ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಟು ದಿನ ಡಿಜಿಟಲ್ ಬಂಧನ ಪ್ರಕರಣ
ಬೆಂಗಳೂರಿನ ಮಹಿಳೆಯೊಬ್ಬರನ್ನು ವಂಚಕರು ಬರೋಬ್ಬರಿ ಎಂಟು ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿರಿಸಿದ್ದಾರೆ. ಅದು ಕೂಡ ಪತ್ರಕರ್ತೆಯೊಬ್ಬರನ್ನು. 70 ವರ್ಷ ವಯಸ್ಸಿನ ಹಿರಿಯ ಪತ್ರಕರ್ತೆಯೊಬ್ಬರನ್ನು ಎಂಟು ದಿನಗಳ ಕಾಲ ತನ್ನ ಮನೆಯಲ್ಲಿ ತಮ್ಮನ್ನು ತಾವು ಬಂಧಿಸಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಮಹಿಳೆಯು ಮುಂಬೈ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಳ್ಳುವ ಫೆಡ್ಎಕ್ಸ್ ಸೈಬರ್ ವಂಚಕರು ನನ್ನನ್ನು ಎಂಟು ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿರಿಸಿದ್ದಾರೆ ಎಂದು ವಿವರಿಸಿದ್ದಾರೆ. ಹಾಗೆಯೇ ವಂಚಕರು 1.2 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ.


Click it and Unblock the Notifications