ಕೇಂದ್ರ ಬಜೆಟ್ 2018: ಅರುಣ್ ಜೇಟ್ಲಿ ಮಂಡಿಸಿರುವ ಪ್ರಮುಖ ಜನಪ್ರಿಯ ಯೋಜನೆಗಳ ವಿವರ..
ಹಣಕಾಸು ಸಚಿವ ಅರುಣ್ ಜೇಟ್ಲಿ ಐದನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಅವರ ಮಂಡಿಸುತ್ತಿರುವ ಪ್ರಮುಖ ಜನಪ್ರಿಯ ಯೋಜನೆಗಳ ಪ್ರತಿಕ್ಷಣದ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ..
ಹಣಕಾಸು ಸಚಿವ ಅರುಣ್ ಜೇಟ್ಲಿ ಐದನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಜೇಟ್ಲಿ ಮಂಡಿಸಿರುವ ಪ್ರಮುಖ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಮೋದಿ ಸರ್ಕಾರದ ಸುಧಾರಣ ಕ್ರಮಗಳು
- ಬಡತನ ನಿರ್ಮೂಲನೆಗೆ ಗಮನ
- ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛ ಆಡಳಿತ
- ಭಾರತದ ಆರ್ಥಿಕತೆ ಉತ್ತಮವಾಗುತ್ತಾ ಸಾಗುತ್ತಿದೆ
- ಬಡವರಿಗೆ, ಮಧ್ಯಮ ವರ್ಗದವರಿಗೆ ಅವಾಸ್ ಯೋಜನೆ
- ಉದ್ಯಮ ಸ್ಥಾಪನೆ ಸುಲಭ, ಒಂದು ದಿನದಲ್ಲಿ ಕಂಪನಿ ನೋಂದಣಿ
- ಗ್ರಾಮೀಣ ಅಭಿವೃದ್ಧಿಯಲ್ಲಿ ಕೃಷಿ
- ದೇಶದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಶ್ರಮ
- ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮ
- ರಚನಾತ್ಮಕ ಸುಧಾರಣೆಗಳ ಯಶಶ್ವಿಯಾಗಿ ಜಾರಿ
- 2018-19ನೇ ಸಾಲಿನ ದ್ವಿತೀಯಾರ್ಧದಲ್ಲಿ ದೇಶದ ಜಿಡಿಪಿ ಶೇ. 7.2 ರಿಂದ 7.5ಕ್ಕೆ ಏರಿದೆ
- ಕೃಷಿ ಅಭಿವೃದ್ಧಿಗೆ ಹೆಚ್ಚು ಆಧ್ಯತೆ
- ನೇರ ನಗದು ವರ್ಗಾವಣೆ ಮೂಲಕ ವ್ಯವಹಾರದಲ್ಲಿ ಪಾರದರ್ಶಕತೆ
- ಬಡವರಿಗಾಗಿ ಜನರಿಕ್ ಔಷಧ ಕೇಂದ್ರಗಳ ಪ್ರಾರಂಭ
- ಆಹಾರ ಸಂಸ್ಕರಣೆಗೆ ಆಧ್ಯತೆ, ಅಗ್ರೊ ಪ್ರೊಸೆಸಿಂಗ್ ಪ್ರಕ್ರಿಯೆಗೆ ಮಹತ್ವ
- ಕೃಷಿಕರ ಆದಾಯ ದ್ವಿಗಣನೆಗೆ ಪ್ರಾಮುಖ್ಯತೆ
- ನೀರಾವರಿ, ಸಣ್ಣ ನೀರಾವರಿ, ಡೈರಿ ಫಾರ್ಮಿಂಗ್
ಸಾವಯವ ಕೃಷಿಗೆ ಆಧ್ಯತೆ
ಕೃಷಿ ಉಗ್ರಾಣ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ಆ ಮೂಲಕ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ.
ಆಹಾರ ಸಂಸ್ಕರಣೆ
ಸುಮಾರು ಒಂದು ಸಾವಿರ ಹೆಕ್ಟೆರ್ ಪ್ರದೆಶದಲ್ಲಿ ಸಾವಯವ ಕೃಷಿಗೆ ಒತ್ತು ನೀಡಲಾಗಿದ್ದು, ರೈತರಿಗೆ ಉತ್ತಮ ಬೆಲೆ ನಿಗದಿಗೆ ಆಧ್ಯ್ತೆ ನೀಡಲಾಗುವುದು. ಆಹಾರ ಸಂಸ್ಕರಣೆಗಾಗಿ ನೀಡುವ ಅನುದಾನದಲ್ಲಿ ಹೆಚ್ಚಳವಾಗಲಿದೆ.
ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ
ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ ಸರ್ಕಾರ ರೂ. 2,000 ಕೋಟಿ ಮೊತ್ತದಲ್ಲಿ ‘ಕೃಷಿ ಮಾರುಕಟ್ಟೆ ನಿಧಿ' ನಿಗದಿ ಪಡಿಸಿದೆ. ಬಿದಿರು ಕೃಷಿಗಾಗಿ ನಿಧಿ ಮೀಸಲು.
ಮೀನುಗಾರಿಕೆ, ಪಶುಸಂಗೋಪನೆಗೆ ಅನುದಾನ
ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಸೇರಿದಂತೆ ಹಲವು ಮೂಲಸೌಲಭ್ಯ ಅಭಿವೃದ್ಧಿಗೆ ರೂ. 10 ಸಾವಿರ ಕೋಟಿ ಅನುದಾನ.
ಅಪರೇಷನ್ ಗ್ರೀನ್
ರೂ. 500 ಕೋಟಿ ಆನುದಾನದಲ್ಲಿ ಅಪರೇಷನ್ ಗ್ರೀನ್ ಯೋಜನೆಯ ಪ್ರಸ್ತಾವ.
ಉಚಿತ ಅಡುಗೆ ಅನಿಲ
ಬಡ ಕುಟುಂಬದ ಎಂಟು ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸೌಲಭ್ಯ ಕಲ್ಪಿಸಲಾಗುವುದು ಎಂದು ಜೇಟ್ಲಿ ಹೇಳಿದರು. 42 ಪುಡ್ ಪಾರ್ಕ್ ಪಾರಂಭ
ರೈತರ ಸಾಲ
ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ, ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶ.
33 ಲಕ್ಷ ಮನೆ ನಿರ್ಮಾಣ
ಎಲ್ಲರಿಗೂ ಮನೆ ಸಿಗಬೇಕು ಎನ್ನುವುದು ಸರ್ಕಾರದ ಕನಸು. 2022ರವರೆಗೆ ಸುಮಾರು 33 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ಡಿಜಿಟಲ್ ಬೋರ್ಡ್
ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯಕ್ಕೆ ಆದ್ಯತೆ. 20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಬ್ಯ್ಲಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಸೌಲಭ್ಯ. ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ನಿಲಯ.
ಆರು ಕೋಟಿ ಶೌಚಾಲಯಗಳ ನಿರ್ಮಾಣ
ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಆರು ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ.
ರಾಷ್ಟ್ರೀಯ ಸ್ವಾಥ್ಯ ವಿಮಾ ಯೋಜನೆ
ರಾಷ್ಟ್ರೀಯ ಆರೋಗ್ಯ ಯೋಜನೆ ಮೂಲಕ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ರಾಷ್ಟ್ರೀಯ ಸ್ವಾಥ್ಯ ವಿಮಾ ಯೋಜನೆಗೆ 30 ಸಾವಿರ ಕೋಟಿ ಅನುದಾನ
ಏಕಲವ್ಯ ವಸತಿ ನಿಲಯ
ಬುಡಕಟ್ಟು, ವನವಾಸಿ ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕೆ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ನಿಲಯ ಸ್ಥಾಪನೆ
ಆರೋಗ್ಯ ವಿಮೆ
ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ ರೂ. 1200 ಕೋಟಿ ಅನುದಾನ ಬಿಡುಗಡೆ. ಅತಿಹೆಚ್ಚು ಮೊತ್ತದ ಆರೋಗ್ಯ ವಿಮೆ ಸೌಲಭ್ಯವನ್ನು 50 ಲಕ್ಷ ಜನರಿಗೆ ಈ ಯೋಜನೆಯಡಿ ನೀಡಲಾಗುವುದು. ಒಂದು ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಆರೋಗ್ಯ ವಿಮೆ ಒದಗಿಸಲಾಗುವುದು. ಈ ಯೋಜನೆ 10 ಕೋಟಿ ಕುಟುಂಬಗಳಿಗೆ ಸಿಗಲಿದೆ.
ಎಸ್ಸಿ ಮತ್ತು ಎಸ್ಟಿ ಅನುದಾನ
ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ರೂ.56,619 ಕೋಟಿ ಹಾಗು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ರೂ. 39,135 ಕೋಟಿ ಘೋಷಣೆ ಮಾಡಲಾಗಿದೆ.
ಉದ್ಯೋಗಸೃಷ್ಟಿಗೆ ಕ್ರಮ
ಈ ಸಾಲಿನಲ್ಲಿ ಸುಮಾರು 70 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು. ಸಣ್ಣ, ಅತೀ ಸಣ್ಣ, ಮಧ್ಯಮ ಗಾತ್ರದ ಉದ್ಯಮಕ್ಕೆ 3794 ಕೋಟಿ ಮೀಸಲು ಹಾಗು ಸಾರ್ವಜನಿಕ ಹೂಡಿಕೆಗೆ ಒತ್ತು ನೀಡಲಾಗುವುದು.
ಮುದ್ರಾ ಯೋಜನೆ
ಕೇಂದ್ರ ಸರ್ಕಾರದ ಬಹುಮುಖ್ಯ ಯೋಜನೆಯಾದ ಮುದ್ರಾ ಯೋಜನೆಗೆ ರೂ. 3 ಲಕ್ಷ ಕೋಟಿ ಅನುದಾನ ನೀಡಲಾಗಿದೆ.
ಅಮೃತ್ ಯೋಜನೆ
ಸುಮಾರು 500 ನಗರಗಳಲ್ಲಿನ ಮನೆಗಳಿಗೆ ನೀರು ಸೌಲಭ್ಯ ವಿತರಣೆಗಾಗಿ ಅಮೃತ್ ಯೋಜನೆ ಪ್ರಾರಂಭ.
ಸಿಸಿಟಿವಿ, ವೈಫೈ ಸೌಲಭ್ಯ
ದೇಶದ ಎಲ್ಲಾ ರೇಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗು ವೈಫೈ ಸೌಲಭ್ಯ ಅಳವಡಿಸಲಾಗುವುದು. ಅಲ್ಲದೆ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ 25,000 ಎಸ್ಕಲೇಟರ್ ವ್ಯವಸ್ಥೆ ಮಾಡಲಾಗುವುದು.
ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ
ದೇಶದ ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುವುದು. ಚೆನ್ನೈ ಐಐಟಿಯಲ್ಲಿ 5ಜಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವುದಾಗಿ ಪ್ರಸ್ತಾಪ.
ರೇಲ್ವೆ ಸುರಕ್ಷತೆ
ಪ್ರಸ್ತುತ ಬಜೆಟ್ ನಲ್ಲಿ ಜೇಟ್ಲಿ ಅವರು ರೇಲ್ವೆ ಸುರಕ್ಷತೆ ಹೆಚ್ಚು ಆದ್ಯತೆ ನೀಡಲಾಗುವುದು. ಜತೆಗೆ ತಂತ್ರಜ್ಞಾನ ಬಳಕೆಯನ್ನು ಪರಿಣಾಮಕಾರಿಯಾಗಿ ಬಳಸಲಾಗುವುದು. 600 ಪ್ರಮುಖ ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿಗೆ ಉಪನಗರ ರೈಲು (ಸಬ್ ಅರ್ಬನ್ ರೈಲು) ಸೌಲಭ್ಯ ಕಲ್ಪಿಸಲಾಗುವುದು.
ವೈದ್ಯಕೀಯ ತೆರಿಗೆ ವಿನಾಯಿತಿ
ಈ ಬಜೆಟ್ ನಲ್ಲಿ ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿಯನ್ನು ನೀಡಲಾಗಿದ್ದು, ರೂ. 40,000ಕ್ಕೆ ಹೆಚ್ಚಳ ಮಾಡಲಾಗಿದೆ. ವೈದ್ಯಕೀಯ ತೆರಿಗೆ ವಿನಾಯಿತಿ ಮಿತಿಯನ್ನು ಸೆಕ್ಷನ್ 80ರ ಅಡಿಯಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿಯನ್ನು ರೂ. 10 ಸಾವಿರದಿಂದ ರೂ. 50 ಸಾವಿರಗಳಿಗೆ ಹೆಚ್ಚಿಸಲಾಗಿದೆ.
ಹಿರಿಯ ನಾಗರಿಕರಿಗೆ ಧಮಾಕಾ!
ಹಿರಿಯ ನಾಗರಿಕರಿಗೆ ವೈದ್ಯಕೀಯ ತೆರಿಗೆ ವಿನಾಯಿತಿ ಒಳಗೊಂಡಂತೆ ಬ್ಯಾಂಕ್, ಅಂಚೆ ಕಚೇರಿಯ ಉಳಿತಾಯ ಖಾತೆಗಳಲ್ಲಿ ವಿಶೇಷ ಸೌಲಭ್ಯ. ವೈದ್ಯಕೀಯ ತೆರಿಗೆ ವಿನಾಯಿತಿ ಮಿತಿಯನ್ನು ಸೆಕ್ಷನ್ 80ರ ಅಡಿಯಲ್ಲಿ ರೂ. 10 ಸಾವಿರದಿಂದ ರೂ. 50 ಸಾವಿರಗಳಿಗೆ ಹೆಚ್ಚಿಸಲಾಗಿದೆ.
ದೇಶೀ ಉತ್ಪನ್ನಗಳಿಗೆ ಪ್ರೋತ್ಸಾಹ
ಸ್ವದೇಶಿ ಹಿನ್ನೆಲೆಯಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು. ಪತಂಜಲಿಯಂತಹ ಹಾಗು ಆಯುರ್ವೇದಿಕ್ ಉತ್ಪನ್ನ, ಕೃಷಿ ಉತ್ಪನ್ನಗಳು ಹೆಚ್ಚು ಪ್ರಾಮುಖ್ಯತೆ ಪಡೆಯಲಿವೆ.
ಕಾರ್ಪೋರೇಟ್ ತೆರಿಗೆ ಕಡಿತ
ಬಜೆಟ್ ಮಂಡನೆ ಪೂರ್ವದ ಬಹುನಿರೀಕ್ಷೆಯಂತೆ ಕಾರ್ಪೋರೇಟ್ ತೆರಿಗೆಯಲ್ಲಿ ಶೇ. 25ರಷ್ಟು ಕಡಿತಕ್ಕೆ ಪ್ರಸ್ತಾಪಿಸಲಾಗಿದೆ. ಇದು ರೂ. 250 ಕೋಟಿ ವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಕಾರ್ಪೋರೇಟ್ ಕಂಪೆನಿಗಳ ತೆರಿಗೆಗೆ ಅನ್ವಯವಾಗಲಿದೆ.
ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ
ಹೆಚ್ಚಿನ ಜನರ, ವೇತನದಾರರ ಬಹುನಿರೀಕ್ಷೆಯ ಹಂತ ಇದಾಗಿತ್ತು. ಆದ್ರೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೂ. 2.5 ಲಕ್ಷದರವರೆಗಿನ ಆದಾಯಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ. ರೂ. 2.5 ರಿಂದ 5 ಲಕ್ಷದವರೆಗಿನ ಆದಾಯಗಳಿಗೆ ಶೇ. 5ರಷ್ಟು ತೆರಿಗೆ ಇರಲಿದೆ. ರೂ. 5 ರಿಂದ 10 ಲಕ್ಷದವರೆಗಿನ ಆದಾಯಗಳಿಗೆ ಶೇ. 20ರಷ್ಟು ತೆರಿಗೆ ಇರಲಿದೆ. ರೂ. 10 ಲಕ್ಷ ಮೇಲ್ಪಟ್ಟ ಆದಾಯಗಳಿಗೆ ಶೇ.30 ರಷ್ಟು ತೆರಿಗೆ ಇರುತ್ತದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಶೀಘ್ರದಲ್ಲಿಯೇ ಜಾರಿಯಾಗಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಸಂಸದರ ವೇತನ ಪರಿಷ್ಕರಣೆ
ಸಂಸದರ ವೇತನ ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸಲು ಕಾನೂನು ಮಾಡಲಾಗುವುದು. ರಾಷ್ಟ್ರಪತಿ ವೇತನ ತಿಂಗಳಿಗೆ ರೂ. 5ಲಕ್ಷ ಮತ್ತು ಉಪರಾಷ್ಟ್ರಪತಿ ವೇತನ ತಿಂಗಳಿಗೆ ರೂ. 4 ಲಕ್ಷಕ್ಕೆ ಏರಿಸಲಾಗಿದೆ.
ವಿಮಾನ ನಿಲ್ದಾಣ ಹೆಚ್ಚಳ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ 124 ವಿಮಾನ ನಿಲ್ದಾಣಗಳನ್ನು ಹೊಂದಿದೆ. ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ಐದು ಪಟ್ಟು ಹೆಚ್ಚಿಸುವ ಗುರಿ ಇದೆ ಎಂದು ಜೇಟ್ಲಿ ಹೇಳಿದ್ದಾರೆ. ಜತೆಗೆ 2 ರಕ್ಷಣಾ ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಮೊಬೈಲ್, ಟಿವಿ ದುಬಾರಿ
ಜೇಟ್ಲಿ ಮಂಡಿಸಿರುವ ಬಜೆಟ್ ನಲ್ಲಿ ಮೊಬೈಲ್ ಪೋಣ್, ಟಿ.ವಿ ದುಬಾರಿಯಾಗಲಿದೆ. ಕಸ್ಟಮ್ಸ್ ತೆರಿಗೆಯನ್ನು ಶೇ. 15 ರಿಂದ 20ಕ್ಕೆ ಹೆಚ್ಚಿಸಲಾಗಿದೆ.
ಮಹಾತ್ಮ ಗಾಂಧಿ ಜನ್ಮ ದಿನಾಚರಣೆ
ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಗಾಗಿ ಸರ್ಕಾರ ರೂ.150 ಕೋಟಿ ಘೋಷಣೆ ಮಾಡಲಾಗಿದೆ.