ನೋಟು ರದ್ದತಿ ವಾರ್ಷಿಕೋತ್ಸವ: ಇದು ಗೆಲುವೋ/ ಸೋಲೋ.. ಲಾಭ-ನಷ್ಟಗಳೇನು?
ಇವತ್ತಿಗೆ ಭರ್ತಿ ಒಂದು ವರ್ಷದ ಅವಧಿಯಲ್ಲಿ ನೋಟ್ ಬ್ಯಾನ್ ಕ್ರಮದಿಂದ ಆಗಿದ್ದೇನು ಅಥವಾ ಲಾಭ-ನಷ್ಟಗಳ ಲೆಕ್ಕಾಚಾರಗಳೇನು ಇತ್ಯಾದಿಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಆದರೆ ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ಮಾತ್ರ ಸಾಕ್ಷಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ 2017ರ ನವೆಂಬರ್ 8ರಂದು ನೋಟು ನಿಷೇಧ ಘೋಷಣೆ ಮಾಡಿದ್ದಾಗ ದೇಶದಾದ್ಯಂತ ಹೊಸ ಸಂಚಲನವೇ ಉಂಟಾಗಿತ್ತು. ಕಾಳಧನಿಕರ, ಭೃಷ್ಟರ, ಕಳ್ಳರ ಎದೆಯಲ್ಲಿ ನಡುಕ ಹುಟ್ಟಿಸಿತ್ತು.
ಆದರೆ ಇವತ್ತಿಗೆ ಭರ್ತಿ ಒಂದು ವರ್ಷದ ಅವಧಿಯಲ್ಲಿ ನೋಟ್ ಬ್ಯಾನ್ ಕ್ರಮದಿಂದ ಆಗಿದ್ದೇನು ಅಥವಾ ಲಾಭ-ನಷ್ಟಗಳ ಲೆಕ್ಕಾಚಾರಗಳೇನು ಇತ್ಯಾದಿಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಆದರೆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ಕೆಸರೆರಚಾಟಕ್ಕೆ ಮಾತ್ರ ಸಾಕ್ಷಿಯಾಗಿದೆ.
ದೇಶದ ಆರ್ಥಿಕತೆ ಮೇಲೆ ನೋಟು ನಿಷೇಧದ ಪರಿಣಾಮದಿಂದಾಗಿ ಅಲ್ಪಾವಧಿಗೆ ಪ್ರಯೋಜನಗಳಾಗದಿದ್ದರೂ, ದೀರ್ಘಾವಧಿಗೆ ಉತ್ತಮ ಪರಿಣಾಮ ಆಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?
ಕಪ್ಪುಹಣ ವಿರೋಧಿ ದಿನ
ಹಳೆಯ ರೂ. 1000, 500 ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧದ ಕ್ರಮವನ್ನು ಕಪ್ಪುಹಣ ವಿರುದ್ಧದ ಬ್ರಹ್ಮಾಸ್ತ್ರ ಎಂದು ಬಿಜೆಪಿ ಬಣ್ಣಿಸಿದೆ. ಈ ಪ್ರಯುಕ್ತ ದೇಶದಾದ್ಯಂತ ನವೆಂಬರ್ 8 ನ್ನು 'ಕಪ್ಪುಹಣ ವಿರೋಧಿ ದಿನ'ವಾಗಿ ಆಚರಿಸುತ್ತಿದೆ. ದೇಶಾದ್ಯಂತ ಬಿಜೆಪಿ ನಾಯಕರು ವಿವಿಧ ಕಾರ್ಯಕ್ರಮಗಳಲ್ಲಿ ನೋಟು ನಿಷೇಧದಿಂದ ಆಗಿರುವ ಅನುಕೂಲಗಳ ಬಗ್ಗೆ ವಿವರಿಸಲಿದ್ದಾರೆ.
ಕರಾಳ ದಿನ
ಆದರೆ ಕಾಂಗ್ರೆಸ್ ಸೇರಿದಂತೆ ಇನ್ನಿತರ ಪ್ರತಿಪಕ್ಷಗಳು ಪ್ರಾರಂಭದಿಂದಲೇ ನೋಟು ನಿಷೇಧ ಕ್ರಮವನ್ನು ವರೋಧಿಸುತ್ತಾ ಬಂದಿದ್ದು, ಇದನ್ನು ಕರಾಳ ದಿನ ಎಂದು ಆಚರಿಸುತ್ತಿವೆ. ಜನಸಾಮಾನ್ಯರು ಅಕ್ಷರಶಃ ನಗದು ಮುಗ್ಗಟ್ಟಿಗೆ ಸಿಲುಕಿಸಿರುವ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಬಿಜೆಪಿ ಪಕ್ಷದ ಅಭಿಯಾನಕ್ಕೆ ವಿರುದ್ದವಾಗಿ 'ಭಾರತ ನಲಗುತ್ತಿದೆ' ಎಂಬ ಅಭಿಯಾನವನ್ನು ದೇಶಾದ್ಯಂತ ಯೋಜಿಸಿವೆ.
ನೋಟು ರದ್ದತಿ ಆರ್ಥಿಕ ದುರಂತ
ನೋಟು ರದ್ದತಿಯ ಕ್ರಮವನ್ನು ರಾಹುಲ್ ಗಾಂಧಿ ಇದು ಆರ್ಥಿಕ ದುರಂತ ಎಂಬುದಾಗಿ ಬಣ್ಣಿಸಿದ್ದಾರೆ. ನಕಲಿ ನೋಟು ಹಾವಳಿ, ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವ ನಿಟ್ಟಿನಲ್ಲಿ ನೋಟು ರದ್ದತಿ ವಿಫಲವಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿಯವರ ವಿವೇಚನಾರಹಿತ ನಿರ್ಧಾರದಿಂದ ಜೀವನೋಪಾಯ ಕಳೆದುಕೊಂಡ ಲಕ್ಷಾಂತರ ಪ್ರಾಮಾಣಿಕ ಭಾರತೀಯರ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ.
ಉಗ್ರ ನಿಗ್ರಹ, ಮಾದಕ ವಸ್ತು, ಮಾನವ ಸಾಗಾಣಿಕೆ ವಿರೋಧಿ ದಿನ
ಪ್ರಧಾನಿ ಮೋದಿಯವರು ಡಿಸೆಂಬರ್ 2016ರಂದು ಭಾಷಣ ಮಾಡಿದಾಗ ನೋಟು ರದ್ದತಿಯಿಂದ ಭಯೋತ್ಪಾದನೆ, ಡ್ರಗ್ ಸ್ಮಗ್ಲಿಂಗ್, ಮಾನವ ಕಳ್ಳಸಾಗಾಣಿಕೆ , ನಕಲಿ ನೋಟು ಹಾವಳಿ ನಿರ್ನಾಮವಾಗಿದೆ ಎಂದಿದ್ದರು. ಆದರೆ ಇದಕ್ಕೆ ಯಾವುದೇ ಸಾಕ್ಷಾಧಾರಗಳು ಬಿಜೆಪಿಯವರ ಬಳಿ ಇಲ್ಲ ಎನ್ನುವುದು ಹಲವರ ವಾದ.
ಮೋದಿ 50ದಿನ ಕೊಡಿ ಎಂದಿದ್ದರು ಆದರೆ 365 ದಿನಗಳು ಆಗಿವೆ
ನೋಟು ರದ್ದತಿಯ ಪರಿಣಾಮದಿಂದಾಗಿ ಕೆಲ ದುಷ್ಟ ಶಕ್ತಿಗಳು ನನ್ನ ಬದುಕಲು ಬಿಡುವುದಿಲ್ಲ ಎಂದು ಮೋದಿ ಗದ್ಗದಿತರಾಗಿ ಹೇಳಿದ್ದರು. ನೋಟ್ ಬ್ಯಾನ್ ನಿಂದಾಗಿ ಜನಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ನನಗೆ ಕೇವಲ 50 ದಿನಗಳ ಅವಧಿ ಕೊಡಿ. ನನಗೆ ಸಾಥ್ ಕೊಡಿ ಎಲ್ಲಾ ಸರಿಯಾಗುತ್ತದೆ ಎಂದಿದ್ದರು. ಆದರೆ ನೋಟು ನಿಷೇಧವಾಗಿ ಭರ್ತಿ 365 ದಿನಗಳು ಕಳೆದರೂ ಜನರ ಕಷ್ಟಗಳು ಮುಗಿದಿಲ್ಲ.
ತೆರಿಗೆ ಭಯೋತ್ಪಾದನೆ
ಕೇಂದ್ರದ ಆರ್ಥಿಕ ನೀತಿಗಳು ಮತ್ತು ತೆರಿಗೆ ಭಯೋತ್ಪಾದನೆ ಭಾರತೀಯರ ವ್ಯವಹಾರಗಳ ವಿಶ್ವಾಸವನ್ನು ಅಲುಗಾಡಿಸಿದೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದಾರೆ. ತೆರಿಗೆ ಸುಧಾರಣೆಗಾಗಿ ಜಾರಿ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೀತಿಯಿಂದಾಗಿ ಸಣ್ಣ ವ್ಯವಹಾರಗಳ ಬೆನ್ನೆಲುಬು ಮುರಿದಿದೆ. ತೆರಿಗೆ ಭಯೋತ್ಪಾದನೆಯ ಭಯದಿಂದಾಗಿ ಭಾರತೀಯರ ಹೂಡಿಕೆಯ ವಿಶ್ವಾಸ ನಶಿಸಿದೆ. ಈ ಅವಳಿಗಳ (ಅನಾಣ್ಯೀಕರಣ ಮತ್ತು ಜಿಎಸ್ಟಿ) ಸ್ಪೋಟದಿಂದ ಭಾರತದ ಆರ್ಥಿಕತೆ ಛಿದ್ರಗೊಂಡಿದೆ ಎಂದು ಸಿಂಗ್ ಹೇಳಿದ್ದಾರೆ.
ಅರ್ಥವ್ಯವಸ್ಥೆಯ ಶುದ್ಧೀಕರಣ
ನೋಟು ರದ್ದತಿಯಿಂದ ಭ್ರಷ್ಟಾಚಾರ ಮತ್ತು ಕಪ್ಪುಹಣಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಈ ಕ್ರಮದಿಂದ ಭಾರತದ ಅರ್ಥವ್ಯವಸ್ಥೆ ಶುದ್ಧೀಕರಣಗೊಂಡಿದೆ ಎಂದು ಮುಖ್ತರ್ ಅಬ್ಬಾಸ್ ನಖ್ವಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಅರವತ್ತು ವರ್ಷಗಳ ಆಡಳಿತ ನಡೆಸಿದರೂ ಅವರಿಗೆ ಸಾಧ್ಯವಾಗದ ಕೆಲಸವನ್ನು ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ. ಭಾರತದ ಆರ್ಥಿಕತೆಗೆ 60 ವರ್ಷಗಳಿಂದ ಕಾಂಗ್ರೆಸ್ ಸಣ್ಣಪುಟ್ಟ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಮಾಡುತ್ತಿತ್ತು. ಆದರೆ ಮೋದಿಯವರ ಒಂದೇ ಒಂದು ಧೈರ್ಯದ ನಡಿಗೆಯಿಂದ ಸಾಕಷ್ಟು ಬದಲಾವಣೆಯಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು?
ಭ್ರಷ್ಟಾಚಾರ, ಕಪ್ಪು ಹಣ, ತೆರಿಗೆ ವಂಚನೆ, ಭಯೋತ್ಪಾದನೆ, ನಕಲಿ ಕರೆನ್ಸಿ, ಉಗ್ರರಿಗೆ ಹಣಕಾಸು ನೆರವು ಮುಂತಾದ ಸಮಸ್ಯೆಗಳಿಗೆ ಬ್ರೇಕ್ ಬಿಳಲಿದೆ ಎಂದು ಕಳೆದ ವರ್ಷ ನವೆಂಬರ್ 8 ರಂದು ನರೇಂದ್ರ ಮೋದಿಯವರು ಹೇಳಿದ್ದರು. ಅದಕ್ಕೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭ್ರಷ್ಟಾಚಾರ, ಕಪ್ಪು ಹಣ, ತೆರಿಗೆ ವಂಚನೆ, ಭಯೋತ್ಪಾದನೆ, ನಕಲಿ ಕರೆನ್ಸಿ ಜ್ವಲಂತ ಸಮಸ್ಯೆಗಳಿಗೆ ಕೊಂಚ ತಡೆಯಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಮಮತಾ ಬ್ಯಾನರ್ಜಿ
ನಗದು ಅನಾಣ್ಯೀಕರಣ ಒಂದು ದೊಡ್ಡ ಹಗರಣ. ಇದು ಆಡಳಿತಾರೂಢ ಸರಕಾರ ಕಪ್ಪು ಹಣವನ್ನು ಸಕ್ರಮವಾಗಿಸಲು ಕೈಗೊಂಡ ಸ್ವಜನ ಹಿತಾಸಕ್ತಿಯ ಕ್ರಮ ಎಂದು ಮಮತಾ ಬ್ಯಾನರ್ಜಿ ಬಣ್ಣಿಸಿದ್ದಾರೆ.
ಜುಗಲ್ ಬಂಧಿ
ನೋಟು ರದ್ದತಿ ಕ್ರಮ ಆಡಳಿತರೂಢ ಮತ್ತು ವಿಪಕ್ಷಗಳ ಪರ-ವಿರೋಧ ಜುಗಲ್ ಬಂಧಿಗೆ, ಪರಸ್ಪರ ವ್ಯತಿರಿಕ್ತ ಆಚರಣೆಗಳಿಗೆ ವೇದಿಕೆ ಮಾಡಿಕೊಟ್ಟಿರುವುದಂತು ಸತ್ಯ.