ನಿಮ್ಮ ನಂತರ ಆಸ್ತಿ ಹಂಚಿಕೆ ಸಮಸ್ಯೆ ಆಗಬಾರದು ಎಂದಿದ್ದಲ್ಲಿ ಈ ಐದು ನಿಯಮ ಪಾಲಿಸಿ
ಒಂದೇ ಮನೆಯಲ್ಲಿ ಇರುತ್ತಾ, ಪ್ರೀತಿಯಿಂದ ಸಮಯ ಕಳೆಯುತ್ತಾ ಇರುವಾಗ ಯಾರು ತಾನೇ ಯಾವುದೋ ಅನಾಹುತವನ್ನು ಸುಮ್ಮಸುಮ್ಮನೆ ನೆನೆದು, ಯಾವುದಕ್ಕೂ ಇರಲಿ ಎಂದು ಅದಕ್ಕೆ ಸಿದ್ಧತೆ ಮಾಡುತ್ತಾರೆ. ಹೌದು, ಈಗ ಪ್ರಸ್ತಾವ ಮಾಡುತ್ತಿರುವುದು ಸಾವಿನ ಕುರಿತು ಎಂದು ನಿಮ್ಮ ಊಹೆ ಆಗಿದ್ದಲ್ಲಿ, ಅದು ನಿಜ.
ಏಕೆಂದರೆ, ತಮ್ಮ ತಂದೆ- ತಾಯಿ, ಅಣ್ಣ- ತಮ್ಮ, ಅಕ್ಕ- ತಂಗಿ ಮತ್ಯಾವುದೇ ಹತ್ತಿರದ ಸಂಬಂಧದಲ್ಲಿ ಅವರಿಗೆ ಎಲ್ಲಿ ಆಸ್ತಿ ಇತ್ತು, ಯಾವ ಬ್ಯಾಂಕ್ ನಲ್ಲಿ ಅಕೌಂಟ್ ಇತ್ತು, ಇನ್ಷೂರೆನ್ಸ್ ಗಳನ್ನು ಮಾಡಿಸಿದ್ದರಾ ಮತ್ತು ಹಾಗೊಂದು ವೇಳೆ ಮಾಡಿದ್ದರೆ ನಾಮಿನಿಯಾಗಿ ಯಾರನ್ನು ಮಾಡಿದ್ದರು ಎಂಬಿತ್ಯಾದಿ ಮಾಹಿತಿ ಇರುವುದೇ ಇಲ್ಲ.
CIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಸಲೀಸು ಮಾಡಿಕೊಳ್ಳಿ
ಈ ಬಗ್ಗೆ ಕೇಳಿದರೆ ಏನಂದುಕೊಂಡಾರು ಎಂದು ಮುಜುಗರ ಇರಬಹುದು. ಅಥವಾ ತುಂಬ ಆರೋಗ್ಯವಾಗಿದ್ದಾರೆ, ಅವರಿಗೆ ಏನಾಗುವುದಕ್ಕೆ ಸಾಧ್ಯ ಎಂಬ ಧೋರಣೆಯೂ ಇರಬಹುದು. ಆದರೂ ನಮ್ಮ ಅಗಲಿಕೆಯಿಂದ ಹತ್ತಿರದವರು ಹಾಗೂ ಬೇಕಾದವರು ಆಸ್ತಿ ಮತ್ತಿತರ ವಿಚಾರಗಳಿಗೆ ಅಲೆದಾಡುವಂತೆ ಆಗಬಾರದು. ಆದ್ದರಿಂದ ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಏನು ಮಾಡಬಹುದು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಹತ್ತಿರದ ಕುಟುಂಬ ಸದಸ್ಯರ ಮೇಲೆ ಮಾತ್ರ ವಿಶ್ವಾಸ ಇಡಿ
ಒಂದು ಕುಟುಂಬ ಅಂದ ಮೇಲೆ ಹಲವು ಸಂಬಂಧಿಕರು ಇರುತ್ತಾರೆ. ಆ ಪೈಕಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಆರ್ಥಿಕ ವ್ಯವಹಾರಗಳ ಬಗ್ಗೆ ತಿಳಿಸಬಹುದು ಎಂಬುದನ್ನು ನಿರ್ಧರಿಸಬೇಕು. ಆಪ್ತರು ನಮ್ಮಿಂದ ದೂರವಾದರು ಎಂಬ ದುಃಖದಲ್ಲಿ ದುರ್ಬಲರಾದವರ ಪಾಲಿಗೆ ಆಸರೆಯಾಗಿ ನಿಲ್ಲಬಹುದಾದ ವ್ಯಕ್ತಿಯನ್ನು ಈ ಜವಾಬ್ದಾರಿಗೆ ಆರಿಸಿಕೊಳ್ಳಬೇಕು. ಮುಖ್ಯವಾಗಿ ಅವರಿಗೆ ಹಣಕಾಸು- ಕಾನೂನು ವಿಚಾರಗಳ ಅರಿವಿರಬೇಕು. ನಿಮ್ಮ ಜತೆಗೆ ಬಹಳ ಆಪ್ತರಾಗಿರುವಂಥ ಹಾಗೂ ನಂಬಿಕೆಗೆ ಅರ್ಹರಾಗಿರುವಂಥವರ ಸಹಾಯವನ್ನು ಪಡೆದುಕೊಳ್ಳಿ.
ಕುಟುಂಬ ಸದಸ್ಯರಿಗೆ ಎಲ್ಲ ಮಾಹಿತಿ ಇರಬೇಕು
ನಾವು ತುಂಬ ಚಟುವಟಿಕೆಯಿಂದ ಇರುವಾಗಲೇ ಸಂಗಾತಿ ಅಥವಾ ಮಕ್ಕಳಿಗೆ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ತಿಳಿಸಬೇಕು. ಹಾಗೆ ಎಲ್ಲ ವಿಚಾರಗಳು ಅವರಿಗೆ ಗೊತ್ತಿದ್ದಲ್ಲಿ ಮೂರನೇ ವ್ಯಕ್ತಿಯ ನೆರವು ತೆಗೆದುಕೊಳ್ಳಬೇಕು ಎಂಬ ಸನ್ನಿವೇಶವೇ ಉದ್ಭವಿಸುವುದಿಲ್ಲ. ಆದ್ದರಿಂದ ಯಾವುದೇ ವ್ಯವಹಾರ ಇರಲಿ, ಆ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿದಿರಲಿ.
ಹಣಕಾಸು ವರ್ಗಾವಣೆ ನಿಯಮಗಳ ಪ್ರಕ್ರಿಯೆಯಲ್ಲಿ ತಡವಾಗದಿರಲಿ
ಕುಟುಂಬ ಸದಸ್ಯರನ್ನು ಕಳೆದುಕೊಂಡ ದುಃಖ ಸಹಿಸುವುದು ಅಷ್ಟು ಸಲೀಸಲ್ಲ. ಆದರೂ ಅಂಥ ಸಂದರ್ಭದಲ್ಲಿ ಎಲ್ಲ ದಾಖಲೆಗಳು ಮತ್ತು ಕಾಗದಪತ್ರಗಳನ್ನು ಉತ್ತರಾಧಿಕಾರಿಗಳ ಹೆಸರಿಗೆ ಮಾಡಿಕೊಳ್ಳಬೇಕು. ಇದಕ್ಕೆ ಆರು ತಿಂಗಳಿಂದ ಎರಡ್ಮೂರು ವರ್ಷದ ತನಕ ಸಮಯ ಹಿಡಿಸಬಹುದು. ಇನ್ನು ಇನ್ಷೂರೆನ್ಸ್ ಮೊತ್ತವನ್ನು ಕ್ಲೇಮ್ ಮಾಡಬೇಕಿದ್ದಲ್ಲಿ ಅದಕ್ಕೆ ಸಮಯದ ಗಡುವಿದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಪ್ರಕ್ರಿಯೆ ಶುರು ಮಾಡುವುದು ಅತಿ ಮುಖ್ಯ.
ಎಲ್ಲ ಮುಖ್ಯ ದಾಖಲೆಗಳದು ಹಲವು ನಕಲು ಪ್ರತಿ ಇರಲಿ
ಹಲವು ದಾಖಲೆಗಳ ಜತೆ ಮರಣ ಪ್ರಮಾಣಪತ್ರ, ಆಧಾರ್, ಪ್ಯಾನ್ ಕಾರ್ಡ್ ಇಂಥದ್ದನ್ನು ಪ್ರಸ್ತುತ ಪಡಿಸಬೇಕಾಗುತ್ತದೆ. ಭಾರತದಲ್ಲಿ ಈಗಲೂ ದಾಖಲೆಗಳ ಆಧಾರದಲ್ಲೇ ಹಲವು ಕೆಲಸಗಳು ಆಗುತ್ತವೆ. ಫಿಸಿಕಲ್ ಆಗಿ ಸಹಿ ಮತ್ತು ದಾಖಲಾತಿಗಳು ಅಗತ್ಯ ಬೀಳುತ್ತವೆ. ಅದು ಕೂಡ ಯಾವುದೇ ವಂಚನೆ ಆಗಬಾರದು ಎಂಬ ಕಾರಣಕ್ಕೆ ಮಾಡಲಾಗುತ್ತದೆ. ಆದ್ದರಿಂದ ಆ ಎಲ್ಲ ದಾಖಲೆಗಳದು ಹಲವು ನಕಲು ಪ್ರತಿಗಳು ಇರಿಸಿಕೊಳ್ಳಿ.
'ವಿಲ್' ಮಾಡಿಡುವುದರಿಂದ ಕುಟುಂಬ ಸುರಕ್ಷಿತ
ವಿಲ್ ಬರೆಯಿರಿ. ಅಂದರೆ ತಮ್ಮ ನಂತರ ಆಸ್ತಿಯನ್ನು ಹೇಗೆ ಹಂಚಿಕೊಳ್ಳಬೇಕು ಎಂದು ಬಯಸುತ್ತೀರೋ ಅದರ ಕಾನೂನುಬದ್ಧ ಪತ್ರ ಅದು. ಇದರಿಂದ ಉತ್ತರಾಧಿಕಾರಿಗಳಿಗೆ ಅನುಕೂಲ ಆಗುತ್ತದೆ. ಮೃತರ ಆಸ್ತಿಯ ಮೇಲಿನ ಹಕ್ಕು ಪೂರ್ಣ ಪ್ರಮಾಣದಲ್ಲಿ ವರ್ಗಾವಣೆ ಆಗುತ್ತದೆ. ಕಲಹಗಳು ಏರ್ಪಡುವುದು ಕೂಡ ತಡೆಯಬಹುದು. ತಮಗೆ ಕಡಿಮೆ ಆಯಿತು, ಇನ್ನೊಬ್ಬರಿಗೆ ಜಾಸ್ತಿ ಆಯಿತು ಎಂದು ಆಸ್ತಿ ಹಂಚಿಕೆ ಸಮಯದಲ್ಲೇ ಅವರವರಲ್ಲೇ ಕಾದಾಟ ನಡೆಸುವುದು ಇದರಿಂದ ತಪ್ಪುತ್ತದೆ.