ವಾಟ್ಸಾಪ್ ಇಂಡಿಯಾ ಮುಖ್ಯಸ್ಥರಾದ ಅಭಿಜಿತ್ ಬೋಸ್ ಹಾಗೂ ಮೆಟಾ ಇಂಡಿಯಾ ಪಾಲಿಸಿ ಡೈರೆಕ್ಟರ್ ಆಗಿರುವ ರಾಜೀವ್ ಅಗರ್ವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಪ್ರಸ್ತುತ ವಾಟ್ಸಾಪ್ ಪಬ್ಲಿಕ್ ಪಾಲಿಸಿ ಮುಖ್ಯಸ್ಥರಾದ ಶಿವನಾಥ್ ಠುಕ್ರಲ್ರನ್ನು ಪ್ರಸ್ತುತ ಭಾರತದಲ್ಲಿನ ಎಲ್ಲ ಮೆಟಾ ಬ್ರಾಂಡ್ಗಳಿಗೆ ನಿರ್ವಾಹಕರಾಗಿ ನೇಮಕಾತಿ ಮಾಡಲಾಗಿದೆ. ಮೆಟಾ ಈ ಕೆಲವು ದಿನಗಳ ಹಿಂದೆ ಸುಮಾರು 11,000 ಜನರನ್ನು ಉದ್ಯೋಗದಿಂದ ವಜಾ ಮಾಡುವುದಾಗಿ ಘೋಷಣೆ ಮಾಡಿತ್ತು ಎಂಬುವುದನ್ನು ನಾವಿಲ್ಲಿ ಗಮನಿಸಬಹುದು.
ಇನ್ನು ಈಗಾಗಲೇ ಹಲವಾರು ಸಂಸ್ಥೆಗಳು ನಷ್ಟ ಹಾಗೂ ಬೇರೆ ಕಾರಣಗಳನ್ನು ನೀಡಿ ತಮ್ಮ ಸಂಸ್ಥೆಯಲ್ಲಿನ ಸಿಬ್ಬಂದಿಗಳನ್ನು ವಜಾ ಮಾಡುತ್ತಿದೆ. ಈ ಉದ್ಯೋಗಿಗಳನ್ನು ಸೆಳೆಯುವ ಕಾರ್ಯವನ್ನು ಕೆಲವು ಐಟಿ ಸಂಸ್ಥೆಗಳು ನಡೆಸುತ್ತಿದೆ.

"ವಾಟ್ಸಾಪ್ ಇಂಡಿಯಾದ ಮೊದಲ ಮುಖ್ಯಸ್ಥರಾಗಿ ಅಭೂತಪೂರ್ವ ಕೊಡುಗೆಯನ್ನು ನೀಡಿರುವ ಅಭಿಜಿತ್ ಬೋಸ್ರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅಭಿಜಿತ್ ಬೋಸ್ ನಾಯಕತ್ವದಲ್ಲಿ ನಮಗೆ ಹೊಸ ಹೊಸ ಸೇವೆಯನ್ನು ಆರಂಭ ಮಾಡಲು ಸಾಧ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಕೋಟ್ಯಾಂತರ ಜನರಿಗೆ ಹಾಗೂ ವ್ಯಾಪಾರಕ್ಕೆ ಸಹಾಯವಾಗಿದೆ. ವಾಟ್ಸಾಪ್ ಭಾರತದಲ್ಲಿ ಇನ್ನು ಹಲವಾರು ಅಪ್ಡೇಟ್ಗಳನ್ನು ಮಾಡಲಿದೆ. ಡಿಜಿಟಲೀಕರಣಕ್ಕೆ ಈ ಮೂಲಕ ನಾವು ಸಹಕಾರ ನೀಡುತ್ತೇವೆ," ಎಂದು ವಾಟ್ಸಾಪ್ನ ಮುಖ್ಯಸ್ಥ ವಿಲ್ ಕ್ಯಾತ್ಕಾರ್ಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮೆಟಾ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದರು. ಆದರೆ ಶೀಘ್ರದಲ್ಲೇ ಅಜಿತ್ ಮೋಹನ್ ಸ್ನಾಪ್ಚಾಟ್ನ ಮುಖ್ಯಸ್ಥರಾದರು. ಇನ್ನು ರಾಜೀವ್ ಅಗರ್ವಾಲ್ ಕೂಡಾ ಬೇರೆ ಸಂಸ್ಥೆಯಲ್ಲಿನ ಅವಕಾಶಕ್ಕೆ ಮನ್ನಣೆ ನೀಡಿ, ನಮ್ಮ ಸಂಸ್ಥೆಯಿಂದ ಹೊರನಡೆಯುತ್ತಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ.


Click it and Unblock the Notifications