ಬ್ಯಾಂಕ್ ಖಾಸಗೀಕರಣದ ಬಗ್ಗೆ RBI ಜತೆಗೆ ಸರ್ಕಾರ ಚರ್ಚಿಸಲಿದೆ: ನಿರ್ಮಲಾ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ಸರ್ಕಾರ ಕಾರ್ಯ ನಿರ್ವಹಿಸಿ, ಬಜೆಟ್ ನಲ್ಲಿ ಘೋಷಣೆ ಮಾಡಿದ ಬ್ಯಾಂಕ್ ಗಳ ಖಾಸಗೀಕರಣದ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಹೇಳಿದ್ದಾರೆ. ವರದಿಗಾರರ ಜತೆಗೆ ಈ ಬಗ್ಗೆ ಅವರು ಮಾತನಾಡಿದ್ದಾರೆ.
ಬ್ಯಾಂಕ್ ಗಳಲ್ಲಿ ಸರ್ಕಾರ ಪಾಲನ್ನು ಹೆಚ್ಚಿಸಲು ಯಾವುದೇ ಹೂಡಿಕೆ ಬ್ಯಾಂಕ್ ರೂಪಿಸುವ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ವಾರ ಬಜೆಟ್ ಮಂಡಿಸಿದ ವೇಳೆ, ಬಂಡವಾಳ ಹಿಂತೆಗೆತದ ಭಾಗವಾಗಿ ಎರಡು ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಘೋಷಣೆ ಮಾಡಲಾಗಿತ್ತು.
ಗ್ರಾಮೀಣ ಮೂಲಸೌಕರ್ಯ ಯೋಜನೆಗೆ 16,500 ಕೋಟಿ ವಿತರಿಸಿದ ನಬಾರ್ಡ್
ಬ್ಯಾಂಕ್ ಒಕ್ಕೂಟವು ಈ ನಡೆಯನ್ನು ವಿರೋಧಿಸಿದೆ. "ಈ ಮಾಹಿತಿಯ ಕುರಿತು ಕೆಲಸ ಆರಂಭಿಸಲಾಗಿದೆ. ನಾನು ಈಗಾಗಲೇ ಘೋಷಣೆ ಮಾಡಿದ್ದು, ಆದರೆ ಆರ್ ಬಿಐ ಜತೆ ಕೆಲಸ ಮಾಡುತ್ತಿದ್ದೇವೆ," ಎಂದು ಪ್ರಸ್ತಾವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಖಾಸಗೀಕರಣ ಮಾಡುವುದಕ್ಕೆ ಯಾವ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ನಿರ್ದಿಷ್ಟ ಮಾಹಿತಿಯ ಬಗ್ಗೆ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾರೆ. ಸರ್ಕಾರವು ಘೋಷಣೆ ಮಾಡುವುದಕ್ಕೆ ಸಿದ್ಧವಾದ ಸಂದರ್ಭದಲ್ಲಿ ಮಾಹಿತಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ಬ್ಯಾಡ್ ಬ್ಯಾಂಕ್ ಬಗ್ಗೆ ಉತ್ತರಿಸಿದ ಅವರು, ನ್ಯಾಷನಲ್ ಅಸೆಟ್ ರೀಕನ್ ಸ್ಟ್ರಕ್ಷನ್ ಕಂಪೆನಿಗೆ (ARC) ಸರ್ಕಾರವು ಕೆಲವು ಗ್ಯಾರಂಟಿ ನೀಡಬೇಕಾಗಬಹುದು. ಇದು ಬ್ಯಾಂಕ್ ಗಳಿಂದಲೇ ಬಂದ ಪರಿಹಾರ ಮತ್ತು ಅವೇ ನೇತೃತ್ವವನ್ನು ವಹಿಸಲಿವೆ. ಬ್ಯಾಂಕ್ ಗಳ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಅನ್ನು ನ್ಯಾಷನಲ್ ARCಗೆ ವರ್ಗಾವಣೆ ಮಾಡಲಾಗುತ್ತದೆ, ಇದು ಈ ಹಿಂದೆ ಆಗಿರುವ ಅಸಮರ್ಪಕ ನಿರ್ವಹಣೆ ಎಂದು ಅವರು ಹೇಳಿದ್ದಾರೆ.
ಬ್ಯಾಂಕ್ ಗಳಲ್ಲಿ ವೃತ್ತಿಪರತೆ ಬೇಕು ಹಾಗೂ ಅದನ್ನು ಸರ್ಕಾರ ಖಾತ್ರಿ ಪಡಿಸಲು ಪ್ರಯತ್ನಿಸುತ್ತಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.
ಬಂಡವಾಳ ಹಿಂತೆಗೆತ ಕುರಿತು ಕೇಳಿದ ಪ್ರಶ್ನೆಗೆ, ಬಜೆಟ್ ಅಂದಾಜಿನಂತೆ 1.75 ಲಕ್ಷ ಕೋಟಿ ರುಪಾಯಿ ಸಂಗ್ರಹ ಆಗುವ ವಿಶ್ವಾಸ ವ್ಯಕ್ತಪಡಿಸಿದರು. ಹೊಸದಾಗಿ ಪರಿಚಯಿಸಿರುವ ಕೃಷಿ ಮೂಲಸೌಕರ್ಯ ಸೆಸ್ ನಿಂದ 30 ಸಾವಿರ ಕೋಟಿ ರುಪಾಯಿ ಬರುವ ಬಗ್ಗೆ ಮಾಹಿತಿ ನೀಡಿದರು.
ಒಂದು ವೇಳೆ ಪೆಟ್ರೋಲ್- ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿದರೆ ರಾಜ್ಯಗಳು ಹೆಚ್ಚಿಸುತ್ತವೆ. ಅದೇ ಮಟ್ಟದಲ್ಲಿ ದರವು ಇರುತ್ತದೆ. ಆ ಮೂಲಕ ಆದಾಯ ಗಳಿಸುತ್ತವೆ ಎಂದು ತೈಲದ ಮೇಲಿನ ಸುಂಕ ಇಳಿಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.