ಎಷ್ಟು 'ಐಎಂಎ'ಗಳು ಬಂದವೋ? ಅದೆಷ್ಟು ಸಾವಿರ ಕೋಟಿ ನುಂಗಿದವೋ?
ಒಂದು ಕಾಲ ಇತ್ತು. ನಿವೃತ್ತಿ ಆದ ನಂತರ ಬಂದ ಹಣವನ್ನು ಬ್ಯಾಂಕ್ ನಲ್ಲಿ ಎಫ್.ಡಿ. ಇಟ್ಟರೆ ಹೇಗೋ ಜೀವನ ನಡೆದುಹೋಗುತ್ತದೆ ಎಂದು ಚಿಂತಿಸುತ್ತಿದ್ದರು. ಈಗೇನಾಗಿದೆ ಅಂದರೆ ಗೃಹ ಸಾಲ, ವಾಹನ ಸಾಲ ಬಡ್ಡಿ ದರ ಕಡಿಮೆ ಅಲ್ಲವಾ?! ಬಾಡಿಗೆಗೆ ಮನೆ ಕಟ್ಟೋಣ ಅಥವಾ ವಾಹನ ಬಾಡಿಗೆಗೆ ಬಿಡುವಂಥದ್ದು ತೆಗೆದುಕೊಳ್ಳೋಣ ಅನ್ನುವವರೇ ಜಾಸ್ತಿ ಆಗಿದ್ದಾರೆ.
ಇದು ಪೂರ್ತಿ ತಪ್ಪು ಅಂತ ನಾನು ಹೇಳುವುದಿಲ್ಲ. ಆದರೆ ಪೂರ್ತಿಯಾಗಿ ಸರಿ ಅಂತಲೂ ಅಲ್ಲ. ಸದ್ಯದ ಸ್ಥಿತಿ ಹೇಗಿದೆ ಅಂದರೆ, ಬ್ಯಾಂಕ್ ನಲ್ಲಿ ಎಫ್.ಡಿ.ಗೆ ಹಣ ಇಟ್ಟು ಅದರ ಬಡ್ಡಿ ಹಣದಲ್ಲಿ ಬದುಕು ನಡೆಸಬೇಕಾದವರಿಗೆ ಬಹಳ ಸಮಸ್ಯೆಯಾಗಿದೆ. ಆ ಕಾರಣಕ್ಕೆ ಎಲ್ಲಿ ಹೆಚ್ಚಿನ ಆದಾಯ ಬರುತ್ತದೋ ಅಂಥ ಕಡೆ ಪೂರ್ವಾಪರ ಕೂಡ ಯೋಚಿಸದೆ, ತಮ್ಮ ಶ್ರಮದ ಹಣವನ್ನು ನಯ ವಂಚಕರ ಕೈಗೆ ಇಡುತ್ತಿದ್ದಾರೆ.
ತೀರಾ ಅನಿವಾರ್ಯ ಇರುವವರು ಮಾತ್ರವಲ್ಲ. ತಮ್ಮ ಅಗತ್ಯ ಪೂರೈಸಿದರೆ ಸಾಕು ಎನ್ನುವವರು ಸಹ 'ಪೊಂಜಿ' ಯೋಜನೆಗಳ ಸೆಳೆತಕ್ಕೆ ಸಿಲುಕಿ ಕಷ್ಟಾರ್ಜಿತ ಹಣವನ್ನು ಕಣ್ಣೆದುರೇ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಈಗ ಜೋರು ಸದ್ದು ಮಾಡುತ್ತಿರುವ ಐಎಂಎ ವಂಚನೆ ಕೂಡ ಅಂಥದ್ದೇ 'ಪೊಂಜಿ' ಯೋಜನೆ.
ಏನಿದು ಪೊಂಜಿ ಯೋಜನೆ?
ಬ್ಲೇಡ್ ಕಂಪೆನಿಗಳು, ನಾಮ ತಿಕ್ಕುವ ಕಂಪೆನಿಗಳು, ಒಂದಕ್ಕೆ ನಾಲ್ಕರಷ್ಟು ಬಡ್ಡಿ ನೀಡುವ ಕಂಪೆನಿಗಳು ಹೀಗೆ ಏನೇ ಕರೆದರೂ ಇವುಗಳಿಗೆ ಇರುವ ಜನಜನಿತವಾದ ಹೆಸರು ಅಂದರೆ ಅದು 'ಪೊಂಜಿ' ಯೋಜನೆ. ಹೂಡಿಕೆದಾರರ ಆಸೆ, ಅಗತ್ಯ ಹಾಗೂ ಮುಗ್ಧತೆಯ ಇವರೇ ಬಂಡವಾಳ. ನಯವಾದ ಮಾತುಗಳಿಂದ ಜನರ ಹಣವನ್ನು ತಮ್ಮ ತಿಜೋರಿಗೆ ತುಂಬಿಸಿಕೊಳ್ಳುವುದೇ ಪೊಂಜಿ ಯೋಜನೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಾನುಸಾರ ಗರಿಷ್ಠ (ಮ್ಯಾಕ್ಸಿಮಮ್) ಇಷ್ಟೇ ಬಡ್ಡಿ ನೀಡಬೇಕು ಎಂಬ ನಿಯಮ ಇದೆ. ಅದರರ್ಥ ಏನೆಂದರೆ, ಸದ್ಯದ ಮಾರುಕಟ್ಟೆ ಸನ್ನಿವೇಶದಲ್ಲಿ ಹಣಕ್ಕೆ ಅದಕ್ಕಿಂತ ಹೆಚ್ಚಿನ ಬಡ್ಡಿ ದುಡಿಯುವ ಶಕ್ತಿ ಇರುವುದಿಲ್ಲ ಎಂದು ಸ್ವತಃ ಆರ್ ಬಿಐ ನೀತಿ ನಿರೂಪಿಸುತ್ತದೆ.
ಆದರೆ, ಪೊಂಜಿ ಯೋಜನೆಯಲ್ಲಿ ಪ್ರಸ್ತುತ ಮಾರುಕಟ್ಟೆ ದರದ ಎರಡು, ಮೂರು ಮತ್ತು ಕೆಲ ಸಲ ಅದೆಷ್ಟೋ ಹೆಚ್ಚು ಪಟ್ಟು ಬಡ್ಡಿ ನೀಡಲಾಗುತ್ತದೆ. ಆರಂಭದಲ್ಲಿ ಇವರು ಬಡ್ಡಿ ಕೊಡುವುದು ಕೂಡ ಉಂಟು. ಯಾವಾಗ ಹಣದ ಹರಿವು ಹೆಚ್ಚಾಗಿ, ಒಂದು ಹಂತದಲ್ಲಿ ನಿಂತು ಬಿಡುತ್ತದೋ ಕ್ರಮೇಣ ಈ ಯೋಜನೆ ನಡೆಸುವ ವಂಚಕರು ಬಡ್ಡಿ ನೀಡುವುದು ಕೂಡ ನಿಲ್ಲುತ್ತದೆ. ಒಂದು ದಿನ ಕಂಪೆನಿಯೂ ಇಲ್ಲ, ಅಸಲಿನ ಹಣವೂ ಇಲ್ಲ.
ಈಗ ವ್ಯವಹಾರ ಹೇಗಿದೆ ಗೊತ್ತಾ?
ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಫರ್ನೀಚರ್ ಕೇವಲ ಮೂವತ್ತು ಸಾವಿರಕ್ಕೆ. ಅರವತ್ತು ಸಾವಿರದ ವಜ್ರಾಭರಣ ನಲವತ್ತೈದು ಸಾವಿರಕ್ಕೆ ಮಾರುತ್ತೇವೆ. ನಮ್ಮ ಬಳಿ ಕಾರು ಖರೀದಿಸಿದರೆ ಇಷ್ಟು ಸಾವಿರ ಅಥವಾ ಲಕ್ಷದ ತನಕ ವಿನಾಯಿತಿ, ರಿಯಾಯಿತಿ, ಆಫರ್ ಹೀಗೆ ಸಾವಿರಗಟ್ಟಲೆ-ಲಕ್ಷಗಟ್ಟಲೆ ಹಣವನ್ನು ವ್ಯಾಪಾರ ಮಾಡಲು, ಅದರಿಂದಲೇ ಲಾಭ ಗಳಿಸಲು ಕೂತಿರುವ ವ್ಯಕ್ತಿ ಬಿಟ್ಟು ಕೊಡುವುದು ಸಾಧ್ಯವೆ?
ಹಾಗೆ ಒಂದು ವೇಳೆ ಬಿಟ್ಟುಕೊಡುವುದಾದರೆ ತನ್ನ ಲಾಭದ ಒಂದು ಭಾಗ ಬಿಡಬೇಕು ಅಥವಾ ಆ ವ್ಯವಹಾರವೇ ಮುಚ್ಚುವ ಹಂತದಲ್ಲಿ ಇದ್ದರೆ ಕ್ಲಿಯರೆನ್ಸ್ ಸೇಲ್ ಅಂತ ಮಾರಿದರೂ ಅಸಲನ್ನು ಬಿಟ್ಟುಕೊಡಲು ಸಾಧ್ಯವಾ? ಚಿನ್ನ-ಬೆಳ್ಳಿಯಲ್ಲಿ, ಷೇರು ಮಾರುಕಟ್ಟೆಯಲ್ಲಿ, ವ್ಯಾಪಾರ-ವ್ಯವಹಾರದಲ್ಲಿ ಹೀಗೆ ಯಾವುದರಲ್ಲೂ ಇಂತಿಷ್ಟೆ ಲಾಭ ಬರುತ್ತದೆ ಎಂದು ಖಾತ್ರಿ ನೀಡುವುದಕ್ಕೆ ಸಾಧ್ಯವೇ ಇಲ್ಲ.
ಎಲ್ಲಿ ಹೂಡಿಕೆ ಸೂಕ್ತ?
ಸರಕಾರದ ನಿಯಮಾವಳಿ ಅನ್ವಯ ಎಲ್ಲವನ್ನೂ ಪಾಲಿಸಿ, ಅದಕ್ಕೆ ತೆರಿಗೆ, ಜಿಎಸ್ ಟಿ, ಬ್ರೋಕಿಂಗ್ ಕಂಪೆನಿ ನೀಡುವ ಒಪ್ಪಂದ ಪತ್ರ ಇದ್ದು, ಬಂಡವಾಳ ಸುರಕ್ಷಿತವಾಗಿ ಇರಬೇಕು. ಇದರ ಜತೆಗೆ ವಾಸ್ತವದಲ್ಲಿ ಲಾಭದ ಪ್ರಮಾಣ ಕಾಣುವಂತಿರಬೇಕು. ಅರ್ಥಾತ್ ವ್ಯವಹಾರದಲ್ಲಿ ಪಾರದರ್ಶಕತೆ ಇರಬೇಕು.
ಹಾಗಂತ ಬೇರೆಯವರ ವಹಿವಾಟನ್ನು ಕಣ್ಣು ಮುಚ್ಚಿ ಅನುಸರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮುಖ್ಯವಾಗಿ ಹೂಡಿಕೆಯು ಸುಲಭ ನಗದೀಕರಣ, ಸುರಕ್ಷತೆ ಮತ್ತು ಲಾಭದ ಇಳುವರಿ ಅಂಶಗಳ ಮೇಲೆ ಕೇಂದ್ರೀಕೃತವಾಗಿರುವುದು ಒಳಿತು. ಷೇರುಪೇಟೆಯು ಸಂಪೂರ್ಣ ನಿಯಂತ್ರಿತವಾಗಿದ್ದು. ಅಲ್ಲಿ ಹೂಡಿಕೆದಾರರು ಸ್ವತಃ ಗ್ರಾಹಕರಾಗಿ ನೋಂದಾಯಿಸಿಕೊಂಡು, ಚಟುವಟಿಕೆ ಸ್ವಂತ ನಿರ್ಧಾರದ ತೃಪ್ತಿ ಪಡೆದಂತಾಗುತ್ತದೆ.
ಷೇರುಪೇಟೆ ಚಟುವಟಿಕೆಯ ಬಗ್ಗೆ ತರಬೇತಿ ಶಿಬಿರಗಳಿಗೆ ಸಾವಿರಾರು ರುಪಾಯಿಗಳನ್ನು ತೆತ್ತು ಕಲಿಯುವುದಕ್ಕಿಂತ, ಅದೇ ಮೊತ್ತವನ್ನು ನೇರವಾಗಿ ಅಲ್ಪ ಪ್ರಮಾಣದಲ್ಲಿ ಅಗ್ರಮಾನ್ಯ ಕಂಪೆನಿಗಳಲ್ಲಿ, ಬೆಲೆ ಕುಸಿತ ಕಂಡಾಗ ಹೂಡಿಕೆ ಮಾಡುವುದು ಉತ್ತಮವಾದ ಆಯ್ಕೆ. ಷೇರುಗಳು ಡಿಮ್ಯಾಟ್ ರೂಪದಲ್ಲಿರುವುದರಿಂದ ಒಂದೆರಡು ಷೇರುಗಳನ್ನು ಸಹ ಖರೀದಿಸಬಹುದಾಗಿದ್ದು, ಹೆಚ್ಚಿನ ಬಂಡವಾಳದ ಅವಶ್ಯಕತೆ ಇಲ್ಲದೆ, ಅಪಾಯದ ಮಟ್ಟವನ್ನು ನಿಯಂತ್ರಿಸಿಕೊಂಡು ಅನುಭವ ಪಡೆಯಬಹುದಾಗಿದೆ.
ಷೇರುಪೇಟೆಯ ಸದ್ಯದ ಪರಿಸ್ಥಿತಿ ಹೇಗಿದೆ?
ಷೇರುಪೇಟೆಯ ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಹೆಚ್ಚಿನ ಏರಿಳಿತಗಳು ಪ್ರದರ್ಶಿತವಾಗುತ್ತವೆ. ಆದರೆ ಪ್ರಮುಖ ಸೂಚ್ಯಂಕಗಳು ಮಾತ್ರ ಉನ್ನತ ಹಂತದಲ್ಲಿದ್ದು, ಬಹಳಷ್ಟು ಕಂಪೆನಿಗಳು ಹೆಚ್ಚಿನ ಕುಸಿತದಲ್ಲಿವೆ. ಷೇರುಪೇಟೆಯಲ್ಲಿ ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡುವ ಕಾರಣ ಭಾರಿ ಕುಸಿತ ಕಂಡ ಕಂಪೆನಿಗಳು ಉತ್ತಮ ಗುಣಮಟ್ಟದ, ಹೂಡಿಕೆದಾರ ಸ್ನೇಹಿಯಾಗಿದ್ದಲ್ಲಿ ಅವುಗಳ ಬೆಲೆ ದಿಢೀರ್ ಏರಿಕೆ ಪ್ರದರ್ಶಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಇತ್ತೀಚೆಗೆ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿರುವ ಗೇಲ್ ಇಂಡಿಯಾ ಷೇರು ಕಳೆದ ಮೂರು ತಿಂಗಳಲ್ಲಿ ಮೂರ್ನಾಲ್ಕು ಬಾರಿ ರು.360ರ ಗಡಿ ದಾಟಿ ಇಳಿಕೆ ಕಂಡಿದೆ. ಸದ್ಯ ರು.308ರ ಸಮೀಪವಿರುವ ಈ ಕಂಪೆನಿ ಇತ್ತೀಚಿನ ಕನಿಷ್ಠ ಬೆಲೆಗೆ ಕುಸಿದಿದೆ. ಇದು ಒಂದು ರೀತಿಯ ವ್ಯಾಲ್ಯೂ ಪಿಕ್ ಅವಕಾಶವಾಗಿದೆ.
ಮುಂದಿನ ತಿಂಗಳು ಕೇಂದ್ರ ಸರಕಾರದ ಬಜೆಟ್ ಮಂಡನೆಯಾಗುವ ಕಾರಣದೊಂದಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅಗ್ರಮಾನ್ಯ ಕಂಪೆನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆ ನಡೆಸುವುದಲ್ಲದೆ, ಘೋಷಿಸಿರುವ ಲಾಭಾಂಶಗಳಿಗೆ ನಿಗದಿತ ದಿನವನ್ನು ಗೊತ್ತು ಪಡಿಸಿರುವ ಕಾರಣ ಪೇಟೆಯಲ್ಲಿ ಚುರುಕಾದ ಚಟುವಟಿಕೆಯು ನಡೆಯುವ ಸಾಧ್ಯತೆಯಿದೆ.
ಆಕರ್ಷಕ ಲಾಭಾಂಶ ವಿತರಿಸಲಿರುವ ಕಂಪೆನಿಗಳು ಮತ್ತು ಲಾಭಾಂಶದ ಪ್ರಮಾಣ:
ಆಟೋಮೊಬೈಲ್ ಕಾರ್ಪೊರೇಷನ್ ಆಫ್ ಗೋವಾ: ರೂ.12.50
ಗ್ರಾಫೈಟ್ ಇಂಡಿಯಾ : ರೂ.35
ಹೆಚ್ ಡಿ ಎಫ್ ಸಿ ಬ್ಯಾಂಕ್ : ರೂ.15
ಹೆಚ್ ಡಿಎಫ್ ಸಿ ಎಎಂಸಿ : ರೂ.12
ಮೈಂಡ್ ಟ್ರೀ : ರೂ.24
ಸೆರಾ: ರೂ.13
ಡಾಕ್ಟರ್ ರೆಡ್ಡಿಸ್ ಲ್ಯಾಬ್ : ರೂ.20
ಹಿಂದುಸ್ಥಾನ್ ಯುನಿಲಿವರ್: ರೂ.13
ಟಾಟಾ ಇನ್ವೆಸ್ಟ್ ಮೆಂಟ್ : ರೂ.20
ಟಾಟಾ ಸ್ಟೀಲ್ : ರೂ.13
ಟಾಟಾ ಎಲೆಕ್ಸಿ : ರೂ.13.50
ಟಾಟಾ ಕೆಮಿಕಲ್ : ರೂ.12.50
ಟಾಟಾ ಸ್ಪಾಂಜ್ : ರೂ.12.50
ಬಜಾಜ್ ಆಟೋ :ರೂ.60
ಬಜಾಜ್ ಹೋಲ್ಡಿಂಗ್ಸ್: ರೂ.32.50
ಹೀರೊ ಮೋಟೊಕಾರ್ಪ್ : ರೂ.32
ಶೇಷಸಾಯಿ ಪೇಪರ್ : ರೂ.20
ಬೈಮೆಟಲ್ : ರೂ.10
ಎಂಫಸಿಸ್: ರೂ.27
ಮಹಾರಾಷ್ಟ್ರ ಸ್ಕೂಟರ್: ರೂ.33
ಸ್ವರಾಜ್ ಇಂಜಿನ್ಸ್: ರೂ.50
ಐಶರ್ ಮೋಟಾರ್: ರೂ.125
ಪಿಈಎಲ್ : ರೂ.28
ಎಚ್ ಡಿಎಫ್ ಸಿ : ರೂ.17.50
ಬ್ಲೂ ಡಾರ್ಟ್ : ರೂ.12.50
ಜೆ ಕೆ ಸಿಮೆಂಟ್: ರೂ.10
ಟೆಕ್ ಮಹಿಂದ್ರಾ: ರೂ.14
ಹಾಕಿನ್ಸ್ : ರೂ.80
ಕಮ್ಮಿನ್ಸ್: ರೂ.10
ಕಿರ್ಲೋಸ್ಕರ್ ಇಂಡಸ್ಟ್ರೀಸ್ : ರೂ.21
ನೊವಾರ್ಟಿಸ್ : ರೂ.10
ಬ್ರಿಟಾನಿಯಾ : ರೂ.15
ಎಂಆರ್ ಎಫ್ : ರೂ.54
ಗುಡ್ ಇಯರ್ : ರೂ.13
ಅಬ್ಬಾಟ್ ಇಂಡಸ್ಟ್ರೀಸ್ : ರೂ.65
ಬಾಷ್ : ರೂ.105
ಮಾರುತಿ ಸುಜುಕಿ : ರೂ.80
ಟೈಡ್ ವಾಟರ್ : ರೂ.75
ಎಂಜಿಎಲ್ : ರೂ.10.50
ವಿಶೇಷ ಸೂಚನೆ
ಲಾಭಾಂಶದ ಉದ್ದೇಶದಿಂದ ಷೇರು ಖರೀದಿಸಬೇಕಾದರೆ ನಿಗದಿತ ದಿನ ಮತ್ತು ಗಾತ್ರದ ಬಗ್ಗೆ ಖಾತ್ರಿಪಡಿಸಿಕೊಳ್ಳಿರಿ.
ಪೇಟೆಗಳಲ್ಲಿ ಉತ್ತಮ ಷೇರುಗಳ ಬೆಲೆ ಕುಸಿತದಲ್ಲಿದ್ದ ಸಂದರ್ಭವು ದೀರ್ಘ ಕಾಲದ ಹೂಡಿಕೆಗೆ ಉತ್ತಮ ಅವಕಾಶವಾಗಿರುತ್ತದೆ. ಪೇಟೆಯು ಯಾವ ದಿಶೆಯಲ್ಲಿ ಚಲಿಸುತ್ತದೆ ಎಂದು ಮುಂಚಿತವಾಗಿ ನಿರ್ಧರಿಸುವುದು ಸಾಧ್ಯವಿಲ್ಲದಂತಹ ರೀತಿಯ ವಾತಾವರಣದ ಈ ಸಂದರ್ಭದಲ್ಲಿ ಚಟುವಟಿಕೆ ನಡೆಸುವಾಗ ನೆನಪಿನಲ್ಲಿಡಬೇಕಾದ ಅಂಶವೆಂದರೆ 'ಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ- ಇರುವೆಯಾಗಿ ಸಕ್ಕರೆ ತಿನ್ನೋಣ'. ಅಂದರೆ ಚಟುವಟಿಕೆಯ ಗಾತ್ರ ಸೀಮಿತವಾಗಿದ್ದಲ್ಲಿ ಅಪಾಯ ಕಡಿಮೆ.