ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!
ಇತ್ತೀಚೆಗೆ ಬಂದ ಕೆಲ ವರದಿಗಳನ್ನು ಗಮನಿಸಿದರೆ ಉದ್ಯೋಗಗಳ ಕಡಿತದಲ್ಲಿ ಏರಿಕೆಯಾಗುತ್ತಿರುವುದು ಎಲ್ಲರನ್ನೂ ಆತಂಕಕ್ಕೆ ಒಳಪಡಿಸಿದ್ದು, ನೌಕರಿ ಕಳೆದುಕೊಳ್ಳುವ ಭಯದಲ್ಲಿದ್ದಾರೆ.
ಇತ್ತೀಚೆಗೆ ಬಂದ ಕೆಲ ವರದಿಗಳನ್ನು ಗಮನಿಸಿದರೆ ಉದ್ಯೋಗಗಳ ಕಡಿತದಲ್ಲಿ ಏರಿಕೆಯಾಗುತ್ತಿರುವುದು ಎಲ್ಲರನ್ನೂ ಆತಂಕಕ್ಕೆ ಒಳಪಡಿಸಿದ್ದು, ನೌಕರಿ ಕಳೆದುಕೊಳ್ಳುವ ಭಯದಲ್ಲಿದ್ದಾರೆ.
ಯಾವುದೇ ಉದ್ಯೋಗದಲ್ಲಿ ಉದ್ಯೋಗದ ಖಾತರಿ ಮೊದಲ ಆದ್ಯತೆಯಾಗಿದ್ದು, ಇದೇ ಕಾರಣಕ್ಕೆ ಎಲ್ಲರೂ ಸರ್ಕಾರಿ ಉದ್ಯೋಗವನ್ನೇ ಬಯಸುತ್ತಾರೆ. ಉದ್ಯೊಗ ಜಗತ್ತಿನಲ್ಲಿ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯನ್ನು ಪ್ರತಿಯೊಬ್ಬರೂ ಎದುರಿಸುತ್ತಾರೆ. ವಿಶೇಷವಾಗಿ ಖಾಸಗಿ ವಲಯದಲ್ಲಿರುವ ಉದ್ಯೋಗಿಗಳು ಈ ಭೀತಿಯನ್ನು ಅತಿ ಹೆಚ್ಚಾಗಿ ಎದುರಿಸುತ್ತಾರೆ.
ಇತ್ತೀಚೆಗೆ ಜಾಗತಿಕವಾಗಿ ಎಲ್ಲಾ ಸಂಸ್ಥೆಗಳೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ನಿಧಾನವಾಗಿ ವಿಫಲಗೊಳ್ಳುತ್ತಿವೆ. ಈ ಹಂತದಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವವರ ನೆರವಿಗೆ ಬರುವುದೇ ಉದ್ಯೋಗ ನಷ್ಟ ವಿಮೆ ಅಥವಾ job-loss cover.
ಇದಕ್ಕೆ ಸಂಬಂಧಿಸಿದಂತೆ ಉದ್ಯೋಗ ನಷ್ಟ ವಿಮೆ, ಪ್ರೀಮಿಯಂ ಮೊತ್ತ, ಎಲ್ಲಿ ವಿಮೆ ಮಾಡಿಸಬಹುದು, ಏನೇನು ಒಳಗೊಂಡಿರುತ್ತದೆ, ಇದರ ಸೌಲಭ್ಯಗಳೇನು, ದೇಶದಲ್ಲಿ ಉದ್ಯೋಗ ಕಡಿತ ಮಾಡುತ್ತಿರುವ ಕಂಪನಿಗಳಾವುವು, ಅಖಿಲ ಭಾರತ ಉತ್ಪಾದಕರ ಸಂಘದ ವರದಿಯಲ್ಲಿ ಏನಿದೆ, ನೋಟು ರದ್ದತಿ ಪರಿಣಾಮಗಳೇನು ಇತ್ಯಾದಿ ಪ್ರಮುಖ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ.
1. 14,000 ಉದ್ಯೋಗ ಕಡಿತ
ಭಾರತದ ಅತಿ ದೊಡ್ಡ ಇಂಜಿಯರಿಂಗ್ ಮತ್ತು ಕೈಗಾರಿಕಾ ದೈತ್ಯ ಸಂಸ್ಥೆ ಲಾರ್ಸರ್ ಅಂಡ್ ಟ್ಯೂಬ್ರೋ (L&T) 2017 ರ ಪ್ರಥಮಾರ್ಧದಲ್ಲಿ ಸುಮಾರು 14,000 ಜನರ ಉದ್ಯೋಗಗಳನ್ನು ಕಡಿತಗೊಳಿಸಲಿದೆ. ಇದು ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಮಾಣದ ಉದ್ಯೊಗ ಕಡಿತವಾಗಿದ್ದು, ಇದೇ ಸೂಚನೆಯನ್ನು ಇನ್ನೂ ಕೆಲವು ಸಂಸ್ಥೆಗಳು ಅನುಸರಿಸುವ ಸೂಚನೆಗಳನ್ನು ಮಾಧ್ಯಮದಲ್ಲಿ ಪ್ರಕಟಿಸುತ್ತಿವೆ. ಈಗಾಗಲೇ ಸಿಸ್ಕೊ ಸಿಸ್ಟಮ್, ಮೈಕ್ರೋಸಾಪ್ಟ್, ಫ್ಲಿಪ್ಕಾರ್ಟ್, ಒಲಾ, ಆಸ್ಕ್ ಮಿ, ಇನ್ಫೋಸಿಸ್ ನಂತಹ ಪ್ರಮುಖ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ.
2. ಮೈಕ್ರೋಸಾಪ್ಟ್
ಸ್ನಾಪ್ ಡೀಲ್ ನಿಂದ ಹಿಡಿದು ಸಾಫ್ಟ್ವೇರ್ ದೈತ್ಯಸಂಸ್ಥೆ ಮೈಕ್ರೋಸಾಪ್ಟ್ ವರೆಗೆ ಹಲವು ಸಂಸ್ಥೆಗಳು ಈ ವರ್ಷದಲ್ಲಿ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಹುನ್ನಾರದಲ್ಲಿವೆ.
3. AIMO ವರದಿ
ಉತ್ಪಾದನೆಯಲ್ಲಿ ತೊಡಗಿರುವ ಭಾರತದ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಕಿರು ಕೈಗಾರಿಕೆ, ಮಧ್ಯಮ ಕೈಗಾರಿಕೆ ಹಾಗೂ ಭಾರೀ ಕೈಗಾರಿಕೆಗಳನ್ನು ಪ್ರತಿನಿಧಿಸುವ ಅಖಿಲ ಭಾರತ ಉತ್ಪಾದಕರ ಸಂಘ (All India Manufacturers' Organisation (AIMO) ನಡೆಸಿರುವ ಸಂಶೋಧನೆ ಹಾಗೂ ಸಮೀಕ್ಷೆಯ ಪ್ರಕಾರ ಕಿರು ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಶೇ. 35ರಷ್ಟು ಕಡಿತಗೊಳಿಸುವ ಹುನ್ನಾರದಲ್ಲಿವೆ.
4. 2017ರಲ್ಲಿ 60% ಉದ್ಯೋಗ ಕಡಿತ
ನೋಟು ಅನಾಣ್ಯೀಕರಣದ ಬಳಿಕದ ಮೊದಲ 34 ದಿನಗಳಲ್ಲಿ ನಗದು ವಹಿವಾಟು 50%ಕ್ಕಿಂತ ಹೆಚ್ಚು ಇಳಿದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಬರುವ 2017 ಮಾರ್ಚ್ ಕೊನೆಯವರೆಗೆ ಉದ್ಯೋಗಗಳಲ್ಲಿ 60% ಹಾಗೂ ಆದಾಯದಲ್ಲಿ 55% ಇಳಿಕೆಯಾಗುವ ಸಾಧ್ಯತೆಯನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ.
5. ಉದ್ಯೋಗ ನಷ್ಟ ವಿಮೆ ಎಂದರೇನು?
ಉದ್ಯೋಗ ನಷ್ಟ ವಿಮೆ ಅಥವಾ ಆದಾಯ ವಿಮೆ ಎಂದರೆ ಅಲ್ಪಾವಧಿಯ ಸಾಲ ಸುರಕ್ಷಾ ಪರಿಹಾರ ವ್ಯವಸ್ಥೆಯಾಗಿದ್ದು ಈ ವ್ಯವಸ್ಥೆಯ ಚಂದಾದಾರರು ಒಂದು ವೇಳೆ ತಮ್ಮ ಇಚ್ಛೆಯಿಂದಲ್ಲದೇ ಉದ್ಯೋಗ ಕಳೆದುಕೊಂಡರೆ ಇವರು ನೀಡಬೇಕಾದ ಸಾಲದ ಮಾಸಿಕ ಕಂತುಗಳನ್ನು ವಿಮಾ ಸಂಸ್ಥೆ ಭರಿಸುತ್ತದೆ. ಉದ್ಯೋಗ ಕಳೆದುಕೊಂಡಿರುವುದು ಕೆಲವು ನಿಯಮಗಳಿಗೆ ಅನುಸಾರವಾಗಿಯೇ ಆಗಿರುವುದು ಇಲ್ಲಿ ಕಡ್ಡಾಯವಾಗಿದೆ.
6. ಪಿಂಕ್ ಸ್ಲಿಪ್ ಕಡ್ಡಾಯ
ಈ ವಿಮೆ ನಿಯಮದ ಪ್ರಕಾರ ಉದ್ಯೋಗಿ ಸಂಸ್ಥೆಯಿಂದ ಪಿಂಕ್ ಸ್ಲಿಪ್ ಅಥವಾ ನಿಮ್ಮ ಸೇವೆ ನಮಗಿನ್ನು ಸಾಕು ಎಂದು ಸಾರುವ ದೃಢೀಕರಣ ಪತ್ರ ಪಡೆದಿರಬೇಕು. ಅಥವಾ ನಿಮ್ಮ ಉದ್ಯೋಗವನ್ನು ಕೊನೆಗೊಳಿಸಲಾಗಿದೆ ಎಂಬ ಅಧಿಕೃತ ಪತ್ರವನ್ನು ಸಂಸ್ಥೆಯಿಂದ ಪಡೆದಿದ್ದರೆ ಮಾತ್ರ ಈ ವಿಮೆ ಅನ್ವಯವಾಗುತ್ತದೆ.
7. ವಿಮೆ ಷರತ್ತು
ಈ ವಿಮೆ ಕೇವಲ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಮಾತ್ರವೇ ಅವಲಂಬಿಸಿದೆಯೇ ಹೊರತು ಅನಾರೋಗ್ಯ, ಖಾಸಗಿ ಅಪಘಾತ ವಿಮೆ, ಸಾಲ ಮರುಪಾವತಿಯ ರಕ್ಷಣೆ ಮೊದಲಾದ ವಿಮಾ ಸೌಲಭ್ಯಗಳಿಗೆ ಸಂಬಂಧಪಟ್ಟಿಲ್ಲ ಹಾಗೂ ಇದನ್ನು ಪ್ರತ್ಯೇಕವಾಗಿ ಪಡೆದುಕೊಳ್ಳಲೂ ಸಾಧ್ಯವಿಲ್ಲ.
8. ಈ ವಿಮೆ ಏನೇನು ಒಳಗೊಂಡಿರುತ್ತದೆ?
ಒಂದು ವೇಳೆ ಉದ್ಯೋಗಿ ಉದ್ಯೋಗವನ್ನು ಕಳೆದುಕೊಂಡರೆ ಉದ್ಯೋಗಿಯ ಮಾಸಿಕ ವೇತನವನ್ನು ಆಧರಿಸಿ ಪಡೆದ 50% ರಷ್ಟು ಸಾಲದ ಮಾಸಿಕ ಕಂತು (EMI)ಗಳನ್ನು ಕಟ್ಟುವಲ್ಲಿ ವಿಮಾ ಸಂಸ್ಥೆ ಬದ್ದವಾಗಿರುತ್ತದೆ. ಕೇವಲ ಉದ್ಯೋಗವನ್ನು ಕಳೆದುಕೊಂಡಿರುವುದು ಮಾತ್ರವಲ್ಲ. ಉದ್ಯೋಗದ ಸಮಯದಲ್ಲಿ ಆದ ಅಪಘಾತದಿಂದ ಆ ಉದ್ಯೋಗ ಮುಂದುವರೆಸಲು ಸಾಧ್ಯವಾಗದೇ ಇರುವ ಸಾಧ್ಯತೆಯಲ್ಲಿಯೂ ಈ ವಿಮೆ ಉಪಯೋಗಕ್ಕೆ ಬರುತ್ತದೆ. ಆದರೆ ಈ ಅಪಘಾತ ಕೆಲಸದ ಸಮಯದಲ್ಲಿ ಸಂಭವಿಸಿರುವ ಅಪಘಾತವಾಗಿದ್ದು, ಇದರಲ್ಲಿ ಸಾವು ಸಂಭವಿಸಿದ್ದರೆ ಅಥವಾ ಅಂಗ ಊನವಾಗಿ ಉದ್ಯೋಗವನ್ನು ಮುಂದುವರೆಸಲು ಸಾಧ್ಯವಾಗದಿರುವುದನ್ನು ವೈದ್ಯರು ಧೃಢೀಕರಿಸುವುದು ಅವಶ್ಯ.
9. ಯಾರಿಗೆ ಅನ್ವಯವಾಗುವುದಿಲ್ಲ?
ಈ ವಿಮೆ ಸ್ವ-ಉದ್ಯೋಗಿಗಳಿಗೆ, ನಿರುದ್ಯೋಗಿಗಳಿಗೆ ಅನ್ವಯವಾಗುವುದಿಲ್ಲ. ಅಲ್ಲದೇ "ಈಗಾಗಲೇ ತಮ್ಮ ಕೆಲಸಗಳಿಗೆ ರಾಜೀನಾಮೆ ಕೊಟ್ಟವರಿಗೂ, ಸ್ವಯಂ ನಿವೃತ್ತಿ ಪಡೆದವರಿಗೆ, ತರಬೇತಿಯ ಅವಧಿಯಲ್ಲಿರುವ ಉದ್ಯೋಗಿಗಳಿಗೆ, ಸಂಸ್ಥೆಯಿಂದ ಕಳಪೆ ಪ್ರದರ್ಶನ ವ್ಯಕ್ತಪಡಿಸಿದ ಕಾರಣದಿಂದ ಉಚ್ಛಾಟಿಸಲ್ಪಟ್ಟ ಉದ್ಯೋಗಿಗಳಿಗೆ ಅನ್ವಯವಾಗುವುದಿಲ್ಲ. ಈಗಾಗಲೇ ಯಾವುದಾದರೂ ಅನಾರೋಗ್ಯಕ್ಕೆ ತುತ್ತಾಗಿದ್ದು ಮುಂದಿನ ದಿನಗಳಲ್ಲಿ ಉದ್ಯೋಗ ಕಳೆದುಕೊಳ್ಳಲು ಈ ಅನಾರೋಗ್ಯವೇ ಕಾರಣವಾಗುವ ಸಾಧ್ಯತೆ ಇದ್ದ ಉದ್ಯೋಗಿಗಳಿಗೆ ಅನ್ವಯವಾಗುವುದಿಲ್ಲ" ಎಂದು ಬ್ಯಾಂಕ್ ಬಾಜಾರ್ . ಕಾಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆಧಿಲ್ ಶೆಟ್ಟಿ ತಿಳಿಸುತ್ತಾರೆ.
10. ಏನೇನು ವಿಮೆ ವ್ಯಾಪ್ತಿಗೆ ಬರುವುದಿಲ್ಲ?
ಯಾವುದೇ ಬಗೆಯ ಸೇವೆಯಿಂದ ಉಚ್ಛಾಟನೆ, ಸೇವೆಯನ್ನು ಕೊನೆಗೊಳಿಸುವುದು, ಅಲ್ಪಾವಧಿಗಾಗಿ ಸೇವೆಯನ್ನು ಕಡಿತಗೊಳಿಸುವುದು, ನಿವೃತ್ತಿ, ಸೇವಾ ಕಾಲದಲ್ಲಿ ಯಾವುದೇ ಬಗೆಯ ಅವಿಧೇಯತೆ, ಅಪ್ರಾಮಾಣಿಕತೆ, ಅದಕ್ಷತೆ ಮೊದಲಾದ ಕಾರಣದಿಂದ ಉದ್ಯೋಗಿಯ ಸೇವೆಯನ್ನು ಕಡಿತಗೊಳಿಸಲಾಗುವುದು. ಉದ್ಯೋಗಿಗೆ ಈಗ ನೀಡಲಾಗುತ್ತಿರುವ ಭತ್ಯೆಗಳಲ್ಲಿ ಕಡಿತ ಅಥವಾ ಹಿಂಬಡ್ತಿ ನೀಡುವುದು, ಉದ್ಯೋಗದಾರರು ವಿಧಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು, ಸಂಸ್ಥೆಗೆ ವಿರುದ್ದವಾದ ಕೆಲಸಗಳಲ್ಲಿ ತೊಡಗಿರುವ ಕಾರಣದಿಂದಾಗಿ ಸಂಸ್ಥೆಯಿಂದ ಶಿಸ್ತುಕ್ರಮಕ್ಕೆ ಒಳಗಾಗಿರುವುದು ಮೊದಲಾದವು ಈ ವಿಮೆಯ ವ್ಯಾಪ್ತಿಗೆ ಬರುವುದಿಲ್ಲ.
11. ಪ್ರಸ್ತುತ ಈ ಸೇವೆಯನ್ನು ಭಾರತದಲ್ಲಿ ಯಾವ ಸಂಸ್ಥೆಗಳು ಒದಗಿಸುತ್ತಿವೆ?
ಇಂದಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಿಗಳು ಉದ್ಯೋಗ-ನಷ್ಟದ ಭೀತಿಯನ್ನು ಎದುರಿಸುತ್ತಿದ್ದು, ಹೆಚ್ಚಿನವರು ಈ ವಿಮೆಯನ್ನು ಪಡೆಯಲು ಉತ್ಸುಕರಾಗಿದ್ದಾರೆ. ಈ ಬಗೆಯ ವಿಮೆ ಈಗ ಹೊಸತಾಗಿ ಪ್ರಾರಂಭವಾಗಿದ್ದು ಇದನ್ನು ಪ್ರತ್ಯೇಕವಾದ ವಿಮೆಯಾಗಿ ಯಾವ ಸಂಸ್ಥೆಯೂ ಇನ್ನೂ ಪ್ರಾರಂಭಿಸಿಲ್ಲ. ಬದಲಿಗೆ ಈಗಾಗಲೇ ಇರುವ ವಿಮೆಯ ಜೊತೆಗೆ ಈ ವಿಮೆಯನ್ನೂ ಹೆಚ್ಚುವರಿಯಾಗಿ ಕೆಲವು ವಿಮಾ ಸಂಸ್ಥೆಗಳು ನೀಡುತ್ತಿವೆ.
ಭಾರತದಲ್ಲಿ ಇಂದು ಈ ಸೇವೆಯನ್ನು ನೀಡುತ್ತಿರುವ ಪ್ರಮುಖ ಸಂಸ್ಥೆಗಳೆಂದರೆ:
1. HDFC Ergo ಸಂಸ್ಥೆಯ ಹೋಂ ಸುರಕ್ಷಾ ಪ್ಲಾನ್,
2. ರಾಯಲ್ ಸುಂದರಂ ಸಂಸ್ಥೆಯ ಸೇಫ್ ಲೋನ್ ಶೀಲ್ಡ್
3. ICICI ಲೊಂಬಾರ್ಡ್ ಸಂಸ್ಥೆಯ ಸೆಕ್ಯೂರ್ ಮೈಂಡ್
12. ಈ ವಿಮೆಯ ಪ್ರೀಮಿಯಂ ಎಷ್ಟು?
ICICI ಲೊಂಬಾರ್ಡ್ ಸಂಸ್ಥೆಯ ಸೆಕ್ಯೂರ್ ಮೈಂಡ್ ವಿಮೆಯನ್ನು ಪರಿಗಣಿಸಿ ಪಡೆದ ಮಾಹಿತಿಗಳ ಪ್ರಕಾರ-
ಈ ವಿಮೆಯಲ್ಲಿ ಉದ್ಯೋಗ ಕಳೆದುಕೊಂಡ ಉದ್ಯೋಗಿ ಅಂತಿಮವಾಗಿ ಏನನ್ನು ಪಡೆಯುತ್ತಾನೆ ಎಂದು ವಿವರಿಸುವಲ್ಲಿ ಈ ಸಂಸ್ಥೆ ವಿಫಲವಾಗಿದೆ. ಈ ವಿಮಾ ಸೌಲಭ್ಯವು USP( Unique Selling Proposition) ಎಂಬ ತತ್ವವನ್ನು ಆಧರಿಸಿದ್ದು ಮಾರುಕಟ್ಟೆಯ ಏರಿಳಿತಗಳನ್ನು ಆಧರಿಸಿದೆ.
13. ಉದ್ಯೋಗ ಕಳೆದುಕೊಂಡಿರುವವರಿಗೆ ಏನು ಲಾಭ?
ಒಂದು ಉದಾಹರಣೆಯಲ್ಲಿ ವಿವರಿಸಿರುವಂತೆ ಪ್ರತಿ ತಿಂಗಳೂ ಒಂದು ಸಾವಿರ ಪ್ರೀಮಿಯಂ ಅನ್ನು ಐದು ವರ್ಷದಂತೆ ಕಟ್ಟಿದರೆ ಐದು ವರ್ಷಗಳ ಬಳಿಕ ಉದ್ಯೋಗ ಕಳೆದುಕೊಂಡವನಿಗೆ ಸಿಕ್ಕುವುದು ಕೇವಲ ರೂ. 3600. ಆ ಪ್ರಕಾರ ನಿಮಗೆ ತಿಂಗಳಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬ ಲೆಕ್ಕಾಚಾರದ ಮೇಲೆ ಪ್ರೀಮಿಯಂ ಅನ್ನೂ ಏರಿಸಬೇಕಾಗುತ್ತದೆ. ಪ್ರೀಮಿಯಂ ಮಾಸ್ಟರ್ ಪಾಲಿಸಿ ಒಟ್ಟು ಮೊಬಲಗಿನ 3% ರಿಂದ 5% ರ ನಡುವೆ ಇರುತ್ತದೆ. ಆದರೆ ಈ ಪ್ರೀಮಿಯಂ ಇತರ ವಿಷಯಗಳನ್ನೂ ಅವಲಂಬಿಸಿರುವ ಕಾರಣ ಒಟ್ಟು ಮೊಬಲಗಿನ ಮೇಲೆ 1%ರಿಂದ 2.5% ನಡುವೆ ಇರಿಸುವುದೇ ಜಾಣತನವಾಗಿದೆ. ಇವೆರಡರ ನಡುವಣ ಸಾಮಾನ್ಯ ದರವನ್ನು ಪರಿಗಣಿಸಿದರೆ ಒಟ್ಟು ಮೊಬಲಗಿನ 1.75% ರಷ್ಟು ಮೊತ್ತವನ್ನು ಪ್ರೀಮಿಯಂ ಆಗಿ ಆರಿಸಿಕೊಳ್ಳುವುದು ಉಚಿತ. ಈ ಪ್ರಕಾರ ಒಟ್ಟು ಮೊಬಲಗಿನ 6% ದಷ್ಟು ಮಾತ್ರವೇ ಅಂತಿಮವಾದ ಪ್ರಯೋಜನವಾಗಿ ಲಭ್ಯವಾಗುತ್ತದೆ.
14. ಜಾಬ್ ಲಾಸ್ ಕಾರಣಗಳು?
ಮೊತ್ತ ಕ್ಲೈಮ್ ಮಾಡಬೇಕಾದರೆ ಉದ್ಯೋಗವನ್ನು ಕಳೆದುಕೊಂಡಿರುವುದನ್ನು ಖಾತ್ರಿ ಪಡಿಸುವುದು ಪ್ರಥಮ ಆದ್ಯತೆಯಾಗಿದೆ. ಉದ್ಯೋಗಿ ತರಬೇತಿಯಲಿದ್ದರೆ, ಕಳಪೆ ಪ್ರದರ್ಶನದ ಮೂಲಕ ಉಚ್ಛಾಟಿಸಲ್ಪಟ್ಟಿದ್ದರೆ ಈ ವಿಮೆ ಅನ್ವಯವಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಹೆಚ್ಚಿನ ಸಂಸ್ಥೆಗಳು ಉದ್ಯೋಗಗಳನ್ನು ಕಡಿತ ಮಾಡುವ ಕಾರಣವನ್ನು ಪ್ರಕಟಿಸದೇ ತಮ್ಮಲ್ಲಿನ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತವೆ. ಈ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿರುವ ವ್ಯಕ್ತಿಗೆ ಈ ವಿಮೆಯ ಪ್ರಯೋಜನ ಲಭಿಸುವ ಸಾಧ್ಯತೆ ಅತ್ಯಂತ ಕಡಿಮೆ. ಹಾಗಾಗಿ ವಾಸ್ತವಾಂಶವನ್ನು ಪರಿಗಣಿಸಿದರೆ ಭಾರತೀಯ ಉದ್ಯೋಗಿಗಳಿಗೆ ಈ ವಿಮೆಯ ಅವಶ್ಯಕತೆ ಅಷ್ಟು ಹೆಚ್ಚಾಗಿ ಅಗತ್ಯವಿರಲಾರದು.
15. ನಿಗದಿತ ಕವರೇಜ್
HDFC Ergo ಹೋಂ ಸುರಕ್ಷಾ ಪ್ಲಾನ್ ನಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಈ ವಿಮೆಯ ಪ್ರಯೋಜನ ಕೇವಲ ಮೂರು ಮಾಸಿಕ ಕಂತುಗಳನ್ನು ತುಂಬಲು ಮಾತ್ರ ಲಭ್ಯವಾಗುತ್ತದೆ. ಅದರಲ್ಲೂ ಪ್ರತಿ ಕಂತು ಉದ್ಯೋಗಿಯ ತಿಂಗಳ ವೇತನದ ಗರಿಷ್ಟವೆಂದರೆ ಒಟ್ಟು ಮಾಸಿಕ ವೇತನದ 50% ರಷ್ಟು ಮಾತ್ರವೇ ಆಗಿರುತ್ತದೆ. ಆ ಪ್ರಕಾರ ಉದ್ಯೋಗಿ ತಾನು ಉದ್ಯೋಗವನ್ನು ಸಂಸ್ಥೆಯ ಕಾರಣದಿಂದಲೇ ಎಂದು ಸಾಬೀತು ಪಡಿಸಿದ ಬಳಿಕವೂ ಆತನಿಗೆ ಸಿಗುವುದು ಗರಿಷ್ಟ ಒಂದೂವರೆ ತಿಂಗಳ ವೇತನ ಮಾತ್ರ. ಒಂದು ವೇಳೆ ಉದ್ಯೋಗಿ ತನ್ನ ಮನೆ ಸಾಲವನ್ನು ಇಪ್ಪತ್ತು ವರ್ಷಗಳ ಅವಧಿಗೆ ಅಥವಾ 240 ಕಂತುಗಳಲ್ಲಿ ತೀರಿಸುವಂತೆ ಪಡೆದಿದ್ದರೆ ಆತನ ಮೂರು ತಿಂಗಳ ಕಂತು ಒಟ್ಟು ಮೌಲ್ಯದ ಕೇವಲ 1.25%ರಷ್ಟು ಮಾತ್ರವೇ ಇರುತ್ತದೆ.
16. ಈ ವಿಮೆಯ ಅವಧಿ ಎಷ್ಟು?
Home Loan Protection Plan ವಿಮೆ ಪ್ರಕಾರ ಈ ಪಾಲಿಸಿಯ ಅವಧಿ ಕೇವಲ ಐದು ವರ್ಷಗಳು. ಆದ್ದರಿಂದ ಉದ್ಯೋಗ-ನಷ್ಟ ವಿಮೆ ಇದಕ್ಕೂ ಹೆಚ್ಚಿನ ಅವಧಿಯ ಗೃಹಸಾಲಕ್ಕೆ ಅನ್ವಯವಾಗುವುದೇ ಇಲ್ಲ. ಸಾಮಾನ್ಯವಾಗಿ ಎಲ್ಲರೂ ತಮ್ಮ ಇಡಿಯ ಗೃಹಸಾಲಕ್ಕೆ ಈ ವಿಮೆ ಅನ್ವಯವಾಗುತ್ತದೆ ಎಂಬ ಭಾವನೆಯಲ್ಲಿರುತ್ತಾರೆ. ಅಲ್ಲದೇ ಗೃಹಸಾಲವನ್ನು ಬಯಸುವವರಲ್ಲಿ ಹೆಚ್ಚಿನವರು ಮೂವತ್ತಕ್ಕೂ ಕಡಿಮೆ ವಯಸ್ಸಿನವರಾಗಿದ್ದು, ಈ ವಯಸ್ಸಿನವರನ್ನು ಉದ್ಯೋಗಗಳಿಂದ ತೆಗೆಯುವ ಸಾಧ್ಯತೆ ಉಳಿದವರಿಗಿಂತ ಕಡಿಮೆ ಇರುತ್ತದೆ.
17. ಈ ಬಗ್ಗೆ ತಜ್ಞರ ಅಭಿಪ್ರಾಯವೇನು?
ಪ್ರಸ್ತುತ ಭಾರತದಲ್ಲಿ ಉದ್ಯೋಗಗಳು ತ್ರಿಶಂಕು ಸ್ಥಿತಿಯಲ್ಲಿವೆ. ಈ ಹಂತದಲ್ಲಿ ಹೆಚ್ಚುವರಿ ವಿಮೆಯ ಆಯ್ಕೆಯ ಬದಲಿಗೆ ಉದ್ಯೋಗ ಕಳೆದುಕೊಳ್ಳುವ ಕಾರಣಕ್ಕೇ ಇಳಿಸಲಾಗುವ ವಿಮೆ ಹೆಚ್ಚು ಅಗತ್ಯವಾಗಿದ್ದು ಇಂದಿನ ದಿನಗಳಿಗೆ ಹೆಚ್ಚು ಪ್ರಸ್ತುತವೂ ಆಗಿದೆ. ಯಾವುದೇ ವಿಮೆಯ ಒಟ್ಟು ವ್ಯಾಪ್ತಿಯನ್ನು ಪರಿಗಣಿಸಿದಾಗ ಮೊತ್ತಕ್ಕೆ ನೀಡಬೇಕಾದ ಪ್ರೀಮಿಯಂ ಅಧಿಕವಿರುವ ವಿಮೆಗಳೇ ಹೆಚ್ಚು ಉಪಯುಕ್ತವಾಗಿವೆ. ಅಲ್ಲದೇ ಈ ವಿಮೆಯಲ್ಲಿ ಅತಿ ಹೆಚ್ಚಿನ ವಿಷಯಗಳನ್ನು ಹೊರತುಪಡಿಸಲಾಗಿದೆ. ಅಲ್ಲದೇ ಈ ವಿಮೆ ಅಗ್ಗವೂ ಅಲ್ಲ ಹಾಗೂ ಇಂದು ಹೆಚ್ಚಿನವರು ಈ ವಿಮೆಯನ್ನು ಪಡೆಯಲು ಉತ್ಸುಕರಾಗಿದ್ದಾರೆ ಎಂಬ ವಿಷಯವನ್ನು ವಿಮಾ ಸಂಸ್ಥೆಗಳು ನಗದೀಕರಿಸಿಕೊಳ್ಳುತ್ತಿವೆ.
18. ಸಾಲಗಾರರ ದೃಷ್ಟಿಕೋನ
ತಜ್ಞರ ಅಭಿಪ್ರಾಯದ ಪ್ರಕಾರ ಒಂದು ವೇಳೆ ಉದ್ಯೋಗಿ ತನ್ನ ಒಂದೂವರೆ ತಿಂಗಳ ಸಂಬಳವನ್ನು ತನ್ನ ಕಷ್ಟ ಕಾಲಕ್ಕೆಂದು ಕೂಡಿಡಲು ಸಫಲನಾದರೆ ಈ ವಿಮೆಯ ಅಗತ್ಯವೇ ಇಲ್ಲ. ಏಕೆಂದರೆ ಎಲ್ಲಾ ಸರ್ಕಸ್ಸುಗಳ ಬಳಿಕ ಆತನಿಗೆ ಸಿಗುವುದು ಇಷ್ಟೇ. ಆದ್ದರಿಂದ ಆರ್ಥಿಕ ತಜ್ಞರ ಅಭಿಪ್ರಾಯದಂತೆ ಉದ್ಯೋಗ-ನಷ್ಟದ ವಿಮೆಯನ್ನು ಪಡೆಯುವುದು ಜಾಣತನದ ಕ್ರಮವೇ ಅಲ್ಲ.
19. ಈ ವಿಮೆ ಯಾರಿಗೆ ಹೆಚ್ಚು ಸಹಾಯಕ
ಒಂದು ವೇಳೆ ಉದ್ಯೋಗಿಯ ಮನೆಯ ಖರ್ಚೂ ದೊಡ್ಡದಾಗಿದ್ದು, ಗೃಹಸಾಲದ ಮಾಸಿಕ ಕಂತೂ ದೊಡ್ಡದಾಗಿಯೇ ಇದ್ದರೆ ಮಾತ್ರ ಈ ವಿಮೆ ಕೆಲಸಕ್ಕೆ ಬರುತ್ತದೆ. ಆದರೆ ಈ ವಿಮೆಗೆ ತನ್ನದೇ ಆದ ನಿರ್ಬಂಧಗಳಿವೆ. ಪ್ರಥಮವಾಗಿ ಭಾರತದಲ್ಲಿ ಸಂಸ್ಥೆಗಳೂ ತನ್ನ ಉದ್ಯೋಗಿಗಳಿಗೆ ಸ್ಪಷ್ಟವಾಗಿ ಪಿಂಕ್ ಸ್ಲಿಪ್ ಕೊಡುವುದೇ ಇಲ್ಲ. ಬದಲಿಗೆ ಸಮಾಜದ ದೃಷ್ಟಿಯಲ್ಲಿ ಸಂಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯ ಉಳಿಯಲೆಂದು ಬೇರೆಯೇ ಕ್ರಮ ಕೈಗೊಳ್ಳುತ್ತದೆ. ಈ ಕ್ರಮಗಳನ್ನು ವಿಮಾ ಸಂಸ್ಥೆಗಳು ಒಪ್ಪಿಕೊಳ್ಳುವುದೇ ಇಲ್ಲ. ಹೆಚ್ಚಿನ ಸಂಸ್ಥೆಗಳು ಅನುಸರಿಸುವ ಜಾಣತನದ ಕ್ರಮವೆಂದರೆ Mergers and Acquisitions (M&As) ಅಥವಾ ಒಂದೇ ಸಂಸ್ಥೆಯ ಎರಡು ಅಥವಾ ಹೆಚ್ಚು ವಿಭಾಗಗಳನ್ನು ಒಂದಾಗಿಸುವುದು ಅಥವಾ ಇನ್ನೊಂದು ಸಂಸ್ಥೆಯಲ್ಲಿ ವಿಲೀನಗೊಳಿಸುವುದು. ಈಗ ಎರಡೂ ವಿಭಾಗದ ಕೆಲಸಗಳನ್ನು ಒಂದೇ ವಿಭಾಗ ನಿರ್ವಹಿಸಲು ಸಾಧ್ಯವಿರುವ ಕಾರಣ 'ನಿಮ್ಮ ಸೇವೆ ಈಗ ಸದ್ಯಕ್ಕೆ ನಮಗೆ ಅಗತ್ಯವಿಲ್ಲದಿರುವ ಕಾರಣ ನಿಮ್ಮಿಂದ ರಾಜೀನಾಮೆಯನ್ನು ನಿರೀಕ್ಷಿಸುತ್ತೇವೆ' ಎಂಬ ಅರ್ಥ ಬರುವ ಕಾರಣವನ್ನೇ ಹೆಚ್ಚಿನ ಸಂಸ್ಥೆಗಳು ನೀಡಿ ರಾಜೀನಾಮೆ ನೀಡಲು ಒತ್ತಡ ಹೇರುತ್ತವೆ. ಇದೇ ಕಾರಣದಿಂದ ಉದ್ಯೋಗಿಗೆ ನ್ಯಾಯವಾಗಿ ಸಲ್ಲಬೇಕಾಗಿದ್ದ ವಿಮಾ ಸೌಲಭ್ಯ ಸಿಗುವುದೇ ಇಲ್ಲ. ಹೀಗೆ ವಿಮೆ ಸಿಗಲಾರದು, ನನ್ನನ್ನು ಸಂಸ್ಥೆಯೇ ತೆಗೆದು ಹಾಕಿದೆ ಎಂದು ಪತ್ರ ನೀಡಿ ಎಂದು ಮಾಡುವ ಮನವಿಗಳು ನಿರರ್ಥಕವಾಗುತ್ತವೆ. ಆದ್ದರಿಂದ ಈ ವಿಮೆಯ ಪ್ರಯೋಜನ ಪಡೆಯುವುವರು ಅತ್ಯಲ್ಪವಾಗಿದ್ದು ಈ ಅತ್ಯಲ್ಪ ಜನರಲ್ಲಿ ನೀವು ಒಬ್ಬರಾಗಿದ್ದರೆ ಮಾತ್ರ ಮುಂದುವರೆಯಿರಿ ಎಂದು ಆರ್ಥಿಕ ತಜ್ಞ ಸರಿನ್ ರವರು ವಿವರಿಸುತ್ತಾರೆ.