ತತ್ವ ಸಿದ್ದಾಂತ ಮೀರಿದ ಷೇರುಪೇಟೆ ನಡೆ
ತತ್ವ ಸಿದ್ದಾಂತ ಮೀರಿದ ಷೇರುಪೇಟೆ ನಡೆ ಇತ್ತೀಚಿನ ದಿನಗಳಲ್ಲಿ ಯಾವ ವಲಯಕ್ಕೂ ನಿರ್ಧಿಷ್ಟವಾದ, ನಿಖರವಾದ ಸಿದ್ದಾಂತಗಳಿಲ್ಲದಂತೆ ತೋರುತ್ತದೆ. ಕೇವಲ ಗ್ರಾಹಕರ ಮನೋಭಾವನೆಗಳಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಯಾವ ವಲಯಕ್ಕೂ ನಿರ್ಧಿಷ್ಟವಾದ, ನಿಖರವಾದ ಸಿದ್ದಾಂತಗಳಿಲ್ಲದಂತೆ ತೋರುತ್ತದೆ. ಕೇವಲ ಗ್ರಾಹಕರ ಮನೋಭಾವನೆಗಳಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಷೇರುಪೇಟೆ ಹೊರತಲ್ಲ. ಈಗಿನ ದಿನಗಳಲ್ಲಿ ಪ್ರದರ್ಶಿತವಾಗುತ್ತಿರುವ ವ್ಯಾವಹಾರಿಕ ಶೈಲಿಗಳು ದೀರ್ಘಕಾಲೀನ ಚಿಂತನೆಗಳನ್ನು ದೂರಮಾಡುವಂತಿದೆ. ಷೇರುಪೇಟೆಯ ಸುರಕ್ಷಾ ವಿಧಗಳಾದ ಸ್ಟಾಪ್ ಲಾಸ್, ವ್ಯಾಲ್ಯೂ ಪಿಕ್, ಕಾರ್ಪೊರೇಟ್ ಬೆನಿಫಿಟ್ಸ್ ಮುಂತಾದವುಗಳು ಕೇವಲ ಪುಸ್ತಕದ ಬದನೇಕಾಯಿ ಎಂಬಂತಾಗಿದೆ. ಮಂಗಳವಾರ 1 ರಂದು ಷೇರುಪೇಟೆಯ ದಿಗ್ಗಜ ಕಂಪನಿಗಳು, ವಿಶೇಷವಾಗಿ ಫೈನಾನ್ಸ್ ಸಂಬಂಧಿತ ಕಂಪನಿಗಳು ಪ್ರದರ್ಶಿಸಿದ ಏರಿಳಿತಗಳ ರಭಸದ ಮುಂದೆ ಮಾನಸಿಕ ಚಿಂತನೆಗಳು, ವ್ಯಾವಹಾರಿಕ ಶೈಲಿಗಳು ಮುಂತಾದವುಗಳಿಗೆ ಮನ್ನಣೆ ಸಿಗದೇ ಕೇವಲ ವಹಿವಾಟಿನಕಡೆ ಮಾತ್ರ ಗಮನ ಸೆಳೆದವು. ದಿನದ ಆರಂಭಿಕ ಕ್ಷಣಗಳಲ್ಲಿ ಸೆನ್ಸೆಕ್ಸ್ ಸುಮಾರು 256 ಪಾಯಿಂಟುಗಳಷ್ಟು ಏರಿಕೆ ಕಂಡು ಉತ್ತಮ ಏರಿಕೆಯ ಆಶ್ವಾಸನೆ ನೀಡಿದಂತಿತ್ತು. ಆದರೆ ಸುಮಾರು ಮಧ್ಯಾಹ್ನ ಒಂದು ಘಂಟೆಯ ನಂತರದ ವಹಿವಾಟಿನಲ್ಲಿ ಸೂಚ್ಯಂಕಗಳು ಏಕಮುಖವಾಗಿ ಚಲಿಸಿ ಸೂಚ್ಯಂಕಗಳನ್ನು ಕುಸಿಯುವಂತೆ ಮಾಡಿದವು. ಸೆನ್ಸೆಕ್ಸ್ ನಲ್ಲಿರುವ ಎಲ್ಲಾ ಒಂಬತ್ತು ವಿತ್ತೀಯ ವಲಯದ ಕಂಪನಿಗಳು ಹಿಂದಿನ ದಿನದ ಬೆಲೆಗಳಿಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗತೊಡಗಿದವು. ಕಂಪನಿಗಳಾದ ಇಂಡಸ್ ಇಂಡ್ ಬ್ಯಾಂಕ್, ಎಸ್ ಬಿ ಐ, ಯಸ್ ಬ್ಯಾಂಕ್ ಗಳಲ್ಲದೆ , ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್, ಎಲ್ ಐ ಸಿ ಹೌಸಿಂಗ್, ಪಿ ಏನ್ ಬಿ ಹೌಸಿಂಗ್, ಆರ್ ಬಿ ಎಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ದಿವಾನ್ ಹೌಸಿಂಗ್ ಫೈನಾನ್ಸ್ , ಜಿ ಐ ಸಿ ಹೌಸಿಂಗ್ ಫೈನಾನ್ಸ್, ಐ ಡಿ ಎಫ್ ಸಿ, ಕರ್ನಾಟಕ ಬ್ಯಾಂಕ್, ಲಕ್ಷ್ಮಿ ವಿಲಾಸ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ರಿಲಯನ್ಸ್ ಕ್ಯಾಪಿಟಲ್, ಸಿಂಡಿಕೇಟ್ ಬ್ಯಾಂಕ್, ಯುಕೋ ಬ್ಯಾಂಕ್, ಇತರೆ ವಲಯದ ಕಂಪನಿಗಳಾದ ಎಸ್ ಟಿ ಸಿ ಇಂಡಿಯಾ , ಝೀ ಇಂಟರ್ ಟೆನ್ ಮೆಂಟ್, ಬಿ ಹೆಚ್ ಈ ಎಲ್, ಡಿ ಎಲ್ ಎಫ್, ಇಂಡಿಯಾ ಬುಲ್ ಹೌಸಿಂಗ್, ಐ ಬಿ ವೆಂಚರ್ಸ್, ಬಿ ಎ ಎಸ್ ಎಫ್ ನಂತಹ ಅನೇಕ ಕಂಪನಿಗಳು ವಾರ್ಷಿಕ ಕನಿಷ್ಟಕ್ಕೆ ಕುಸಿಯುವಂತೆ ಮಾಡಲಾಯಿತು. ನಂತರ ಅನೇಕ ಕಂಪನಿಗಳು ಪುಟಿದೆದ್ದವು. ಈ ಸಂದರ್ಭದಲ್ಲಿ ಕೆಲವು ಕಂಪನಿಗಳು ಪ್ರದರ್ಶಿಸಿದ ಭಾರಿ ಏರಿಳಿತಗಳನ್ನು ನೋಡೋಣ.
ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿ
ಸೆಪ್ಟೆಂಬರ್ ೩೦ ರಂದು ರು.255.50 ರಲ್ಲಿದ್ದಂತಹ ಈ ಕಂಪನಿ ಷೇರಿನ ಬೆಲೆ ರೂ.252 ರ ಸಮೀಪ ಆರಂಭಗೊಂಡು ದಿನದ ಮಧ್ಯೆ ರೂ.226.10 ರವರೆಗೂ ಕುಸಿತ ಕಂಡಿತು. ದಿನದ ಅಂತಿಮಕ್ಷಣಗಳಲ್ಲಿ ಈ ಷೇರಿನ ಬೆಲೆ ರೂ.283 ರವರೆಗೂ ರಭಸದ ಚೇತರಿಕೆ ಪ್ರದರ್ಶಿಸಿದೆ. ಕೇವಲ ಅರ್ಧ ಘಂಟೆಯಲ್ಲೇ ರೂ.226 ರ ಸಮೀಪದಿಂದ ರೂ.283 ರವರೆಗೂ ಏರಿಕೆ ಕಂಡಿದ್ದು ಸಾಮಾನ್ಯರ ಗ್ರಹಿಕೆಗೆ ಬಾರದ ರೀತಿಯ ಚಟುವಟಿಕೆಯಾದುದಾಗಿದೆ. ಇಂತಹ ಅಸಾಧಾರಣ ಬೆಳವಣಿಗೆಗಳು ಷೇರುಪೇಟೆಯ ಬಗ್ಗೆ ಕೀಳು ಭಾವನೆ ಮೂಡಲು ಕಾರಣವಾಗುತ್ತದೆ. ಇದು ಕಂಪನಿಗಳ ಯೋಗ್ಯತೆ, ಅರ್ಹತೆ ಮೀರಿ ಪ್ರದರ್ಶಿತವಾದ ಬೆಳವಣಿಗೆಗಳಾಗಿವೆ.
ಇಂಡಸ್ ಇಂಡ್ ಬ್ಯಾಂಕ್:
ಈ ಕಂಪನಿ ಷೇರಿನ ಬೆಲೆ ದಿನದ ಆರಂಭಿಕ ಕ್ಷಣಗಳಲ್ಲಿ ರೂ.1,381 ರ ಸಮೀಪದಿಂದ ರೂ.1,413 ರವರೆಗೂ ಜಿಗಿತ ಕಂಡು ದಿನದ ಮಧ್ಯಂತರದಲ್ಲಿ ರೂ.1,225 ಕ್ಕೆ ಕುಸಿದಿದೆ. ಅದೇ ಸಮಯದಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ರೂ.1,189 ರವರೆಗೂ ಕುಸಿದಿದ್ದು, ನಂತರ ರೂ.1,320 ರವರೆಗೂ ಏರಿಕೆ ಕಂಡು ರೂ..1,294 ರಲ್ಲಿ ದಿನದ ಅಂತ್ಯ ಕಂಡಿದೆ. ಈ ಕಂಪನಿ ಸೆನ್ಸೆಕ್ಸ್ ನ ಅಂಗವಾಗಿರುವುದರಿಂದ ಇದು ಸೆನ್ಸೆಕ್ಸ್ ಏರಿಳಿತಕ್ಕೆ ಕಾರಣವಾಗಿರುತ್ತದೆ.
ಆರ್ ಬಿ ಎಲ್ ಬ್ಯಾಂಕ್
ಈ ಬ್ಯಾಂಕಿನ ಷೇರು ದಿನದ ಆರಂಭದಲ್ಲಿ ರೂ.334 ರವರೆಗೂ ತಲುಪಿ ದಿನದ ಮಧ್ಯಂತರದಲ್ಲಿ ರೂ.255.60 ಕ್ಕೆ ಕುಸಿದು ಅಲ್ಲಿಂದ ರೂ.305 ರವರೆಗೂ ಚೇತರಿಕೆ ಕಂಡು ರೂ.300 ರಲ್ಲಿ ಕೊನೆಗೊಂಡಿದೆ.
ಕೆನರಾ ಬ್ಯಾಕ್
ಇತ್ತೀಚೆಗಷ್ಟೇ ಸಿಂಡಿಕೇಟ್ ಬ್ಯಾಂಕ್ ನ್ನು ಈ ಬ್ಯಾಂಕ್ ನಲ್ಲಿ ವಿಲೀನಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ನಂತರದಲ್ಲಿ ಈ ಷೇರಿನ ಬೆಲೆ ದಿನ ನಿತ್ಯ ಹೊಸ ಹೊಸ ವಾರ್ಷಿಕ ಕನಿಷ್ಠ ಬೆಲೆ ದಾಖಲಿಸುತ್ತಿದೆ. ಅಕ್ಟೊಬರ್ ಒಂದರಂದು ಈ ಷೇರಿನ ಬೆಲೆ ರೂ.185 ರ ಗರಿಷ್ಟ ತಲುಪಿ ನಂತರ ದಿನದ ಮಧ್ಯಂತರದಲ್ಲಿ ರೂ.170.55 ರ ವಾರ್ಷಿಕ ಕನಿಷ್ಟಕ್ಕೆ ಕುಸಿದು ರೂ.180 ರ ಸಮೀಪಕ್ಕೆ ಚೇತರಿಕೆ ಕಂಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಎಸ್ ಬಿ ಐ ಷೇರಿನ ಬೆಲೆ ರೂ 275 ರ ಸಮೀಪದಿಂದ ದಿನದ ಮಧ್ಯಂತರದಲ್ಲಿ ವಾರ್ಷಿಕ ಕನಿಷ್ಠ ರೂ.245.65 ಕ್ಕೆ ಕುಸಿದು ನಂತರದಲ್ಲಿ ರೂ.257 ರ ಸಮೀಪಕ್ಕೆ ಚೇತರಿಕೆ ಕಂಡಿದೆ.
ಝೀ ಎಂಟರ್ ಟೆನ್ ಮೆಂಟ್ ಎಂಟರ್ ಪ್ರೈಸಸ್
ಈ ಕಂಪನಿ ಇತ್ತೀಚಿಗೆ ಮ್ಯುಚುಯಲ್ ಫಂಡ್ ಗಳಿಂದ ಪಡೆದ ಹಣ ಹಿಂದಿರುಗಿಸುವಲ್ಲಿ ಉಂಟು ಮಾಡಿಕೊಂಡಿರುವ ಗೊಂದಲದಿಂದ ಭಾರಿ ಕುಸಿತಕ್ಕೊಳಗಾಗಿದೆ. ಅಕ್ಟೊಬರ್ ಒಂದರಂದು ಈ ಷೇರಿನ ಬೆಲೆ ರೂ.263 ರ ಆರಂಭಿಕ ಬೆಲೆಯಿಂದ ರೂ.271 ರವರೆಗೂ ಚೇತರಿಕೆ ಪ್ರದರ್ಶಿಸಿ, ದಿನದ ಮಧ್ಯಂತರದಲ್ಲಿ ವಾರ್ಷಿಕ ಕನಿಷ್ಠ ರೂ.211 ರ ಸಮೀಪಕ್ಕೆ ಕುಸಿತ ಕಂಡಿತು. ನಂತರದಲ್ಲಿ ಚೇತರಿಕೆ ಕಂಡು ರೂ.233 ರಕ್ಕೆ ಜಿಗಿತ ಪಡೆಯಿತು.
ಕೊನೆ ಮಾತು
ಈ ರೀತಿಯ ಒಂದೇ ದಿನ 993 ಪಾಯಿಂಟುಗಳ ಅಂತರದ ಏರಿಳಿತ ಪ್ರದರ್ಶಿಸುವುದು ಇತ್ತೀಚಿಗೆ ಸಾಮಾನ್ಯ ವಾಗಿದ್ದರು, ಅಕ್ಟೊಬರ್ ಒಂದರಂದು ಪ್ರದರ್ಶಿತವಾದ ಬದಲಾವಣೆಗಳು ಷೇರುಪೇಟೆಯಲ್ಲಿ ಯಾವುದೇ ಸಿದ್ದಾಂತಗಳಿಲ್ಲದೆ ಇರುವ ರೀತಿ ಚಟುವಟಿಕೆ ನಡೆಸಲಾಗುತ್ತಿದೆ ಎಂದೆನಿಸುತ್ತದೆ. ವಿಶೇಷವಾಗಿ ಹಲವಾರು ಅಗ್ರಮಾನ್ಯ ಕಂಪನಿಗಳು ದಿನದ ಮಧ್ಯಂತರದಲ್ಲಿ ಭಾರಿ ಕುಸಿತಕ್ಕೊಳಗಾಗಿ ನಂತರ ವೈವಿಧ್ಯಮಯ ಕಾರಣಗಳಿಂದ ಪುಟಿದೆದ್ದ ರೀತಿ ಮಾತ್ರ ಯಾವುದೇ ವಿಶ್ಲೇಷಣೆಗಳನ್ನು ಮೀರಿದ ನಡೆಯಾಗಿದೆ ಎಂಬುದು ನಿಸ್ಸಂದೇಹ. ಇಂತಹ ಸಂದರ್ಭದಲ್ಲಿ ಅನೇಕರು ಅಳವಡಿಸಿಕೊಂಡಿರುವ ' ಸ್ಟಾಪ್ ಲಾಸ್' ಪ್ರಕ್ರಿಯೆ ಟಾಪ್ ಲಾಸ್ ಗೆ ದಾರಿಮಾಡಿಕೊಟ್ಟಿರಲು ಸಾಕು. ಈ ರಭಸದ ಏರಿಳಿತಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಉತ್ತಮ ಸಾಧನೆಯುಳ್ಳ, ಅಗ್ರಮಾನ್ಯ ಕಂಪನಿಗಳು ಭಾರಿ ಕುಸಿತದಿಂದ ಶೀಘ್ರವಾದ ಚೇತರಿಕೆ ಪಡೆದುಕೊಂಡಿವೆ ಎಂಬುದು.