ನವದೆಹಲಿ, ಫೆಬ್ರವರಿ 01: ಕೇಂದ್ರ ಮಧ್ಯಂತರ ಬಜೆಟ್ ಅನ್ನು ಅಪರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಇಂದು ಮಂಡಿಸಿದ್ದಾರೆ.
ಹಲವು ಜನಪ್ರಿಯ ಘೋಷಣೆಗಳು ಬಜೆಟ್ನಲ್ಲಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಬಜೆಟ್ ಬಗ್ಗೆ ಎರಡೂ ಪಕ್ಷಗಳ ರಾಷ್ಟ್ರ ನಾಯಕರು ಅಭಿಪ್ರಾಯಗಳು ನೀಡುತ್ತಿದ್ದು, ಸಾಮಾನ್ಯದಂತೆ ಆಡಳಿತದವರು ಬಜೆಟ್ ಪರವಾಗಿ ವಿರೋಧ ಪಕ್ಷ ಬಜೆಟ್ ಅನ್ನು ಅನುಪಯೋಗಿ ಎಂದು ಹೇಳಿಕೆ ನೀಡುತ್ತಿದ್ದಾರೆ.
ಈ ಬಜೆಟ್ ಹೊಸ ಭಾರತದ ಗುರಿ ಹೊಂದಿರುವ ಬಜೆಟ್, ಬಜೆಟ್ನಲ್ಲಿ ಎಲ್ಲಾ ಕ್ಷೇತ್ರ ಮತ್ತು ಜನರ ಉಲ್ಲೇಖ ಇದೆ. ರೈತರು, ಸಾಮಾನ್ಯ ವರ್ಗ, ವ್ಯಾಪಾರಿಗಳು, ಮಹಿಳೆಯರು, ಹಿರಿಯರು ಎಲ್ಲರಿಗೂ ಯೋಜನೆಗಳಿವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿಆದಿತ್ಯನಾಥ ಅವರು ಹೇಳಿದ್ದಾರೆ.
ಬಜೆಟ್ ಒದ್ದೆಯಾದ ಪಟಾಕಿ: ಶಶಿ ತರೂರ್
ಬಜೆಟ್ ಅನ್ನು ವಿಶ್ಲೇಷಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, 'ಈ ಬಜೆಟ್ ಒದ್ದೆಯಾದ ಪಟಾಕಿ ಅಷ್ಟೆ ಎಂದು ಗೇಲಿ ಮಾಡಿದ್ದಾರೆ. ಮಧ್ಯಮವರ್ಗಕ್ಕೆ ತೆರಿಗೆ ವಿನಾಯಿತಿ ನೀಡಿರುವ ಒಂದನ್ನು ಹೊರತುಪಡಿಸಿ ಇನ್ನಾವುದೇ ಒಳ್ಳೆಯ ಘೋಷಣೆಗಳು ಬಜೆಟ್ನಲ್ಲಿ ಇಲ್ಲ. ರೈತರಿಗೆ ವರ್ಷಕ್ಕೆ 6000 ಕೊಡುತ್ತೇವೆ ಎಂದು ಹೇಳಿದ್ದಾರೆ. ಅಂದರೆ ತಿಂಗಳಿಗೆ 500 ಆಗುತ್ತದೆ. ರೈತರು ನೆಮ್ಮದಿಯಿಂದ ಗೌರವದಿಂದ ಬಾಳಲು ಅಷ್ಟು ಹಣ ಸಾಕಾಗುತ್ತದೆಯೇ ಎಂದು ತರೂರ್ ಪ್ರಶ್ನಿಸಿದ್ದಾರೆ.
ಅತ್ಯುತ್ತಮ ಬಜೆಟ್: ರಾಜನಾಥ್ ಸಿಂಗ್
ಇದೊಂದು ಐತಿಹಾಸಿಕ ಬಜೆಟ್ ಈ ಬಜೆಟ್ ಸಮಾಜದ ಎಲ್ಲಾ ವರ್ಗಗಳನ್ನೂ ಗಮನದಲ್ಲಿಡುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲರ ಆಶೋತ್ತರಗಳಿಗೆ ಸ್ಪಂದಿಸಿದೆ: ಶಾ
ಈ ಬಜೆಟ್ ಎಲ್ಲಾ ಎಲ್ಲರ ಆಶೋತ್ತರಗಳಿಗೆ ಸ್ಪಂದಿಸಿದೆ. ಕೃಷಿಕರು, ಮಧ್ಯಮರ್ಗದವರು, ಉದ್ಯಮಿಗಳು, ನವೋದ್ಯಮಿಗಳು ಎಲ್ಲರ ಅಗತ್ಯವನ್ನೂ ಗಮನದಲ್ಲಿಟ್ಟುಕೊಂಡು ಮಾಡಲಾಗಿರುವ ಬಜೆಟ್ ಇದಾಗಿದೆ. 75000 ಕೋಟಿ ವೆಚ್ಚದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಘೋಷಿಸಲಾಗಿದೆ. ಇದು ರೈತರಿಗೆ ಬಹುವಾಗಿ ಸಹಾಯಕವಾಗಲಿದೆ ಎಂದು ಹೇಳಿದರು.
ಬಡ ರೈತರಿಗಾಗಿ ಯೋಜನೆ: ಗೋಯಲ್
ಎಸಿ ಕೊಠಡಿಗಳಲ್ಲಿ ಕುಳಿತವರಿಗೆ ರೈತರ ಕಷ್ಟಗಳು ಅರ್ಥವಾಗುವುದಿಲ್ಲ, ಇದನ್ನು ಮನದಲ್ಲಿಟ್ಟುಕೊಂಡು ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪ್ರಾರಂಭಿಸಿದ್ದೇವೆ ಎಂದು ಬಜೆಟ್ ಮಂಡಿಸಿದ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
'ಮಧ್ಯಂತರ ಬಜೆಟ್ ಅಲ್ಲ, ಚುನಾವಣೆಗಾಗಿ ಬಜೆಟ್'
ಮಧ್ಯಂತರ ಹಣಕಾಸು ಸಚಿವರು ಮಧ್ಯಂತರ ಬಜೆಟ್ ಬದಲು ಪೂರ್ಣ ಬಜೆಟ್ ಅನ್ನೇ ಮಂಡಿಸಿದಂತಿತ್ತು. ನನಗೆ ತಿಳಿದಿರುವಂತೆ ಇಷ್ಟು ದೀರ್ಘವಾದ ಮಧ್ಯಂತರ ಬಜೆಟ್ ಅನ್ನು ಯಾರೂ ಮಂಡಿಸಿದ್ದು ಕಾಣೆ. ಮಧ್ಯಂತರದ ಹೆಸರಿನಲ್ಲಿ ಮಂಡಿಸಿದ ಪೂರ್ಣ ಬಜೆಟ್ ಹಿಂದೆ ಲೋಕಸಭೆ ಚುನಾವಣೆಯ ಗುರಿ ಇದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.


Click it and Unblock the Notifications