ಲಾಕ್ಡೌನ್ ಸಂದರ್ಭದಲ್ಲೂ ಹಣ ಬರುವ ಪ್ರಧಾನ ಮಂತ್ರಿ ಯೋಜನೆಗಳು ಇಲ್ಲಿವೆ
ದೇಶದಲ್ಲಿ ಕೊರೊನಾ ಲಾಕ್ಡೌನ್ನಂತಹ ಈ ಕಠಿಣ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿಯು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಮುನ್ನೆಡೆಯುತ್ತಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ಜನರಿಗೆ ಅನುಕೂಲವಾಗಲೆಂದೇ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ಈ ಹಿಂದೆಯೇ ಅನೇಕ ಪ್ರಧಾನ ಮಂತ್ರಿ ಯೋಜನೆಗಳು ಸಹ ಜನರ ಕಷ್ಟಕ್ಕೆ ನೆರವಾಗುತ್ತಿವೆ.
ಹೀಗೆ ಸರ್ಕಾರದ ಅನೇಕ ಯೋಜನೆಗಳು ಬಡವರು, ವೃದ್ಧರು, ಮಹಿಳೆಯರು, ರೈತರಿಗೆ ಅನುಕೂಲವಾಗುವಂತಹ ವೇದಿಕೆಯನ್ನು ನಿರ್ಮಿಸಿವೆ. ಹೀಗೆ ಜನಸಾಮಾನ್ಯರಿಗೆ ಸಹಾಯವಾಗುವಂತಹ ಕೇಂದ್ರದ ನಾನಾ ಯೋಜನೆಗಳನ್ನು ಒಟ್ಟಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿ.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ
ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ (ಪಿಎಂಎಂವಿವೈ) ಎಂಬುದು ಹೆರಿಗೆ, ಬಾಣಂತಿಯರಿಗೆ ಲಾಭದ ಕಾರ್ಯಕ್ರಮವಾಗಿದ್ದು, ಇದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಅನುಗುಣವಾಗಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಭಾರತ ಸರ್ಕಾರದಿಂದ ಜಾರಿಗೆ ತರಲಾಗಿದೆ.
ಗರ್ಭೀಣಿ ಮತ್ತು ಬಾಣಂತಿಯರಿಗೆ ಉಂಟಾಗುವ ತೊಂದರೆ, ಅನಾರೋಗ್ಯಗಳಾದ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣಗಳನ್ನು ತಡೆಯಲು ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿ ತಂದಿದೆ.
ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯಡಿಯಲ್ಲಿ ಮೊದಲನೆ ಬಾರಿ ಗರ್ಭಿಣಿಯಾದವರಿಗೆ ಮೂರು ಹಂತದಲ್ಲಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ 5 ಸಾವಿರ ರುಪಾಯಿ ಸಹಾಯಧನ ಜಮಾವಣೆಯಾಗಲಿದೆ. ಈ ಯೋಜನೆಗೆ ಎಲ್ಲಾ ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು ಅರ್ಹರು.
ರಾಜ್ಯ ಸರ್ಕಾರದ ಮಾತೃಶ್ರೀ ಯೋಜನೆ
ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕುಟುಂಬ) ಗರ್ಭಿಣಿಯರಿಗೆ ರಾಜ್ಯ ಸರಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಫಲಾನುಭವಿಗಳಿಗೆ ಒಟ್ಟು 6 ಸಾವಿರ ರುಪಾಯಿ ಸಹಾಯಧನ ನೀಡಲಾಗುತ್ತದೆ. ಇದನ್ನು ಎರಡು ಹಂತದಲ್ಲಿ ಪಡೆಯಬಹುದು. ಮೊದಲನೆಯದು ಹೆರಿಗೆ ಪೂರ್ವದ ಮೂರು ತಿಂಗಳಲ್ಲಿ ತಲಾ 1 ಸಾವಿರ ರುಪಾಯಿ ಹಾಗೂ ಹೆರಿಗೆ ನಂತರದ ಮೂರು ತಿಂಗಳಲ್ಲಿ ತಲಾ 1 ಸಾವಿರ ರುಪಾಯಿ ನೀಡಲಾಗುತ್ತದೆ
ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಎರಡು ಹೆರಿಗೆಗೆ 6 ಸಾವಿರ ರುಪಾಯಿ ಸಹಾಯಧನ ಪಡೆಯಬಹುದು. ಹಾಗೂ ಜನನಿ ಸುರಕ್ಷಾ ಯೋಜನೆಯಡಿ 600 ರುಪಾಯಿ ನೀಡಲಾಗುತ್ತಿದೆ. ಈ ಮೂರು ಯೋಜನೆಯಿಂದ ಗರ್ಭಿಣಿ ಹಾಗೂ ಬಾಣಂತಿಯರು 6,600 ರುಪಾಯಿಗಳನ್ನು ಸಹಾಯಧನದ ರೂಪದಲ್ಲಿ ಪಡೆಯಬಹುದು
ಉಜ್ವಲ ಯೋಜನೆಯಡಿ 3 ತಿಂಗಳು ಉಚಿತ LPG ಸಿಲಿಂಡರ್
ಲಾಕ್ಡೌನ್ ಸಂದರ್ಭದಲ್ಲಿ ಬಡವರಿಗೆ ಅನುಕೂಲ ಆಗಲೆಂದು ಕೇಂದ್ರ ಸರ್ಕಾರ ಈಗಾಗಲೇ ಉಜ್ವಲ ಯೋಜನೆಯಡಿ ಎಲ್ಪಿಜಿ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳವರೆಗೂ 3 ಅನಿಲ ಸಿಲಿಂಡರ್ಗಳನ್ನು ಉಚಿತವಾಗಿ ನೀಡುತ್ತಿದೆ. ಇದರಿಂದಾಗಿ ಬಿಪಿಎಲ್ ಅಡಿಯಲ್ಲಿ ಎಲ್ಪಿಜಿ ಸಂಪರ್ಕ ಪಡೆದಿರುವ 8 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿದೆ.
ಜನ್ಧನ್ ಖಾತೆ ತಿಂಗಳಿಗೆ 500 ರುಪಾಯಿ
ಲಾಕ್ಡೌನ್ ವೇಳೆಯಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಈಗಾಗಲೇ ಹಲವು ಯೋಜನೆಗಳು ಜಾರಿಯಲ್ಲಿದ್ದು, ಅದರಲ್ಲಿ ಜನ್ಧನ್ ಖಾತೆಗೆ ತಿಂಗಳಿಗೆ 500 ರುಪಾಯಿ ನೀಡುವುದು ಸಹ ಒಂದಾಗಿದೆ. ಜನ್ ಧನ್ ಅಕೌಂಟ್ ಹೊಂದಿರುವ 20 ಕೋಟಿ ಮಹಿಳೆಯರಿಗೆ ತಲಾ 500 ರುಪಾಯಿ ಮೂರು ತಿಂಗಳ ಕಾಲ ಕೇಂದ್ರ ಸರ್ಕಾರ ನೀಡುತ್ತಿದೆ.
ವಯೋವೃದ್ಧರು, ವಿಧವೆಯರು ಮತ್ತು ದಿವ್ಯಾಂಗರಿಗೆ ತಿಂಗಳಿಗೆ 1000 ರುಪಾಯಿ
ಲಾಕ್ಡೌನ್ ಸಂದರ್ಭದಲ್ಲಿ ಜನರು ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಯೋವೃದ್ಧರು ಕೊರೊನಾ ಸೋಂಕಿನ ಕುರಿತು ಬಹಳ ಎಚ್ಚರದಿಂದಿರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಜೊತೆಗೆ ವಯೋವೃದ್ಧರು, ವಿಧವೆಯರು ಮತ್ತು ದಿವ್ಯಾಂಗರಿಗೆ ತಿಂಗಳಿಗೆ 1000 ರುಪಾಯಿ ಪಿಂಚಣಿ ನೀಡಲಾಗುವುದು ಎಂದು ತಿಳಿಸಿದೆ.
ಮಹಿಳಾ ಸಂಘಗಳಿಗೆ 20 ಲಕ್ಷದವರೆಗೆ ಸಾಲ
ಮಹಿಳಾ ಸ್ವ-ಸಹಾಯ ಸಂಘಗಳು ದೇಶದ ಆರ್ಥಿಕ ಅಭಿವೃದ್ಧಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಭಾರತದ ಜಿಡಿಪಿಯಲ್ಲಿ ಇದರ ಪಾತ್ರವು ಗಮನಾರ್ಹವಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಸ್ವ-ಸಹಾಯ ಮಹಿಳಾ ಸಂಘಗಳಿಗೆ ದೀನ್ ದಯಾಳ್ ಯೋಜನೆಯಡಿ 20 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಈಗಾಗಲೇ ತಿಳಿಸಿದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದ್ದು, ನಿರ್ದಿಷ್ಟ ವಯಸ್ಸು ತಲುಪಿದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. 60 ವರ್ಷ ವಯಸ್ಸಿನ ನಂತರ 3,000 ರುಪಾಯಿ ಮಾಸಿಕ ಪಿಂಚಣಿ ಪಡೆಯಬಹುದು.
ತಿಂಗಳಿಗೆ 15,000 ರುಪಾಯಿವರೆಗೆ ಗಳಿಸುವ ಅಸಂಘಟಿತ ವಲಯದ ಕಾರ್ಮಿಕರು, ಈ ಯೋಜನೆಗೆ 18 ಮತ್ತು 40 ವರ್ಷ ವಯಸ್ಸಿನ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ಚಂದಾದಾರರು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಪ್ರವೇಶಿಸಿ, 55 ರುಪಾಯಿ ಮಾಸಿಕ ಕೊಡುಗೆ ಪಾವತಿಸುತ್ತಾ ಹೋದರೆ ಅವನು ಅಥವಾ ಅವಳು ನಿವೃತ್ತಿಯ ಮಾಸಿಕ ಪಿಂಚಣಿಯಾಗಿ 3,000 ರುಪಾಯಿ ಪಡೆಯಬಹುದು.
ಪ್ರಧಾನ ಮಂತ್ರಿ ಕಿಸಾನ್ ಯೋಜನೆ
ಈ ಯೋಜನೆಯಂತೆ ವಾರ್ಷಿಕ 6 ಸಾವಿರ ರೂಪಾಯಿ ಹಣವನ್ನು ಸಣ್ಣ ಹಿಡುವಳಿದಾರ ರೈತನ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಆಧಾರ್ ಕಾರ್ಡ್ ಸಂಖ್ಯೆ ನೋಂದಣಿ ಮೇಲೆ ಈ ಸಹಾಯಧನವನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರ ಕೂಡ ಇದೇ ರೀತಿ ಯೋಜನೆಯನ್ನು ಘೋಷಣೆ ಮಾಡಿದೆ. ಆದ್ರೆ ಕೇಂದ್ರ ಸರ್ಕಾರ 4 ತಿಂಗಳಿಗೊಮ್ಮೆ 2 ಸಾವಿರ ಕೊಟ್ಟರೆ, ರಾಜ್ಯ ಸರ್ಕಾರ 6 ತಿಂಗಳಿಗೊಮ್ಮೆ 2 ಸಾವಿರ ಧನ ಸಹಾಯ ಮಾಡುವುದಾಗಿ ತಿಳಿಸಿದೆ. ಆದರೆ ಕೇಂದ್ರದ ಯೋಜನೆ ಜಾರಿಯಾಗಿದ್ದು, ರಾಜ್ಯದ ಯೋಜನೆಗೆ ಹಣ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಕಿಸಾನ್ ಸಮ್ಮಾನ್ ಯೋಜನೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದದ ಕೇಂದ್ರ ಸರ್ಕಾರವೂ ದೇಶದ ಬೆನ್ನಲುಬು ಎನಿಸಿಕೊಂಡಿರುವ ಅನ್ನದಾತನಿಗೆ ಪಿಂಚಣಿ ಸೌಲಭ್ಯ ಸಿಗಬೇಕು ಎನ್ನುವ ಕಾರಣಕ್ಕೆ ಜಾರಿ ಮಾಡಿರುವ ಯೋಜನೆ ಇದಾಗಿದೆ. 60 ವರ್ಷ ಆಗುವ ತನಕ ಪ್ರತಿ ತಿಂಗಳು ರೈತ 100 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾ ಹೋದರೆ, ಕೇಂದ್ರ ಸರ್ಕಾರವೂ ಕೂಡ 100 ರೂಪಾಯಿ ಹಣವನ್ನು ಅನ್ನದಾತರ ಖಾತೆಗೆ ಜಮಾ ಮಾಡುತ್ತದೆ. ಅಂತಿಮವಾಗಿ 60 ವರ್ಷ ಪೂರೈಸಿದ ಬಳಿಕ ರೈತರಿಗೆ ಪಿಂಚಣಿ ನೀಡಲಾಗುತ್ತದೆ. ಒಂದು ವೇಳೆ ಪಿಂಚಣಿ ಪಡೆಯಬೇಕಿದ್ದ ರೈತ ಸಾವನ್ನಪ್ಪಿದರೆ, ಆತನ ಮಡದಿ ಅಂದರೆ ಹೆಂಡತಿಗೆ ಪಿಂಚಣಿಯ ಅರ್ಧ ಹಣವನ್ನು ಕೊಡಲಾಗುತ್ತದೆ. ಈ ಯೋಜನೆಗೆ ಆರಂಭಿಕ ನಿಧಿಯಾಗಿ ಕೇಂದ್ರ ಸರ್ಕಾರ 5 ಕೋಟಿ ಹಣವನ್ನು ಮೀಸಲಿಟ್ಟಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 18001 801551 ಸಂಪರ್ಕಿಸಬಹುದು.
ಫಸಲ್ ಭೀಮಾ ಯೋಜನೆ
ರೈತರು ಬೆಳೆದ ಬೆಳೆಗೆ ರೈತ ಮೊದಲೇ ಇಂತಿಷ್ಟು ಹಣವನ್ನು ವಿಮಾ ಕಂಪನಿಗೆ ಪಾವತಿ ಮಾಡಿದ್ದು, ಒಂದು ವೇಳೆ ಬೆಳೆ ಮಳೆ ಗಾಳಿಯಿಂದ ನಷ್ಟವಾದರೆ ಅಥವಾ ಮಳೆ ಬೀಳದೆ ಬೆಳೆ ನಷ್ಟವಾದರೆ ಅಥವಾ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿ ಉಂಟಾದರೆ ರೈತನಿಗೆ ಪರಿಹಾರದ ಮೊತ್ತ ಬರಲಿದೆ. 1 ಎಕರೆ ರಾಗಿ ಬೆಳೆಗೆ ಸುಮಾರು ಅಂದಾಜು 300 ರೂಪಾಯಿ ವಿಮೆ ಪಾವತಿ ಮಾಡಿದ್ದು, ಮಳೆ ಇಲ್ಲದೆ ಬೆಳೆ ನಷ್ಟ ಹೊಂದಿದ್ದರೆ ಸರಿ ಸುಮಾರು 15 ಸಾವಿರ ಪರಿಹಾರ ಬರಲಿದೆ. ಇದೇ ರೀತಿ ವಿವಿಧ ಬೆಳೆಗಳಿಗೆ ಪ್ರತ್ಯೇಕ ಪ್ರೀಮಿಯಂ ಇದ್ದು, ರೈತರು ಇದರ ಲಾಭ ಪಡೆಯಬಹುದು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ
ಕೇಂದ್ರ ಸರ್ಕಾರವು ಗರೀಬ್ ಕಲ್ಯಾಣ ಯೋಜನೆಯಡಿ ಈಗಾಗಲೇ 31 ಕೋಟಿ ಜನರಿಗೆ ಒಟ್ಟು 28 ಸಾವಿರ ಕೋಟಿ ರೂಪಾಯಿ ನೆರವನ್ನು ನೀಡಿದೆ. ಒಟ್ಟಾರೆ ಮೊತ್ತದ ಹಣದಲ್ಲಿ 13,855 ಕೋಟಿ ರೂಪಾಯಿ ಹಣವನ್ನು 6.93 ಕೋಟಿ ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ನೀಡಲಾಗಿದೆ. ಇನ್ನು ಪ್ರಧಾನಮಂತ್ರಿ ಜನಧನ್ ಯೋಜನೆಯ ವ್ಯಾಪ್ತಿಯಲ್ಲಿ ಬರುವ 19.86 ಕೋಟಿ ಮಹಿಳಾ ಖಾತೆದಾರರಿಗೆ ಸರ್ಕಾರದಿಂದ 9,930 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜೊತೆಗೆ 2.16 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3,066 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.