ಹಣ ಹೂಡಿಕೆಗೂ ಮುನ್ನ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ 8 ಪ್ರಶ್ನೆಗಳು
ಮಾರುಕಟ್ಟೆಯಲ್ಲಿ ಹೆಚ್ಚಿನ ಆದಾಯ ಬರುವ ಭರವಸೆಗಳನ್ನು ನೀಡುವ ಸಾಕಷ್ಟು ಹೂಡಿಕೆಯ ಕಂಪನಿಗಳಿವೆ. ಏಜೆಂಟ್ಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಮೋಸ ಮಾಡಿರುವ ಕಂಪನಿಗಳ ಉದಾಹರಣೆಯು ಸಾಕಷ್ಟಿದೆ. ಹಣ ಹೂಡಿಕೆ ಮಾಡಿದ ನಂತರ ಲಾಭವನ್ನು ಗಳಿಸದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ಜನರು ಸಾಕಷ್ಟಿದ್ದಾರೆ.
2020ಕ್ಕೆ ಭಾರತದಲ್ಲಿ ಕಡಿಮೆ ಬಂಡವಾಳ ಹೂಡಿಕೆ ಬಿಜಿನೆಸ್ ಐಡಿಯಾ
ಸಮಾಜದಲ್ಲಿ ಒಂದೇ ಬಾರಿಗೆ ಹಣ ಡಬಲ್ ಆಗಬೇಕೆಂದು ಕನಸು ಕಾಣುವವರೇನು ಕಮ್ಮಿ ಇಲ್ಲ. ನೀವು ಕಷ್ಟಪಟ್ಟು ದುಡಿದ ಹಣವು ನೀರಿನಂತೆ ಪೋಲಾಗದಂತೆ ನೋಡಿಕೊಳ್ಳುವುದು ಜಾಣತನ. ಯಾವುದೇ ವ್ಯಾಪಾರ ಅಥವಾ ವಹಿವಾಟಿನಲ್ಲಿ ನೀವು ಹಣವನ್ನು ಹೂಡುವ ಮುನ್ನ ನಿಮ್ಮನ್ನು ನೀವು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.
1. ಹೂಡಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ಅರ್ಥವಾಗಿದೆಯೇ?
ಯಾವುದೇ ವ್ಯವಹಾರದಲ್ಲಿ , ಆಸ್ತಿ ನಿರ್ವಹಣಾ ಕಂಪನಿಗಳಲ್ಲಿ, ಇತರೆ ಹಣಕಾಸು ಸಂಸ್ಥೆಗಳಲ್ಲಿ ನೀವು ಕಷ್ಟ ಪಟ್ಟು ದುಡಿದ ಹಣವನ್ನು ಹೂಡುವ ಮುನ್ನ ನೀವು ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ ಇದಾಗಿದೆ. ನಿಮ್ಮ ಹಣಕ್ಕೆ ಹೆಚ್ಚು ಆದಾಯ ಬರುತ್ತದೆ ಎಂದು ಭರವಸೆ ನೀಡುವ ಹೂಡಿಕೆಯ ತಾಣಗಳು ಸಾಕಷ್ಟಿವೆ.
ಹಾಗಂತ ನೀವು ದಿಢೀರ್ ಎಂದು ಹಣವನ್ನು ಹೂಡುವ ಮುನ್ನ ವ್ಯಾಪಾರದ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳಿ. ಸಾಮಾನ್ಯ ಹೂಡಿಕೆದಾರರು, ಹೂಡಿಕೆ ವಲಯಗಳ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಾರೆ. ಮತ್ತು ಕಂಪನಿಯು ಹೇಗೆ ಆದಾಯವನ್ನು ಗಳಿಸುತ್ತದೆ ಹಾಗೂ ನಮಗೆ ಹೇಗೆ ಆದಾಯ ನೀಡುತ್ತದೆ ಎಂದು ತಿಳಿದುಕೊಳ್ಳುವಲ್ಲಿ ಎಡವಿರುತ್ತಾರೆ. ಇದೇ ಸಾಲಿಗೆ ನೀವು ಸೇರದಿರಿ.
ನೀವು ಯಾವುದೇ ವಲಯದಲ್ಲಿ ಹಣ ಹೂಡಿಕೆ ಮುನ್ನ ಕಂಪನಿಯ ಅಥವಾ ಕ್ಷೇತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ. ಹೇಗೆ ಆದಾಯ ಗಳಿಸುತ್ತದೆ, ನಮಗೆ ಹೇಗೆ ಆದಾಯ ತಂದುಕೊಡಬಹುದು ಎಂದು ಮೊದಲು ಅರ್ಥಮಾಡಿಕೊಳ್ಳಬೇಕು.
2. ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆಯೇ?
ನೀವು ಯಾವಾಗ ಹಣ ಹೂಡಿಕೆಗೆ ಮುಂದಾಗುತ್ತೀರಾ ಎಂಬ ಅರಿವು ನಿಮಗಿರಲಿ. ನಿಮ್ಮ ಹೂಡಿಕೆಗೆ ಒಂದು ಗುರಿಯಿರಲಿ. ಸರಳವಾಗಿ ಹೆಚ್ಚುವರಿ ಹಣವನ್ನು ಪಡೆಯುವ ಮನಸ್ಸಿನಲ್ಲಿ ಮುಂದಾಗದಿರಿ.
ಉದಾಹರಣೆಗೆ ನೀವು ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುತ್ತೀರಾ ಎಂಬುದಾದರೆ, (ಜೀವ ವಿಮೆ, ಆರೋಗ್ಯ ವಿಮೆ, ಮಕ್ಕಳ ವಿದ್ಯಾಭ್ಯಾಸ, ಮನೆ, ಇತರೆ) ನಿಮಗೆ ನಿಖರವಾದ ಗುರಿ ಇರುತ್ತದೆ. ಆ ಮೂಲಕ ನೀವು ಕಾರ್ಯತಂತ್ರದ ಹೂಡಿಕೆಗಳನ್ನು ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯ.
ಉದಾಹರಣೆಗೆ ನೀವು ನಿಮ್ಮ ಮಗಳ ಭವಿಷ್ಯ ರಕ್ಷಣೆಗೆ ಬಯಸಿದರೆ, ನೀವು ಹೆಚ್ಚಿನ ಆದಾಯ ಮತ್ತು ತೆರಿಗೆ ವಿನಾಯಿತಿಯನ್ನು ಪಡೆಯಲು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹಾಗೆಯೇ ನಿವೃತ್ತಿ ನಂತರದ ಬದುಕಿಗಾಗಿ ಅಟಲ್ ಪೆನ್ಷನ್ ಯೋಜನೆಯಂತೆ ಸ್ಕೀಮ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
3. ಹೂಡಿಕೆಯು ಒಳಗೊಂಡಿರುವ ಅಪಾಯಗಳು ಯಾವುವು?
ಯಾವುದೇ ಹೂಡಿಕೆ ಮಾಡುವ ಮುನ್ನ ನಿಮ್ಮ ಹಣವನ್ನು ಕಳೆದುಕೊಳ್ಳುವ ಅಪಾಯಗಳಿಗೆ ಒಳಗಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ನಿಮಗೆ ಹೆಚ್ಚಿನ ಆದಾಯ ಬರದಿದ್ದರೂ ಪರವಾಗಿಲ್ಲ, ನೀವು ಹೂಡಿಕೆ ಮಾಡಿದ ಹಣವನ್ನು ಮಾತ್ರ ಕಳೆದುಕೊಳ್ಳಬಾರದು.
ಸಾಮಾನ್ಯವಾಗಿ ಹಣಕಾಸು ಸಂಸ್ಥೆಗಳು ನಿಮ್ಮ ಹಣವನ್ನು ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ. ಅದರೊಂದಿಗೆ ಆಧಾರವಾಗಿರುವ ಆಸ್ತಿಯನ್ನು ಹೊಂದಿವೆ. ಉದಾಹರಣೆಗೆ ಈಕ್ವಿಟಿ ಮ್ಯೂಚುಯಲ್ ಫಂಡ್ಗಳು ಈಕ್ವಿಟಿಯಲ್ಲಿ ಹಣವನ್ನು ಹೂಡಿಕೆ ಮಾಡುತ್ತವೆ. ಈ ಈಕ್ವಿಟಿಗಳನ್ನು ಲಾರ್ಜ್ ಕ್ಯಾಪ್, ಸ್ಮಾಲ್ ಕ್ಯಾಪ್ ಎಂದು ವರ್ಗೀಕರಿಸಲಾಗಿದೆ. ಪ್ರತಿಯೊಂದು ವಿಭಾಗಗಳು ಯಾವ ರೀತಿಯ ವ್ಯವಹಾರ ಎಂಬುದರ ಆಧಾರದ ಮೇಲೆ ಅವುಗಳಿಗೆ ಸಂಬಂಧಿಸಿದ ಅಪಾಯಗಳನ್ನು ಹೊಂದಿವೆ.
ಹೀಗೆ ಎದುರಾಗುವ ಅಪಾಯಗಳನ್ನು ಅರ್ಥಮಾಡಿಕೊಂಡರಷ್ಟೇ ನೀವು ಹೂಡಿಕೆ ಮಾಡುವ ಹಣದಿಂದ ಆದಾಯ ಬರುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಬಹುದು.
4. ಹೂಡಿಕೆಯಿಂದ ನಾನು ಎಷ್ಟು ಗಳಿಸಬೇಕೆಂದು ನಿರೀಕ್ಷಿಸುತ್ತೇನೆ?
ನೀವು ಮೀಸಲಿಟ್ಟ ಹಣವು ಈ ಹೂಡಿಕೆಗೆ ಎಷ್ಟು ಮುಖ್ಯ? ನಿಮ್ಮ ಯೋಜನೆಯನ್ನು ತಲುಪಲು ನೀವು ಹೂಡಿದ ಹಣದಿಂದ ಎಷ್ಟು ಆದಾಯವನ್ನು ಪಡೆಯಬೇಕು? ಈ ರೀತಿಯ ಪ್ರಶ್ನೆಗಳಿಗೆ ನಿಮ್ಮಲ್ಲಿ ನೀವು ಸ್ಪಷ್ಟತೆ ಪಡೆದುಕೊಳ್ಳಬೇಕು. ಆ ಮೂಲಕ ನಿಮ್ಮ ಭವಿಷ್ಯದ ವೆಚ್ಚಗಳು ಮತ್ತು ಗುರಿಗಳನ್ನು ಆರ್ಥಿಕವಾಗಿ ಯೋಜಿಸಲು ನಿಮಗೆ ಸಾಧ್ಯವಾಗುತ್ತದೆ.
5. ಹೂಡಿಕೆಯಿಂದ ಪ್ರತಿಫಲ ಪಡೆಯಲು ಎಷ್ಟು ದಿನ ಕಾಯಬೇಕಾಗಬಹುದು?
ನಿಮ್ಮ ಹೂಡಿಕೆಯು ನಿವೃತ್ತಿಗೆ ಸಂಬಂಧಿಸಿದ ಹಣಕಾಸಿನ ಅಗತ್ಯವಾದರೆ, ನೀವು 60 ವರ್ಷ ವಯಸ್ಸಿನವರೆಗೂ ಹೂಡಿಕೆಯನ್ನು ಮಾಡಬೇಕಾಗುತ್ತದೆ.
ಇದೇ ರೀತಿ ನೀವು ಯಾವುದರ ಮೇಲೆ ಹೂಡಿಕೆ ಮಾಡಲು ಬಯಸುತ್ತಿರೋ ಆ ಹೂಡಿಕೆಯಿಂದ ಪ್ರತಿಫಲ ಬರುವವರೆಗೂ ನೀವು ಬಂಡವಾಳ ಹೂಡಿಕೆಗೆ ಸಮರ್ಥರೋ, ಅಥವಾ ಹೂಡಿಕೆ ಸಾಧ್ಯವೇ ಎಂಬುದನ್ನು ಅರಿಯಿರಿ. ಜೊತೆಗೆ ನಿಮ್ಮ ಅಪೇಕ್ಷಿತ ಮೊತ್ತವನ್ನು ಪಡೆಯಲು ನೀವು ಎಷ್ಟು ಸಮಯದವರೆಗೆ ಕಾಯಲು ಸಿದ್ಧರಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ಈ ಪ್ರಶ್ನೆಗಳಿಗೆ ಉತ್ತರಿಸಿದಾಗ ಅದಕ್ಕೆ ತಕ್ಕಂತಹ ಸೂಕ್ತ ಹೂಡಿಕೆಯನ್ನು ನೀವು ಮಾಡಲು ಸಾಧ್ಯ.
ಉದಾಹರಣೆಗೆ ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಖಾತೆಯಲ್ಲಿ ಹಣ ಹೂಡಿದರೆ ಪೂರ್ಣವಾಗಿ ಮೆಚ್ಯುರಿಟಿ ತಲುಪಲು 15 ವರ್ಷಗಳು ಬೇಕಾದರೆ, ELSS (ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್) 3 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ನಿಮ್ಮ ಹೂಡಿಕೆಯ ಹಣ ಬರುತ್ತದೆ.
6. ಹೂಡಿಕೆ ನೋಂದಾಯಿಸಲಾಗಿದೆಯೇ?
ಕಳೆದ ಹಲವು ವರ್ಷಗಳಿಂದ ಅನೇಕ ಹಗರಣಗಳು ವರದಿಯಾಗಿವೆ. ಜನರನ್ನು ನಂಬಿಸಿ ಮೋಸ ಮಾಡುವ ವಂಚಕರು ಹೆಚ್ಚಾಗಿದ್ದಾರೆ. ಜನರ ನಂಬಿಕೆಗಳು ಮತ್ತು ಸಂಬಂಧಗಳ ಆಧಾರದ ಮೇಲೆ ಜನರಿಗೆ ಮಂಕು ಬೂದಿ ಎರಚುತ್ತಾರೆ. ಈ ವಂಚಕರ ಮೇಲೆ ನ್ಯಾಯಾಲಯದ ಪ್ರಕರಣಗಳು ಸಾಕಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಇದರಿಂದ ನಿಮಗೆ ಆರ್ಥಿಕ ಮತ್ತು ಮಾನಸಿಕ ತೊಂದರೆಯೇ ಹೆಚ್ಚು.
ಹೀಗಾಗಿ ನೀವು ಯಾವುದರ ಮೇಲೆ ಹೂಡಿಕೆ ಮಾಡುತ್ತೀರೋ ಆ ಹಣಕಾಸು ಸಂಸ್ಥೆ ಮತ್ತು ಅದರ ಯೋಜನೆಗಳ ಬಗ್ಗೆ ಸಂಪೂರ್ಣ ಹಿನ್ನೆಲೆ ಪರಿಶೀಲನೆ ಬಹಳ ಮುಖ್ಯ.
7. ಹೂಡಿಕೆ ವಿಫಲವಾದರೆ ನಾನು ಏನು ಮಾಡಬೇಕು?
ನಿಮ್ಮ ಹೂಡಿಕೆ ವಿಫಲವಾದರೆ ನಿಮ್ಮ ಆಯ್ಕೆಗಳು ಯಾವುವು? ತಪ್ಪನ್ನು ಸರಿಪಡಿಸಲು ಅಥವಾ ನಿಮ್ಮ ಹಣವನ್ನು ಮರಳಿ ಪಡೆಯಲು ನೀವು ಯಾರನ್ನು ಸಂಪರ್ಕಿಸಬಹುದು?
ನೀವು ಗ್ರಾಹಕರಾಗಿರುವ ಹಣಕಾಸು ಸಂಸ್ಥೆ ಆರ್ಬಿಐ ಅಥವಾ ಸೆಬಿ ಅಥವಾ ಐಆರ್ಡಿಎಐಗೆ ಉತ್ತರಿಸುತ್ತದೆಯೇ ಎಂದು ಮೊದಲು ತಿಳಿದುಕೊಳ್ಳಬೇಕು. ಆ ಮೂಲಕ ನೀವು ಸಹಾಯಕ್ಕಾಗಿ ಅವುಗಳನ್ನು ಸಂಪರ್ಕಿಸಬಹುದು.
ಏಕೆಂದರೆ ನೀವು ಮಾಡುವ ವ್ಯವಹಾರ ಕುರಿತಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಇವು ಒದಗಿಸುತ್ತವೆ. ಜೊತೆಗೆ ದೂರುಗಳನ್ನು ಎದುರಿಸಲು, ಅವರ ಕುಂದುಕೊರತೆಗಳಿಗೆ ಪರಿಹಾರ ವಿಧಾನಗಳನ್ನು ಸಹ ಅವು ಹೊಂದಿರುತ್ತವೆ.
8. ಹೂಡಿಕೆಯಲ್ಲಿ ನನ್ನ ನಿರ್ಗಮನ ಆಯ್ಕೆಗಳು ಯಾವುವು?
ನೀವು ಯಾವುದೇ ಯೋಜನೆಯಲ್ಲಿ ಹಣ ಹೂಡುವ ಮುನ್ನ ಎಷ್ಟು ಕಾಲ ಹಣ ಹೂಡಿಕೆ ಮಾಡಬೇಕಾಗಬಹುದು ಎಂದು ಅರಿತುಕೊಳ್ಳಿ. ಮತ್ತು ಮೆಚುರಿಟಿ ತಲುಪುವುದಕ್ಕೂ ಮುನ್ನ ಪೂರ್ವಾವಧಿ ನಿರ್ಗಮನದ ನಿಯಮಗಳೇನು? ಎಷ್ಟು ವರ್ಷಗಳ ಬಳಿಕ ಪೂರ್ವ ನಿರ್ಗಮನವಾಗಬಹುದು ಎಂದು ತಿಳಿದುಕೊಳ್ಳಬೇಕು.
ಸಾಮಾನ್ಯವಾಗಿ, ಯೋಜನೆಗಳನ್ನು ಹಿಂತೆಗೆದುಕೊಳ್ಳುವ ಮೊದಲು ಗ್ರಾಹಕರು ಕನಿಷ್ಠ ಅವಧಿಗೆ ಮುಂದುವರಿಯಬೇಕು ಎಂಬ ನಿಯಮವಿರುತ್ತದೆ. ಅದನ್ನು ಪೂರೈಸದೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಹೀಗಾಗಿ ನೀವು ಯಾವುದೇ ಯೋಜನೆಗೆ ಸಹಿ ಮಾಡುವ ಮೊದಲು ಯೋಜನೆಗೆ ಸಂಬಂಧಿತ ದಾಖಲೆಗಳನ್ನು ಎಚ್ಚರದಿಂದ ಓದಿ. ಅಲ್ಲದೆ ಹೂಡಿಕೆಯ ಪೂರ್ವ ನಿರ್ಗಮನದ ಬಗ್ಗೆ ಅರಿಯಿರಿ.