ನೀರವ್ ಮೋದಿ 100 ಕೋಟಿ ಬಂಗಲೆಗೆ ಬಿತ್ತು ಗಡಪಾರೆ, ಕಾರಣ ಏನ್ಗೊತ್ತೆ?
ಮುಂಬೈ, ಜನವರಿ 25: ದೇಶದಿಂದ ತಲೆ ತಪ್ಪಿಸಿಕೊಂಡಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಒಡೆತನದ- ಮುಂಬೈನಲ್ಲಿ ಸಮುದ್ರಕ್ಕೆ ಮುಖ ಮಾಡಿದಂತೆ ಇರುವ ಬಂಗಲೆಯನ್ನು ಕೆಡವುವ ಪ್ರಕ್ರಿಯೆಗೆ ಶುಕ್ರವಾರದಂದು ಚಾಲನೆ ನೀಡಲಾಗಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಬಂಗಲೆ ಕೆಡವುವ ತಂಡವನ್ನು ಅಲಿಬಾಗ್ ನ ಎಸ್ ಡಿಒ ಶರದ ಪವಾರ್ ಮುನ್ನಡೆಸುತ್ತಿದ್ದಾರೆ. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಪ್ರಕ್ರಿಯೆ ಆರಂಭವಾಗಿದೆ. ಕಲ್ಲು-ಅಮೃತಶಿಲೆಯಲ್ಲಿ ನಿರ್ಮಿಸಿರುವ ಈ ಅದ್ಭುತವಾದ ಬಂಗಲೆ ಕಿಹಿಮ್ ಕಡಲ ಕಿನಾರೆ ಎದುರಿಗೆ ಇದೆ.
ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿ
ಅಧಿಕೃತ ಮಾಹಿತಿ ಪ್ರಕಾರ, ಮೂವತ್ಮೂರು ಸಾವಿರ ಚದರಡಿ ವಿಸ್ತೀರ್ಣದ ಈ ಐಷಾರಾಮಿ ಬಂಗಲೆ, ಭಾಗಶಃವಾಗಿ ನೆಲ ಹಾಗೂ ಅದರ ಮೇಲೆ ಒಂದು ಅಂತಸ್ತು ಎಂಬಂತೆ ನಿರ್ಮಿಸಲಾಗಿದೆ. ಒಟ್ಟಾರೆ ಎಪ್ಪತ್ತು ಸಾವಿರ ಚದರಡಿ ವಿಸ್ತೀರ್ಣದಲ್ಲಿ ಈ ಬಂಗಲೆ ಇದ್ದು, ಪೊಗದಸ್ತಾದ ಭದ್ರತಾ ವ್ಯವಸ್ಥೆ ಇದೆ.
2009-10ರಲ್ಲಿ ಈ ಬಂಗಲೆ ನಿರ್ಮಾಣವಾಗಿದೆ. ನೀರವ್ ಮೋದಿಯ ಕುಖ್ಯಾತ ಪಾರ್ಟಿಗಳು ನಡೆಯುತ್ತಿದ್ದುದೇ ಇಲ್ಲಿ. ಅಂದಹಾಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 13,500 ಕೋಟಿ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಪ್ರಮುಖ ಆರೋಪಿ.
ಬಾಂಬೆ ಹೈಕೋರ್ಟ್ ಆದೇಶದ ಅನ್ವಯ ಈ ಧ್ವಂಸ ಕಾರ್ಯ ನಡೆಯುತ್ತಿದೆ. ಎನ್ ಜಿಒ ಶಂಬುರಾಜೆ ಯುವ ಕ್ರಾಂತಿ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನಂತರ ಆದೇಶ ಬಂದಿದೆ. ಹೈ ಟೈಡ್ ಹಾಗೂ ಲೋ ಟೈಡ್ ವಲಯದಲ್ಲಿ ನಿಯಮಬಾಹಿರವಾಗಿರುವ ಬಂಗಲೆ, ಹೋಟೆಲ್ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು.
ಮಲ್ಯ, ನೀರವ್ ಮೋದಿ ಪರಾರಿಗೆ ಅಲೋಕ್ ವರ್ಮಾ ನೆರವು?
ಎನ್ ಜಿಒದ ರಾಜ್ಯ ಮುಖ್ಯಸ್ಥ ಸುರೇಂದ್ರ ಧವಲೆ ಮಾತನಾಡಿ, ಕಳೆದ ಕೆಲವು ವಾರಗಳಿಂದ ಹತ್ತು ಬಂಗಲೆ ಧ್ವಂಸಗೊಳಿಸಲಾಗಿದೆ. ಈಗ ನೀರವ್ ಮೋದಿ ಬಂಗಲೆ ಕೆಡವಲಾಗುತ್ತಿದೆ. ಸದ್ಯಕ್ಕೆ ಹೇಳಿಕೊಂಡಿರುವ ಬಂಗಲೆ ಮೊತ್ತ 13 ಕೋಟಿ ಅಂತಾದರೂ ಇದರ ಮಾರುಕಟ್ಟೆ ಮೌಲ್ಯ 100 ಕೋಟಿಗೂ ಹೆಚ್ಚು ಎಂದು ಅವರು ಹೇಳಿದ್ದಾರೆ.