ನವದೆಹಲಿ, ಅ 28: ದೇಶದಲ್ಲಿ ನಿಜವಾದ ಆರ್ಥಿಕ ಹಿನ್ನಡೆಯಾಗುತ್ತಿರುವುದು ಯಾರಿಗೆ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ ಮರ್ಸಿಡಿಸ್ ಬೆಂಜ್ ಒಂದೇ ದಿನದ ಕಾರು ಮಾರಾಟ! ಶ್ರೀಮಂತರು ಶ್ರೀಮಂತರಾಗಿಯೇ ಇರುತ್ತಾರೆ ಎನ್ನುವುದಕ್ಕೆ ಇದೂ ಉದಾಹರಣೆಯೂ ಆಗಬಹುದು.
ನಮ್ಮ ದೇಶದ ಸಂಪ್ರದಾಯದ ಪ್ರಕಾರ, ಯುಗಾದಿ, ಅಕ್ಷಯ ತೃತೀಯಾ, ವಿಜಯದಶಮಿ ಮತ್ತು ದೀಪಾವಳಿಯ (ಧನ್ ತೆರೆಸಾ) ದಿನದಂದು ಶುಭ ಕೆಲಸಕ್ಕೆ ಮತ್ತು ಖರೀದಿಗೆ ದಿನ ನೋಡುವ ಅಗತ್ಯವಿಲ್ಲ. ಯಾಕೆಂದರೆ, ಆ ದಿನಗಳ ಗಳಿಗೆಗಳೆಲ್ಲಾ ಶುಭಂ.. ಶುಭಂ..
ಆರ್ಥಿಕ ಹಿನ್ನಡೆ ವಾಹನ ಉದ್ಯಮ ಕ್ಷೇತ್ರಕ್ಕೆ ತೀವ್ರ ನಷ್ಟವನ್ನು ಉಂಟುಮಾಡುತ್ತಿದೆ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ ಎನ್ನುವ ಸುದ್ದಿಯ ನಡುವೆ, ಬೆಂಜ್ ಸಂಸ್ಥೆಯ ಕಾರು ಮಾರಾಟ ಅಕ್ಷರಸಃ ಹುಬ್ಬೇರುವಂತೆ ಮಾಡಿದೆ.

ಮರ್ಸಿಡಿಸ್ ಬೆಂಜ್ ಇಂಡಿಯಾ, 'ಧನ್ ತೆರೆಸಾ'ದ ವಾರದಲ್ಲಿ ಆರು ನೂರು ಕಾರನ್ನು , ಮುಂಗಡವಾಗಿ ಬುಕ್ ಮಾಡಿದ ಗ್ರಾಹಕರಿಗೆ ಡೆಲಿವರಿ ಮಾಡಿದೆ. ಇದರಲ್ಲಿ ಮುನ್ನರಕ್ಕೂ ಹೆಚ್ಚು ಕಾರು ಡೆಲಿವರಿ ಆಗಿರುವುದು NCR (National Capital Region) ಭಾಗಕ್ಕೆ. ಅಂದರೆ, ದೆಹಲಿ, ಗುರುಗ್ರಾಮ, ನೋಯ್ಡಾ, ಫರೀದಾಬಾದ್, ಗಾಜಿಯಾಬಾದ್, ಸೋನಿಪತ್ ನಗರಗಳಿಗೆ.
"ಉಳಿದಂತೆ, ಬೆಂಜ್ ಕಾರು ಬುಕ್ಕಿಂಗ್ ಗೆ ಹೆಚ್ಚು ಬೇಡಿಕೆ ಬಂದಿದ್ದು, ಮುಂಬೈ, ಪುಣೆ, ಕೊಲ್ಕತ್ತಾ, ಗುಜರಾತ್ ಭಾಗಗಳಿಂದ" ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾ ಸಂಸ್ಥೆಯ ಎಂಡಿ ಹೇಳಿದ್ದಾರೆ.
"ಈ ಹಬ್ಬದ ಸೀಸನ್ ನಲ್ಲಿ ನಮ್ಮ ಕಾರಿಗೆ ಬರುತ್ತಿರುವ ಬೇಡಿಕೆಯನ್ನು ನೋಡಿ ತೀವ್ರ ಸಂತೋಷವಾಗುತ್ತಿದೆ. ನಮ್ಮ ಪ್ಲಾನ್ ಗಿಂತ ಮೂರು ತಿಂಗಳ ಮುಂಚಿತವಾಗಿಯೇ ಕಾರುಗಳು ಮಾರಾಟವಾಗಿವೆ" ಎಂದು ಸಂಸ್ಥೆಯ ಎಂಡಿ ಮಾರ್ಟಿನ್, ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ದಸರಾ, ನವರಾತ್ರಿಯ ವೇಳೆ ಮರ್ಸಿಡಿಸ್ ಬೆಂಜ್ ಸುಮಾರು ಇನ್ನೂರು ಕಾರುಗಳನ್ನು ಮುಂಬೈ ಮತ್ತು ಗುಜರಾತ್ ಭಾಗದಲ್ಲಿ ಮಾರಾಟ ಮಾಡಿತ್ತು. ಸಂಸ್ಥೆ, ಭಾರತದ ಮಾರುಕಟ್ಟೆಗೆ ಬಂದ ನಂತರ, ಇದುವರೆಗೆ, ಸುಮಾರು 13 ಸಾವಿರಕ್ಕೂ ಹೆಚ್ಚು ಜಿಎಲ್ಎ ವರ್ಗದ ಕಾರನ್ನು ಮಾರಾಟ ಮಾಡಿದೆ.


Click it and Unblock the Notifications