ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸಲೂ ರಾಜ್ಯ ಸರ್ಕಾರಗಳಿಗೆ ನಿರಾಸಕ್ತಿ
ನವದೆಹಲಿ: ಕೊರೊನಾವೈರಸ್ ಲಾಕ್ಡೌನ್ ಪರಿಣಾಮ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳತ್ತ ತೆರಳಿದ್ದಾರೆ. ಈಗ ಇವರು ಆಹಾರ ಭದ್ರತೆ, ಉದ್ಯೋಗ, ಆದಾಯದ ಕೊರತೆಯಿಂದ ಬಳಲುತ್ತಿದ್ದಾರೆ. ಇಂತವರಿಗಾಗಿ ಕೇಂದ್ರ ಸರ್ಕಾರ ಉಚಿತವಾಗಿ ಆಹಾರ ಧಾನ್ಯಗಳನ್ನು ಆತ್ಮ ನಿರ್ಭರ್ ಪ್ಯಾಕೇಜ್ ಅಡಿ ನೀಡುತ್ತಿದೆ. ಇದು ಮುಂದಿನ ಐದು ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ.
ಆತ್ಮನಿರ್ಭಾರ ಭಾರತ್ ಪ್ಯಾಕೇಜ್ ಅಡಿಯಲ್ಲಿ ವಲಸೆ ಕಾರ್ಮಿಕರಿಗಾಗಿ ಹಂಚಿಕೆಯಾದ 8 ಲಕ್ಷ ಮೆಟ್ರಿಕ್ ಟನ್ ಉಚಿತ ಆಹಾರ ಧಾನ್ಯಗಳಲ್ಲಿ ಕೇವಲ ಶೇ 13 ರಷ್ಟು ಮಾತ್ರ ವಲಸಿಗರನ್ನು ತಲುಪಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಇದು ಮೇ ಮತ್ತು ಜೂನ್ ಅವಧಿಯ ಅಂಕಿ ಅಂಶವಾಗಿದೆ.
ಕೊರೊನಾವೈರಸ್ ಲಾಕ್ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು
ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಪಡಿತರ ಚೀಟಿ ಇಲ್ಲದ ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಎರಡು ತಿಂಗಳವರೆಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯವನ್ನು ವಿತರಿಸಲು ಕೇಂದ್ರ ಘೋಷಣೆ ಮಾಡಿದೆ.ಇದು ಮುಂದಿನ ಐದು ತಿಂಗಳು ಮುಂದುವರೆಯಲಿದೆ.
2.13 ಕೋಟಿ ಫಲಾನುಭವಿಗಳು
ಕಳೆದ ಎರಡು ತಿಂಗಳು ಕೇವಲ 2.13 ಕೋಟಿ ಫಲಾನುಭವಿಗಳು ಮೇ (1.21 ಕೋಟಿ) ಮತ್ತು ಜೂನ್ (92.44 ಲಕ್ಷ) ಈ ಸೌಲಭ್ಯ ಪಡೆದಿದ್ದಾರೆ. ಗೋವಾ ಮತ್ತು ತೆಲಂಗಾಣ ಸೇರಿದಂತೆ ಆರು ಅಥವಾ ಏಳು ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆದು ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಂದ ಹೊರನಡೆದ ಕಾರಣ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಶೇ 80 ನ್ನು ಹಂಚಿಕೆ ಮಾಡಲಾಗಿದೆ
ಸಚಿವಾಲಯದ ಮಾಹಿತಿಯ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 8 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳಲ್ಲಿ ಶೇ 80 ನ್ನು ಮೇ ಮತ್ತು ಜೂನ್ ತಿಂಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಅವರು ಜೂನ್ 30 ರವರೆಗೆ ಕೇವಲ 1.07 ಲಕ್ಷ ಮೆಟ್ರಿಕ್ ಟನ್ (ಅಥವಾ ನಿಗದಿಪಡಿಸಿದ ಪ್ರಮಾಣದಲ್ಲಿ 13%) ಉಚಿತ ಆಹಾರ ಧಾನ್ಯವನ್ನು ಉದ್ದೇಶಿತ ಫಲಾನುಭವಿಗಳಿಗೆ ವಿತರಿಸಿದ್ದಾರೆ ಎಂದು ಸಚಿವಾಲಯದ ಅಂಕಿ ಅಂಶ ತೋರಿಸುತ್ತದೆ.
ಗರಿಷ್ಠ ಪ್ರಮಾಣ ಉತ್ತರ ಪ್ರದೇಶಕ್ಕೆ
ಗರಿಷ್ಠ ಪ್ರಮಾಣವನ್ನು (1,42,033 ಮೆಟ್ರಿಕ್ ಟನ್ ) ಉತ್ತರ ಪ್ರದೇಶಕ್ಕೆ ಹಂಚಿಕೆ ಮಾಡಲಾಗಿದ್ದು, ಆದರೆ ಉತ್ತರ ಪ್ರದೇಶ ರಾಜ್ಯವು ಮೇ ತಿಂಗಳಲ್ಲಿ ಸುಮಾರು 4.39 ಲಕ್ಷ ಫಲಾನುಭವಿಗಳಿಗೆ 3,324 ಮೆಟ್ರಿಕ್ ಟನ್ (2.03 ಶೇ) ಮತ್ತು ಜೂನ್ನಲ್ಲಿ 2.25 ಲಕ್ಷ ಫಲಾನುಭವಿಗಳಿಗೆ ಮಾತ್ರ ವಿತರಿಸಿದೆ ಎಂದು ಸಚಿವಾಲಯ ತಿಳಿಸಿದೆ. ಹನ್ನೊಂದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳತ ಪ್ರದೇಶ ಜೂನ್ನಲ್ಲಿ ಫಲಾನುಭವಿಗಳಿಗೆ ಶೇಕಡಾ 1 ರಷ್ಟು ಆಹಾರ ಧಾನ್ಯವನ್ನು ವಿತರಿಸಲಿಲ್ಲ. ಆಂಧ್ರಪ್ರದೇಶ, ಗೋವಾ, ಗುಜರಾತ್, ಜಾರ್ಖಂಡ್, ಲಡಾಖ್, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ಸಿಕ್ಕಿಂ, ತಮಿಳುನಾಡು, ತೆಲಂಗಾಣ ಮತ್ತು ತ್ರಿಪುರ ರಾಜ್ಯಗಳು ಆ ಪಟ್ಟಿಗೆ ಸೇರುತ್ತವೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ; ಪಾಸ್ವಾನ್
ಬುಧವಾರ ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ಬಗ್ಗೆ ಮಾತನಾಡಿ, 'ಕೆಲವು ರಾಜ್ಯಗಳು ಬಡವರಿಗೆ ಆಹಾರ ಧಾನ್ಯವನ್ನು ವಿತರಿಸುತ್ತಿಲ್ಲ. ಇದು ಕಳವಳಕಾರಿ ವಿಷಯವಾಗಿದೆ. ಅವರು ಬಡವರ ಬಗ್ಗೆ ನಿರ್ಲಕ್ಷ್ಯ ಮನೋಭಾವ ತಾಳಬಾರದು. ರಾಜ್ಯಗಳಿಗೆ ಆಹಾರ ಧಾನ್ಯವನ್ನು ಒದಗಿಸುವಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ. ಇದನ್ನು ಉಚಿತವಾಗಿ ನೀಡಿದಾಗ, ಯಾಕೆ ಸರಿಯಾಗಿ ವಿತರಣೆ ಮಾಡುತ್ತಿಲ್ಲ, ಸಮಸ್ಯೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ' ಎಂದು ಯೋಜನೆಯನ್ನು ಸಮಪರ್ಕವಾಗಿ ಜಾರಿಗೊಳಿಸದ ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದಾರೆ.
(ಮೂಲ: ಇಂಡಿಯನ್ ಎಕ್ಸಪ್ರೆಸ್)