ಸಣ್ಣ-ಮಧ್ಯಮ ಉದ್ಯಮ ವಲಯಕ್ಕೆ ಮಧ್ಯಂತರ ಬಜೆಟ್ ನಲ್ಲಿ ಏನು ಸಿಗಬಹುದು?
ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗುತ್ತಿವೆ. ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್ ಬಹುತೇಕ ಮಧ್ಯಂತರ ಬಜೆಟ್ ರೂಪದಲ್ಲಿರಲಿದೆ.
ಹಿಂದಿನ ಮಧ್ಯಂತರ ಬಜೆಟ್ ಸಂಪ್ರದಾಯದಂತೆ ಈ ಬಜೆಟ್ನಲ್ಲಿಯೂ ಸರಕಾರದ ಮುಖ್ಯ ನೀತಿಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗದಿರಬಹುದು.
ಈ ಸಂದರ್ಭದಲ್ಲಿ ದೇಶದ ಸಣ್ಣ ಹಾಗೂ ಮಧ್ಯಮ ಉದ್ಯಮ ವಲಯ (SME - Small and Medium-sized Enterprises) ಜಿಎಸ್ಟಿ ಕಾನೂನಿನಲ್ಲಿ ಕೆಲ ಬದಲಾವಣೆಗಳನ್ನು ಬಯಸುತ್ತಿದೆ. 2018-19ರ ಬಜೆಟ್ ನಲ್ಲಿ ಕೇಂದ್ರ ಸರಕಾರ ಎಂಎಸ್ಇಗಳಿಗೆ ಬಂಡವಾಳ ಹರಿವಿನ ಬಗ್ಗೆ ನೀತಿಯನ್ನು ಪ್ರಕಟಿಸಿತ್ತು.
ಡಿಮಾನೆಟೈಸೇಷನ್ ಹಾಗೂ ಜಿಎಸ್ಟಿ ಜಾರಿಯ ನಂತರ ಎಂಎಸ್ಎಂಇ ವಲಯದ ಉದ್ಯಮಗಳ ಅಧಿಕೃತ ನೋಂದಣಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇದರಿಂದ ಎಂಎಸ್ಎಂಇಗಳ ಬಗ್ಗೆ ಬೃಹತ್ ಡೇಟಾಬೇಸ್ ಸಂಗ್ರಹವಾಗುತ್ತಿದ್ದು, ಇದು ಎಂಎಸ್ಎಂಇಗಳ ಹಣಕಾಸು ಸ್ಥಿತಿಯನ್ನು ಉತ್ತಮಪಡಿಸಲು ಹಾಗೂ ಬಂಡವಾಳ ಹೂಡಿಕೆಯ ಅವಶ್ಯಕತೆಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದು 2018-19 ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಹೇಳಿದ್ದರು.
ಮುದ್ರಾ ಸಾಲ ಯೋಜನೆಯಡಿ ಸುಮಾರು 3 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಆಗ ಅರುಣ್ ಜೇಟ್ಲಿ ತಿಳಿಸಿದ್ದರು. ಆದರೂ ಈಗಿನ ಮಧ್ಯಂತರ ಬಜೆಟ್ನಲ್ಲಿ ಎಸ್ಎಂಇ ವಲಯಕ್ಕೆ ತೀರಾ ದೊಡ್ಡ ಕೊಡುಗೆಯನ್ನು ನಿರೀಕ್ಷಿಸುವಂತಿಲ್ಲ. ಒಟ್ಟಾರೆಯಾಗಿ ಎಸ್ಎಂಇ ವಲಯಕ್ಕೆ ಹೆಚ್ಚಿನ ಹಣಕಾಸು ಹರಿವಿನ ನೀತಿಯ ಬಗ್ಗೆ ನಿರ್ಧಾರ ಪ್ರಕಟವಾಗುವಿಕೆಯನ್ನು ಸದ್ಯಕ್ಕೆ ನಿರೀಕ್ಷಿಸಬಹುದಾಗಿದೆ.
ಈಗ ಹಲವಾರು ವರ್ಷಗಳಿಂದ ಎಸ್ಎಂಇ ವಲಯ ಬಂಡವಾಳ ಕೊರತೆಯಿಂದ ನಲುಗುತ್ತಿದೆ. ಇದರ ಜೊತೆಗೆ ವಸೂಲಾಗದ ಸಾಲಗಳ ಪ್ರಕರಣಗಳನ್ನು ಆರ್ಬಿಐ ತನಿಖೆ ನಡೆಸುತ್ತಿದೆ. ತೆರಿಗೆ ಸಂಬಂಧಿತ ಬಹುತೇಕ ಎಲ್ಲ ವಿಷಯಗಳು ಈಗ ಜಿಎಸ್ಟಿ ಅಡಿಯಲ್ಲಿ ಬರುವುದರಿಂದ ಎಸ್ಎಂಇ ವಲಯಕ್ಕಾಗಿ ವಿಶೇಷ ಕೊಡುಗೆಗಳು ಸಿಗುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಜಿಎಸ್ಟಿ ದರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಜಿಎಸ್ಟಿ ಕೌನ್ಸಿಲ್ಗೆ ಮಾತ್ರ ಇರುವುದರಿಂದ ಬಜೆಟ್ನಲ್ಲಿ ಜಿಎಸ್ಟಿ ದರಗಳನ್ನು ಸರಕಾರ ಬದಲಾಯಿಸುವ ಸಾಧ್ಯತೆಗಳಿಲ್ಲ.
ಹೀಗಾಗಿ ಹೆಚ್ಚೆಂದರೆ ಎಸ್ಎಂಇಗಳ ಉತ್ತೇಜನಕ್ಕಾಗಿ ಕೆಲ ನೀತಿ ಹಾಗೂ ಕಾರ್ಯಕ್ರಮಗಳನ್ನು ಸರಕಾರ ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ ಘೋಷಿಸಬಹುದಾಗಿದೆ.