ಈ 11 ಲಕ್ಷಣಗಳು ನಿಮ್ಮಲ್ಲಿವೆಯಾ? ಹಾಗಿದ್ದರೆ ಕೋಟ್ಯಧಿಪತಿಯಾಗ್ತೀರಿ
ಸಮಾನವಾದ ಆಸಕ್ತಿ ಇರುವವರು ಹೇಗೆ ಶೀಘ್ರವಾಗಿ ಸ್ನೇಹಿತರಾಗಿಬಿಡ್ತಾರೆ ಗೊತ್ತಾ? ಉದಾಹರಣೆಗೆ ಸಂಗೀತದಲ್ಲಿ ಆಸಕ್ತಿ ಇರುವವರು, ಸಿನಿಮಾ, ಸಾಹಿತ್ಯ, ಕ್ರೀಡೆ ಹೀಗೆ ಯಾವುದೇ ವಿಚಾರವಾದರೂ ಸರಿ. ಅದೇ ರೀತಿ ಲಕ್ಷಾಧೀಶ್ವರ ಅಥವಾ ಕೋಟ್ಯಧೀಶ್ವರ ಆಗುವವರಲ್ಲಿ ಕೆಲವು ಸಾಮಾನ್ಯ ಸ್ವಭಾವ ಕಂಡುಬರುತ್ತದೆ. ಇದನ್ನು ಉದ್ದೇಶಪೂರ್ವಕವಾಗಿ ಅಭ್ಯಾಸ ಮಾಡಿಕೊಂಡಿರಬಹುದು ಅಥವಾ ಅವರ ಮೂಲ ಸ್ವಭಾವವೇ ಹೀಗಿರಬಹುದು.
ಈ ಲೇಖನದಲ್ಲಿ ಪಟ್ಟಿ ಮಾಡಿ, 11 ಲಕ್ಷಣಗಳನ್ನು ನೀಡಲಾಗುತ್ತಿದೆ. ವಿಶ್ವದ ನಾನಾ ಭಾಗದಲ್ಲಿ ಇರುವ ಶ್ರೀಮಂತರಲ್ಲಿ, ಅದರಲ್ಲೂ ಲಕ್ಷಾಧೀಶ- ಕೋಟ್ಯಧೀಶರಲ್ಲಿ ಕಂಡುಬಂದಿರುವ ಸಾಮಾನ್ಯ ಅಂಶಗಳು ಇವು. ಈ ಪೈಕಿ ನಿಮ್ಮಲ್ಲಿ ಎಷ್ಟಿವೆ ಗಮನಿಸಿ, ನೋಡಿ. ಒಂದು ವೇಳೆ ಇವತ್ತಿಗೆ ನಿಮ್ಮ ಬಳಿ ಶ್ರೀಮಂತಿಕೆ ಇಲ್ಲದಿರಬಹುದು. ಆದರೆ ನಿಮ್ಮ ಸ್ವಭಾವ- ನಡವಳಿಕೆಯೇ ಸಿರಿತನವನ್ನು ತರುತ್ತದೆ.
ಶ್ರೀಮಂತರಾಗಲು, ಶ್ರೀಮಂತಿಕೆ ಉಳಿಯಲು ಮೇಧಾವಿಯ ಸಲಹೆಗಳು
ಇನ್ನು ಮುಂದೆ ಆ 11 ಲಕ್ಷಣಗಳ ಬಗ್ಗೆ ಓದಿ. ನಿಮ್ಮ ಸ್ವಭಾವದ ಜತೆ ಹೋಲಿಸಿಕೊಂಡು ನೋಡಿ.
ಒಂದಕ್ಕಿಂತ ಹೆಚ್ಚು ಆದಾಯ ಮೂಲ
ಅತ್ಯಂತ ಶ್ರೀಮಂತರು ಎನಿಸಿಕೊಂಡವರು ನಿಮ್ಮ ಕಣ್ಣೆದುರು ತಕ್ಷಣಕ್ಕೆ ಯಾರು ಬರುತ್ತಾರೆ ಎಂಬುದನ್ನು ನೆನಪಿಸಿಕೊಳ್ಳಿ. ಅವರ್ಯಾರೂ ಒಂದೇ ಆದಾಯವನ್ನು ನೆಚ್ಚಿಕೊಂಡಿರುವುದಿಲ್ಲ. ಸಾಫ್ಟ್ ವೇರ್ ವ್ಯವಹಾರದಿಂದ ಶುರು ಮಾಡಿದ್ದಲ್ಲಿ ಆ ನಂತರವಾದರೂ ನಾನಾ ಕಡೆ ಹೂಡಿಕೆ ಮಾಡಿ, ಹೆಚ್ಚಿನ ಆದಾಯ ಮೂಲವನ್ನು ಸೃಷ್ಟಿಸಿಕೊಂಡಿರುತ್ತಾರೆ. ಹಾಗಿದ್ದ ಎಷ್ಟು ಆದಾಯ ಮೂಲಗಳನ್ನು ಮಾಡಿಕೊಂಡಿರುತ್ತಾರೆ ಅಂತ ಕೇಳಿದರೆ, ರಿಯಲ್ ಎಸ್ಟೇಟ್ಸ್ ಬಾಡಿಗೆ ಆದಾಯ, ಹೋಟೆಲ್- ರೆಸ್ಟುರಾಂಟ್, ಫ್ಯಾಷನ್ ಹೀಗೆ ಶೇಕಡಾ 65ರಷ್ಟು ಮಂದಿ ಕನಿಷ್ಠ ಮೂರು ಮೂಲವನ್ನು ಸೃಷ್ಟಿಸಿಕೊಂಡಿರುತ್ತಾರೆ ಎಂಬ ಉತ್ತರ ದೊರೆಯುತ್ತದೆ ವಿಶ್ಲೇಷಕರಿಂದ.
ಹೂಡಿಕೆಗಾಗಿ ಉಳಿತಾಯ ಮಾಡುತ್ತಾರೆ
ಉಳಿತಾಯ ಮಾಡುತ್ತಾ ಸಾಗಿದರೆ ಶ್ರೀಮಂತಿಕೆ ಎಂಬುದು ಕೇವಲ ಕನಸಾಗಿ ಉಳಿದಿರುತ್ತದೆ. ಏಕೆಂದರೆ ಉಳಿತಾಯದ ಮೇಲೆ ಸಿಗುವ ರಿಟರ್ನ್ಸ್ ಬಹಳ ಕಡಿಮೆ. ಅದೇ ಉಳಿತಾಯದ ಹಣವನ್ನು ಅದೆಷ್ಟು ಬೇಗ ಹೂಡಿಕೆ ಆರಂಭಿಸಿದಲ್ಲಿ ಅಷ್ಟು ಉತ್ತಮ. ಸರಾಸರಿ ಲಕ್ಷಾಧೀಶ- ಕೋಟ್ಯಧೀಶರು ತಮ್ಮ ಶೇಕಡಾ 20ರಷ್ಟು ಆದಾಯವನ್ನು ಪ್ರತಿ ವರ್ಷ ಹೂಡಿಕೆ ಮಾಡುತ್ತಾರಂತೆ. ಆದ್ದರಿಂದ ಎಷ್ಟು ಹಣ ಉಳಿತಾಯ ಮಾಡುತ್ತಾರೆ ಎಂಬುದಕ್ಕಿಂತ ಅದನ್ನು ಎಲ್ಲಿ- ಹೇಗೆ ಹೂಡಿರುತ್ತಾರೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.
ಸುತ್ತಲೂ ಸಾಧಕರೇ ಇರುತ್ತಾರೆ
ನಮ್ಮ ಸುತ್ತ ಎಂಥವರಿದ್ದಾರೆ ಎಂಬುದರ ಮೇಲೆ ಸಾಧನೆ- ಹಣ, ಹೆಸರು ಎಲ್ಲವೂ ಅವಲಂಬಿಸಿರುತ್ತದೆ. ಒಂದು ಇನ್ಫೋಸಿಸ್ ಕಂಪೆನಿಯಿಂದ ಅದೆಷ್ಟು ಮಂದಿಯ ಹೆಸರು ಇವತ್ತು ಚಲಾವಣೆಯಲ್ಲಿ ಇದೆ ಅಲ್ಲವೆ? ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಇರಿಸಿಕೊಂಡಿದ್ದಾರೆ ಎಂದು ಸರಳವಾಗಿ ಹೇಳುವಂತೆ ಅಲ್ಲ ಇದು. ರಿಲಯನ್ಸ್, ಟಾಟಾ, ಆಪಲ್, ಮೈಕ್ರೋಸಾಫ್ಟ್, ಗೂಗಲ್, ಫೇಸ್ ಬುಕ್... ಹೀಗೆ ಯಾವುದರ ಹೆಸರನ್ನಾದರೂ ತೆಗೆದುಕೊಳ್ಳಿ. ಹಣ ಮಾಡಿದವರ ಸುತ್ತಲೂ ಸಾಧಕರೇ ಇರುತ್ತಾರೆ. ಅಯಸ್ಕಾಂತ ಮತ್ತೊಂದು ಅಯಸ್ಕಾಂತವನ್ನೇ ಸೆಳೆಯುತ್ತದೆ.
ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ
ಸಂಪತ್ತು ಬಂದಿದೆ ಅಥವಾ ಇದೆ ಎನ್ನುವಂಥವರನ್ನು ಗಮನಿಸಿ ನೋಡಿ. ತಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಲಾಭ- ನಷ್ಟದ ಮಾತು ಕೂಡ ಪಕ್ಕಕ್ಕಿಟ್ಟು, ತಾವು ತೆಗೆದುಕೊಂಡ ನಿರ್ಧಾರವನ್ನು ಸರಿ ಎಂದು ಸಾಬೀತು ಮಾಡುವ ಸಲುವಾಗಿಯೇ ಕೆಲಸ ಮಾಡುತ್ತಾರೆ. ಇದಕ್ಕೆ ರತನ್ ಟಾಟಾ ಮಾತು ಅತ್ಯುತ್ತಮ ಉದಾಹರಣೆ. "ನಾನು ಮೊದಲಿಗೆ ನಿರ್ಧಾರ ಕೈಗೊಳ್ಳುತ್ತೇನೆ, ಆ ನಂತರ ಅದನ್ನು ನಿಜ ಮಾಡುತ್ತೇನೆ," ಎಂಬುದು ರತನ್ ಟಾಟಾ ಅವರ ಮಾತು.
ಮುಕ್ತಮನಸ್ಸು ಇರುತ್ತದೆ
ಯಾವುದೇ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವಾಗ ಬಹಳ ಮುಕ್ತ ಮನಸ್ಸಿನಿಂದ ಇರುತ್ತಾರೆ. ತಮ್ಮ ನಂಬಿಕೆಗೆ ವಿರುದ್ಧವಾದ ಅಭಿಪ್ರಾಯ ಬಂದಾಗಲೂ ಅದನ್ನು ಕೇಳಿಸಿಕೊಳ್ಳುತ್ತಾರೆ. ಬದಲಾವಣೆಯ ಅಗತ್ಯ ಇದ್ದಾಗ ಮಾಡಿಕೊಳ್ಳುತ್ತಾರೆ. ಅತ್ಯಂತ ಶ್ರೀಮಂತರು ತಮ್ಮ ಜತೆ ಕೆಲಸ ಮಾಡುವವರ ಅಭಿಪ್ರಾಯವನ್ನು ಕೇಳಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಜನರ ಅಭಿಪ್ರಾಯದ ಬಗ್ಗೆಯೂ ಲಕ್ಷ್ಯ್ ನೀಡುತ್ತಾರೆ.
ಹಣದ ವಿಚಾರದಲ್ಲಿ ಏನು ಬೇಕು ಎಂಬ ಸ್ಪಷ್ಟತೆ
ನಿಮಗೆ ಏನು ಬೇಕು ಹಾಗೂ ಎಷ್ಟು ಬೇಕು ಎಂಬ ಸ್ಪಷ್ಟತೆ ಇದ್ದಲ್ಲಿ ಸಿರಿವಂತರ ಮನಸ್ಥಿತಿ ನಿಮ್ಮಲ್ಲಿ ಇದೆ ಅಂತಲೇ ಲೆಕ್ಕ. ಬಹಳ ಮಂದಿ ಸಿರಿವಂತರು ತಮ್ಮ ಗುರಿಯನ್ನು ಮೊದಲಿಗೆ ನಿಗದಿ ಮಾಡಿಕೊಂಡು ಅದಕ್ಕಾಗಿ ದುಡಿಯುತ್ತಾರೆ. ಆ ನಂತರ ಗೌರವಯುತವಾಗಿ ಬದುಕಲು ತಮಗೆ ಬೇಕಾದಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದಿದ್ದನ್ನು ದಾನ ಮಾಡುತ್ತಾರೆ ಅಥವಾ ಉತ್ತಮ ಉದ್ದೇಶಕ್ಕೆ ಬಳಸುತ್ತಾರೆ. ಶೇಕಡಾ 80ರಷ್ಟು ಮಂದಿ ಶ್ರೀಮಂತರು ನಿತ್ಯವೂ ತಮ್ಮ ಗುರಿಯ ಅವಲೋಕನ ಮಾಡುತ್ತಲೇ ಇರುತ್ತಾರಂತೆ.
ಕೆಲಸದಲ್ಲಿ ಸ್ಥಿರತೆ ಕಾಣುತ್ತದೆ
ಸುಮ್ಮನೆ ಕಲ್ಪಿಸಿಕೊಳ್ಳಿ. ಮನೆಗೆ ಹಾಕಿದ ಅಡಿಪಾಯದ ಮೇಲೆ ಸಾಲಾಗಿ, ತುಂಬ ಶ್ರದ್ಧೆಯಿಂದ ಇಟ್ಟಿಗೆಯನ್ನು ಮೊದಲ ಸಾಲಿನಲ್ಲಿ ಜೋಡಿಸಲಾಗಿರುತ್ತದೆ. ಇದು ಆರಂಭದ ಶ್ರದ್ಧೆ. ಅದೇ ಹನ್ನೆರಡು ಅಡಿಯೋ ಅಥವಾ ಹದಿನಾಲ್ಕು ಅಡಿಯೋ ಗೋಡೆ ಉದ್ದಕ್ಕೂ ಅದೇ ಶ್ರದ್ಧೆ ಕಾಣಿಸಿದಲ್ಲಿ ಶ್ರೀಮಂತಿಕೆ ಪಡೆಯುವ ಹಾದಿಯಲ್ಲಿ ನೀವಿದ್ದೀರಿ ಎಂದರ್ಥ. ಬಹಳ ಮಂದಿಯ ಸಮಸ್ಯೆ ಏನೆಂದರೆ, ಆರಂಭದಲ್ಲಿ ಉತ್ಸಾಹ ಮಧ್ಯದಲ್ಲಿ ಕೊನೆಯ ತನಕ ಇರುವುದಿಲ್ಲ. ಆದರೆ ಶ್ರೀಮಂತಿಕೆಯನ್ನು ಹೊಂದಿರುವ ಹಲವರನ್ನು ಕಂಡುಬರುವ ಸಾಮಾನ್ಯ ಅಂಶ: ಕಟ್ಟಿ ನಿಲ್ಲಿಸುವ ಶ್ರದ್ಧೆ ಹಾಗೂ ಅದರಲ್ಲಿನ ಸ್ಥಿರತೆ.
ಆಲೋಚನೆಗಳ ಬಗ್ಗೆ ಮಾತನಾಡುತ್ತಾರೆ, ವಸ್ತುಗಳ ಕುರಿತಲ್ಲ
ನಾಲ್ಕು ಜನ ನೀವು ಸ್ನೇಹಿತರು ಸೇರಿದಾಗ ಏನು ಮಾತನಾಡ್ತೀರಿ? ಶ್ರೀಮಂತರು ಮಾತ್ರ ಆಲೋಚನೆಗಳ ಬಗ್ಗೆ ಮಾತನಾಡುತ್ತಾರಂತೆ. ಅಂದರೆ ಯಾವುದೋ ಗ್ಯಾಜೆಟ್, ಬೈಕ್, ಕಾರು ಮತ್ತೊಂದು ಎಂಬುದನ್ನು ಬಿಟ್ಟು, ತಮಗೆ ಹೊಳೆದ ಐಡಿಯಾಗಳ ಬಗ್ಗೆ ಹೆಚ್ಚು ಚರ್ಚಿಸುತ್ತಾರಂತೆ. ಒಂದು ಐಡಿಯಾ ಜಗತ್ತನ್ನೇ ಬದಲಿಸುತ್ತದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು.
ಪುಸ್ತಕ ಓದುವುದಕ್ಕೆ ಆದ್ಯತೆ
ಶ್ರೀಮಂತರು ಅಂತ ಇವತ್ತು ಚಲಾವಣೆಯಲ್ಲಿ ಇರುವವರೆಲ್ಲ ವಿದ್ಯಾವಂತರು ಅಂತಲ್ಲ. ಅತ್ಯುತ್ತಮ ಶಿಕ್ಷಣ ಪಡೆದವರಲ್ಲ. ಆದರೆ, ಸಾಹಿತ್ಯ ಮತ್ತಿತರ ಪುಸ್ತಕಗಳನ್ನು ಓದುತ್ತಾ ಜೀವನದ ಪಾಠಗಳನ್ನು ಕಲಿತವರು. ವಾರೆನ್ ಬಫೆಟ್ ಕೂಡ ತಮ್ಮ ದಿನದ ಬಹುತೇಕ ಸಮಯವನ್ನು ಪುಸ್ತಕ ಓದುವುದಕ್ಕೆ ಅಂತಲೇ ಮೀಸಲಿಡುವುದಾಗಿ ಹೇಳಿದ್ದಾರೆ.
ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳುವವರು
ಮಧ್ಯಮ ವರ್ಗದವರ ಜೀವನ ಅಂದರೆ ಕೆಲಸಕ್ಕೆ ಹೋಗುವ ಸಂಬಳ ಸಾಕಾಗಲ್ಲ, ಬಿಜಿನೆಸ್ ಮಾಡಿದಲ್ಲಿ ರಿಸ್ಕ್ ತಡ್ಕೊಳ್ಳಲ್ಲ ಎಂಬ ಸ್ಥಿತಿಯದು. ಆದರೆ ಗಮನಿಸಿ ನೋಡಿ, ತಮ್ಮ ಜೀವನದ ಅತಿ ಮುಖ್ಯ ಘಟ್ಟದಲ್ಲೆಲ್ಲ ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಂಡ ಶ್ರೀಮಂತರು ಕಂಡುಬರುತ್ತಾರೆ. ತಮ್ಮ ಜ್ಞಾನ, ತಿಳಿವಳಿಕೆ ಮೂಲಕ ಸಮಸ್ಯೆಗಳನ್ನು ದಾಟುತ್ತಾರೆ.
ದೊಡ್ಡ ಯೋಚನೆಗಳು/ಯೋಜನೆಗಳು
ದೊಡ್ಡ ಗುರಿಗಳನ್ನು ಇರಿಸಿಕೊಳ್ಳುವುದು, ಅದನ್ನು ತಲುಪುವುದಕ್ಕೆ ದೊಡ್ಡ ಪ್ರಯತ್ನಗಳನ್ನು ಮಾಡುವುದು ಶ್ರೀಮಂತರ ಲಕ್ಷಣಗಳಲ್ಲಿ ಒಂದು. ಬಾಹ್ಯಾಕಾಶಕ್ಕೆ ಒಂದು ದೇಶದಿಂದ ಮನುಷ್ಯರ ಸಮೇತ ಕಳುಹಿಸುವುದು ಎಷ್ಟು ದುಬಾರಿಯ, ಸವಾಲಿನ ಕೆಲಸ ಎಂಬುದು ನಿಮಗೇ ಗೊತ್ತಿರುತ್ತದೆ. ಆದರೆ ಎಲಾನ್ ಮಸ್ಕ್ ಸ್ಪೇಸ್ ಟೂರಿಸಂ ಬಗ್ಗೆ ಆಲೋಚನೆ ಮಾಡುತ್ತಾರೆ. ಇದು ಒಂದು ಉದಾಹರಣೆ ಮಾತ್ರ.