3 ತಿಂಗಳು ಉಚಿತ ಸಿಲಿಂಡರ್, 5 ಕೆಜಿ ಅಕ್ಕಿ, ಗೋಧಿ ಫ್ರೀ, 3 ತಿಂಗಳು PF ಹಣ ಸರ್ಕಾರದಿಂದಲೇ ಪಾವತಿ, ರೈತರಿಗೆ 2,000 ರು
ಮಹಾಮಾರಿ ಕೊರೊನಾವೈರಸ್ನಿಂದ ದೇಶದಲ್ಲಿ ಆಗಿರುವ ಲಾಕ್ಡೌನ್ನಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ತಗ್ಗಿಸಲು ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರುಪಾಯಿ ಗರೀಬ್ ಕಲ್ಯಾಣ್ ಯೋಜನೆಯಡಿ ಮೀಸಲಿಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಆರ್ಥಿಕ ಪ್ಯಾಕೇಜ್ನಲ್ಲಿ ತಕ್ಷಣದ ಅಗತ್ಯತೆಗಾಗಿ ವಲಸೆ ಕಾರ್ಮಿಕರಿಗೆ , ಬಡವರಿಗೆ ಮೀಸಲು ಇರಿಸಲಾಗಿದೆ. ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲದ ಪ್ರಮಾಣದಲ್ಲಿ ಹೆಚ್ಚಳ, ವಯೋವೃದ್ಧರು, ದಿವ್ಯಾಂಗರಿಗೆ ಸಹಾಯ ಧನ ಹಾಗೂ ಪಿಂಚಣಿ, ಕಟ್ಟಡ ಕಾರ್ಮಿಕರಿಗೆ ಸಹಾಯ ಧನ ಘೋಷಿಸಲಾಗಿದೆ.
ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಪ್ರಮುಖವಾದುದು ಈ ಕೆಳಕಂಡಂತಿದೆ.
ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ 50 ಲಕ್ಷ ರುಪಾಯಿ ಇನ್ಷುರೆನ್ಸ್
ಕೊರೊನಾವೈರಸ್ ವಿರುದ್ಧ ಅಪ್ರತಿಮ ಸೇವೆಯನ್ನು ಸಲ್ಲಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಎಲ್ಲಾ ಆರೋಗ್ಯ ಸಿಬ್ಬಂದಿಗಳು ಉದಾಹರಣೆಗೆ ಡಾಕ್ಟರ್, ಪ್ಯಾರಾಮೆಡಿಕಲ್, ಆಶಾ ಕಾರ್ಯಕರ್ತೆಯರಿಗೆ 50 ಲಕ್ಷ ರುಪಾಯಿಯ ಇನ್ಷುರೆನ್ಸ್ ಘೋಷಿಸಲಾಗಿದೆ.
ಈ ಆರೋಗ್ಯ ವಿಮೆಯು 20 ಲಕ್ಷ ಸಿಬ್ಬಂದಿಗೆ ಅನುಕೂಲವಾಗುವುದು.
5 ಕೆಜಿ ಅಕ್ಕಿ, ಗೋಧಿ ಫ್ರಿ
ಈ ಕಠಿಣ ಪರಿಸ್ಥಿತಿಯಲ್ಲಿ ದೇಶದಲ್ಲಿರುವ 80 ಕೋಟಿ ಬಡಜನರು ಅನ್ನವಿಲ್ಲದೆ ಇರಬಾರದು. ಹೀಗಾಗಿ ಸರ್ಕಾರವು 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಮುಂದಿನ ಮೂರು ತಿಂಗಳಿಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಒಂದು ಕೆ.ಜಿ ಬೇಳೆಯನ್ನು ಆಯಾ ಪ್ರದೇಶಕ್ಕೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಬಹುದು.
ಸಾರ್ವಜನಿಕರ ಪಡಿತರ ವ್ಯವಸ್ಥೆಯಲ್ಲಿ ಸಿಗುವ ಅಕ್ಕಿ, ಬೇಳೆ ಜೊತೆಗೆ ಇದು ಹೆಚ್ಚುವರಿಯಾಗಿ ಸಿಗುತ್ತಿರುವ ಸೌಲಭ್ಯವಾಗಿದೆ. ಈ ಯೋಜನೆಯಡಿಯಲ್ಲಿ ಬಡವರು ಹಸಿವು ಮುಕ್ತರಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ.
ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2,000 ರುಪಾಯಿ
ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಶೀಘ್ರದಲ್ಲೇ 2,000 ರುಪಾಯಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ 8.69 ಕೋಟಿ ರೈತರಿಗೆ ಅನುಕೂಲವಾಗಲಿದೆ.
ಈ ಯೋಜನೆಯ ಮೊದಲ ಕಂತು 2000 ರುಪಾಯಿಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು
ರೈತರು, ವಿಧವೆಯರು, ದಿವ್ಯಾಂಗರಿಗೆ ವಿಶೇಷ ಯೋಜನೆ ಜಾರಿ
ಜನ್ ಧನ್ ಅಕೌಂಟ್ ಹೊಂದಿರುವ 20 ಕೋಟಿ ಮಹಿಳೆಯರಿಗೆ ತಲಾ 500 ರುಪಾಯಿ ಮುಂದಿನ ಮೂರು ತಿಂಗಳ ಕಾಲ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಇದರ ಜೊತೆಗೆ ವಯೋ ವೃದ್ಧರು ವಿಧವೆಯರು, ದಿವ್ಯಾಂಗರಿಗೆ ಪ್ರತಿ ತಿಂಗಳು 1000 ಪಿಂಚಣಿ ನೀಡಲಾಗುವುದು. ಇದು ಮುಂದಿನ ಮೂರು ತಿಂಗಳ ಕಾಲ ನೀಡಲಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ ಮೂರು ಕೋಟಿ ವಯೋ ವೃದ್ಧರಿಗೆ ಅನುಕೂಲವಾಗುವುದು.
ಮನ್ರೇಗಾ ಯೋಜನೆಯಡಿ ಪ್ರತಿ ಕಾರ್ಮಿಕರಿಗೆ 2000 ರುಪಾಯಿ
MNREGA ಯೋಜನೆಯಡಿಯಲ್ಲಿ ಪ್ರತಿ ಕಾರ್ಮಿಕರಿಗೆ 2000 ರುಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ 5 ಕೋಟಿ ಕಾರ್ಮಿಕರಿಗೆ ಲಾಭ ಸಿಗಲಿದೆ. ಅಲ್ಲದೆ ಈಗಿರುವ 180 ರುಪಾಯಿ ಕೂಲಿಯನ್ನು 200 ರುಪಾಯಿಗೆ ಹೆಚ್ಚಳ ಮಾಡಲಾಗಿದೆ.
3 ತಿಂಗಳ ಕಾಲ ಉಚಿತವಾಗಿ ಎಲ್ಪಿಜಿ ಸಿಲಿಂಡರ್ ವಿತರಣೆ
ಉಜ್ವಲ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ಮೂರು ತಿಂಗಳು ಕಾಲ ಉಚಿತ ಸಿಲಿಂಡರ್ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. 8.3 ಕೋಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾವುದು ಎಂದು ತಿಳಿಸಿದೆ.
ಸ್ವ-ಸಹಾಯ ಮಹಿಳಾ ಸಂಘಗಳಿಗೆ ಸಾಲದ ಪ್ರಮಾಣ ಹೆಚ್ಚಳ
ಸ್ವ-ಸಹಾಯ ಮಹಿಳಾ ಸಂಘಗಳಿಗೆ ದೀನ್ ದಯಾಳ್ ಯೋಜನೆಯಡಿ 20 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈಗಿರುವ 10 ಲಕ್ಷ ರುಪಾಯಿಯಿಂದ 20 ಲಕ್ಷದವರೆಗೆ ಸಾಲ ನೀಡಲಾಗುವುದು ಇದರಿಂದ 63 ಲಕ್ಷ ಸ್ವಸಹಾಯ ಸಂಘಗಳಿಗೆ ಅನುಕೂಲವಾಗುವುದು.
ಮುಂದಿನ 3 ತಿಂಗಳವರೆಗೆ ಸರ್ಕಾರವೇ ಪಿಎಫ್ ಹಣ ಕಟ್ಟಲಿದೆ
ಸರ್ಕಾರವೇ ಮುಂದಿನ ಮೂರು ತಿಂಗಳವರೆಗೆ ಪಿಎಫ್ ಹಣ ಕಟ್ಟುವುದಾಗಿ ಘೋಷಿಸಿದೆ. ಎರಡೂ ಕಡೆಯ ಪಿಎಫ್ ಹಣವನ್ನು ಅಂದರೆ ಉದ್ಯೋಗದಾತ ಹಾಗೂ ಉದ್ಯೋಗಿಯ ಎರಡೂ ಕಡೆಯ ಹಣ ಕಟ್ಟಲಿದೆ ಉದ್ಯೋಗದಾತರ 12 ಪರ್ಸೆಂಟ್, ಹಾಗೂ ಉದ್ಯೋಗಿಯ 12 ಪರ್ಸೆಂಟ್ ಪಿಎಫ್ ಹಣವನ್ನು ಸರ್ಕಾರ ಕಟ್ಟಲಿದೆ.
ಆದರೆ ಈ ನಿಯಮ ಅನ್ವಯವಾಗುವುದು ಯಾವ ಸಂಸ್ಥೆಯಲ್ಲಿ 100ಕ್ಕಿಂತ ಕಮ್ಮಿ ಇರುವ ಉದ್ಯೋಗಿಗಳಿದ್ದು, ಅದರಲ್ಲಿ 90 ಪರ್ಸೆಂಟ್ ಉದ್ಯೋಗಿಗಳ ಸಂಬಳ 15,000ದೊಳಗೆ ಇದ್ದರೆ
ಈ ಅನುಕೂಲ ಸಿಗಲಿದೆ. ಇದರಿಂದ 4 ಲಕ್ಷ ಸಂಸ್ಥೆಗಳ 80 ಲಕ್ಷ ಉದ್ಯೋಗಿಗಳಿಗೆ ಸಹಾಯವಾಗಲಿದೆ.
ಕಟ್ಟಡ ಕಾರ್ಮಿಕರಿಗೆ ಸಹಾಯಧನ
ದೇಶದ 3.54 ನೋಂದಾಯಿತ ಕಾರ್ಮಿಕರಿಗೆ , ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಹಾಯಧನವನ್ನು ಘೋಷಿಸಲಾಗಿದೆ. ಕಾರ್ಮಿಕ ಕಲ್ಯಾಣ ನಿಧಿ ಬಳಕೆಗೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಲಾಗಿದ್ದು, ರಾಜ್ಯ ಸರ್ಕಾರಗಳ ಬಳಿ ಇರುವ 31 ಸಾವಿರ ಕೋಟಿ ರುಪಾಯಿ ಬಳಕೆಗೆ ಅವಕಾಶ ನೀಡಲಾಗಿದೆ.