ಅರ್ಥಶಾಸ್ತ್ರದಲ್ಲೂ ಬುದ್ಧನ ಚಿಂತನೆ: ಬೌದ್ಧ ಅರ್ಥಶಾಸ್ತ್ರದ ಬಗ್ಗೆ ನಿಮಗೆಷ್ಟು ಗೊತ್ತು?
2008ರ ಆರ್ಥಿಕ ಕುಸಿತ ಇಡೀ ವಿಶ್ವಕ್ಕೆ ಒಂದು ಪಾಠದಂತಾಯಿತು. ಹಲವು ಅಮೆರಿಕನ್ನರು ಮುಕ್ತ ಮಾರುಕಟ್ಟೆಯ ಅನುಕೂಲದ ಬಗ್ಗೆ ಪ್ರಶ್ನಿಸಲು ಆರಂಭಿಸಿದರು. ಈಗಿರುವ ನಮ್ಮ ಆರ್ಥಿಕ ನೀತಿಗಳು ನಿಜಕ್ಕೂ ಅತ್ಯುತ್ತಮವೇ ಎಂಬುದು ಎಲ್ಲರ ಪ್ರಶ್ನೆಯೂ ಹೌದು. ಇದು ಬೆಸ್ಟ್ ಆರ್ಥಿಕ ನೀತಿಗಳು ಎಂದು ಹೇಳುವ ಧೈರ್ಯ ಎಲ್ಲೂ ಕಾಣುತ್ತಿಲ್ಲ.
ಈ ಸವಾಲಿಗೆ ಅಮೆರಿಕದ ಬರ್ಕ್ ಲೀ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಕ್ಲೇರ್ ಬ್ರೌನ್ ಉತ್ತರ ಎಂಬಂತೆ ಕೆಲವು ವಿಚಾರ ಮಂಡಿಸಿದ್ದಾರೆ. ಅವರ ಪ್ರಕಾರ, ಬೌದ್ಧರ ಮೌಲ್ಯವನ್ನು ಅರ್ಥಶಾಸ್ತ್ರದ ನೀತಿಗಳಲ್ಲಿ ಅಳವಡಿಸಿಕೊಳ್ಳುವುದು ಪರಿಹಾರ ಆಗಲಿದೆ. ನಮ್ಮ ನೋವಿನಿಂದ ಆಚೆ ಬರುವ ಬಗ್ಗೆ ಗಮನ ಕೇಂದ್ರೀಕರಿಸಬೇಕು, ಒಬ್ಬರ ಮೇಲೆ ಮತ್ತೊಬ್ಬರು ಅವಲಂಬಿತರು ಮತ್ತು ಈ ಪ್ರಕೃತಿ ಮೇಲೆ ನಮ್ಮ ಅವಲಂಬನೆ ಇದೆ ಎಂಬುದು ತಿಳಿಯಬೇಕು.
'ಬುದ್ಧಿಸ್ಟ್ ಎಕನಾಮಿಕ್ಸ್' ಎಂಬುದು ಆಕೆ ಬರೆದ ಪುಸ್ತಕ. ಅದರಲ್ಲಿ ಆಕೆಯ ಚಿಂತನೆಗಳು ಬಹಳ ವಿವರವಾಗಿ ಇದೆ. ಆದರೆ ಬ್ರೌನ್ ಅವರು ಸಂದರ್ಶನವೊಂದರಲ್ಲಿ ಬೌದ್ಧರ ಅರ್ಥಶಾಸ್ತ್ರದ ಸಾಮರ್ಥ್ಯ ಹಾಗೂ ಭರವಸೆಗಳನ್ನು ಹೇಳುತ್ತಾ ಸಾಗಿದ್ದಾರೆ. ಜತೆಗೆ ಈಗಿನ ನಮ್ಮ ಆರ್ಥಿಕ ಚೌಕಟ್ಟಿನಲ್ಲಿ ಹೆಜ್ಜೆ ತಪ್ಪಿದ್ದೆಲ್ಲಿ ಎಂಬ ವಿಶ್ಲೇಷಣೆ ಕೂಡ ಮಾಡಿದ್ದಾರೆ. ಇದರ ಜತೆಗೆ ಪ್ರತಿ ವ್ಯಕ್ತಿಗೂ ಇದು ಹೇಗೆ ತಳುಕು ಹಾಕಿಕೊಳ್ಳುತ್ತದೆ ಎಂಬುದನ್ನೂ ವಿವರಿಸಿದ್ದಾರೆ.
ಪ್ರಶ್ನೆ: ಬುದ್ಧಿಸ್ಟ್ ಎಕನಾಮಿಕ್ಸ್ ಎಂಬುದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?
ಬ್ರೌನ್: ಬುದ್ಧಿಸ್ಟ್ ಎಕನಾಮಿಕ್ಸ್ ಮೂರು ನಂಬಿಕೆಗಳ ಮೇಲೆ ನಿಂತಿದೆ: ಜನರು ಒಬ್ಬರ ಮೇಲೆ ಮತ್ತೊಬ್ಬರು ಅವಲಂಬಿತರಾಗಿದ್ದಾರೆ, ಜನರು ಪ್ರಕೃತಿ ಮೇಲೆ ಅವಲಂಬಿತರಾಗಿದ್ದಾರೆ. ಇತರರಿಗೆ ನೆರವಾಗಬೇಕು ಮತ್ತು ದುಃಖವನ್ನು ಹೋಗಲಾಡಿಸಬೇಕು. ಏಕೆಂದರೆ, ಒಬ್ಬ ವ್ಯಕ್ತಿಯ ದುಃಖ ಅಂದರೆ ಅದು ಎಲ್ಲರ ದುಃಖವೂ ಹೌದು.
ಪ್ರಶ್ನೆ: ಈ ವಿಷಯದ ಮೇಲೆ ಪುಸ್ತಕ ಬರೆಯಲು ಕಾರಣ ಏನು?
ಬ್ರೌನ್: ವಿದ್ಯಾರ್ಥಿಗಳು ಅಸಮಾನತೆ ಮತ್ತು ಸುಸ್ಥಿರತೆ ಬಗ್ಗೆ ಬಹಳ ಕಾಳಜಿ ಮಾಡುತ್ತಾರೆ. ಇವೆರಡೂ ಬೇರೆ ಎಂಬಂತೆ ಎರಡೂ ಅರ್ಥಶಾಸ್ತ್ರದ ಹೊರಗೇ ಚರ್ಚೆಯಾಗುತ್ತವೆ. ಆದರೆ ಅದು ಸಮಾಧಾನಕರ ಅಲ್ಲ. ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚು ಸಂಯೋಜಿತವಾದದ್ದು ಹಾಗೂ ಪವಿತ್ರವಾದದ್ದು ಬೇಕಿದೆ. ಈ ಬಗ್ಗೆ ಅರ್ಥಶಾಸ್ತ್ರಜ್ಞರು ಕೆಲಸ ಮಾಡಿದರು. ಆದರೆ ಆ ಸಮಸ್ಯೆಯನ್ನು ಕೊಂದುಬಿಟ್ಟರೆ ವಿನಾ ಅವು ಇಂದಿಗೂ ಪ್ರತ್ಯೇಕವಾಗಿಯೇ ಇವೆ. ನಮಗೆ ಅಸಮಾನತೆ ಮತ್ತು ಸುಸ್ಥಿರತೆ ಬಗ್ಗೆ ಗೊತ್ತಿದೆ. ಮುಕ್ತ್ ಮಾರುಕಟ್ಟೆ ಏಕೆ ಉಪಯೋಗ ಇಲ್ಲ ಮತ್ತು ಆ ಭರವಸೆ ಏಕೆ ಉಳಿಯಲ್ಲ ಎಂಬ ಕಾರಣವೂ ಗೊತ್ತಿದೆ. ಆದರೆ ಎಲ್ಲವನ್ನೂ ಒಟ್ಟು ಮಾಡುವುದು ಕಷ್ಟವಿದೆ.
ಆದ್ದರಿಂದ ನಾನು ಅರ್ಥಶಾಸ್ತ್ರ ಅಭ್ಯಾಸ ಮಾಡುವ ಟಿಬೆಟನ್ ಬೌದ್ಧಳಾಗಿ, ಬುದ್ಧನ ಬೋಧನೆಯನ್ನು ಅರ್ಥಶಾಸ್ತ್ರದಲ್ಲಿ ಪರಿಚಯಿಸುವುದು ಹೇಗೆ ಮತ್ತು ಎಲ್ಲವನ್ನೂ ಒಗ್ಗೂಡಿಸುವುದು ಹೇಗೆ ಎಂದು ಚಿಂತಿಸಿದೆ. ನನ್ನ ವಿದ್ಯಾರ್ಥಿಗಳು ಬಹಳ ಸಹಾಯ ಮಾಡಿದರು. ನನ್ನ ಚಿಂತನೆ ಇನ್ನಷ್ಟು ವಿಸ್ತರಿಸಲು ಕಾರಣರಾದರು.
ಪ್ರಶ್ನೆ: ಈ ಪುಸ್ತಕದ ಕೆಲಸ ಮಾಡುವಾಗ ನಿಮಗೆ ತುಂಬ ಆಸಕ್ತಿಕರ ಎನಿಸಿದ ಕೆಲವು ಸಂಶೋಧನೆಗಳು ಯಾವುವು?
ಬ್ರೌನ್: ನೊಬೆಲ್ ಪುರಸ್ಕೃತರಾದ ಅಮರ್ತ್ಯ ಸೇನ್ ರಿಂದ ನಾನು ಶುರು ಮಾಡಿದೆ. ಜನರು ತಮ್ಮ ಜೀವನದ ಗುಣಮಟ್ಟವನ್ನು ಹೇಗೆ ಅಳೆಯುತ್ತಾರೆ ಎಂಬುದರ ಬಗ್ಗೆ ಅವರು ಕೆಲಸ ಮಾಡಿದ್ದರು. ಅಮರ್ತ್ಯ ಸೇನ್ ಅವರು ನನ್ನ ಪುಸ್ತಕ ಓದಿ, ಧನ್ಯವಾದ ಹೇಳಿದರು. ಅವರ ಕೆಲಸದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದಕ್ಕೆ ನನಗೆ ಧನ್ಯವಾದ ಹೇಳಿದರು. ಏಕೆಂದರೆ, ಅವರ ಪ್ರಯತ್ನದಲ್ಲಿ ಸುಸ್ಥಿರತೆಗೆ ಹೆಚ್ಚು ಸ್ಥಾನ ಸಿಕ್ಕಿರಲಿಲ್ಲ. ಪರಿಸರ ಅರ್ಥಶಾಸ್ತ್ರದ ಕಾರಣಕ್ಕೆ ಮನುಷ್ಯರು ಪ್ರಕೃತಿ ಮೇಲೆ ಅವಲಂಬಿತರು ಅಂತ ನಾನು ಹೇಳಿದೆ. ನಾವು ಚೆನ್ನಾಗಿ ಬದುಕುವುದು ಅವಲಂಬಿತವಾದದ್ದು. ಮನುಷ್ಯರ ದುಃಖವನ್ನು ನೋಡಿದೆ, ವಿಶ್ವಸಂಸ್ಥೆಯ ಕೆಲಸವನ್ನು ಗಮನಿಸಿದೆ. ವಿಶ್ವಸಂಸ್ಥೆಯು ಸುಸ್ಥಿರ ಅಭಿವೃದ್ಧಿ, ಮೂಲಭೂತ ಅಗತ್ಯಕ್ಕಾಗಿ ಕೆಲಸ ಮಾಡುತ್ತಿದೆ. ವಿಪರೀತ ಹಸಿವು ಮತ್ತು ಬಡತನದಿಂದ ಜನರನ್ನು ಹೊರತರಲು ಪ್ರಯತ್ನಿಸುತ್ತಿದೆ.
ಈ ಸ್ಪರ್ಧಾತ್ಮಕ ಮಾರುಕಟ್ಟೆ ಮಾದರಿಯ ನಂಬಿಕೆ ಪ್ರಕಾರ ನಾವು ಸ್ವಾರ್ಥಿಗಳು. ಇದನ್ನು ಆಡಂ ಸ್ಮಿತ್ ತೋರಿಸಿರುವುದು. ಆದರೆ ಹೊಸ ಸಂಶೋಧನೆ ಪ್ರಕಾರ, ನಿಸ್ವಾರ್ಥ ಜನರು ಹೇಗಿರುತ್ತಾರೆ ಎಂದು ತೋರಿಸಿದೆ. ಅಂತಿಮವಾಗಿ ಅರ್ಥಶಾಸ್ತ್ರಜ್ಞರಿಗೆ ಸಾಕ್ಷ್ಯ ಸಿಕ್ಕಿದೆ. ಆದ್ದರಿಂದ ಇನ್ನು ಮುಂದೆ ಮನುಷ್ಯರು ಬರೀ ಸ್ವಾರ್ಥಿಗಳು ಎನ್ನಲು ಸಾಧ್ಯವಿಲ್ಲ. ಅದು ದೊಡ್ಡ ಬದಲಾವಣೆ. ಇದು ಅರ್ಥಶಾಸ್ತ್ರಜ್ಞರಿಗೆ ಮಾತ್ರ ಬೇಕಾದ ಸಾಕ್ಷ್ಯ!
ಪ್ರಶ್ನೆ: ನಮ್ಮ ಸದ್ಯದ ರಾಜಕೀಯ ಸನ್ನಿವೇಶಕ್ಕೆ ಅರ್ಥಶಾಸ್ತ್ರದ ಕೊಡುಗೆ ಏನು ಮತ್ತು ಇದಕ್ಕಾಗಿ ಏನು ಮಾಡಿದೆ?
ಬ್ರೌನ್: ನಿಮಗೂ ಗೊತ್ತಿರುತ್ತದೆ. ಅಸಮಾನತೆ ಬಗ್ಗೆ ಅಧ್ಯಯನ ಮಾಡಿರುವ ಹಲವು ಅರ್ಥಶಾಸ್ತ್ರಜ್ಞರ ಪ್ರಕಾರ, ಅಸಮಾನತೆ ವಿಪರೀತ ಹೆಚ್ಚಾದರೆ ಅದರಿಂದ ಸಮಾಜದಲ್ಲಿ ಅಶಾಂತಿ ನೆಲೆಸುತ್ತದೆ. ಎಪ್ಪತರ ದಶಕದಿಂದ ಈಚೆಗೆ ಅಸಮಾನತೆ ಹೆಚ್ಚುತ್ತಾ ಪರಿಸ್ಥಿತಿ ಬಿಗಡಾಯಿಸುತ್ತಾ ಸಾಗಿತು. ಇದು ದಾಖಲೆ ಕೂಡ ಆಗಿದೆ. ಅಸಮಾನತೆ ಎಷ್ಟು ಕೆಟ್ಟದ್ದು ಎಂದು ನಾವು ನೋಡಿದ್ದೇವೆ- ಇದು ಬರೀ ಆದಾಯ ಅಷ್ಟೇ ಅಲ್ಲ, ಸಂಪತ್ತಿನಲ್ಲೂ ಅಷ್ಟೇ.
ನಗರಗಳಲ್ಲಿ ಜನರು ದುಃಖ ಪಡುವುದನ್ನು ನೋಡಿದ್ದೀನಿ. ಹಲವರಿಗೆ ಉದ್ಯೋಗ ಇಲ್ಲ. ತಮ್ಮನ್ನು ಹಾಗೂ ತಮ್ಮ ಕುಟುಂಬದವರನ್ನು ನೋಡಿಕೊಳ್ಳಲು ವಿಪರೀತ ನೋವು ಪಡುತ್ತಾರೆ. ಹಲವರ ಇಂದಿನ ಸ್ಥಿತಿಗೆ ದೊಡ್ಡ ಪ್ರಮಾಣದಲ್ಲಿ ಕಾರಣವಾಗಿರುವುದು ಅಸಮಾನತೆ. ಈ ಜನರಿಗೆ ಇತಿಹಾಸ, ರಾಜಕೀಯ ಮತ್ತು ಅರ್ಥಶಾಸ್ತ್ರದ ಹಿನ್ನೆಲೆ ಸಾಕಷ್ಟಿಲ್ಲ. ಆದರೆ ಟ್ರಂಪ್ ನಂಥವರು ಸದ್ಯದ ಸ್ಥಿತಿಗೆ ವ್ಯಾಪಾರ ಮತ್ತು ವಲಸೆಯನ್ನು ನಿಂದಿಸುತ್ತಾರೆ. ಆದರೆ ಅರ್ಥಶಾಸ್ತ್ರಜ್ಞರಿಗೆ ಇದಲ್ಲ ಕಾರಣ ಎಂಬುದು ಚೆನ್ನಾಗಿ ಗೊತ್ತು.
ದುಃಖವನ್ನು ಹೋಗಲಾಡಿಸಲು ಸುಸ್ಥಿರತೆಯನ್ನು ಸಂಯೋಜನೆ ಮಾಡುವುದು ಬಹಳ ಒಳ್ಳೆಯದು. ಒಂದು ಸಲ ಜನರು ಸ್ವಾರ್ಥಿಗಳು ಎಂಬ ನಮ್ಮ ಆಲೋಚನೆಯನ್ನು ಹೊರಕ್ಕೆ ಹಾಕಬೇಕು. ಜತೆಗೆ ಜನರು ಮತ್ತು ಪ್ರಕೃತಿ ಜತೆಗೆ ನಮ್ಮ ಅವಲಂಬನೆ ಇದೆ ಎಂಬುದು ತಿಳಿಯಲು ಶುರು ಮಾಡಿದರೆ ಎಲ್ಲವೂ ಚೆನ್ನಾಗಿರುತ್ತದೆ. ಜನರು ಶ್ರೀಮಂತರಾಗಿರುವುದನ್ನು ಮತ್ತು ಹೇಗೆ ಮನಸ್ಸು ಕೆಲಸ ಮಾಡುತ್ತದೆ ಎಂದು ನ್ಯೂರೋ ವಿಜ್ಞಾನಿಗಳು ಹೇಳಿದ್ದಾರೋ ಅದಕ್ಕೆ ತಾಳೆ ಕೂಡ ಆಗುತ್ತದೆ.
ಪ್ರಶ್ನೆ: ಯಾವ ನ್ಯೂರೋ ವಿಜ್ಞಾನದ ಸಂಶೋಧನೆ ನಿಮ್ಮ ಗಮನ ಸೆಳೆಯಿತು?
ಬ್ರೌನ್: ಸಂಶೋಧನೆ ಪ್ರಕಾರ, ಜನರು ಮತ್ತೊಬ್ಬರಿಗೆ ನೆರವು ನೀಡುತ್ತಿರುವ ಫೋಟೋಗಳನ್ನು ತೋರಿಸಿದಾಗ ಮೆದುಳಿನಲ್ಲಿ ಬೆಳಕು ಮೂಡುತ್ತದೆ. ಅದೇ ಜನರು ಸ್ವಾರ್ಥಿಗಳಾಗಿ, ಸಂಕುಚಿತವಾಗಿ ವರ್ತಿಸುವುದನ್ನು ತೋರಿಸಿದರೆ ಆ ಭಾವಚಿತ್ರದಿಂದ ಮೆದುಳು ದೂರ ಸರಿಯುತ್ತದೆ. ಜನರು ಸ್ವಭಾವತಃ ಉದಾರಿಗಳು ಮತ್ತು ವಿನಯವಂತರು. ಬುದ್ಧ ಹೇಳಿದ ಮತ್ತೊಬ್ಬರನ್ನು ಪ್ರೀತಿಯಿಂದ ಕಾಣುವ ಗುಣ ಇದೇ. ಸಮಾಜ ಹೇಳುವಂತೆ, ವ್ಯವಹಾರಗಳನ್ನು ಮಾಡು. ಹಣ ಮಾಡು. ಸ್ಪರ್ಧಾತ್ಮಕವಾಗಿರು. ಅಧಿಕಾರ ಹಿಡಿ. ಆದರೆ ಇದು ಸಂತೋಷವಾಗಿರಲು ಕಾರಣವಲ್ಲ. ಆದರೆ ಸಮಾಜವು ಸಂತೋಷವಾಗಿರುವುದನ್ನು ಹೇಳುತ್ತದೆ. ಆಗ ದ್ವಂದ್ವ ಶುರುವಾಗುತ್ತದೆ. ಅದರಿಂದ ನಮಗೆ ನೋವಾಗುತ್ತದೆ.
ಪ್ರಶ್ನೆ: ಅರ್ಥಶಾಸ್ತ್ರ ಮತ್ತು ಸುಖವಾಗಿರುವ ಬಗ್ಗೆ ಬೇರೆ ಆಲೋಚನೆಗಳು ನಿಮಗೆ ಇವೆಯಾ?
ಉತ್ತರ: ಒಬ್ಬ ವ್ಯಕ್ತಿ ಮತ್ತು ದೊಡ್ಡ ಮಟ್ಟದ ಆರ್ಥಿಕ ರಚನೆ ಮಧ್ಯದ ಸಂಬಂಧ ಬಹಳ ಮುಖ್ಯ್. ಬೌದ್ಧ ಅರ್ಥಶಾಸ್ತ್ರದಲ್ಲಿ ನಾವು ಏನು ಹೇಳ್ತೀವಿ: ಒಬ್ಬ ವ್ಯಕ್ತಿ ತನ್ನಿಂದಾದ ಅತ್ಯುತ್ತಮವಾದದ್ದನ್ನು ಮಾಡಬೇಕು. ಮನಸಾರೆ ಬದುಕಬೇಕು. ಇತರರ ಬಗ್ಗೆ ಕಾಳಜಿ ಇರಬೇಕು. ಈ ಪರಿಸರಕ್ಕೆ ಅತ್ಯಂತ ಕಡಿಮೆ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡಬೇಕು... ಹೀಗೆ. ಆದರೆ ಇದರ ಜತೆಗೆ ಎಲ್ಲೆಲ್ಲಿ ಅನ್ಯಾಯ ಆಗುತ್ತದೋ ಆಗ ಮನೆಯಿಂದ ಹೊರಬಂದು ಪ್ರತಿಭಟಿಸಬೇಕು.
ಜನರ ವಿರುದ್ಧ ಅನ್ಯಾಯವನ್ನು ನಿಲ್ಲಿಸಬೇಕು. ಈ ಭೂಮಿಗೆ ಹಾನಿ ಮಾಡುವುದನ್ನು ತಡೆಯಬೇಕು. ಮನೆಯಲ್ಲಿ ಕೂತು ನಮ್ಮ ಜೀವನ ಎಷ್ಟು ಚೆನ್ನಾಗಿದೆ ಎಂದು ಹೆಮ್ಮೆ ಪಡುವುದಲ್ಲ. ಏಕೆಂದರೆ ನಾವು ಈ ಜಗತ್ತಿನಲ್ಲಿ ಜೀವಿಸುತ್ತಿದ್ದೀವಿ. ನಮ್ಮ ಜತೆ ಬದುಕುತ್ತಿರುವ ಜನರು ಹಾಗೂ ಈ ಭೂಮಿ ಯಾರಿಗೂ, ಯಾವುದಕ್ಕೂ ಹಾನಿ ಆಗಬಾರದು.