ಆರು ಬ್ಯಾಂಕ್ಗಳ ಒಕ್ಕೂಟದಿಂದ 411 ಕೋಟಿ ರೂಪಾಯಿ ವಂಚನೆ ಮಾಡಿದ್ದ ಆರೋಪದ ಮೇಲೆ ಇತ್ತೀಚೆಗಷ್ಟೇ ಎಸ್ಬಿಐ ಸಿಬಿಐಗೆ ದೂರು ನೀಡಿತ್ತು. ಆದರೆ ಕೇಸ್ ದಾಖಲಿಸೋಕು ಮೊದಲೇ ವಂಚಕರು ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಎಸ್ಬಿಐ ಬಹುಕೋಟಿ ವಂಚಿಸಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿತ್ತು. ಬಸ್ಮಾತಿ ಅಕ್ಕಿಯನ್ನು ಪೂರ್ವ ಏಷ್ಯಾ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ರಪ್ತು ಮಾಡುತ್ತಿದ್ದ ದೆಹಲಿ ಮೂಲದ ರಾಮ್ ದೇವ್ ಇಂಟರ್ ನ್ಯಾಷನಲ್ ಕಂಪನಿ ವಿರುದ್ಧ 173 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದರ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗೀತಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆಗೆ ಇಳಿಯಿತು.

ಆದರೆ ವಂಚಕರು ಈ ಕೇಸ್ ದಾಖಲಿಸೋಕು ಮೊದಲೇ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಬ್ಯಾಂಕ್ ಮೂಲಕ ಸಾಲ ಪಡೆದು ಕಂಪನಿಯ ಆವರಣದಲ್ಲಿ ನಿರ್ಮಿಸಿದ್ದ ಯಂತ್ರೋಪಕರಣಗಳನ್ನು ಅನಧೀಕೃತವಾಗಿ ತೆಗೆಯಲಾಗಿದೆ. ಅಲ್ಲದೇ, ಸಾಲ ಪಡೆಯಲು ಹಲವು ನಕಲಿ ದಾಖಲೆಗಳನ್ನು ನೀಡಲಾಗಿದೆ.
ಕಂಪನಿಯು ಮೂರು ಅಕ್ಕಿ ಮಿಲ್ಲಿಂಗ್ ಸ್ಥಾವರಗಳನ್ನು ಹೊಂದಿತ್ತು, ಜೊತೆಗೆ ಕರ್ನಾಲ್ ಜಿಲ್ಲೆಯಲ್ಲಿ ಎಂಟು ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು ವ್ಯಾಪಾರ ಉದ್ದೇಶಗಳಿಗಾಗಿ ಸೌದಿ ಅರೇಬಿಯಾ ಮತ್ತು ದುಬೈನಲ್ಲಿ ಕಚೇರಿಗಳನ್ನು ಹೊಂದಿವೆ ಎಂದು ಎಸ್ ಬಿಐ ದೂರಿನಲ್ಲಿ ಉಲ್ಲೇಖಿಸಿದೆ.
ಎಸ್ ಬಿಐ (173 ಕೋಟಿ) ಜೊತೆಗೆ ಕೆನರಾ ಬ್ಯಾಂಕ್(76 ಕೋಟಿ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(64 ಕೋಟಿ), ಐಡಿಬಿಐ (12 ಕೋಟಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(51 ಕೋಟಿ) ಮತ್ತು ಕಾರ್ಪೋರೇಷನ್ ಬ್ಯಾಂಕ್(36 ಕೋಟಿ) ಗಳು ಸಹ ಒಕ್ಕೂಟದ ಸದಸ್ಯರಾಗಿದ್ದಾರೆ. ಕೊರೊನಾವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಬಿಐ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಶೋಧ ಕಾರ್ಯ ಕೈಗೊಂಡಿಲ್ಲ, ಸಿಬಿಐ ಆರೋಪಿಗಳಿಗೆ ಸಮನ್ಸ್ ನೀಡುವ ಪ್ರಕ್ರಿಯೆ ಆರಂಭಿಸಲಿದೆ. ಅವರು ವಿಚಾರಣೆಗೆ ಸಹಕರಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ನಡೆಸಿದಾಗ ಸಾಲಗಾರರು ಪರಾರಿಯಾಗಿದ್ದಾರೆ ಮತ್ತು ದೇಶವನ್ನು ತೊರೆದಿದ್ದಾರೆ ಎಂದು ಗಮನಕ್ಕೆ ಬಂದಿದೆ ಎಂದು ಫೆಬ್ರವರಿ 25, 2020ರಲ್ಲಿ ಬ್ಯಾಂಕ್ ದೂರು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಂಪನಿಯ ಸಾಲಗಳನ್ನು 2016 ರಲ್ಲಿಯೇ ಕಾರ್ಯನಿರ್ವಹಿಸದ ಆಸ್ತಿ (ಎನ್ಪಿಎ) ಎಂದು ವರ್ಗೀಕರಿಸಲಾಗಿದೆ. ನಾಲ್ಕು ವರ್ಷಗಳ ವಿಳಂಬದ ನಂತರ ಬ್ಯಾಂಕ್ ಈ ವರ್ಷದ ಫೆಬ್ರವರಿಯಲ್ಲಿ ಸಿಬಿಐಗೆ ದೂರು ನೀಡಿದೆ.


Click it and Unblock the Notifications