ಬಾಲಿವುಡ್ ಕಿಂಗ್ ಶಾರುಖ್ ಖಾನ್ರಿಂದ ಹಣ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ!
ಬಾಲಿವುಡ್ ಬಾದಶಾಹ ಎಂದೇ ಹೆಸರಾಗಿರುವ ನಟ ಶಾರುಖ್ ಖಾನ್ ದೇಶದಲ್ಲಷ್ಟೇ ಅಲ್ಲದೆ ಇಡೀ ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ. ಇವರು ಬಾಲಿವುಡ್ನ ಯಶಸ್ವಿ ಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಬಾಲಿವುಡ್ ಬಾದಶಾಹ ಎಂದೇ ಹೆಸರಾಗಿರುವ ನಟ ಶಾರುಖ್ ಖಾನ್ ದೇಶದಲ್ಲಷ್ಟೇ ಅಲ್ಲದೆ ಇಡೀ ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ. ಇವರು ಬಾಲಿವುಡ್ನ ಯಶಸ್ವಿ ಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 2018 ರಲ್ಲಿ ಶಾರುಖ್ ಖಾನ್ ಅವರ ಒಟ್ಟು ಸಂಪತ್ತಿನ ಮೌಲ್ಯ ೭೫೦ ಮಿಲಿಯನ್ ಡಾಲರ್ ಅಂದರೆ 5100 ಕೋಟಿ ರೂಪಾಯಿಗಳಷ್ಟಿದೆ.
ತಾವು ನಟಿಸುವ ಚಿತ್ರಗಳಿಂದ ಬರುವ ಆದಾಯ ಹೊರತುಪಡಿಸಿ ಇನ್ನೂ ಹಲವಾರು ಮೂಲಗಳಿಂದ ಶಾರುಖ್ ಖಾನ್ ಹಣ ಸಂಪಾದಿಸುತ್ತಾರೆ. ಪತ್ನಿ ಗೌರಿ ಅವರೊಂದಿಗೆ ಪಾಲುದಾರಿಕೆಯಲ್ಲಿ ರೆಡ್ ಚಿಲ್ಲೀಸ್ ಎಂಟರಟೇನಮೆಂಟ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಶಾರುಖ್ ಹೊಂದಿದ್ದಾರೆ. ಜಗತ್ತಿನಲ್ಲಿಯೇ ಶ್ರೇಷ್ಠ ಗುಣಮಟ್ಟದ್ದೆಂದು ಹೆಸರುವಾಸಿಯಾಗಿರುವ 'ರೆಡ್ ಚಿಲ್ಲೀಸ್ ವಿಎಫ್ಎಕ್ಸ್' ಎಂಬ ವಿಎಫ್ಎಕ್ಸ್ ಸ್ಟುಡಿಯೋ ಶಾರುಖ್ ಅವರ ಮಾಲಿಕತ್ವದಲ್ಲಿದೆ. ಇನ್ನು ತಮ್ಮ ಹಳೆಯ ಕಾಲದ ಒಡನಾಡಿ ಜೂಹಿ ಚಾವ್ಲಾ ಪಾಲುದಾರಿಕೆಯಲ್ಲಿ 'ಕೋಲ್ಕತಾ ನೈಟ್ ರೈಡರ್ಸ್' ಐಪಿಎಲ್ ತಂಡವನ್ನು ಸಹ ಅವರು ಮುನ್ನಡೆಸುತ್ತಿದ್ದಾರೆ.
ಇಷ್ಟೊಂದು ಖ್ಯಾತಿ ಹಾಗೂ ಶ್ರೀಮಂತಿಕೆಯನ್ನು ಪಡೆಯಬೇಕಾದರೆ ಶಾರುಖ್ ಸಾಗಿ ಬಂದ ಹಾದಿ ಅತ್ಯಂತ ರೋಚಕವಾಗಿದೆ. ಅವರ ಯಶಸ್ಸಿನ ಪಯಣ ಜಗತ್ತಿನ ಲಕ್ಷಾಂತರ ಜನರಿಗೆ ಪ್ರೇರಣಾದಾಯಕವಾಗಿದ್ದು, ಅವರಿಂದ ನಾವೂ ಸಹ ಕಲಿಯುವುದು ಬಹಳಷ್ಟಿದೆ.
ಸತತ ಪರಿಶ್ರಮ, ವ್ಯವಹಾರ ಚಾತುರ್ಯ ಹಾಗೂ ಮಾರುಕಟ್ಟೆಯ ನಿರ್ವಹಣೆಯಿಂದ ಶಾರುಖ್ ಬೃಹತ್ ಉದ್ಯಮವನ್ನು ಕಟ್ಟಿದ್ದು, ಸದ್ಯಕ್ಕೆ ಯಾರೂ ಅವರೊಂದಿಗೆ ಪೈಪೋಟಿ ಮಾಡಲಾಗದಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಈಗ ಅವರಿಗೆ 52 ವರ್ಷಗಳಾಗಿದ್ದರೂ ತಮ್ಮ ಯಶಸ್ಸಿನ ವೇಗ ಒಂದಿಷ್ಟೂ ತಗ್ಗದಂತೆ ನೋಡಿಕೊಂಡಿದ್ದಾರೆ.
ಶಾರುಖ್ ಅವರು ತಮ್ಮ ಯಶಸ್ಸಿನ ಬಗ್ಗೆ ಹೇಳುವುದೇನು ಹಾಗೂ ಅವರಿಂದ ನಾವು ಏನೆಲ್ಲ ಕಲಿಯಬೇಕು ಎಂಬ ತಿಳಿದುಕೊಳ್ಳೋಣ.
ಶ್ರೀಮಂತರಾಗಿ
ಜೀವನದಲ್ಲಿ ದುಡ್ಡಿನ ಬೆನ್ನತ್ತುವುದು ಒಳ್ಳೆಯ ಸಂಗತಿಯಾಗಿದೆ. ಆರ್ಥಿಕವಾಗಿ ಬಲಿಷ್ಠರಾಗಿರುವುದು ಅತಿ ಮುಖ್ಯವಾಗಿದೆ. ಆದರೆ ಹಣ ಗಳಿಸುವಾಗ ಸರಿ ಹಾಗೂ ತಪ್ಪುಗಳ ಬಗ್ಗೆ ಯಾವಾಗಲೂ ಜಾಗ್ರತೆ ಇರಲಿ. ಹಣ ಸಂಪಾದಿಸಲು ಯಾವತ್ತೂ ನಾಚಿಕೆ ಪಡಬೇಡಿ, ಆದರೆ ಅದಕ್ಕಾಗಿ ಸ್ವಾಭಿಮಾನ ಮಾರಿಕೊಳ್ಳುವುದು ಬೇಡ ಎನ್ನುತ್ತಾರೆ ಶಾರುಖ್ ಖಾನ್.
ಸಿರಿವಂತನಾಗುವ ಮೊದಲು ತತ್ವಜ್ಞಾನ ಹೇಳಬೇಡ
ಆನಂದಕರವಾದ ಜೀವನ ನಡೆಸಲು ಹಣ ಅವಶ್ಯವಾಗಿದೆ. ನಿಮಗಾಗಿ ಅಲ್ಲದಿದ್ದರೂ ನಿಮ್ಮ ಕುಟುಂಬಕ್ಕಾಗಿ ಹಾಗೂ ನಿಮ್ಮ ಅವಲಂಬಿತರು, ಪ್ರೀತಿ ಪಾತ್ರರ ಸುಖಕ್ಕಾಗಿಯಾದರೂ ನೀವು ಸಂಪಾದನೆ ಮಾಡಲೇಬೇಕು ಎನ್ನುತ್ತಾರೆ ಶಾರುಖ ಖಾನ್.
ತಂದೆಯ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಹಣವಿಲ್ಲದೆ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಶಾರುಖ ಹಣದ ಮಹತ್ವವನ್ನು ಆಗಲೇ ಅರಿತಿದ್ದರು. ಹೀಗಾಗಿ ತಮ್ಮ ಕುಟುಂಬದವರಿಗೆ ಈಗ ಯಾವುದೇ ಹಣದ ಕೊರತೆಯಾಗಬಾರದೆಂದು ಹಗಲು ರಾತ್ರಿ ದುಡಿಯುತ್ತಾರೆ.
ಮೊದಲು ನಿಮ್ಮ ಪರಿವಾರ ಹಾಗೂ ಪ್ರೀತಿಪಾತ್ರರಿಗೆ ಸಾಕಾಗುವಷ್ಟು ಹಣ ಸಂಪಾದಿಸಿ. ನಂತರವೇ ತತ್ವಜ್ಞಾನದ ಬಗ್ಗೆ ಮಾತನಾಡಿ ಎಂಬುದು ಶಾರುಖ ಅವರ ಅಭಿಪ್ರಾಯವಾಗಿದೆ.
ಸಾಧ್ಯವಿದ್ದಾಗ ಹಣ ಸಂಪಾದಿಸಿ
ವ್ಯಕ್ತಿಯ ಜೀವನ ಹಾಗೂ ಆರೋಗ್ಯ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಹಾಗೆಯೇ ಅವಕಾಶಗಳು ಸಹ ಯಾವಾಗಲೂ ಬರುವುದಿಲ್ಲ. ನಿಮ್ಮ ದೇಹ ಹಾಗೂ ವಯಸ್ಸು ನಿಮ್ಮ ಬೆಂಬಲಕ್ಕಿರುವಾಗ ಹಣ ಗಳಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂಬುದು ಶಾರುಖ ಅವರ ಸಿದ್ಧಾಂತ. ತಮ್ಮ 52 ನೇ ವಯಸ್ಸಿನಲ್ಲಿಯೂ ದಣಿವರಿಯದೆ ದುಡಿಯುತ್ತಿರುವ ಶಾರುಖ ಅವರ ಸಾಮರ್ಥ್ಯ ಎಲ್ಲರಲ್ಲಿ ಇರಲಾರದು.
ಹೂಡಿಕೆಯಲ್ಲಿ ವೈವಿಧ್ಯತೆ ಇರಲಿ
ಕೇವಲ ಚಲನಚಿತ್ರಗಳಿಂದ ಬರುವ ಆದಾಯವನ್ನು ಮಾತ್ರ ಶಾರುಖ ನೆಚ್ಚಿಕೊಂಡಿಲ್ಲ. ಹಲವಾರು ಮೂಲಗಳಿಂದ ಆದಾಯ ಬರುವ ಹಾಗೆ ಅವರು ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ತಮ್ಮಲ್ಲಿನ ತೀವ್ರ ತುಡಿತ ಹಾಗೂ ಪರಿಶ್ರಮದಿಂದ ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ಶಾರುಖ ಅವರಿಗೆ ಚಿತ್ರರಂಗದಿಂದ ಬರುವ ಆದಾಯವನ್ನೇ ನಂಬಿ ಕೂರುವ ಅಗತ್ಯವಿಲ್ಲ. ಚಲನಚಿತ್ರ ನಿರ್ಮಾಣ ಸಂಸ್ಥೆ, ವಿಎಫ್ಎಕ್ಸ್ ಸ್ಟುಡಿಯೊ, ಕ್ರಿಕೆಟ್ ತಂಡ ಸೇರಿದಂತೆ ಹಲವಾರು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಹೀಗೆ ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ಚಿತ್ರ ಒಂದೊಮ್ಮೆ ಫ್ಲಾಪ್ ಆದಲ್ಲಿ ಚಿತ್ರ ವಿತರಕರಿಗೆ ನಷ್ಟವನ್ನು ತುಂಬಿ ಕೊಡುವ ಅತಿ ವಿರಳ ನಿರ್ಮಾಪಕರಲ್ಲೊಬ್ಬರು ಶಾರುಖ.
ಅನಗತ್ಯ ಖರ್ಚು ಬೇಡ
ಹಣ ಸಂಪಾದಿಸಲು ಹಗಲು ರಾತ್ರಿ ಬೆವರು ಸುರಿಸಬೇಕಾಗುತ್ತದೆ. ಗಳಿಸಿದ ಹಣವನ್ನು ಕೆಲಸಕ್ಕೆ ಬಾರದ ವಸ್ತುಗಳನ್ನು ಕೊಂಡುಕೊಳ್ಳಲು ಖರ್ಚು ಮಾಡಬಹುದು ಅಥವಾ ಅದೇ ಹಣವನ್ನು ಹೂಡಿಕೆ ಮಾಡಿ ಮತ್ತಷ್ಟು ಆದಾಯ ಗಳಿಸಬಹುದು. ಹೀಗಾಗಿ ಖರ್ಚು ಮಾಡುವ ಮುನ್ನ ಅದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಮೊದಲು ಚಿಂತಿಸಬೇಕು ಎನ್ನುವುದು ಬಾಲಿವುಡ್ ಬಾದಶಾಹ ಅವರ ಸಿದ್ಧಾಂತವಾಗಿದೆ.
ಯಾವ ಕೆಲಸವೂ ಚಿಕ್ಕದಲ್ಲ
ಶಾರುಖ ಅವರ ಪ್ರಕಾರ ಯಾವ ಉದ್ಯೋಗವೂ ಚಿಕ್ಕದಲ್ಲ. ಒಬ್ಬ ವ್ಯಕ್ತಿಗೆ ಚೆನ್ನಾಗಿ ಬರೆಯಲು ಬರುತ್ತಿದ್ದರೆ ಒಮ್ಮೆಲೇ ಕಾದಂಬರಿ ಬರೆಯುವ ಬದಲು ಚಿಕ್ಕ ಪುಟ್ಟ ಕತೆಗಳನ್ನೇ ಬರೆದು ಜೀವನ ಕಟ್ಟಿಕೊಳ್ಳಬಹುದು ಎನ್ನುತ್ತಾರೆ ಶಾರುಖ.
ಒಂದು ಕಾಲದಲ್ಲಿ ದೂದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಫೌಜಿ ಎಂಬ ಸಣ್ಣ ಬಜೆಟ್ಟಿನ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದ ಶಾರುಖ ಅವರಿಗೆ ಮುಂದೊಂದು ದಿನ ಸೂಪರಸ್ಟಾರ್ ಆಗುವ ಕನಸಿತ್ತು. ಆದರೂ ಅವರು ಚಿಕ್ಕದಾಗಿಯೇ ನಟನೆ ಆರಂಭಿಸಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದು ಮಹತ್ಸಾಧನೆಯಾಗಿದೆ. ಹೀಗಾಗಿ ಯಾವುದೇ ಕೆಲಸ ನಿಕೃಷ್ಟವಲ್ಲ ಎಂಬುದನ್ನು ಅವರ ಜೀವನ ಸಾಧನೆಯಿಂದ ನಮಗೆ ಅರಿವಾಗುತ್ತದೆ.
ನಿಮ್ಮ ಕೆಲಸವೇ ಮಾತಾಡಲಿ
ನಿಮ್ಮ ಕೆಲಸ ನಿಮಗಿಂತ ಎತ್ತರವಾಗಿರಬೇಕು. ನೀವೆಷ್ಟೇ ಎತ್ತರಕ್ಕೆ ಬೆಳೆದರೂ ಕೆಲಸದಲ್ಲಿ ನಿಯತ್ತಿರಬೇಕು
ನೀವು ಮಾಡಿದ ಕೆಲಸವೇ ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ ಜೀವಿಸಬೇಕು - ಶಾರುಖ ಖಾನ್.
ಎಲ್ಲರೂ ತಮ್ಮ ಕೆಲಸದಲ್ಲಿ ಗರಿಷ್ಠವಾಗಿ ತೊಡಗಿಕೊಳ್ಳಬೇಕು. ಯಾವುದೇ ಕೆಲಸವಾಗಲಿ ಅದನ್ನು ಈ ಹಿಂದೆ ಯಾರೂ ಮಾಡಿರದಂತೆ ಹಾಗೂ ಮುಂದೆ ಯಾರೂ ಮಾಡದಂತೆ ಅದರಲ್ಲಿ ಮಗ್ನರಾಗಬೇಕು. ಅತಿ ಸರಳವಾದ ಕೆಲಸವಾದರೂ ಅದನ್ನು ಶಿಸ್ತಿನಿಂದ ಮಾಡುವುದು ಮುಖ್ಯ ಎನ್ನುತ್ತಾರೆ ಖಾನ್.
ಯಶಸ್ಸಿಗೆ ಡಿಗ್ರಿಗಿಂತ ಬದ್ಧತೆಯೇ ಮುಖ್ಯ
ಯಾವುದೋ ಮ್ಯಾನೇಜಮೆಂಟ್ ಡಿಗ್ರಿ ನಿಮ್ಮ ಬಳಿ ಇದ್ದಾಕ್ಷಣ ನೀವು ವ್ಯವಹಾರದಲ್ಲಿ ಉನ್ನತಿ ಗಳಿಸಲಾಗುವುದಿಲ್ಲ. ಅದಕ್ಕಾಗಿ ಬದ್ಧತೆ ಇರುವುದು ಮುಖ್ಯ
ಇದು ಶಾರುಖ ಖಾನ್ ಅವರ ಮಹತ್ವದ ಸಂದೇಶವಾಗಿದೆ. ಇಂದು ಬೃಹತ್ ವ್ಯವಹಾರ ಸಾಮ್ರಾಜ್ಯದ ಒಡೆಯನಾಗಿರುವ ಅವರು ಪದವಿ ಪಡೆದಿದ್ದು ಸಮೂಹ ಸಂಪರ್ಕ ವಿಷಯದಲ್ಲಿ. ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಾದ ಐಐಎಂ, ಹಾರ್ವರ್ಡ್ ಅಥವಾ ಯೇಲ್ಸ್ ಗಳಿಂದ ಯಾವುದೇ ಎಂಬಿಎ ಡಿಗ್ರಿ ಪಡೆಯದ ಶಾರುಖ ಇಂದು ಅದೇ ವಿವಿಗಳ ಆಹ್ವಾನದ ಮೇರೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಮ್ಯಾನೇಜಮೆಂಟ್ ಪಾಠ ಹೇಳುತ್ತಾರೆ ಎಂದರೆ ಅವರ ಸಾಧನೆ ನಮಗೆ ಅರ್ಥವಾಗುತ್ತದೆ.
ಯಶಸ್ಸಿಗೆ ಯಾವುದೇ ಡಿಗ್ರಿಯನ್ನು ನೆಚ್ಚಿ ಕೂರದೇ ಕೇವಲ ತಮ್ಮ ಬದ್ಧತೆ ಹಾಗೂ ಕಠಿಣ ಪರಿಶ್ರಮದಿಂದ ಜಾಗತಿಕ ಸೂಪರಸ್ಟಾರ್ ಆಗಿ ಬೆಳೆದಿದ್ದಾರೆ ಶಾರುಖ ಖಾನ್.
ದೀರ್ಘಾವಧಿಯ ಹೂಡಿಕೆ ಮಾಡಿ
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಶಾರುಖ ಬಾಲಿವುಡ್ ಕಿಂಗ್ ಆಗಲಿಲ್ಲ. ಅವರ ಸತತ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನವೇ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ. ಶಾರುಖ ತಮ್ಮ ಆರಂಭಿಕ ಜೀವನದಲ್ಲಿ ಹಣ ಗಳಿಸಲಾರಂಭಿಸುತ್ತಿದ್ದಂತೆಯೇ ಹಲವಾರು ವ್ಯವಹಾರಗಳಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಿದರು. ವಿಎಫ್ಎಕ್ಸ್ ಸ್ಟುಡಿಯೋ, ಚಿತ್ರ ನಿರ್ಮಾಣ ಸಂಸ್ಥೆ ಅಥವಾ ಐಪಿಎಲ್ ಟೀಂ ಹೀಗೆ ಅನೇಕ ಕಡೆ ಹೂಡಿಕೆ ಮಾಡಿರುವ ಅವರು ಇಂದು ನಟನಾ ವೃತ್ತಿಯನ್ನು ಬಿಟ್ಟರೂ ಆದಾಯ ಮಾತ್ರ ನಿರಂತರವಾಗಿರುವಂತೆ ನೋಡಿಕೊಂಡಿದ್ದಾರೆ.
ಕೊನೆ ಮಾತು
ಶಾರುಖ್ ಖಾನ ಕೇವಲ ಒಬ್ಬ ನಟ ಮಾತ್ರವಲ್ಲ. ನಟನೆ ಬಿಟ್ಟು ಅವರ ಜೀವನದಿಂದ ನಾವೆಲ್ಲ ಕಲಿಯುವುದು ಬಹಳಷ್ಟಿದೆ. ಅವರ ಕಠಿಣ ಶ್ರಮ, ಕೆಲಸದೆಡೆಗಿನ ನಿಷ್ಠೆ, ಸಂಪತ್ತಿನ ಸದ್ಬಳಕೆ ಮುಂತಾದ ವಿಷಯಗಳು ಎಲ್ಲರಿಗೂ ಮಾದರಿಯಾಗಿವೆ. ಒಬ್ಬ ಶ್ರೇಷ್ಠ ನಟನಾಗಿ ದಶಕಗಳಿಂದ ನಾವು ಮೆಚ್ಚಿಕೊಳ್ಳುವ ಶಾರುಖ ಅವರ ಜೀವನ ನಟನೆಯನ್ನೂ ಮೀರಿ ಆದರ್ಶಪ್ರಾಯವಾಗಿದೆ. ಅವರ ನಿಜ ಜೀವನದ ಸಾಧನೆ ನಮಗೆಲ್ಲ ಪ್ರೇರಣಾದಾಯಕ.